ಲೋಕಸಭೆ ಚುನಾವಣೆ | ಪಂಜಾಬ್‌ನ ಎಲ್ಲಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧೆ; ಕಾಂಗ್ರೆಸ್ ಜೊತೆ ಮೈತ್ರಿಗೆ ನಕಾರ

ಚಂಡೀಗಢ: 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬ್‌ನ ಎಲ್ಲಾ 13 ಲೋಕಸಭಾ ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ ಪುನರುಚ್ಚರಿಸಿದೆ. ಇಂಡಿಯಾ ಕೂಟದ ಪಕ್ಷವಾಗಿರುವ ಕಾಂಗ್ರೆಸ್ ಜೊತೆಗೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಎಎಪಿ ತಳ್ಳಿಹಾಕಿದೆ. ಲೋಕಸಭೆ

ಅಷ್ಟೆ ಅಲ್ಲದೆ, ಒಂದು ಸಂಸದೀಯ ಸ್ಥಾನವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಪಕ್ಷವು ಏಕಾಂಗಿಯಾಗಿ ಕಣಕ್ಕಿಲಿಯಲಿದೆ. ಎಎಪಿ ಮುಂದಿನ ಹದಿನೈದು ದಿನಗಳಲ್ಲಿ ಎಲ್ಲಾ 14 ಲೋಕಸಭೆ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:‘ಮೋದಿ & ಅಡ್ವಾಣಿ ಗಲಭೆಕೋರರು’ ಎಂದ ಪತ್ರಕರ್ತನ ಮೇಲೆ ಬಿಜೆಪಿ ದುರ್ಷರ್ಮಿಗಳಿಂದ ದಾಳಿ

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬ್ ಹಾಗೂ ಹರಿಯಾಣದ ಜಂಟಿ ರಾಜಧಾನಿಯಾದ ಚಂಡೀಗಢದಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಬ್ಬರೂ ಸ್ಪಷ್ಟಪಡಿಸಿದ್ದಾರೆ.

ವಿಶೇಷವೇನೆಂದರೆ, ಕಾಂಗ್ರೆಸ್ ಮತ್ತು ಎಎಪಿ ಇತ್ತೀಚೆಗೆ ಬಿಜೆಪಿ ವಿರುದ್ಧ ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ಗೆ ನಡೆದ ಮೇಯರ್ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಿದ್ದವು. ಅದಾಗ್ಯೂ, ಚುನಾವಣೆಯಲ್ಲಿ ಮೈತ್ರಿಕೂಟವು ಬಹುಮತ ಪಡೆದರೂ ಮೇಯರ್ ಚುನಾವಣೆಯಲ್ಲಿ ತಮ್ಮ ಜಂಟಿ ಅಭ್ಯರ್ಥಿ ಸೋತು, ಬಿಜೆಪಿ ಮುಂದೆ ಹಿನ್ನಡೆ ಎದುರಿಸಿದ್ದವು.

ಪಂಜಾಬ್‌ನ ಖನ್ನಾದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಅವರು, ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿವೆ. ಚಂಡೀಗಢ ಕ್ಷೇತ್ರವನ್ನು ಹೊರತುಪಡಿಸಿ ಪಂಜಾಬ್‌ನಲ್ಲಿ 13 ಲೋಕಸಭಾ ಸ್ಥಾನಗಳಿವೆ. ಮುಂದಿನ 10-15 ದಿನಗಳಲ್ಲಿ  ಈ ಎಲ್ಲ 14 ಕ್ಷೇತ್ರಗಳಿಗೆ ಎಎಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:2024ರ ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ – ಅಮಿತ್ ಶಾ ಹೇಳಿಕೆ

“ಎರಡು ವರ್ಷಗಳ ಹಿಂದೆ (2022 ವಿಧಾನಸಭಾ ಚುನಾವಣೆ ವೇಳೆ) ನೀವು ನಮ್ಮನ್ನು ಹೇಗೆ ಆಶೀರ್ವದಿಸಿದ್ದೀರೋ, ಅದೇ ರೀತಿಯಲ್ಲಿ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ಈ ಎಲ್ಲಾ 14 ಸ್ಥಾನಗಳನ್ನು ಗೆಲ್ಲುವಂತೆ ಮಾಡಬೇಕೆಂದು ನಾನು ನಿಮ್ಮೆಲ್ಲರನ್ನು ಕೋರುತ್ತೇನೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ಮಧ್ಯೆ ಪ್ರತ್ಯೇಕವಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್, ಪಂಜಾಬ್‌ನ ಎಲ್ಲಾ 13 ಮತ್ತು ಚಂಡೀಗಢದ ಒಂದು ಸ್ಥಾನವನ್ನು ಎಎಪಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಅದಾಗ್ಯೂ, ಪಂಜಾಬ್‌ನ ಹಲವಾರು ಕಾಂಗ್ರೆಸ್ ನಾಯಕರು ಎಎಪಿ ಜೊತೆಗಿನ ಮೈತ್ರಿಯನ್ನು ಟೀಕಿಸಿದ್ದಾರೆ. ಪಂಜಾಬ್‌ನಲ್ಲಿ ಎಎಪಿ ಜೊತೆಗಿನ ಮೈತ್ರಿಯೊಂದಿಗೆ ಮುಂದುವರಿಯದಂತೆ ಪಕ್ಷದ ‘ಹೈಕಮಾಂಡ್’ಗೆ ಸತತವಾಗಿ ಅವರು ಸೂಚಿಸುತ್ತಲೆ ಇದ್ದಾರೆ.

ವಿಡಿಯೊ ನೋಡಿ: ಕೇರಳಕ್ಕೆ ಅನ್ಯಾಯ :ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರದ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *