ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಆಯ್ಕೆಯಾದ ಲಿಂಗತ್ವ ಅಲ್ಪಸಂಖ್ಯಾತ

ಗ್ರಾಮ ಪಂಚಾಯ್ತಿ ರಾಜಕೀಯದಲ್ಲಿ ಹೊಸ ಪರ್ವ

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲ್ಲೂಕಿನ ಚೋರುನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಛಲವೊಂದು ಇದ್ದರೆ ಯಾರು ಏನನ್ನು ಬೇಕಾದರು ಗೆಲ್ಲಬಹುದು ಎಂಬುದಕ್ಕೆ ಇದದೊಂದು ಉತ್ತಮ ಉದಾಹರಣೆಯಾಗಿದೆ.

ಎರಡು ಬಾರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಸಿ.ಆಂಜಿನಮ್ಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಗ್ರಾಮಸ್ಥರು ಕಣಕ್ಕಿಳಿಸಿದ್ದರು. ಪರಿಶಿಷ್ಟ ವರ್ಗದ ಅಭ್ಯರ್ಥಿಗೆ ಮೀಸಲಾದ ಸ್ಥಾನದಲ್ಲಿ ಆಂಜಿನಮ್ಮ ಪ್ರತಿನಿಧಿಸಿದ್ದಾರೆ. ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಯ 19 ಸದಸ್ಯರು ಸರ್ವಾನುಮತದಿಂದ ನಿರ್ಣಯಿಸಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ:ಸರಕಾರಿ ಶಿಕ್ಷಕರಾದ ಲಿಂಗತ್ವ ಅಲ್ಪಸಂಖ್ಯಾತರು

ಒಟ್ಟು ಮೂವರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದರು, ಆದರೆ ಹಿರಿಯರು ಮತ್ತು ಗ್ರಾಮಸ್ಥರ ಒತ್ತಾಯಕ್ಕೆ ಹಾಗೂ ಅವರಿಗೂ ಒಂದು ಅವಕಾಶ ನೀಡಬೇಕು ಎಂದು ನಿರ್ಧರಿಸಿ, ಸಿ.ಆಂಜಿನಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಏಳು ಗ್ರಾಮಗಳು ಒಳಗೊಂಡಿದೆ. ಆಂಜಿನಮ್ಮ ಅವರು ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ಮೂಲಕ ತಮ್ಮ ಕೆಲಸದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿರುವ ಇವರು ತಮ್ಮ ಗ್ರಾಮದ ಅಭಿವೃದ್ಧಿಗೆ ಖಂಡಿತ ಶ್ರಮಿಸುತ್ತಾರೆ ಎಂಬ ನಂಬಿಕೆಯಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಆಂಜಿನಮ್ಮ ಅವರು ತನ್ನ ಗೆಲುವಿನ ಶ್ರೇಯಸು ಗ್ರಾಮಸ್ಥರಿಗೆ ಸಲ್ಲುತ್ತದೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿರಲಿಲ್ಲ. ಆದರೆ ಗ್ರಾಮದ ಹಿರಿಯರು ನನ್ನನ್ನು ಸ್ಪರ್ಧಿಸುವಂತೆ ಕೇಳಿದರು, ಇದೀಗ ನನಗೆ ದೊಡ್ಡ ಪಟ್ಟವನ್ನೇ ನೀಡಿದ್ದಾರೆ. ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಕಾಮಗಾರಿಗಳನ್ನು ತರಲು ಶ್ರಮಿಸುತ್ತೇನೆ. ನಿವಾಸಿಗಳಿಗೆ ಉತ್ತಮ ಕುಡಿಯುವ ನೀರು, ಬೀದಿ ದೀಪಗಳು, ರಸ್ತೆಗಳು ಮತ್ತು ಇತರ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ. ಖಂಡಿತ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಗ್ರಾಮ ಪಂಚಾಯಿತಿಗೆ ಹಣ ತರಲು ಅಧಿಕಾರಿಗಳು ಮತ್ತು ಶಾಸಕರೊಂದಿಗೆ ಮಾತುಕತೆ ನಡೆಸುತ್ತೇನೆ, ಜತೆಗೆ ನಮ್ಮಂತಹ ಅನೇಕ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರನ್ನು ಗ್ರಾಮಮಟ್ಟದಲ್ಲಿ ಸಬಲೀಕರಣ ಮಾಡುತ್ತೇನೆ ಎಂದು ಹೇಳಿದ್ದಾರೆ.

ಹೊಸ ಪರ್ವ :ಶತಮಾನಗಳಿಂದ ಈ ನಾಗರಿಕ ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಲ್ಲ ರೀತಿಯ ಅವಮಾನ, ಲೈಂಗಿಕ ದೌರ್ಜನ್ಯ, ಕಿರುಕುಳ, ನಿರ್ಲಕ್ಷ್ಯ ಸಹಿಸಿಕೊಂಡು ಬಂದಿದ್ದಾರೆ. ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಲು ಬಿಡಿ ಎಂಬುದು ಅವರ ಆಗ್ರಹ. ಬಸ್ ಸ್ಟ್ಯಾಂಡ್‌ನಲ್ಲೋ, ಫುಟ್‌ಪಾತ್‌ನಲ್ಲೋ ಮಲಗಿದರೆ ಪೊಲೀಸರು, ರೌಡಿಗಳು, ಬೀದಿ ಕಾಮಣ್ಣರ ನಡುವೆ ನಲುಗಿ ಹೋಗಿದ್ದಾರೆ. ಇಂತಹ ಘಟನೆಗಳ ನಡುವೆ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಸಮಾಜದಲ್ಲಿ ನಿರಂತರ ಶೋಷಣೆಗೆ ಒಳಗಾಗಿ ಸಾಕಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ ಲಿಂಗತ್ವ ಅಲ್ಪಸಂಖ್ಯಾತರಿಗೆ ರೇಷನ್ ಕಾರ್ಡ್ ಇಲ್ಲ, ಮನೆ ಇಲ್ಲ. ಸರಕಾರ ಇನ್ನಾದರೂ ಇವರಿಗೆ ಸೌಲಭ್ಯ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *