ಪೆರಿಯಾರ್‌ ಅವಹೇಳನ | ಬಿಜೆಪಿ ನಾಯಕ ಹೆಚ್. ರಾಜಾ ವಿರುದ್ಧದ FIR ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಸಮಾಜ ಸುಧಾರಕ ಪೆರಿಯಾರ್, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ, ಡಿಎಂಕೆ ಸಂಸದೆ ಕನಿಮೋಳಿ, ಹಿಂದೂ ಧಾರ್ಮಿಕ ಮತ್ತು ದತ್ತಿಗಳ (HR&CE) ಅಧಿಕಾರಿಗಳು ಮತ್ತು ಅವರ ಪತ್ನಿಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕ ಹೆಚ್. ರಾಜಾ ವಿರುದ್ಧ ದಾಖಲಾಗಿರುವ 11 ಪ್ರಕರಣಗಳನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ಹೆಚ್. ರಾಜಾ ಅವರು “ಬೇಜವಾಬ್ದಾರಿ ಮತ್ತು ಹಾನಿಕಾರಕ ಹೇಳಿಕೆಗಳನ್ನು” ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂದು ಹೇಳಿರುವ ನ್ಯಾಯಾಲಯವು, “ಜೀವನದಲ್ಲಿ ತೊಂದರೆಯಿಲ್ಲದೆ ಇರಲು ನಾಲಿಗೆಯನ್ನು ಕಾಪಾಡಿಕೊಳ್ಳಬೇಕು” ಎಂಬ ತಮಿಳು ಕವಿ ತಿರುವಳ್ಳುವರ್ ಬರೆದ ತಿರುಕ್ಕುರಲ್‌ ದ್ವಿಪದಿಗಳ ಉದಾಹರಣೆ ನೀಡಿದೆ.

ಇದನ್ನೂ ಓದಿ: ಪ್ರಧಾನಿ ಸ್ಥಾನಕ್ಕಾಗಿ ನಮಗೆ ಹಲವು ಆಯ್ಕೆಗಳಿವೆ, ಆದರೆ ಎನ್‌ಡಿಎಗೆ ಮೋದಿ ಬಿಟ್ಟರೆ ಬೇರೆ ಯಾರಿದ್ದಾರೆ: ಉದ್ಧವ್ ಠಾಕ್ರೆ ಪ್ರಶ್ನೆ

ಹೆಚ್. ರಾಜಾ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರು, ”ಹೆಚ್‌. ರಾಜಾ ಅವರು ರಾಷ್ಟ್ರೀಯ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ. ಅವರ ಮಾತುಗಳಿಂದ ಪ್ರಭಾವಿತರಾಗುವ ಅನೇಕ ಅನುಯಾಯಿಗಳನ್ನು ಹೊಂದಿದ್ದಾರೆ. 2018 ರಲ್ಲಿ ಪೆರಿಯಾರ್ ವಿರುದ್ಧ ಅವಹೇಳನಕಾರಿ ಟ್ವೀಟ್‌ ಮಾಡಿದ್ದಕ್ಕಾಗಿ ಮೂರು ಪ್ರಕರಣಗಳು ಹೆಚ್‌. ರಾಜಾ ವಿರುದ್ಧ ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.

ತಮಿಳುನಾಡಿನ ಇತಿಹಾಸ ಮತ್ತು ರಾಜಕೀಯದಲ್ಲಿ ಪೆರಿಯಾರ್ ಅವರ ಪ್ರಾಮುಖ್ಯತೆಯ ಬಗ್ಗೆ ಹೇಳಿದೆ ನ್ಯಾಯಮೂರ್ತಿ ಆನಂದ್ ವೆಂಕಟೇಶ್,”ರಾಜ್ಯದ ಪ್ರತಿಯೊಂದು ರಾಜಕೀಯ ಪಕ್ಷವೂ ಪೆರಿಯಾರ್ ಅವರ ಸಿದ್ಧಾಂತವನ್ನು ಗುರುತಿಸುತ್ತದೆ. ಅವರು ತರ್ಕಬದ್ಧ ಚಿಂತನೆಯನ್ನು ಬೆಂಬಲಿಸುವ ತಮಿಳರು ಅವರನ್ನು ಪೂಜಿಸಲ್ಪಡುವ ದೇವಮಾನವನಂತೆ ಕಾಣುತ್ತಾರೆ. ಪೆರಿಯಾರ್ ಅವರ ವಿಚಾರಧಾರೆಗಳು ಮತ್ತು ಆಲೋಚನೆಗಳಿಗಿಂತ ಭಿನ್ನವಾಗಿರಲು ಒಬ್ಬ ವ್ಯಕ್ತಿಗೆ ಸ್ವಾತಂತ್ಯ್ರವಿದೆ ಎಂಬುವುದು ನಿಜವಾದರೂ, ಅಂತಹ ಅಭಿಪ್ರಾಯವನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದು ಇಲ್ಲಿನ ವಿಷಯವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ʼಗ್ಯಾರಂಟಿʼಯಲ್ಲಿ ನೂರು ದಿನ ! ಐದು ವರ್ಷ ಕಳೆದರೂ ಅಚ್ಚರಿಯಿಲ್ಲ!!

“ಸೈದ್ಧಾಂತಿಕತೆಯ ಟೀಕೆಗಳು ಮಿತಿ ದಾಟಬಾರದು ಮತ್ತು ಹಿಂಸೆಯನ್ನು ಪ್ರಚೋದಿಸುವಷ್ಟು ಮಾನಹಾನಿಯಾಗಿರಬಾರದು. ಆದರೆ ಪೆರಿಯಾರ್ ಕುರಿತ ಎಚ್. ರಾಜಾ ಅವರ ಟ್ವೀಟ್ ಒಂದು ಹಂತದಲ್ಲಿ ಮಿತಿಯನ್ನು ದಾಟಿದೆ. ಅಲ್ಲದೆ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗವುಂಟುಮಾಡುವ ಸಾಮರ್ಥ್ಯ ಹೊಂದಿದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ನ್ಯಾಯಮೂರ್ತಿ ಆನಂದ್ ವೆಂಕಟೇಶ್ ವಿಶೇಷ ನ್ಯಾಯಾಲಯದಲ್ಲಿ ಎಚ್ ರಾಜಾ ವಿರುದ್ಧದ ಮೂರು ಪ್ರಕರಣಗಳ ಜಂಟಿ ವಿಚಾರಣೆಗೆ ಆದೇಶಿಸಿದ್ದು, ಆರೋಪಗಳನ್ನು ರೂಪಿಸಿ ಮೂರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

ಕರುಣಾನಿಧಿ ಮತ್ತು ಅವರ ಪುತ್ರಿ ಕನಿಮೋಳಿ ವಿರುದ್ಧ 2018 ರಲ್ಲಿ ಟ್ವೀಟ್‌ ಮಾಡಿದ್ದ ಪ್ರಕರಣದಲ್ಲಿ ಕೂಡಾ ಇದೇ ರೀತಿಯ ಆದೇಶವನ್ನು ಮಾಡಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. HR & CE ಅಧಿಕಾರಿಗಳು ಮತ್ತು ಅವರ ಪತ್ನಿಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಕಾರಣಕ್ಕೆ ಹೆಚ್‌. ರಾಜಾ ವಿರುದ್ಧ ಏಳು ಎಫ್‌ಐಆರ್‌ ದಾಖಲಾಗಿತ್ತು. ಚೆನ್ನೈನ ಸಂಸದ/ಶಾಸಕರ ನ್ಯಾಯಾಲಯದ ಮುಂದೆ ಈ ಏಳು ಪ್ರಕರಣಗಳ ಜಂಟಿ ವಿಚಾರಣೆಗೆ ಆದೇಶಿಸಿದರು ಮತ್ತು ಆರೋಪಗಳನ್ನು ರೂಪಿಸಿದ ನಂತರ ಮೂರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ವಿಡಿಯೊ ನೋಡಿ: ಚಲೋ ಬೆಳ್ತಂಗಡಿ : ದೇವರ ಹೆಸರಿನಲ್ಲಿ ಎಲ್ಲ ಅನಾಚಾರಗಳನ್ನು ಮುಚ್ಚಿಹಾಕಲಾಗುತ್ತಿದೆ – ಮೀನಾಕ್ಷಿ ಬಾಳಿ

Donate Janashakthi Media

Leave a Reply

Your email address will not be published. Required fields are marked *