ಬೆಂಗಳೂರು: ಮುಂದಿನ ವಾರ ಕರ್ನಾಟಕ ಅರಣ್ಯ ಇಲಾಖೆಯ ಆಡಳಿತದಲ್ಲಿ ಇತಿಹಾಸ ಸೃಷ್ಟಿಯಾಗಲಿದ್ದೂ, ಕಳೆದ ಕೆಲ ವರ್ಷಗಳಿಂದ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಹಲವಾರು ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ಐಎಫ್ಎಸ್ ಮಹಿಳಾ ಅಧಿಕಾರಿಗಳು ಕೂಡ ಕೆಲಸ ಮಾಡಿದ್ದಾರೆ. ಆದರೆ ಈವರೆಗೂ ಇಲಾಖೆಯ ಅತ್ಯುನ್ನತ ಹುದ್ದೆಯನ್ನು ಮಹಿಳೆಯೊಬ್ಬರು ಅಲಂಕರಿಸಿರಲಿಲ್ಲ. ಮುಖ್ಯಸ್ಥ
ಮಹಿಳೆಯರು ಕರ್ನಾಟಕ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ಈ ಅವಕಾಶ ಬಂದಿರಲಿಲ್ಲ. ಆಂದರೆ ಕರ್ನಾಟಕ ಅರಣ್ಯ ಇಲಾಖೆ ಒಟ್ಟಾರೆ ಪಡೆಗಳ ಮುಖ್ಯಸ್ಥರಾಗಿ ( ಎಚ್ಒಎಫ್ಎಫ್) ಮಹಿಳೆಯೊಬ್ಬರು ಚುಕ್ಕಾಣಿ ಹಿಡಿದಿರಲಿಲ್ಲ. ಅದು ಈಗ ಆಗಲಿದೆ.
ಕರ್ನಾಟಕದ ಹಿರಿಯ ಐಎಫ್ಎಸ್ ಅಧಿಕಾರಿ, ಸದ್ಯ ಕೇಂದ್ರ ಸೇವೆಯಲ್ಲಿರುವ ಮೀನಾಕ್ಷಿ ನೇಗಿ ಅವರು ಅರಣ್ಯ ಇಲಾಖೆ ಪಡಗಳ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ. ಈ ಸಂಬಂಧ ಪ್ರಕ್ರಿಯೆಗಳು ನಡೆದಿದ್ದು, ಅಧಿಕೃತವಾಗಿ ನೇಮಕ ಪ್ರಕಟಿಸುವುದು ಆದೇಶ ಬಾಕಿಯಿದೆ. ಅವರು ಈ ಹುದ್ದೆಯಲ್ಲಿ 2026 ರ ಅಕ್ಟೋಬರ್ವರೆಗೂ ಇರಲಿದ್ದಾರೆ.
ಇದನ್ನೂ ಓದಿ: ತಮಿಳುನಾಡು| ಬಾಲಕಿ ಮೇಲೆ 7 ಮಂದಿ ಕಾಲೇಜು ವಿದ್ಯಾರ್ಥಿಗಳಿಂದ ಸಾಮೂಹಿಕ ಅತ್ಯಾಚಾರ
ಮೀನಾಕ್ಷಿ ನೇಗಿ ಯಾರು
ಮೀನಾಕ್ಷಿ ನೇಗಿ ಅವರು ಸದ್ಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿ. ಅವರು ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಕುರಿತು ಉನ್ನತ ಮಟ್ಟದ ಸಮಿತಿ ಸಭೆ ಸೇರಿ ತೀರ್ಮಾನ ಕೈಗೊಂಡಿದೆ. ಕೇಂದ್ರ ಸರ್ಕಾರವೂ ವರದಿ ಸಲ್ಲಿಸಲಾಗಿದೆ. ಅದರ ಆಧಾರದ ಮೇಲೆಯೇ ಅವರನ್ನು ಕೇಂದ್ರ ಸರ್ಕಾರದ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಕರ್ನಾಟಕ ಸೇವೆಗೆ ಮರಳಿದ್ದು, ಹೊಸ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ಮೀನಾಕ್ಷಿ ನೇಗಿ ಅವರು ಮೂಲತಃ ಉತ್ತರಖಂಡ ರಾಜ್ಯದವರು. ಐಎಫ್ಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ನಿಯೋಜನೆಗೊಂಡವರು. 1989 ರ ಬ್ಯಾಚ್ನ ಕರ್ನಾಟಕ ಕೇಡರ್ನ ಅಧಿಕಾರಿಯಾಗಿ ಮೂರೂವರೆ ದಶಕದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದ ಆಡಳಿತ ವಲಯದಲ್ಲಿ ಅತ್ಯುತ್ತಮ ಹಾಗೂ ದಕ್ಷ ಅಧಿಕಾರಿ ಎಂದೇ ಅವರು ಹೆಸರು ಮಾಡಿದವರು. ಕರ್ನಾಟಕದ ಬಳ್ಳಾರಿ, ಮಂಡ್ಯ, ಚಿಕ್ಕಮಗಳೂರಿನಲ್ಲಿ ಡಿಸಿಎಫ್ ಆಗಿ ಸೇವೆ ಸಲ್ಲಿಸಿದವರು. ಬಳ್ಳಾರಿಯಲ್ಲಿ ಡಿಸಿಎಫ್ ಆಗಿ ಆವರು ಮಾಡಿದ ಕೆಲಸವನ್ನು ಈಗಲೂ ಆ ಭಾಗದವರು ನೆನಪಿಸಿಕೊಳ್ಳುತ್ತಾರೆ.
ನಾಲ್ಕು ವರ್ಷ ಮಂಡ್ಯದಲ್ಲೂ ಡಿಸಿಎಫ್ ಆಗಿ ಗಮನ ಸೆಳೆಯುವ ಕೆಲಸ ಮಾಡಿದವರು ಮೀನಾಕ್ಷಿ ನೇಗಿ. ಟಿಂಬರ್ ಮಾರಾಟಕ್ಕೆ ಆನ್ಲೈನ್ ಸ್ವರೂಪ ನೀಡಿದವರು. ಆನಂತರ ಕೇಂದ್ರ ಸೇವೆಗೆ ತೆರಳಿ ಅಲ್ಲಿ ಆಯುಷ್ ಇಲಾಖೆ ಜಂಟಿ ಕಾರ್ಯದರ್ಶಿಯಾಗಿದ್ದವರು. ಕರ್ನಾಟಕದ ಆಯುಷ್ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸಿ ಇಲಾಖೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದವರು. ಎರಡನೇ ಬಾರಿ ಕೇಂದ್ರ ಸೇವೆಗೆ ಮರಳಿದ ಮೀನಾಕ್ಷಿ ಅವರು ಎರಡು ವರ್ಷದಿಂದ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಮಹಿಳೆಯರ ಹಕ್ಕುಗಳು, ಅವರ ಆರೋಗ್ಯ ಸಂಬಂಧಿಸಿ ಆಯೋಗ ಕೈಗೊಂಡ ಸುಧಾರಣೆ ಕ್ರಮದ ಹಿಂದೆ ಇದ್ದವರು ಮೀನಾಕ್ಷಿ. ಇದಕ್ಕಾಗಿ ಚೇಂಜ್ ಮೇಕರ್ ಪ್ರಶಸ್ತಿಯೂ ಅವರಿಗೆ ಲಭಿಸಿದೆ. ತಿಂಗಳ ಹಿಂದೆಯಷ್ಟೇ ಮೀನಾಕ್ಷಿ ನೇಗಿ ಅವರನ್ನು ಭಾರತ ಸರ್ಕಾರದಲ್ಲಿ ಕಾರ್ಯದರ್ಶಿ/ಕಾರ್ಯದರ್ಶಿ ಸಮಾನ ಹುದ್ದೆಗಳನ್ನು ಅಲಂಕರಿಸಲು ಆಯ್ಕೆ ಮಾಡಲಾಗಿತ್ತು.
ಐಎಫ್ಎಸ್ ದಂಪತಿ
ಮೀನಾಕ್ಷಿ ನೇಗಿ ಅವರ ಪತಿ ವಿಜಯ ಶರ್ಮ ಕೂಡ ಕರ್ನಾಟಕ ಕೇಡರ್ ಐಎಫ್ಎಸ್ ಅಧಿಕಾರಿಯಾಗಿದ್ದರು. ಅತ್ಯುತ್ತಮ ಅಧಿಕಾರಿಯಾಗಿ ಹೆಸರು ಮಾಡಿದವರು. ಕರ್ನಾಟಕ ಸರ್ಕಾರಿ ಸ್ವಾಮ್ಯದ ಜಂಗಲ್ ರೆಸಾರ್ಟ್ ಎಂಡಿಯಾಗಿ ಅದಕ್ಕೆ ಹೊಸ ರೂಪ ನೀಡಿದವರು. ಅವರು ಜನವರಿಯಲ್ಲಿ ನಿವೃತ್ತರಾಗಿದ್ದರು.
ಕರ್ನಾಟಕ ಮಾತ್ರವಲ್ಲದೇ ಭಾರತವೇ ಕಂಡ ಅಪರೂಪದ ಅಧಿಕಾರಿಗಳಲ್ಲಿ ಐಎಫ್ಎಸ್ ದಂಪತಿಯಾದ ಮೀನಾಕ್ಷಿನೇಗಿ, ವಿಜಯಶರ್ಮ ಹೆಸರು ಉಲ್ಲೇಖಿಸಬಹುದು. ಮೀನಾಕ್ಷಿ ನೇಗಿ ನಾನು ಬಳ್ಳಾರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾಗ ಡಿಎಫ್ಒ ಆಗಿದ್ದರು. ಕರ್ನಾಟಕದ ವಿವಿಧ ಭಾಗ, ನಾನಾ ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ನೇಗಿ ಅವರು ಈಗ ಕರ್ನಾಟಕದ ಅರಣ್ಯ ಇಲಾಖೆ ಪಡೆಗಳ ಮುಖ್ಯಸ್ಥರಾಗಿ ನೇಮಕವಾಗುವುದು ಖಚಿತ. ಅವರ ಆಯ್ಕೆಯೂ ಸೂಕ್ತವಾಗಿದೆ ಎನ್ನುತ್ತಾರೆ ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಹಿರಿಯ ಐಎಫ್ಎಸ್ ಅಧಿಕಾರಿ ಬಿ.ಜೆ.ಹೊಸಮಠ.
ಮಹಿಳೆಗೆ ಮೊದಲ ಅವಕಾಶ
ಕರ್ನಾಟಕದಲ್ಲಿ ಮಧುಶರ್ಮಾ, ರೀತು ಕಕ್ಕರ್ ಅವರು ಹಿಂದೆ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ( ಪಿಸಿಸಿಎಫ್) ಆಗಿ ಸೇವೆ ಸಲ್ಲಿಸಿದ್ದಾರೆ. ಅರಣ್ಯ ಪಡೆಗಳ ಮುಖ್ಯಸ್ಥರಾಗುವ ಅವಕಾಶ ಸಿಗಲಿಲ್ಲ. ಈಗ ಇಲಾಖೆಯಲ್ಲಿ ಹಿರಿತನ ಹೊಂದಿರುವ ಮೀನಾಕ್ಷಿ ನೇಗಿ ಅವರಿಗೆ ಈ ಅವಕಾಶ ಒದಗಿ ಬಂದಿದೆ.
ಕರ್ನಾಟಕ ಅರಣ್ಯ ಇಲಾಖೆ ಸೇವೆಯಲ್ಲಿ ಸದ್ಯ 25ಕ್ಕೂ ಐಎಫ್ಎಸ್ ದರ್ಜೆಯ ಅಧಿಕಾರಿಗಳು ಇದ್ದಾರೆ. ಅದರಲ್ಲಿ ಪಿಸಿಸಿಎಫ್ ಹುದ್ದೆಯಲ್ಲಿಯೇ ಮೂವರು ಇರುವುದು ವಿಶೇಷ. ಕರ್ನಾಟಕದಲ್ಲಿ ಒಟ್ಟು ಎಂಟು ಪಿಸಿಸಿಎಫ್ ಹುದ್ದೆಗಳಿವೆ. ಸದ್ಯ ಮೀನಾಕ್ಷಿ ನೇಗಿ ಅವರೊಟ್ಟಿಗೆ ಸೀಮಾಗರ್ಗ್, ರಾಧಾದೇವಿ ಕೂಡ ಇದ್ದಾರೆ. ಮೀನಾಕ್ಷಿ ನೇಗಿ ಅವರ ನಂತರ ರಾಧಾದೇವಿ, ಸದ್ಯ ಎಪಿಸಿಸಿಎಫ್ ಆಗಿರುವ ಸ್ಮಿತಾ ಬಿಜ್ಜೂರು ಕೂಡ ಅರಣ್ಯ ಪಡೆಗಳ ಮುಖ್ಯಸ್ಥರ ಹುದ್ದೆ ಅಲಂಕರಿಸುವರು.
ಭಾರತದ ಹಲವು ರಾಜ್ಯಗಳಲ್ಲಿ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ಮಹಿಳೆಯರು ಈ ಹಿಂದೆ ಸೇವೆ ಸಲ್ಲಿಸಿದ್ದಾರೆ. ರಾಜಸ್ಥಾನದಲ್ಲಿ ಸವಿತಾ ಆನಂದ್, ಡಾ.ಶೃತಿ ಶರ್ಮ, ತೆಲಂಗಾಣದಲ್ಲಿ ಶೋಭಾ, ಹಿಮಾಚಲ ಪ್ರದೇಶದಲ್ಲಿ ಡಾ.ಸವಿತಾ, ಉತ್ತರಾಖಂಡದಲ್ಲಿ ರಂಜನಾ ಕಾಲ, ವೀಣಾ ಸೇಖಾರಿ, ಹರಿಯಾಣದಲ್ಲಿ ಡಾ.ಅಮರಿಂದರ್ ಕೌರ್ ಅವರು ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ನೋಡಿ: ಬಹುರೂಪಿ : ಶರಣ ಚಳವಳಿಯ ಕನ್ನಡಿಯಲ್ಲಿ ವರ್ತಮಾನದ ಬಿಕ್ಕಟ್ಟುಗಳು ಹಾಗೂ ಬಿಡುಗಡೆಯ ದಾರಿ Janashakthi Media