ಬೆಂಗಳೂರು: ಸ್ವಾತಂತ್ರ್ಯ ಉದ್ಯಾನದಲ್ಲಿ ಕೆನರಾ ಬ್ಯಾಂಕ್ ನೌಕರರ ಒಕ್ಕೂಟದಿಂದ ಸಿಬ್ಬಂದಿ ನೇಮಕಾತಿ ಸಂಖ್ಯೆ ಹೆಚ್ಚಿಸುವ ಮೂಲಕ ನೌಕರರ ಮೇಲಿನ ಒತ್ತಡ ತಗ್ಗಿಸಬೇಕು, ವರ್ಗಾವಣೆಗೆ ಪಾರದರ್ಶಕ ನೀತಿ ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಧರಣಿ ನಡೆಸಲಾಯಿತು.
ಇದನ್ನೂ ಓದಿ: ಹೆಚ್ಚು ಸಮಯ ಮೊಬೈಲ್ ನೋಡದವರಿಗೆ ಬಹುಮಾನ : ಫೋನ್ ಬಳಸದೇ ಕುಳಿತುಕೊಳ್ಳುವ ಸ್ಪರ್ಧೆ!
‘ಕೆನರಾ ಬ್ಯಾಂಕ್ನ ವಹಿವಾಟು ಏರಿಕೆಯಾಗಿ ಸೆಪ್ಟಂಬರ್ ಹೊತ್ತಿಗೆ ₹26.78 ಲಕ್ಷ ಕೋಟಿಗೆ ತಲುಪಿದೆ. ಲಾಭದ ಪ್ರಮಾಣವೇ ₹8,588 ಕೋಟಿಯಷ್ಟಿದೆ. ಆದರೆ, ನೌಕರರ ಪ್ರಮಾಣ ಮೂರು ವರ್ಷಗಳಲ್ಲಿ 88,213 ರಿಂದ 81,260ಕ್ಕೆ ಇಳಿದಿದೆ. ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿರುವುದರಿಂದ ಪ್ರತಿ ಶಾಖೆಯಲ್ಲೂ ಒತ್ತಡ ಹೆಚ್ಚಿದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್.ಸುರೇಶ್ಬಾಬು ಅಸಮಾಧಾನ ವ್ಯಕ್ತಪಡಿಸಿದರು.
‘ಎಲ್ಲಾ ಶ್ರೇಣಿಯ ಹುದ್ದೆಗಳಲ್ಲೂ ನೇಮಕ ಪ್ರಕ್ರಿಯೆ ನಡೆಸಬೇಕು. ಪಾರದರ್ಶಕ ವರ್ಗಾವಣೆ ನೀತಿ ಜಾರಿಗೊಳಿಸಬೇಕು. ನೌಕರರ ಫೀಡ್ಬ್ಯಾಕ್ ವ್ಯವಸ್ಥೆ ಹಿಂದಕ್ಕೆ ಪಡೆಯಬೇಕು. ಎಲ್ಲಾ ಶಾಖೆಗಳಿಗೂ ಸೂಕ್ತ ಮೂಲಸೌಕರ್ಯ ಒದಗಿಸಬೇಕು. ದಿನಗೂಲಿಯಾಗಿ ಕಾರ್ಯನಿರ್ವಹಿಸುತ್ತಿರುವವರ ಸೇವೆ ಕಾಯಂ ಮಾಡಿ ನ್ಯಾಯಸಮ್ಮತ ವೇತನ ನಿಗದಿ ಮಾಡಬೇಕು. ಕೆವೈಸಿ ಮಾಹಿತಿ ಉನ್ನತೀಕರಿಸಲು ನೌಕರ ಸ್ನೇಹಿ ಸಾಫ್ಟ್ವೇರ್ ರೂಪಿಸಬೇಕು’ ಎಂದು ಆಗ್ರಹಿಸಿದರು.
ಇದನ್ನೂ ನೋಡಿ : ಕೆಲಸದ ಹೆಚ್ಚಳ ವಿರೋಧಿಸಿ ಕೆನರಾ ಬ್ಯಾಂಕ್ ನೌಕರರ ಪ್ರತಿಭಟನೆ Janashakthi Media
