ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ

ಡಾ ಜೀವನಸಾಬ್ ವಾಲಿಕಾರ್ ಬಿನ್ನಾಳ
(ಜಾನಪದ ಗಾಯಕ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕುಷ್ಟ)

ಮೊಹರಂ ,ಧರ್ಮಸಹಿಷ್ಣತೆ ಭಾವೈಕ್ಯತೆ, ಕೋಮು ಸೌಹಾರ್ದತೆಯನ್ನು ಸಾರುವ ಹಬ್ಬ, ಹಿಂದೂ ಮುಸಲ್ಮಾನರ ,ಪರಸ್ಪರ ಸ್ನೇಹ, ಪ್ರೀತಿ,ಒಡನಾಟದಿಂದ ಕೂಡಿ ಬಾಳುವಿಕೆಯ ಸಂಸ್ಕೃತಿಗಳನ್ನು ದ್ವಿಗುಣಗೊಳಿಸುವ ಪರಂಪರೆಯಾಗಿದೆ, ಇದೊಂದು ಬಹು ಸಂಸ್ಕೃತಿಯನ್ನು ಸಾರುವ ಹಬ್ಬ, ಭಾವೈಕ್ಯತೆಯ ಬೀಜ ಮಂತ್ರಗಳನ್ನು ಬಿತ್ತಿ ಶಾಂತಿಯ ಬೆಳೆಯನ್ನು ಬೆಳಯುವ ಸುಗ್ಗಿಕಾಲವೆ ಸರಿ , ಧಾರ್ಮಿಕ ಸಾಮರಸ್ಯವು ಜಾತಿಭೇದವನ್ನು ತೊಲಗಿಸುವಷ್ಟು ಶಕ್ತವಾಗಿದೆ ಎಂಬ ನಂಬಿಕೆಯನ್ನು ಹುಟ್ಟಿಸುವುದೇ ಈ ಹಬ್ಬದ ಸಾರ.

ಇಸ್ಲಾಂ ಕ್ಯಾಲೆಂಡರದ ಮೊದಲ ತಿಂಗಳವೆ ಈ ಮೊಹರಂ, ಇದು ಇಸ್ಲಾಂ ಧರ್ಮದ ಪ್ರಕಾರ ಬಕ್ರೀದ್ ಆಚರಣೆಯ ಒಂದು ತಿಂಗಳ ನಂತರ ಬರುವ ಹಬ್ಬವಾಗಿದೆ. ಭಾರತದಲ್ಲಿ ಇದನ್ನು ಕನ್ನಡದಲ್ಲಿ ವಿಶೇಷವಾಗಿ ಮೊಹರಂ ಎಂದು ಕರೆದರೆ ಇದರ ಮೂಲ ಪದ ಪರ್ಶಿಯನ್ ಭಾಷೆಯಿಂದ ಬಂದಿದೆ .ಇದೊಂದು ಇಸ್ಲಾಂ ಕ್ಯಾಲೆಂಡರ್‌ನ ತಿಂಗಳಿನ ಹೆಸರು, ಮೊಹರಂ ಎಂದರೆ ವರ್ಷದ ಆರಂಭ ಎಂದೊ, ನಿಷಿದ್ದವಾದುದು ಎಂದರ್ಥ ನೀಡುತ್ತೆದೆ, ಮುಸ್ಲಿಮರ ಪಾಲಿಗೆ ಇದು ಸೂತಕದ ಮಾಸ ಆದ್ದರಿಂದ ಈ ಮಾಸದಲ್ಲಿ ಇಸ್ಲಾಮ ಜನಸಮುದಾಯವು ಯಾವುದೇ ಶುಭ ಕಾರ್ಯವನ್ನು ಕೈಗೊಳ್ಳುವುದಿಲ್ಲ ಕಾರಣ ಶೋಕ ತಿಂಗಳು ಎಂಬ ನಂಬಿಕೆ .

ಇದನ್ನು ಗ್ರಾಮೀಣ ಜನರು ಗ್ರಾಂಥಿಕ ರೂಪದಲ್ಲಿ ಮೊಹರಂ ಎಂದು ಕರೆಯಲು ಸಾಧ್ಯವಾಗದಿರುವುದರಿಂದ ಮಸೂತಿ ಮುಂದೆ ನಡೆಯುವ ಕಾರ್ಯ ಚಟುವಟಿಕೆಗಳ ಆಧಾರಿತವಾಗಿ ಈ ಹಬ್ಬಕ್ಕೆ ಆಲಾವಿಹಬ್ಬ ಕೆಲವು ಕಡೆ ಅಲೆ ಹಬ್ಬ ಎಂದು ಸಹ ಕರೆಯುತ್ತಾರೆ. ಸಮಕಾಲಿನ ತಲ್ಲಣಗಳ ನಡುವೆ ಸಾಮಾಜಿಕ ಸಾಮರಸ್ಯವನ್ನು ,ಕೋಮು ಸೌಹಾರ್ದತೆಯನ್ನು ಸಾರುವುದರ ಜೊತೆಗೆ ಜೊತೆಗೆ , ಧಾರ್ಮಿಕ ಸಾಮರಸ್ಯವು ಜನರ ಮನದಲ್ಲಿ ಆಳವಾಗಿ ಬೇರೂರುವಂತೆ ಮಾಡಿದೆ. ಗ್ರಾಮೀಣ ಪರಿಸರದಲ್ಲಿ ಜಾತಿಭೇದವನ್ನು ನಮ್ಯಗೊಳಿಸಿದೆ . ಇದು ಹಿಂದೂ ಮುಸಲ್ಮಾನರ ಭಾವೈಕ್ಯದ ಪ್ರತೀಕವೂ ,ಸಹಿಷ್ಣತೆಯ ರೂಪವು ಹೌದು , ವಿದ್ವಾಂಸರಾದ ಎಂಎಂ ಕಲಬುರ್ಗಿ ಅವರ ಹೇಳುವಂತೆ ಹಿಂದೂ ಮುಸಲ್ಮಾನರು ಕೂಡಿ ಅಲಾವಿ ಕುಣಿದು, ಹಾಡು ಹೇಳಿ ಧರ್ಮ ಸಮನ್ವಯದ ಜೀವಂತ ಪಾತ್ರ ಮಾಡುತ್ತಾರೆ. ಹಿಂದೂಗಳು ಆಚರಿಸುವ ಮುಸಲ್ಮಾನರ ಹಬ್ಬ ಎಂದು ಮಹಾಲಿಂಗ ಮಂಗಿ ಹೇಳುವ ರೀತಿ ನೋಡಿದರೆ, ಮೊಹರಂ ಬಹು ಸಂಸ್ಕೃತಿಯ ಪ್ರತೀಕವಾಗಿದೆ.

ಐತಿಹಾಸಿಕ ಹಿನ್ನೋಟ

ಮುಸ್ಲಿಮರ ಕೊನೆಯ ಪ್ರವಾದಿ ಮೊಹಮ್ಮದ್ ಪೈಗಂಬರರು ನಿಧನದ ನಂತರ ಸೌದಿ ಅರೇಬಿಯಾದ ಪರಿಸರದಲ್ಲಿ ಅವರ ನಂತರ ಉತ್ತರಧಿಕಾರಿಗಳು ಯಾರಾಗಬೇಕು ಎಂಬ ಪ್ರಶ್ನೆಯಿಂದ ಮೊಹರಂ ಆಚರಣೆ ಮೂಲ ಬೀಜ ಆರಂಭವಾಗುತ್ತದೆ. ಮೊಹಮ್ಮದ್ ಪೈಗಂಬರರ ಅನುಯಾಯಿಗಳಾಗಿದ್ದ ಅಬೂಬಕರ ಸಿದ್ದೀಕಿ, ಉಮರ್ ಫಾರೂಕ್, ಉಸ್ಮಾನ್ ಕ್ರಮವಾಗಿ ಖಲಿಫರಾದರು, ಮುಂದೆ ಎರಡು ಮತ್ತು ಮೂರನೆಯ ಖಲೀಫ್ ಕೊಲೆಯಾದ ನಂತರ ಜ್ಞಾನಿಯು ಶೂರನು ಆಗಿದ್ದ ಅಲಿಯನ್ನು ನಾಲ್ಕನೇ ಖಲೀಫರನ್ನಾಗಿ ಆಯ್ಕೆ ಮಾಡಲಾಯಿತು, ಹಾಸಿಮ್ ಮತ್ತು ಉಮಯ್ಯಾ ವಂಶದ ಸಂಘರ್ಷದಲ್ಲಿ ಅಲಿಯನ್ನು ಪ್ರಾರ್ಥನಾ ವೇಳೆ ಕೊಲ್ಲಲಾಯಿತು, ಈ ಘಟನೆ ಸೌದಿ ಅರೇಬಿಯಾದಲ್ಲಿ ಅರಾಜಕ ಸನ್ನಿವೇಶವನ್ನು ಸೃಷ್ಟಿಸಿತು, ಅಲಿಯ ಮೊದಲ ಮಗ ಹಸನನನ್ನು ಐದನೇ ಖಲೀಪನನ್ನಾಗಿ ಆಯ್ಕೆ ಮಾಡಿದರು, ಇದನ್ನು ಒಪ್ಪದ ಉಮಯ್ಯಾ ವಂಶದ ಮುಆವಿಯಾ, ಖಲೀಫ ಹಸನರ ಮೇಲೆ ಯುದ್ಧ ಸಾರಿದಾಗ ದುರ್ಬಲನಾಗಿದ್ದ ಹಸನ್ ಮುಆವಿಯಾಗೆ ಖಲೀಫ್ ಪಟ್ಟವನ್ನು ಬಿಟ್ಟು ಮುಂಬರುವ ದಿನಗಳಲ್ಲಿ ಜನರು ಬಯಸಿದಂತೆ ಅವರ ಆಯ್ಕೆಯಿಂದ ಮುಂದಿನ ಖಲೀಫ್ ಆಗಬೇಕೆಂಬ ಕರಾರು ಹಾಕಿ ಬಿಟ್ಟು ಕೊಟ್ಟನು.

ಕೆಲವು ದಿನಗಳ ನಂತರ ಹಸನ್‌ನಿಗೆ ವಿಷಪ್ರಾಸನ ಮಾಡಿಸಿ ಕೊಲ್ಲಲಾಯಿತು, 20 ವರ್ಷ ಖಲೀಫನಾಗಿ ಆಳ್ವಿಕೆ ಮಾಡಿದ ಮುಆವಿಯಾ ತನ್ನ ಮಗನಾದ ಯಜೀದನನ್ನು ಖಲೀಫನನ್ನಾಗಿ ಆಯ್ಕೆ ಮಾಡಿದನು. ಆಗ ಯಜೀದನು ಮೆಕ್ಕಾ ,ಮದೀನಾ ,ಕೂಪ ಪ್ರಾಂತ್ಯಗಳಿಗೆ ಪತ್ರ ಬರೆದು ತನ್ನ ಖಲೀಫತ್ವ ನನ್ನು ಒಪ್ಪಿಕೊಳ್ಳಬೇಕೆಂದು ತಿಳಿಸಿದನು, ಮದೀನಾ ಜನ ಒಪ್ಪಲಿಲ್ಲ ತೂಫಾದಲ್ಲಿದ್ದ ಆಶಾಮಿ ಪಂಗಡದವರು ಉಮಾಯ್ಯಾ ಪಂಗಡದ ಯಜೀದನ ಆಳ್ವಿಕೆಗೆ ವಿರೋಧ ವ್ಯಕ್ತಪಡಿಸಿ , ಹಜರತ್ ಅಲಿಯ ಎರಡನೆಯ ಮಗನಾದ ಹುಸೇನ್‌ರನ್ನು ನೀವೇ ಖಲೀಫರಾಗಬೇಕೆಂದು ಒತ್ತಾಯಿಸಿದರು ಆಗಾ ಹುಸೇನರು ಅಭಿಮಾನಿಗಳ ಒತ್ತಾಯಸಕ್ಕೆ ಮಣಿದು ತಮ್ಮ ಮಡದಿ, ಮಕ್ಕಳು ಮತ್ತು 72 ಜನರ ಬೆಂಬಲಿಗರೊಂದಿಗೆ ಕೂಫಾಕ್ಕೆ ಹೊರಟರು . ಇರಾಕಿಗೆ ಸೇರಿದ ಯುಪ್ರಟೆಸ್ ಹೊಳೆ ದಡದಲ್ಲಿರುವ ಕರ್ಬಲ ಎಂಬ ಮರಳುಗಾಡ ಬಯಲಲ್ಲಿ ಬೀಡು ಬಿಟ್ಟಾಗ ಹೊಳೆಯ ನೀರನ್ನು ಬಳಸದಂತೆ, ನೀರಿಗಾಗಿ ಪರದಾಡುವಂತೆ ಮಾಡಿ , ಮೋಸ, ಅನ್ಯಾಯ , ವಾಮಮಾರ್ಗವಾಗಿ ಹುಸೇನರ ರುಂಡ ಛೇದನ ಮಾಡಿ ಅವರ ಸೈನ್ಯವನ್ನು ಸೋಲಿಸಿದರು ತದನಂತರ ಯಜೀದನು ಹಸನ್ ಮಡದಿ ಹಸೀನಾ, ಹುಸೇನ್ ಮಡದಿ ಶಹರಾಬಾನು, ತಂಗಿ ಜೈನಬ್, ಮುಂತಾದವರನ್ನು ದಮಾಸ್ಕಸ್‌ನಲ್ಲಿರುವ ಅರಮನೆಯ ಆಸ್ಥಾನಕ್ಕೆ ಅಪರಿಸಿಕೊಂಡು ಹೋಗಿ ಯುದ್ದ ಕೈದಿಗಳನ್ನಾಗಿ ಇರಿಸಿಕೊಂಡನು, ಮುಂದೆ ಹನೀಫ್ ಎಂಬ ಯುವಕನು ತನ್ನ ಶೌರ್ಯ ಸಾಹಸದ ಪ್ರತೀಕವಾಗಿ ಯಜೀದನನ್ನು ಸೋಲಿಸಿ ಯುದ್ಧ ಕೈದಿಗಳಾಗಿದ್ದವರನ್ನು ಬಿಡಿಸಿಕೊಂಡು ಬಂದಿದ್ದು , ಹಲವು ವಿದ್ಯಮಾನಗಳು ಸೇರಿದಂತೆ.

ಖಲೀಫ ಪದವಿಗಾಗಿ ಅರಬ ಸ್ಥಾನದಲ್ಲಿ ಸಂಭವಿಸಿದ ರಾಜಕೀಯ ಘಟನೆಗಳು ,ಈ ದುರಂತಗಳಲ್ಲಿ ಅಂತ್ಯ ಹಾಡಿದವು, ಹಸನ್ ಹುಸೇನರು ಕರ್ಬಲಾ ಮೈದಾನದಲ್ಲಿ ಜೀವ ಕಳೆದುಕೊಂಡರ ಸವಿನೆನಪಿಗಾಗಿ ಅವರ ಅನುಯಾಯಿಗಳು ಶೋಕ ಸಭೆಗಳನ್ನ ಆರಂಭಿಸಿದರು , ಶೋಕ ಗೀತೆಗಳು ರಚಿಸಿ ಹಾಡಲಾರಂಭಿಸಿದರು ಈ ಶೋಕ ಮೆರವಣಿಗೆಯಲ್ಲಿ , ಆಲಂ ಎಂದು ಕರೆಯಲಾಗುವ ಚಿಹ್ನೆಗಳನ್ನು ಬಳಸಿದರು, ಈ ಆಲಂ ಪ್ರವಾದಿ ಮಹಮ್ಮದ್ , ಬೀಬಿ ಫಾತಿಮಾ, ಹಜರತ್ ಅಲಿ ಹಸನ್ ಹಾಗೂ ಹುಸೇನರ ಸಂಕೇತಗಳೆಂದು ವ್ಯಾಖ್ಯಾನಿಸಲಾಗುತ್ತದೆ, ಹಸನ್ ಹುಸೇನರನ್ನ ಕೊಲ್ಲಲ್ಪಟ್ಟ ಕಹಿ ನೆನಪಿಗಾಗಿ , ಪಾಪ ಪ್ರಾಯಶ್ಚಿತಕ್ಕಾಗಿ, ಶೋಕಾಚರಣೆಯನ್ನು ಆಚರಿಸಲು ಆರಂಭಿಸಿಧವರು ಶಿಯಾ ಪಂಗಡದವರೆನಿಸಿಕೊಂಡರೆ ,  ಹಸನ್ ,ಹುಸೇನ್ ಮುಂತಾದ 12 ಜನರನ್ನು ತಮ್ಮ ಇಮಾಮರೆಂದು ಘೋಷಿಸಿಕೊಂಡು, ಮಹಮ್ಮದ್ ಪೈಗಂಬರರ ಜೊತೆಗೆ ಮೊದಲ ಮೂರು ಖಲೀಫರನ್ನು ಅನುಸರಿಸಿದವರು ಸುನ್ನಿ ಗಳಿಸಿಕೊಂಡರು, ಈ ತೆರನಾದ ಅರಬ್ಬರ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆ ಮೊಹರಂ ಆಚರಣೆಯ ರೂಪತಾಳಿದೆ, ಈ ಆಚರಣೆಯು ಕ್ರಮೇಣ ಮುಸಲ್ಮಾನರಿರುವ ಜಗತ್ತಿನ ನಾನಾ ಭಾಗಗಳಿಗೆ ಹರಡಿ ವಿಭಿನ್ನ ಆಚರಣೆಗಳ ರೂಪ ಪಡೆಯಿತು.

ಮೊಹರಂ ಆಚರಣಾ ಸಂಪ್ರದಾಯ

14ನೆಯ ಶತಮಾನದ ಕಾಲಕ್ಕೆ ತೈಮೂರು ಲಂಗನಿಂದ ಭಾರತದಲ್ಲಿ ಮೊಹರಂ ಆಚರಣೆ ಪರಿಚಯವಾಯಿತು ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಬಹುಮನಿ ಮತ್ತು ಆದಿಲ್ ಶಾಹಿಗಳು, ಹೈದರಾಬಾದಿನ ನಿಜಾ ,ಹೈದರಾಲಿ ,ಟಿಪ್ಪು ಮುಂತಾದ ರಾಜರು ಸಂಸ್ಥಾನಿಕರು ಮೊಹರಂ ಹಬ್ಬ ಆಚರಣೆಯನ್ನು ಉತ್ತೇಜಿಸಿದ ಫಲವಾಗಿ ಮೊಹರಂ ಆಚರಣೆಯು ಇಂದು ಶೋಕಾಚರಣೆಯ ಜೊತೆಗೆ ಸಂಭ್ರಮಾಚರಣೆಯ ಹಬ್ಬವಾಗಿ ಮಾರುಪಟ್ಟಿರುವುದು ಧಾರ್ಮಿಕ ಚಾರಿತ್ರಿಕ, ಸಾಂಸ್ಕೃತಿಕ ಸಂಗತಿಗಳ ದೂತಕವಾಗಿದೆ.

ಹತ್ತು ದಿನಗಳ ಕಾಲ ನಡೆಯುವ ಈ ಮೊಹರಂ ಹಬ್ಬವು ಚಂದ್ರ ಕಾಣಿಸಿಕೊಂಡ ನಂತರ ಗುದ್ದಲಿ (ಅಲಾವಿ ಕುಣಿ ತೆಗೆಯುವ )ಹಾಕುವ ಆಚರಣೆಯೊಂದಿಗೆ ಆರಂಭಗೊಳ್ಳುತ್ತದೆ ನಾಲ್ಕನೇ ದಿನದ ರಾತ್ರಿ ಮಸೂತಿಯಲ್ಲಿರುವ ಪಂಜಾಯಿತಿನ್‌ಗಳನ್ನು ಗ್ರಾಮದಲ್ಲಿರುವ ಬಡಿಗ ಅಥವಾ ಕಂಬಾರರ ಹತ್ತಿರ ಶುಚಿಗೊಳಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಮಸೂತಿಯಲ್ಲಿ ಪ್ರತಿಷ್ಠಾಪಿಸುವುದು ಮಾರನೆಯ ದಿನ ಅವುಗಳನ್ನು ಜನರಿಗೆ ಕಾಣುವಂತೆ ಪ್ರದರ್ಶಿಸುವುದರ ಮೂಲಕ ಆಚರಣೆಯು ಆರಂಭಗೊಳ್ಳುತ್ತದೆ.

ಇದನ್ನೂ ಓದಿ:ಭದ್ರಕವಚ ಭೇದಿಸುವ ಒಂದು ಸಾಹಿತ್ಯಕ ಪ್ರಯತ್ನ

ಧಾರ್ಮಿಕ ಸಾಮರಸ್ಯದ ಪ್ರತೀಕ

ಈ ಮೊಹರಂ ಹಿಂದೂ ಮುಸಲ್ಮಾನರು ಒಡಗೂಡಿ ಭಾವೈಕ್ಯತೆಯಿಂದ ಆಚರಿಸುವ ಹಬ್ಬ, ಇದು ಪರಸ್ಪರಲ್ಲಿ ಸಾಮರಸ್ಯವನ್ನು ಒಡಮೂಡಿಸುವದರ ಜೊತೆಗೆ ಪ್ರೀತಿ ವಿಶ್ವಾಸ ಭಾಗವಹಿಸಿಕೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ, ಜಾತಿ ಲಿಂಗ ಧರ್ಮದ ಬೇದ ಭಾವವಿಲ್ಲದೆ ಆಲಾಯಿ ದೇವರುಗಳಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತು ಸಕ್ಕರೆಯನ್ನು ಓದಿಸುವ ಸಂದರ್ಭದಲ್ಲಿ ಕ್ಯಾ ಹುಸೇನ್ ಬಾ ಹುಸೇನ್, ಯಮೋದ್ದೀನ್ ಎನ್ನುವ ಘೋಷಣೆಗಳ ಮೂಲಕ ಸಕ್ಕರೆ ಓದಿಸಿ ಕೆಂಪು ಲಾಡಿಗಳನ್ನು ಕೈಗೆ ಹಾಕಿಕೊಳ್ಳುವ ಆಚರಣೆಯನ್ನು ಗಮನಿಸಿದರೆ ಸರ್ವ ಜನಾಂಗದ ಶಾಂತಿಯ ತೋಟವೆ ಕಣ್ಣೆದುರಿಗೆ ನಿಂತಂತೆ, ಸರ್ವ ಜನಾಂಗಗಳು ಭೇದ ಭಾವವನ್ನ ತೊರೆದು ಬೆರೆಯುವ ಈ ಪರಿಯು ರಸಿಕರ ಕಂಗಳ ಸೆಳೆಯುವ ನೋಟವನ್ನು ಸೃಷ್ಟಿಸುತ್ತದೆ, ಹಿಂದೂ ಸಮಾಜದ ಸಹೋದರ ಬಂಧುಗಳೇ, ಮೊಹರಂ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿ ಭಾವೈಕ್ಯತೆಯನ್ನು ಮೆರೆಯುತ್ತಿದ್ದಾರೆ.

ಗ್ರಾಮೀಣ ಜಾನಪದ ಕಲೆಯ ಕಲರವ

ಕನ್ನಡ ನಾಡಿನಲ್ಲಿ ಮೊಹರಂ ಆಚರಣೆಯು ಗ್ರಾಮೀಣ ಸೊಗಡಿನ ಜಾನಪದ ಕಲಾ ಲೋಕವನ್ನೇ ಕಣ್ಣೆದುರಿಗೆ ಕಟ್ಟುವಂತೆ ಮಾಡುತ್ತದೆ, ಕರ್ಬಲ ಮರುಭೂಮಿಯ ಆ ಯುದ್ಧದಲ್ಲಿ ಹೋರಾಡಿದ ಹಜರತ್ ಅಲಿ ,ಹಸನ್, ಹುಸೇನರ ಸಾಹಸ ಶೌರ್ಯವನ್ನು ರಿವಾಯಿತಿ ಹಾಡುಗಾರರು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಹಾಡುತ್ತಾರೆ . ಮೊಹರಂ ಹಬ್ಬದಲ್ಲಿ ಹಾಡುವ ಈ ಪದಗಳನ್ನು ಮೊಹರಂ ಪದ ,ಅಲಾವಿಪದ ,ಕರ್ಬಲ ಪದ ಜಂಗಿನ ಪದ ,ರಿವಾಯಿತ ಪದ , ಶೋಕವನ್ನು ಅಭಿವ್ಯಕ್ತಿಸುವ ಮರ್ಶಿಯ ಪದ ಎಂದಿಲ್ಲಾ ಕರೆಯುತ್ತಾರೆ , ಈ ತೆರನಾದ ಹಾಡುಗಾರಿಕೆ ಇಡೀ ಕತ್ತಲ ರಾತ್ರಿಯನ್ನು ಮೊಹರು ಸಂಭ್ರಮದ ರಾತ್ರಿಯಾಗಿ ಸೃಷ್ಟಿಯಾಗುತ್ತದೆ, ಯುದ್ಧದಲ್ಲಿ ಹೋರಾಡಲು ಬಳಸಿದ ಕುದುರೆಯ ಸಂಕೇತವಾಗಿ ಕುದುರೆ ಕುಣಿತವನ್ನು, ಅಳ್ಳಳ್ಳಿ ಬೆಳ್ಳುಳ್ಳಿಯ ವೇಷಧಾರಿಕೆ, ಹುಲಿ ವೇಷ ಧರಿಸುವ ಸಂಪ್ರದಾಯವು ಹಲವು ತಲೆಮಾರುಗಳಿಂದಿ ನಡೆದುಕೊಂಡು ಬಂದಿದೆ.

ಕೋಲಾಟ ಪದಗಳ ಜೊತೆಗೆ ಹೆಜ್ಜೆ ಹಾಕುವ ಕುಣಿತಗಳು, ಹಿಂದೂ ಮುಸಲ್ಮಾನರು ಒಡಗೂಡಿ ಅಲಾವಿ ಕುಣಿಯ ಸುತ್ತ ಕುಣಿಯುವುದು, ಮೈ ಜುಮ್ ಎನಿಸುವ ಹಲಿಗೆ ವಾದನ, ಬಹುರೂಪಿ ಮೊಹರಂ ಆಚರಣೆಯನ್ನು ಶ್ರೀಮಂತ ಗೊಳಿಸಿದೆ, ಪ್ರದೇಶವಾರು ವಿಭಿನ್ನ ಆಚರಣೆಗಳು ರೂಡಢಿಯಲ್ಲಿವೆ , ಅಲೈ ದೇವರುಗಳು ಸವಾರಿ ಹೊರಡುವ ಸಂದರ್ಭದಲ್ಲಿ ಆಯಾ ಪ್ರದೇಶದಲ್ಲಿರುವ ಊರಿನ ಆರಾಧ್ಯ ದೇವರುಗಳಾದ ಬಸವೇಶ್ವರ ,ಹನುಮಾನ ,ದ್ಯಾಮವ್ವನ ಗುಡಿ ,ಈಶ್ವರನ ದೇವಾಲಯ ,ಪ್ರಮುಖ ಮಠ ದೇವಸ್ಥಾನಗಳಿಗೆ ತೆರಳಿ ಪರಸ್ಪರ ಭೇಟಿ ಮಾಡುವ ಕ್ಷಣವು ದೇವನೊಬ್ಬ ನಾಮ ಹಲವು ಎನ್ನುವ ಭಾವ ಮೂಡದೆ ಇರದು, ಈ ಕ್ಷಣವು ಅಲ್ಲಿ ನೆರೆದ ಜನರಿಗೆ ಮಾನವ ಕುಲ ಒಂದೇ ಎನಿಸದೇ ಇರದು, ದೇವರುಗಳೇ ಧರ್ಮದ ಗಡಿ ದಾಟಿ ಪರಸ್ಪರನ್ನು ಸಂಧಿಸುವ, ಭೇಟಿ ಮಾಡುವ, ಮಾತಾಡುವ ಈ ಸಂದರ್ಭವು , ಜನರು ತಮ್ಮ ತಮ್ಮ ಜಾತಿಯ ,ಧರ್ಮದ ಗೆರೆಗಳನ್ನು ಮೀರಿ ಪರಸ್ಪರರು ಸೌಹಾರ್ದಯುತವಾಗಿ ಬದುಕುವಂತೆ ಪ್ರೇರೇಪಿಸುತ್ತದೆ.

ಈ ಮೊಹರಂ ಸಂದರ್ಭ. ಕೆಲವು ಕಡೆ ಮೊಹರುಂ ಕಡೆಯ ದಿನ ಬೆಳಗಿನ ಅವಧಿಯಲ್ಲಿ ದೇವರು ಸವಾರಿ ಹೊರಡುವು ಸಂದರ್ಭದಲ್ಲಿ ಮಸೂತಿಯ ಮುಖ್ಯದೇವರು ವಿವಿಧ ಕಾಳು ಕಡಿ (ಧಾನ್ಯ) ಗಳನ್ನು ಮುಟ್ಟಿಸುವ , ಯಾವ ಧಾನ್ಯಗಳನ್ನು ಮುಟ್ಟುತ್ತಾರೋ ಆ ವರ್ಷ ಆ ಧಾನ್ಯಗಳನ್ನು ಬಿತ್ತಿ ಬೆಳೆಯಲು ಶುಭ ಸೂಚಕ ಸಂದರ್ಭ ಎಂದು ಹಲವು ಜನರ ನಂಬುತ್ತಾರೆ, ಆ ವರ್ಷದ ಮಳೆ ಬೆಳೆ, ಮಕ್ಕಳ ಸಂತಾನ, ಯುವಕರ ದುಶ್ಚಟಗಳನ್ನು ಬಿಡಿಸುವುದು, ಮೈಮೇಲೆ ಬಂದಿರುವ ಗಾಳಿಗಳನ್ನು ಹೋಗಲಾಡಿಸುವ, ಕಾಯಿಲೆ ಬಿದ್ದವರಿಗೆ ಸಂತೈಸುವ, ಜನರು ತಮ್ಮ ಬೇಡಿಕೆಗಳನ್ನ ದೇವರ ಮುಂದೆ ಇಡುವ ಈ ಎಲ್ಲಾ ಸಂದರ್ಭಗಳನ್ನು ಮೊಹರಂ ಹಬ್ಬ ಸಾಕ್ಷಿಕರಿಸುತ್ತದೆ.

ಧರ್ಮ ಜಾತಿಯ ಗಡಿಗಳನ್ನು ಮೀರಿ, ಹಬ್ಬದಲ್ಲಿ ಪಾಲ್ಗೊಳ್ಳುವ ಜನರ ಮನೋಭಾವವು ಭಾವೈಕ್ಯ ಭಾರತವು ಕಣ್ಣಲ್ಲಿ ಕುಣಿವಂತೆ ಮಾಡುತ್ತದೆ, ಜ್ಞಾನ ವಿಜ್ಞಾನಗಳು ಬೆಳೆದಂತೆ ಮನುಷ್ಯನ ಮನಸ್ಸು ಸಂಕುಚಿತಗೊಳ್ಳುತ್ತಿರುವ ಈ ಸಂಕಷ್ಟ ಸವಾಲುಗಳ ಸಂದರ್ಭದಲ್ಲಿ , ಈಗಿನ ಪಟ್ಟಭದ್ರ ಹಿತಾಸಕ್ತಿಗಳು, ಕೆಲವು ಪೂರ್ವಗ್ರಹಿತ ಸಾಮಾಜಿಕ ಮಾಧ್ಯಮಗಳು , ಸಾಮರಸ್ಯ ಸಮಾಜವನ್ನೇ ಹೊಸಕಿಹಾಕಿ, ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಹವಣಿಸುತ್ತಿರುವ ದುಷ್ಟ ಶಕ್ತಿಗಳು , ಸಾಮಾಜಿಕ ಸಾಮರಸ್ಯವನ್ನು, ಜನರ ಭಾವೈಕ್ಯತೆಯನ್ನು, ಸಮಾಜದ ಶಾಂತಿ ನೆಮ್ಮದಿಯ ಕ್ಷಣಗಳಿಗೆ ಬೆಂಕಿ ಇಡುವ ಕಾರ್ಯಗಳನ್ನು ಮಾಡುತ್ತಲೇ ಇರುತ್ತದೆ. ಇಂಥವರ ದುಷ್ಟ ಪಿತೂರಿಗಳನ್ನು ತಡೆಯಲು ಈ ಮೊಹರಂ ಹಬ್ಬದಂತೆ ಕೆಲವು ಜಾತ್ರೆ,ಉತ್ಸವಗಳ ಆಚರಣೆಯಿಂದ ಸಾಧ್ಯ ಎನ್ನುವುದನ್ನು ಸಾರಿ ಹೇಳುವಂತಿದೆ ಈ ಬಹುರೂಪಿ ಮೊಹರಂ.

Donate Janashakthi Media

Leave a Reply

Your email address will not be published. Required fields are marked *