ವಿಪಕ್ಷಗಳ ಒಕ್ಕೂಟದ ಮಹಾಮೈತ್ರಿ ಸಭೆ ಆರಂಭ : ಆರು ಅಂಶಗಳ ಬಗ್ಗೆ ಚರ್ಚೆ ಸಾಧ್ಯತೆ!

ಬೆಂಗಳೂರು: ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟದ ಎರಡನೇ ಮಹಾಘಟಬಂಧನ್​ ಸಭೆಗೆ 24 ಪಕ್ಷದ 46ಕ್ಕೂ ಅಧಿಕ ನಾಯಕರು ಆಗಮಿಸಿದ್ದಾರೆ.

ಲೋಕಸಭೆ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸಲು ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಮುಖವಾಗಿ ಆರು ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ.

ಸೋಮವಾರದಿಂದ 2 ದಿನಗಳ ಕಾಲ ನಡೆಯುತ್ತಿರುವ ಮಹತ್ವದ ಸಭೆಯಲ್ಲಿ 24 ಪಕ್ಷದ 46ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದಾರೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ತಮಿಳುನಾಡು ಸಿಎಂ ಸ್ಟಾಲಿನ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಲಾಲೂ ಪ್ರಸಾದ್ ಯಾದವ್, ಅಖಿಲೇಶ್ ಯಾದವ್, ವೈಕೋ, ಮೆಹಬೂಬಾ ಮುಫ್ತಿ ಸೇರಿದಂತೆ 46ಕ್ಕೂ ಅಧಿಕ ನಾಯಕರು ಪಾಲ್ಗೊಂಡಿದ್ದಾರೆ.

2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಎನ್ ಡಿಎ ನ್ನು ಎದುರಿಸುವ ಉದ್ದೇಶ ಹೊಂದಿರುವ ಪ್ರತಿಪಕ್ಷಗಳ 2 ನೇ ಸಭೆ ಇದಾಗಿದೆ. ಇಂದೆ ಸಂಜೆ ತಾಜ್ ವೆಸ್ಟ್ ಎಂಡ್ ಹೊಟೆಲ್ ನಲ್ಲಿ ಈ ಸಭೆ ನಡೆದಿದ್ದು, ಹಲವು ಸಮಿತಿಗಳು ರಚನೆಯಾಗುವ ಸಾಧ್ಯತೆ ಇದ್ದು, ಹಲವು ತಂಡಗಳು ಉಪ ಸಮಿತಿಗಳೂ ರಚಿಸುವ ಕುರಿತು ಚರ್ಚೆಯಾಗಿದೆ. ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ಸಭೆ 4 ಗಂಟೆಗೆ ಮುಕ್ತಾಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರು ಅಂಶಗಳ ಬಗ್ಗೆ ಚರ್ಚೆ : ನಾಳೆ ನಡೆಯುವ ಸಭೆಯಲ್ಲಿ ಆರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯ 6 ಅಂಶಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಊಟದ ವಿರಾಮ ಇರಲಿದ್ದು, ಊಟದ ವಿರಾಮದ ಬಳಿಕ ಸಭೆ ಮುಂದುವರಿಯಲಿದೆ. ಮಧ್ಯಾಹ್ನ 2.30ಕ್ಕೆ ಉಪಸಮಿತಿಗಳ ರಚನೆ ಮಾಡಲಾಗುವುದು. ಮೈತ್ರಿಕೂಟದ ಕಾರ್ಯದರ್ಶಿ ಆಯ್ಕೆ ಮಾಡಲಾಗುವುದು.‌ 4 ಗಂಟೆಗೆ ಮೈತ್ರಿಕೂಟದ ಸಭೆ ಮುಕ್ತಾಯವಾಗಲಿದೆ. ಈ ಕೆಳಗಿನ ಆರು ಅಂಶಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

  • ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ರೂಪಿಸಲು ಉಪಸಮಿತಿ ರಚನೆ ಬಗ್ಗೆ ಚರ್ಚೆ ನಡೆಯಲಿದ್ದು, ಇದು ಮುಂದಿನ ಲೋಕಸಭಾ ಚುನಾವಣೆಗೆ ವಿಪಕ್ಷ ಮೈತ್ರಿಕೂಟಗಳ ಸೇತುವೆಯಾಗಿದೆ. ಮೈತ್ರಿಕೂಟದ ಬೆಳವಣಿಗೆಗಳ ಬಗ್ಗೆ ಪರಸ್ಪರ ಸಂವಹನ ನಡೆಸುವ ಕೆಲಸ ಮಾಡಲಿದೆ.
  • ಮೈತ್ರಿಕೂಟದ ಜಂಟಿ ಕಾರ್ಯಕ್ರಮಗಳ ಆಯೋಜನೆ ಉಪಸಮಿತಿ ರಚನೆ ಬಗ್ಗೆ ಚರ್ಚೆ ನಡೆಯಲಿದೆ. ದೇಶಾದ್ಯಂತ ಎಲ್ಲಿ ಬೃಹತ್ ರ್ಯಾಲಿಗಳ ಆಯೋಜನೆ, ಸಮಾವೇಶಗಳು ಎಲ್ಲಿ ಮಾಡಬೇಕು, ಕೇಂದ್ರ ಸರ್ಕಾರದ ವಿರುದ್ಧ ಯಾವ ರೀತಿ ಜನಾಂದೋಲನ ಮಾಡಬೇಕು, ಈ ಎಲ್ಲ ಕಾರ್ಯಕ್ರಮಗಳನ್ನು ರೂಪಿಸುವ ಜವಬ್ದಾರಿ ಈ ಸಮಿತಿ ನಿರ್ವಹಣೆ ಮಾಡಲಿದೆ.
  • ವಿಪಕ್ಷಗಳ ಒಕ್ಕೂಟಗಳ ನಡುವೆ ಸೀಟು ಹಂಚಿಕೆ ಬಗ್ಗೆ ಗಂಭೀರ ಮಾತುಕತೆ ನಡೆಯಲಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಪ್ರಬಲವಾಗಿ ಇದೆಯೋ ಆ ಪಕ್ಷಕ್ಕೆ ಹೆಚ್ಚಿನ ಮನ್ನಣೆ ಸಿಗಬೇಕು. ಈ ಸಂದರ್ಭದಲ್ಲಿ ತಮ್ಮ ತಮ್ಮ ರಾಜ್ಯಗಳಲ್ಲಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ನಾಯಕರು ವಿವರಣೆ ನೀಡಲಿದ್ದಾರೆ.
  • ಇವಿಎಂ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗುವುದು. ಚರ್ಚೆಯ ಬಳಿಕ ಚುನಾವಣಾ ಆಯೋಗಕ್ಕೆ ಒಂದಷ್ಟು ಸಲಹೆಗಳನ್ನು ನೀಡಲಾಗುವುದು.
  • ವಿಪಕ್ಷಗಳ ಮೈತ್ರಿಕೂಟಕ್ಕೆ ಇಡಬೇಕಾದ ಹೆಸರಿನ ಬಗ್ಗೆ ಮಾತುಕತೆ ನಡೆಯಲಿದೆ. ಎಲ್ಲರಿಗೂ ಒಮ್ಮತ ಮೂಡುವ ಹೆಸರನ್ನು ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
  • ಬಳಿಕ ಮೈತ್ರಿಕೂಟ ಮುನ್ನೆಡಸಲು ಸಂಚಾಲಕರನ್ನು ನೇಮಕ‌ ಮಾಡಲಾಗುವುದು.

ಈ ಆರು ಪ್ರಮುಖ ವಿಚಾರಗಳು ಚರ್ಚೆ ಆಗಲಿವೆ ಎಂದು ಮೂಲಗಳ ಮಾಹಿತಿ ನೀಡಿದೆ. ನಾಳೆ ಸಂಜೆ 4 :30 ಗಂಟೆಗೆ ಮೈತ್ರಿಕೂಟದ ಪ್ರಮುಖ ನಾಯಕರಿಂದ ಸುದ್ದಿಗೋಷ್ಠಿ ನಡೆಯಲಿದೆ. ಸುದ್ದಿಗೋಷ್ಟಿಯಲ್ಲಿ ಮೈತ್ರಿಕೂಟದ ಸಭೆಯ ನಿರ್ಣಯಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

 

Donate Janashakthi Media

Leave a Reply

Your email address will not be published. Required fields are marked *