ಮಹಿಳೆಗೆ ಜವಾಬ್ದಾರಿಗಳು ಹೆಚ್ಚಿರುವಾಗ ಸರ್ಕಾರ 12 ಗಂಟೆ ಅವಧಿಯ ದುಡಿಮೆಗೆ ದೂಡುತ್ತಿದೆ; ಕೆ ಷರೀಫ

ಬೆಂಗಳೂರು: ಮಹಿಳೆ ಈಗಾಗಲೇ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಇದರಿಂದ ಈಗಾಗಲೇ ಸಮಸ್ಯೆಗಳೂ ಹೆಚ್ಚುತ್ತಿವೆ ಇದೀಗ ಸರ್ಕಾರ 12 ಗಂಟೆಯ ಕೆಲಸದ ಅವಧಿ ಜಾರಿಗೊಳಿಸಿದೆ. ಇದರೊಂದಿಗೆ ಮಹಿಳೆಯರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿವೆ. ಜನನೋತ್ಪಾದನೆ ಕಡಿಮೆ ಆಗುವ ಸಾಧ್ಯತೆ ಇದೆ. ಈಗಾಗಲೇ ಬಾಡಿಗೆ ತಾಯಂದಿರ ಮುಖಾಂತರ ಮಕ್ಕಳನ್ನೂ ಪಡೆಯುತಿದ್ದಾರೆ ಎಂದು ಕವಯಿತ್ರಿ ಡಾ|| ಕೆ ಷರೀಫ ಹೇಳಿದರು.

ಇದನ್ನು ಓದಿ: ದುಡಿಮೆಯ ಅವಧಿ 12 ಗಂಟೆಗೆ ಏರಿಕೆ: ಕಾರ್ಮಿಕರನ್ನು ಗುಲಾಮಗಿರಿಗೆ ನೂಕುವ ಯತ್ನ!

ಮುನ್ನಡೆ ಸಾಮಾಜಿಕ ಸಂಸ್ಥೆಯು ಫೆಡಿನಾ ಸಹಯೋಗದಲ್ಲಿ ಬೆಂಗಳೂರು ನಗರದ ರಾಜರಾಜೇಶ್ವರಿನಗರದ ಶ್ರೀ ರಾಜೇಶ್ವರಿ ವಿದ್ಯಾಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಗಾರ್ಮೆಂಟ್ಸ್‌ ಉದ್ಯಮದಲ್ಲಿ ಮಹಿಳಾ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಸರ್ಕಾರ 12 ಗಂಟೆಯ ಕೆಲಸ ಅವಧಿ ಮಸೂದೆ ಮಹಿಳಾ ವಿರೋಧಿಯಾಗಿದೆ. ಕೂಡಲೇ ವಾಪಸ್ಸು ಪಡೆದು ಕಾರ್ಮಿಕ ಕಾನೂನುಗಳನ್ನು ರಕ್ಷಿಸಬೇಕೆಂದು ಕರೆ ನೀಡಿದರು.

ಗಾರ್ಮೆಂಟ್ಸ್‌ ಕಾರ್ಮಿಕ ಮುಖಂಡರಾದ ಗೀತಾ ಮಾತನಾಡುತ್ತಾ, 8 ಗಂಟೆಯ ಕೆಲಸದ ಅವಧಿಯಲ್ಲಿ ನಮಗೆ ಕೆಲಸ ಮಾಡುವುದು ಕಷ್ಟ ಆಗಿದೆ. ಅವೈಜ್ಞಾನಿಕ ಪ್ರೊಡಕ್ಷನ್ ನಿಗದಿಯಾಗಿದೆ. ಕೆಲಸ ಮುಗಿದು ಬಂದ ನಂತರ ಮನೆಯ ಪೂರ್ಣ ಜವಾಬ್ದಾರಿ ನಮಗೇ ಇದೆ. ನಮಗಾಗಿ ಈಗಾಗಲೇ ಸಮಯ ಇಲ್ಲ. ಆದುದರಿಂದ 12 ಗಂಟೆಯ ಕೆಲಸ ಅವಧಿ ನಮಗೆ ಬೇಡ ಎಂದು ಒತ್ತಾಯಿಸಿದರು.

ಇದನ್ನು ಓದಿ: ಕಾರ್ಖಾನೆಗಳಲ್ಲಿ ಕಾರ್ಮಿಕರ ದುಡಿಮೆಯ ಅವಧಿ 9 ರಿಂದ 12 ಗಂಟೆಗೆ ಹೆಚ್ಚಳ; ಮಸೂದೆ ಅಂಗೀಕರಿಸಿದ ರಾಜ್ಯ ಸರ್ಕಾರ

ವಕೀಲರಾದ ಪಾವನ ಲಿಂಗಯ್ಯ ಮಾತಾನಾಡಿ, ಕಾಯ್ದೆಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಬೇರೆ ದೇಶಗಳಲ್ಲಿ ಕಾನೂನು ಇದೇ ಎಂದು ಹೇಳುತ್ತಾರೆ. ಈ ಮೂಲಕ ಸರ್ಕಾರ ಹಲವು ಗೊಂದಲ ಸೃಷ್ಟಿಸುತ್ತಿದೆ. ಅಲ್ಲಿಯ ವ್ಯವಸ್ಥೆಯೇ ಬೇರೆಯಿದೆ. ಕೆಲಸದ ರೀತಿ-ನೀತಿಗಳು ಬೇರೆ ಇವೆ. ನಮ್ಮ ದೇಶದಲ್ಲಿ ಅದರಲ್ಲೂ ಮಹಿಳೆಯು ಹಲವು ಪಾತ್ರಗಳನ್ನು ನಿರ್ವಹಿಸಬೇಕಾಗಿರುವುದರಿಂದ ಈ ಮಸೂದೆ ಬೇಡ ಎಂದು ಒತ್ತಾಯಿಸಿದರು.

ಮಕ್ಕಳ ತಜ್ಞ ಡಾ||ನಿತ್ಯಾನಂದ ಮಾತನಾಡಿ, ಮಹಿಳೆ ಹಲವಾರು ಸಾಧನೆಗಳನ್ನು ಮಾಡಿದರೂ ಸಹ ಸಂಪ್ರದಾಯದ ಹಾಗು ನಿರ್ಬಂಧನೆಗಳನ್ನು ಹೇರಲಾಗಿದೆ. ನಮಗೆ ಓದುವಾಗ ಪಾಕೆಟ್ ಮನಿ ಬೇಕಾದರೆ ತಾಯಿಯು ತಂದೆ ಜೊತೆ ಮಾತನಾಡಬೇಕಾಗಿತ್ತು. ತಾಯಿ ಸ್ಥಾನ ಯಾರು ತುಂಬಲು ಸಾಧ್ಯವಿಲ್ಲ. ಆದರೂ ಕೂಡಾ ಮಹಿಳೆಯನ್ನು ಮಾರಾಟದ ಚಿಹ್ನೆಯಾಗಿ, ಲೈಂಗಿಕ ದೃಷ್ಟಿಯಿಂದ ನೋಡುತ್ತಾರೆ. ಈ ರೀತಿಯ ದೃಷ್ಟಿ ಬದಲಾಗಬೇಕಾದರೆ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡಬೇಕು. ಈಗ ಒಂದು ಯಶಸ್ವಿ ಪುರುಷನ ಹಿಂದೆ ಒಂದು ಹೆಣ್ಣು ಇರುತ್ತಾಳೆ. ಇಂತಹವುಗಳೆಲ್ಲಾ ಬದಲಾಗಬೇಕಿದೆ. ಅದನ್ನು ಮಾಡಲೂ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.

ಇದನ್ನು ಓದಿ: ರಾಜ್ಯ ಸರ್ಕಾರದ ಕಾರ್ಖಾನೆಗಳ ಕಾಯ್ದೆ ತಿದ್ದುಪಡಿ ವಿರೋಧಿಸಿ ಒಂದು ದಿನದ ಕೈಗಾರಿಕಾ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಕರೆ

ಮುನ್ನಡೆ ಸಾಮಾಜಿಕ ಸಂಸ್ಥೆ ಅಧ್ಯಕ್ಷ ಇಶ್ರತ್ ನಿಸಾರ್ ಮಾತನಾಡಿ, ಹೆಣ್ಣಿಗೆ ಅವರದೇ ಆದ ಶಕ್ತಿಯಿದೆ. ಅದನ್ನೂ ಅವರು ಬಳಸುತ್ತಿಲ್ಲ. ಹೆಣ್ಣು ಮಕ್ಕಳನ್ನು ಹುಟ್ಟಿನಿಂದಲೇ ಕಾರ್ಮಿಕಳಾಗಿ ಮಾಡುತ್ತಾ ಗುಲಾಮಳಾಗಿ ನೋಡುತ್ತೇವೆ. ಇದೇ ರೀತಿಯ ದೃಷ್ಟಿ ಸಮಾಜದಲ್ಲಿ ಕೂಡ ಮುಂದುವರೆಯುತ್ತದೆ. ಆ ದೃಷ್ಟಿ ಬದಲಾವಣೆ ಮನೆಯಿಂದಲೇ ಪ್ರಾರಂಭ ಮಾಡಿದರೆ ಸಮಾಜ ಕೂಡ ಬದಲಾಗುತ್ತದೆ. ನಮಗೆ ಇರುವ ಶಕ್ತಿಯನ್ನು ನಾವು ತೋರಿಸದೆ ಇದ್ದರೆ, ನಮಗೆ ಸರಿಯಾದ ಸಮಾನವಾದ ಗೌರವದ ಬದುಕು ಸಿಗುವುದಿಲ್ಲ ಎಂದು ಹೇಳಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಕಾರ್ಯಕ್ರಮದಲ್ಲಿ 750ಕ್ಕೂ ಹೆಚ್ಚಿನ ಗಾರ್ಮೆಂಟ್ ಮಹಿಳಾ ಕಾರ್ಮಿಕರು ಪಾಲ್ಗೊಂಡಿದ್ದರು. ಈ ವೇಳೆ ಸರ್ಕಾರವು ಜಾರಿಗೆ ತಂದಿರುವ 12 ಗಂಟೆಯ ಕೆಲಸದ ಅವಧಿ ಮಸೂದೆಯನ್ನು ಹಿಂಪಡೆಯಬೇಕೆಂದು ಭಾಗವಹಿಸಿದ ಎಲ್ಲ ಕಾರ್ಮಿಕರು ಒತ್ತಾಯಿಸಿದರು.

Donate Janashakthi Media

Leave a Reply

Your email address will not be published. Required fields are marked *