ಮೆಕ್ಕೆಜೋಳ ಬೆಲೆ ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಯೇ ಹೊಣೆ : ಸಂಜೆ ಸಿಎಂ ನೇತೃತ್ವದಲ್ಲಿ ಸಭೆ‌

ಬೆಂಗಳೂರು: ಮೆಕ್ಕೆಜೋಳ ಬೆಲೆ ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಯೇ ಹೊಣೆ ಎಂದು ಸಚಿವ ಸಂಪುಟ ಸಭೆ ದೂಷಿಸಿದ್ದು, ಕಬ್ಬು ಬೆಳೆಗಾರರ ಬಳಿಕ ಮೆಕ್ಕೆಜೋಳ ರೈತರ ಹೋರಾಟ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಂದು ಸಂಜೆ ಸಿಎಂ ನೇತೃತ್ವದಲ್ಲಿ ಸಭೆ‌ ನಡೆಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಎಥೆನಾಲ್ ಉತ್ಪಾದಕರು, ಡಿಸ್ಟಿಲ್ಲರಿ ಕಾರ್ಖಾನೆಗಳ ಜೊತೆ ಇಂದು ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.‌ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮೆಕ್ಕೆಜೋಳ ಬೆಲೆ ಬಿಕ್ಕಟ್ಟು, ಹಲವು ಜಿಲ್ಲೆಗಳಲ್ಲಿ ಚಳವಳಿಗೆ ಇಳಿದ ರೈತರ ಬಿಗಿಪಟ್ಟು, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಕುರಿತು ಗಂಭೀರವಾಗಿ ಚರ್ಚೆ ನಡೆಸಲಾಯಿತು.‌ ಎಥನಾಲ್ ತಯಾರಕರು ಮೆಕ್ಕೆಜೋಳ ಖರೀದಿ ಪ್ರಮಾಣ ಹೆಚ್ಚಿಸಿದರೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಸುಧಾರಣೆಯಾಗುವ ಆಶಯವನ್ನು ಸಚಿವರು ವ್ಯಕ್ತಪಡಿಸಿದರು.

ರಾಜ್ಯದಲ್ಲಿ 54.74 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆ ಸಾಧ್ಯವಿರುವ ಸ್ಥಿತಿ ಇದೆ. ಇದು ರೈತರ ಸಮೃದ್ಧಿಗೆ ಅವಕಾಶ ಮಾಡಿಕೊಡಬಹುದಾದ ಸಂದರ್ಭವಾಗಿದ್ದರೂ, ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಈ ಸಾಧನೆಯನ್ನು ಸಂಕಷ್ಟವಾಗಿ ಪರಿವರ್ತಿಸಿದೆ. 2014-15ರಲ್ಲಿ ಮೆಕ್ಕೆಜೋಳ ಬೆಳೆದ ಪ್ರದೇಶ 13.37 ಲಕ್ಷ ಹೆಕ್ಟೇ‌ರ್ ಮತ್ತು ಉತ್ಪಾದನೆ 42 ಲಕ್ಷ ಮೆಟ್ರಿಕ್ ಟನ್ ಆಗಿದ್ದನ್ನು ಹೋಲಿಸಿದರೆ, 2025-26ರಲ್ಲಿ ಬೆಳೆದ ಪ್ರದೇಶ ಶೇ.23.31% ಮತ್ತು ಉತ್ಪಾದನೆಯಲ್ಲಿ ಶೇ.24% ಏರಿಕೆ ಕಂಡುಬಂದಿದೆ. ಮೆಕ್ಕೆಜೋಳದ ಪ್ರಮುಖ ಬಳಕೆ ಕೋಳಿ ಮತ್ತು ಪಶು ಆಹಾರ ಉದ್ಯಮಕ್ಕೆ ಆಗಿದ್ದು, ಈ ಕ್ಷೇತ್ರಕ್ಕೆ ಮಾತ್ರ ಸುಮಾರು 34 ಲಕ್ಷ ಮೆಟ್ರಿಕ್ ಟನ್ ಅವಶ್ಯಕವಿದೆ. ಈ ವರ್ಷ ಕರ್ನಾಟಕದಲ್ಲಿ ಅನುಕೂಲಕರ ಹವಾಮಾನ ಪರಿಸ್ಥಿತಿಯಿರುವುದರಿಂದ ಖಾರೀಫ್ ಋತುವಿನಲ್ಲಿ ರೈತರು 17.41 ಲಕ್ಷ ಹೆಕ್ಟೇರ್ (ಬೆಳೆ ಸಮೀಕ್ಷೆಯ ಪ್ರಕಾರ) ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಬೆಳೆದಿದ್ದಾರೆ.

ಇದನ್ನೂಓದಿ : SIR ಕುರಿತು ಮಾತುಕತೆ: ನ.28ರಂದು ಸಭೆ ನಡೆಸಲು ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಕನಿಷ್ಠ ಬೆಂಬಲ ಬೆಲೆಯಡಿ ಕ್ವಿಂಟಾಲ್ 2,400 ರೂ.ಗಳಿದೆ. ಮುಕ್ತ ಮಾರುಕಟ್ಟೆಯಲ್ಲಿ 1,600 ರಿಂದ 1,900 ರೂ.ಗಳಿದೆ. ಕಳೆದ ಮೂರು ವರ್ಷಗಳಲ್ಲಿ ಎಂಎಸ್‌ಪಿಗಿಂತ ಮುಕ್ತ ಮಾರುಕಟ್ಟೆ ಬೆಲೆ ಹೆಚ್ಚಾಗಿತ್ತು. ಆದರೆ, ಈ ಬಾರಿ ದೇಶದಲ್ಲಿ ಶೇ.38ರಷ್ಟು ಉತ್ಪಾದನೆ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ 32 ಲಕ್ಷ ಟನ್ ಮೆಕ್ಕೆಜೋಳ ಹೆಚ್ಚುವರಿಯಾಗಿ ಲಭ್ಯವಿದೆ. ಸ್ಥಳೀಯ ಉದ್ಯಮಗಳ ಅವಶ್ಯಕತೆಗಿಂತ ಹೆಚ್ಚಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸ ಜೊತೆಗೆ ಕಳೆದ ವರ್ಷ ಮಯನ್ಮಾರ್, ಉಕ್ರೇನ್ ಸೇರಿ ಹಲವು ದೇಶಗಳಿಂದ ಮೆಕ್ಕೆಜೋಳವನ್ನು ಕೇಂದ್ರ ಸರ್ಕಾರ ಆಮದು ಮಾಡಿಕೊಂಡದ್ದು ಬೆಲೆ ಭಾರಿ ಕುಸಿತಕ್ಕೆ ಪ್ರಮುಖ ಕಾರಣವೆಂದು ಸಂಪುಟ ಸಭೆ ಕಳವಳ ವ್ಯಕ್ತಪಡಿಸಲಾಗಿದೆ.

ಕಾನೂನು ಸಚಿವ ಎಚ್.ಕೆ.ಪಾಟೀಲ್ ಈ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ರೈತರ ಸಮಸ್ಯೆಗೆ ಕಾರಣವಾಗಿದೆ. ಎಥನಾಲ್ ಹಂಚಿಕೆ ಪ್ರಮಾಣವನ್ನು ಶೇಕಡಾ 20ರಷ್ಟು ಇಳಿಸಿದರೆ, ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಮಾಣವನ್ನು ಕಡಿತಗೊಳಿಸಿದೆ. ಅಕ್ಕಿ ಖರೀದಿ ಶೇ.40ಕ್ಕೆ ಹೆಚ್ಚಿಸಿ, ಮೆಕ್ಕೆಜೋಳ ಉತ್ಪಾದನೆ ಹೆಚ್ಚಿದ್ದರೂ ಶೇ.30ಕ್ಕೆ ಇಳಿಸಿ ರೈತರಿಗೆ ಮೇಲಿಂದ ಮೇಲೆ ಹೊಡೆತ ನೀಡಿದೆ ಎಂದು ಕಿಡಿಕಾರಿದರು.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಜಂಟಿಯಾಗಿ ಹೊರಡಿಸಿದ SOP ಪ್ರಕಾರ, ಮೆಕ್ಕೆಜೋಳವನ್ನು NAFED/NCCF ಖರೀದಿಸಬೇಕು ಮತ್ತು ಸಂಗ್ರಹಿಸಿದ ಮೆಕ್ಕೆಜೋಳವನ್ನು ಧಾನ್ಯ ಆಧಾರಿತ ಡಿಸ್ಟಿಲರಿಗಳು ನಂತರದ ಎಥೆನಾಲ್ ಪೂರೈಕೆಗಾಗಿ ಖರೀದಿಸಬೇಕು. 21.11.2025 ರಂದು ಡಿಸ್ಟಿಲರಿಗಳ ಪ್ರತಿನಿಧಿಗಳೊಂದಿಗೆ ವೀಡಿಯೊ ಕಾನೂರೆನ್ಸ್ ಮೂಲಕ ನಡೆದ ಚರ್ಚೆಯ ಸಮಯದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಮೇ 1, 2026 ರಿಂದ ಪ್ರಾರಂಭವಾಗುವ ತ್ರೈಮಾಸಿಕ 1 ಮತ್ತು IV ಗಾಗಿ ಡಿಸ್ಟಿಲರಿಗಳಿಗೆ ಎಥೆನಾಲ್ ಪೂರೈಕೆಯ ಪ್ರಮಾಣವನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಸಚಿವಾಲಯ ಮೇ 2026 ರಿಂದ ಪ್ರಾರಂಭವಾಗುವ ಪ್ರಸ್ತುತ ನಿಗದಿಪಡಿಸಿದ ಅವಧಿಗೆ ಬದಲಾಗಿ ಡಿಸೆಂಬರ್ 2025 ರಿಂದ ಹಿಂದಿನ ಅವಧಿಗೆ, ಆದ್ಯತೆಯಾಗಿ ಡಿಸೆಂಬರ್ 2025 ರಿಂದ, ಕೇಂದ್ರ ಏಜೆನ್ಸಿಗಳಿಂದ (NAFED/NCCF) ಮೆಕ್ಕೆಜೋಳವನ್ನು ಖರೀದಿಸಲು ಸಿದ್ಧರಿದ್ದೇವೆ ಎಂದು ಡಿಸ್ಟಿಲರಿಗಳು ಒಲವು ವ್ಯಕ್ತಪಡಿಸಿವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ರೈತರ ಹಿತಾಸಕ್ತಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ಮೆಕ್ಕೆಜೋಳ ಹಂಚಿಕೆಯನ್ನು ಡಿಸೆಂಬರ್ 2025ಕ್ಕೆ ಮುಂದೂಡುವಂತೆ ಕೋರಲಾಗಿದೆ. ಇದರಿಂದ ಡಿಸ್ಟಿಲರಿಗಳು ತಕ್ಷಣವೇ NAFED/NCCF ನಿಂದ ಖರೀದಿಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ ಹಾಗೂ ಮೆಕ್ಕೆಜೋಳದ ಬೆಲೆಗಳನ್ನು ಸ್ಥಿರಗೊಳಿಸುತ್ತದೆ ಮತ್ತು ಪ್ರತಿಯಾಗಿ ರೈತ ಸಮುದಾಯವನ್ನು ಬೆಂಬಲಿಸುತ್ತದೆ.

2025-26 ಖಾರಿಫ್ ಅವಧಿಯಲ್ಲಿ PDPS ಅಡಿ ಮೆಕ್ಕೆಜೋಳ ಸಂಗ್ರಹಣೆಗೆ ಸಂಬಂಧಿಸಿದಂತೆ ಸಹಕಾರ ಇಲಾಖೆಯ ಕಾರ್ಯದರ್ಶಿಗಳು 19.11.2025 ರಂದು ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಕೃಷಿ ಸಚಿವರು 21.11.2025 ರಂದು ನವದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಮತ್ತು ಮಾನ್ಯ ಕೃಷಿ ಸಚಿವರನ್ನು ಭೇಟಿ ಮಾಡಿ ರಾಜ್ಯದ ಮೆಕ್ಕೆಜೋಳ ರೈತರನ್ನು ಬೆಂಬಲಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದಾರೆ.

ಕೃಷಿ ಸಚಿವರು ಮೆಕ್ಕೆಜೋಳ ಬೆಳೆಗಾರರ ಮತ್ತು ಹಾಲು ಸಂಘದ ಸದಸ್ಯರಿಂದ ನೇರವಾಗಿ ಮೆಕ್ಕೆಜೋಳವನ್ನು ಖರೀದಿಸುವಂತೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರದ SOP ಪ್ರಕಾರ MSP ಅಡಿ ಮೆಕ್ಕೆಜೋಳದ ಖರೀದಿಯನ್ನು ಪ್ರಾರಂಭಿಸಲು NAFED/NCCF ಗೆ ಸೂಚಿಸಲಾಗಿದೆ. ಪಶುಸಂಗೋಪನಾ ಸಚಿವರು 24.11.2025 ರಂದು ಕೋಳಿ ಸಂಘ ಮತ್ತು ಜಾನುವಾರು ಸಂಘದೊಂದಿಗೆ ಸಭೆ ನಡೆಸಿ, ಸಂಕಷ್ಟದ ಸಮಯದಲ್ಲಿ ಮೆಕ್ಕೆಜೋಳ ಬೆಳೆಯುವ ರೈತರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಕೆಟಿಪಿಪಿ ಕಾಯ್ದೆಯ 4(ಜಿ) ಅಡಿಯಲ್ಲಿ ರೂ.2,400 ಗಳ ಎಂಎಸ್‌ಪಿ ದರದಲ್ಲಿ ಒಂದು ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಕೆಎಂಎಫ್‌ಗೆ ವಿನಾಯಿತಿ ನೀಡಲಾಗಿದೆ.

ಇದನ್ನೂ ನೋಡಿ : ವೇತನ ಹೆಚ್ಚಳಕ್ಕಾಗಿ ಬಿಸಿಯೂಟ ನೌಕರರ ಅನಿರ್ಧಿಷ್ಟ ಧರಣಿ | ಡಿಸೆಂಬರ್ 01-2025 Janashakthi Media

Donate Janashakthi Media

Leave a Reply

Your email address will not be published. Required fields are marked *