ಬೆಳಗಾವಿ : “ನಮ್ಮ ಭಾಗದ ಬಹುತೇಕ ವಿಧಾನಸಭಾ ಕ್ಷೇತ್ರಗಳು ಹಿಂದುಳಿದಿವೆ. ಯಾವುದೇ ಸಚಿವ ಈ ಭಾಗದಲ್ಲಿ ಓಡಾಡುತ್ತಿಲ್ಲ. ತಮ್ಮ ಸ್ವಂತ ಕ್ಷೇತ್ರಗಳನ್ನು ಬಿಟ್ಟರೆ ಬೆಂಗಳೂರಿಗೆ ಹೋಗುತ್ತಾರೆ. ಬೇರೆ ಎಲ್ಲೂ ಹೋಗುವುದಿಲ್ಲ” ಎಂದು ಕಾಂಗ್ರೆಸ್ನ ಬಿ.ಆರ್.ಪಾಟೀಲ ಕಿಡಿಕಾರಿದರು.
“ಉತ್ತರಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಯಾವುದೇ ಸಚಿವ ಭೇಟಿ ನೀಡುತ್ತಿಲ್ಲ. ಇವರಿಗೆ ಜವಾಬ್ದಾರಿ ಇಲ್ಲವೇ? ಇವರು ರಾಜ್ಯದ ಮಂತ್ರಿಗಳಲ್ಲವೇ?” ಎಂದು ಕಾಂಗ್ರೆಸ್ನ ಬಿ.ಆರ್.ಪಾಟೀಲ ಅವರು ಪ್ರಶ್ನಿಸಿದರು.
‘ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಮುಖ್ಯಮಂತ್ರಿಯಿಂದ ಹಿಡಿದು ಹಿರಿಯ ಸಚಿವರೆಲ್ಲ ಉತ್ತರ ಕರ್ನಾಟಕ ಭಾಗದ ವಿವಿಧ ತಾಲ್ಲೂಕುಗಳಿಗೆ ಪ್ರವಾಸ ಮಾಡಿ ಜನರ ಸಂಕಷ್ಟಗಳನ್ನು ಅರಿತುಕೊಳ್ಳುತ್ತಿದ್ದರು. ಈಗ ಸಚಿವರಿಗೆ ಏನಾಗಿದೆ. ಖಾನಾಪುರ, ಔರಾದ, ನಿಪ್ಪಾಣಿ, ಬಸವಕಲ್ಯಾಣ, ಆಳಂದ, ಗುರುಮಠಕಲ್ ಇಲ್ಲಿಗೆ ಎಷ್ಟು ಮಂತ್ರಿಗಳು ಭೇಟಿ ನೀಡಿದ್ದಾರೆ’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಬೆಂಗಳೂರು | ಮೇಕೆದಾಟು ಯೋಜನೆ : ಕೆಇಆರ್ಎಸ್ ನಿರ್ದೇಶಕರ ನೇತೃತ್ವದಲ್ಲಿ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ
ಬೆಳಗಾವಿ ಎಂದರೆ ಉತ್ತರ ಕರ್ನಾಟಕವೇ? ‘ಬೆಳಗಾವಿ ಬರುವ ಮಂತ್ರಿಗಳು ನಮ್ಮ ಭಾಗಕ್ಕೆ ಭೇಟಿ ನೀಡಿದ್ದಾಗಿ ಹೇಳುತ್ತಾರೆ. ಬೆಳಗಾವಿಯಿಂದ ಕಲಬುರಗಿಗೆ 400 ಕಿ.ಮೀ ದೂರ ಇರುವುದು ಅವರಿಗೇನಾದರೂ ಗೊತ್ತಿದೆಯೆ? ಇದು ನಮ್ಮ ಕಾಲದಲ್ಲಿ ಮಾತ್ರವಲ್ಲ ಬಿಜೆಪಿ ಕಾಲದಲ್ಲೂ ಹೀಗೆ ಇತ್ತು’ ಎಂದು ದೂರಿದರು.
ಕಲ್ಯಾಣ ಕರ್ನಾಟಕದ ಭಾಗದ 2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ 1 ಲಕ್ಷಕ್ಕೂ ಹೆಚ್ಚು ಮಂದಿ ಅನುತ್ತೀರ್ಣರಾಗುತ್ತಾರೆ. ‘ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ನೋಡಿದರೆ ನಮ್ಮ ಭಾಗದ ಸ್ಥಿತಿ ಗೊತ್ತಾಗುತ್ತದೆ. ಇದಕ್ಕೆ ಕಾರಣವೇನು ಎಂದು ಸರ್ಕಾರ ಆತ್ಮ ವಿಮರ್ಶೆ ಮಾಡಿಕೊಂಡಿದೆಯೇ? ಈ ಭಾಗದಲ್ಲಿ ವಿದ್ಯಾರ್ಥಿಗಳ ತಂದೆ–ತಾಯಿ ಶಿಕ್ಷಣ ಪಡೆದಿರುವುದಿಲ್ಲ. ಶಾಲೆಗಳಲ್ಲಿ ಪಾಠ ಸರಿಯಾಗಿ ನಡೆಯುವುದಿಲ್ಲ, ಒಟ್ಟಾರೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸ್ಥಿತಿಯೇ ಇಲ್ಲ’ ಎಂದು ಹೇಳಿದರು.
‘ರಾಜ್ಯದಲ್ಲಿ 54 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 24 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ನಮ್ಮ ಭಾಗದಲ್ಲಿ ಆರೋಗ್ಯ ಕೇಂದ್ರಗಳ ಕೊರತೆ ಇದ್ದು 300 ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಬೇಕು’ ಎಂದು ಬಿ.ಆರ್.ಪಾಟೀಲ ಒತ್ತಾಯಿಸಿದರು.
ಉತ್ತರ ಕರ್ನಾಟಕ ಕುರಿತ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸಭಾಧ್ಯಕ್ಷರಿಗೆ ಕೋರಿಕೆ ಸಲ್ಲಿಸಿದ ಕುರಿತು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
‘ಉತ್ತರ ಕರ್ನಾಟಕದ ಕುರಿತು ಚರ್ಚೆಯಲ್ಲಿ ನಾನೂ ಭಾಗವಹಿಸಬೇಕಿದೆ. ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ’ ಎಂದು ಎಚ್.ಕೆ.ಪಾಟೀಲ ಹೇಳಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಕರಾರು ಎತ್ತಿದರು.
‘ಉತ್ತರ ನೀಡಬೇಕಾದ ಸ್ಥಾನದಲ್ಲಿರುವ ಸಚಿವರೇ ಚರ್ಚೆಯಲ್ಲಿ ಭಾಗವಹಿಸುವುದು ಸರಿಯಲ್ಲ. ಉತ್ತರ ಹೇಳುವ ಸಂದರ್ಭದಲ್ಲಿ ನೀವು ಹೇಳಬೇಕಾಗಿರುವುದನ್ನು ಹೇಳಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದರು.
ಇದಕ್ಕೆ ವಿ.ಸುನಿಲ್ ಕುಮಾರ್ ಆರಗ ಜ್ಞಾನೇಂದ್ರ ಧ್ವನಿಗೂಡಿಸಿ ‘ಇದು ಸತ್ಸಂಪ್ರದಾಯವಲ್ಲ. ಈ ಬಗ್ಗೆ ರೂಲಿಂಗ್ ನೀಡಬೇಕು’ ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.
ಬಿಜೆಪಿ ಸದಸ್ಯರ ಒತ್ತಡಕ್ಕೆ ಮಣಿದ ಎಚ್.ಕೆ.ಪಾಟೀಲ ಅವರು ‘ಈಗ ಚರ್ಚೆಯಲ್ಲಿ ಭಾಗಹಿಸುವುದಿಲ್ಲ. ಉತ್ತರ ಹೇಳುವ ಸಂದರ್ಭದಲ್ಲಿ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ’ ಎಂದರು.
ಇದನ್ನೂ ನೋಡಿ : ಧರ್ಮಸ್ಥಳ| ಕೊಂದವರು ಯಾರು?ಏಕವ್ಯಕ್ತಿ ಪ್ರದರ್ಶನ Janashakthi Media
