ಪರಿಷತ್‌ ಚುನಾವಣೆ: ಮತಪೆಟ್ಟಿಗೆಯಲ್ಲಿ ಭದ್ರಗೊಂಡ ಅಭ್ಯರ್ಥಿಗಳ ಭವಿಷ್ಯ-ಜೂನ್‌ 15ಕ್ಕೆ ಎಣಿಕೆ

ಬೆಂಗಳೂರು: ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ 4 ಸ್ಥಾನಗಳಿಗೆ ನೆನ್ನೆ (ಜೂನ್‌ 13) ಮತದಾನ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾನ ನಡೆದಿದೆ. ಒಟ್ಟಾರೆ ಸರಾಸರಿ ಶೇಕಡ 74.39ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಆರು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಶೇಕಡ 57.35ರಷ್ಟು ಮತದಾನವಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ಶೇಕಡವಾರು ಮತ ಪ್ರಮಾಣ ಹೆಚ್ಚಾಗಿದೆ. ಈ ಬಾರಿ ಚುನಾವಣಾ ಕಣದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ 49 ಅಭ್ಯರ್ಥಿಗಳ ಸ್ಪರ್ಧಿಸಿದ್ದಾರೆ.

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಶೇಕಡ 59.59 ಮತ್ತು ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇಕಡ 71.30ರಷ್ಟುಮತದಾನವಾಗಿದೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇಕಡ 80 ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇಕಡ 86.67ರಷ್ಟು ಮತದಾನ ದಾಖಲಾಗಿದೆ. ಎರಡೂ ಶಿಕ್ಷಕರ ಕ್ಷೇತ್ರಗಳಲ್ಲಿ ಮತದಾನ ಬಿರುಸಾಗಿದ್ದರೆ, ಪದವೀಧರ ಕ್ಷೇತ್ರಗಳಲ್ಲಿ ನೀರಸವಾಗಿತ್ತು. ಅದರಲ್ಲೂ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಶೇ.60ನ್ನೂ ದಾಟಿಲ್ಲ.

ಸೋಮವಾರ (ಜೂನ್‌ 13) ಬೆಳಿಗ್ಗೆ ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು ಸಂಜೆ 5ರವರೆಗೆ ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಆರಂಭದಲ್ಲಿ ನೀರಸವಾಗಿ ಕಂಡುಬಂದಿದ್ದ ಮತದಾನ ಮಧ್ಯಾಹ್ನದ ನಂತರ ತುಸು ಚುರುಕುಗೊಂಡಿತು. ನಾಲ್ಕೂ ಕ್ಷೇತ್ರಗಳಲ್ಲೂ ಶಾಂತಿಯುತವಾಗಿ ಮತದಾನ ನಡೆದಿದೆ. ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆ, ಗಲಭೆ, ಗೊಂದಲ ನಿರ್ಮಾಣವಾಗಿಲ್ಲ.

ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರ ಕ್ಷೇತ್ರಕ್ಕಿಂತ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಹೆಚ್ಚಿನ ಮತದಾನ ನಡೆದಿದೆ. 2016ರಲ್ಲಿ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಶೇ.53.68ರಷ್ಟುಮತದಾನವಾಗಿತ್ತು. ಪ್ರಸಕ್ತ ಶೇ.80ರಷ್ಟು ಮತದಾನವಾಗುವ ಮೂಲಕ ಕಳೆದ ಬಾರಿಗಿಂತ ಶೇ.26.32ರಷ್ಟುಅಧಿಕ ಮತದಾನವಾಗಿದೆ. ಅದರಂತೆ ವಾಯವ್ಯ ಪದವೀಧರ ಕ್ಷೇತ್ರಕ್ಕೆ 2016ರಲ್ಲಿ ಶೇ.45.09ರಷ್ಟು ಮತದಾನವಾಗಿತ್ತು. ಈ ಅವಧಿಯಲ್ಲಿ ಶೇ.59.59ರಷ್ಟು ಮತವಾಗುವ ಮೂಲಕ ಶೇ.14.5ರಷ್ಟುಅಧಿಕ ಮತದಾರರು ಹಕ್ಕು ಚಲಾಯಿಸಿದ್ದಾರೆ.

ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಕಳೆದ ಬಾರಿ ಶೇ.66.72ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.19.95ರಷ್ಟು ಹೆಚ್ಚು ಮತದಾನವಾಗಿದೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದಕ್ಷಿಣ ಪದವೀಧರ ಕ್ಷೇತ್ರದಲ್ಲೂ ಕಳೆದ ಬಾರಿ ಶೇ.63.92ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.7.38ರಷ್ಟು ಹೆಚ್ಚು ಮತದಾನವಾಗಿದೆ.

ವಾಯವ್ಯ ಪದವೀಧರ ಕ್ಷೇತ್ರದಲ್ಲಿ-11 ಅಭ್ಯರ್ಥಿಗಳು. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ-12 ಅಭ್ಯರ್ಥಿಗಳು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ-7 ಮಂದಿ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ-19 ಮಂದಿ ಸ್ಪರ್ಧೆಯಲ್ಲಿದ್ದಾರೆ.

ನಾಳೆ ಫಲಿತಾಂಶ:

ನಾಲ್ಕು ಕ್ಷೇತ್ರಗಳಲ್ಲಿನ ಒಟ್ಟು 190 ಮತಕೇಂದ್ರಗಳಲ್ಲಿ ಮತದಾನವಾಗಿದ್ದು, ಎಲ್ಲ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಸೇರಿಕೊಂಡಿದೆ. ಆಯಾ ಜಿಲ್ಲೆಗಳ ಸಹಾಯಕ ಚುನಾವಣಾಧಿಕಾರಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಮತಪೆಟ್ಟಿಗೆಗಳನ್ನು ಸುರಕ್ಷಿತವಾಗಿಡಲಾಗಿದೆ.

ಮತದಾನ ಮುಕ್ತಾಯದ ಬಳಿಕ ಅಂತಿಮ ಕೆಲಸಗಳನ್ನು ಪೂರ್ತಿಗೊಳಿಸಿ ತಡರಾತ್ರಿಯ ಹೊತ್ತಿಗೆ ಮತಪೆಟ್ಟಿಗೆಗಳನ್ನು ಸ್ಟ್ರಾಂಗ್‌ ರೂಮ್‌ಗೆ ಚುನಾವಣಾ ಸಿಬ್ಬಂದಿ ತಂದು ಜೋಡಿಸಿದ್ದಾರೆ. ನಾಳೆ (ಜೂನ್‌ 15) ವಾಯವ್ಯ ಪದವೀಧರ, ವಾಯವ್ಯ ಶಿಕ್ಷಕರ, ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ ಬೆಳಗಾವಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಮೈಸೂರು ಕೇಂದ್ರಗಳಲ್ಲಿ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.

Donate Janashakthi Media

Leave a Reply

Your email address will not be published. Required fields are marked *