ಬೆಂಗಳೂರು: “ ಐಪಿಎಲ್ ವಿಜೇತ ಆರ್ಸಿಬಿ ತಂಡವನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸಮ್ಮಾನಿಸುವ ಕಾರ್ಯಕ್ರಮವನ್ನು ಆತುರದಲ್ಲಿ ಆಯೋಜಿಸುವುದರಿಂದ ಬಂದೋಬಸ್ತ್ಗೆ ತೊಂದರೆಯಾಗಲಿದೆ” ಎಂದು ವಿಧಾನಸೌಧ ಭದ್ರತ ವಿಭಾಗದ ಡಿಸಿಪಿ ಬರೆದಿರುವ ಪತ್ರ ತಡವಾಗಿ ಬೆಳಕಿಗೆ ಬಂದಿದ್ದು, ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಸರಕಾರದಲ್ಲೂ ತಲ್ಲಣ ಮೂಡಿಸಿದೆ. ತಡವಾಗಿ
ಈ ಪತ್ರವು ಬಹಿರಂಗವಾದ ಬೆನ್ನಲ್ಲೇ ರವಿವಾರ ಸಿಎಂ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಭೆ ಕರೆದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಡಾ| ಪರಮೇಶ್ವರ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಡಾ| ಸಲೀಂ ಹಾಗೂ ಸಿಬಂದಿ ಮತ್ತು ಸುಧಾರಣಾ ಇಲಾಖೆ ಕಾರ್ಯದರ್ಶಿ ಜಿ. ಸತ್ಯವತಿ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು. ತಡವಾಗಿ
ಈ ಸಭೆಯ ಬೆನ್ನಲ್ಲೇ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉನ್ನತ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಬಹುದು ಎನ್ನಲಾಗಿದೆ. ಅಲ್ಲದೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಲು ಕೂಡ ಸರಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ತಡವಾಗಿ
ಇದನ್ನೂ ಓದಿ: ಮಡಿಲ ಒರತೆಯ ಹುಡುಕಾಟದಲಿ
ಬರೆದ ಪತ್ರ ವಿಪಕ್ಷಗಳ ಕೈಗೆ ಅಸ್ತ್ರ
ಕಾಲ್ತುಳಿತ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ವಿಧಾನಸೌಧ ಭದ್ರತ ವಿಭಾಗದ ಡಿಸಿಪಿ ಕರಿಬಸವನಗೌಡ ಅವರು ಜೂ. 4ರಂದೇ ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ (ಡಿಪಿಎಆರ್) ಕಾರ್ಯದರ್ಶಿ ಸತ್ಯವತಿ ಅವರಿಗೆ ಬರೆದಿರುವ ಪತ್ರ ವಿಪಕ್ಷಗಳ ಕೈಗೆ ಮತ್ತೂಂದು ಅಸ್ತ್ರ ದೊರೆತಂತೆ ಆಗಿದೆ. ತಡವಾಗಿ
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ಸಿಬಿ ಆಟಗಾರರನ್ನು ಸಮ್ಮಾನಿಸಲು ಅನುಮತಿ ಕೋರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಜೂ. 3ರಂದು ಡಿಪಿಎಆರ್ ಇಲಾಖೆಗೆ ಪತ್ರ ಬರೆದಿತ್ತು. ಈ ಬಗ್ಗೆ ಅಭಿಪ್ರಾಯ ಕೇಳಿ ಡಿಪಿಎಆರ್ ಕಾರ್ಯದರ್ಶಿಯವರು ವಿಧಾನಸೌಧ ಭದ್ರತೆ ಡಿಸಿಪಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿದ ಪತ್ರದಲ್ಲಿ, “ಆತುರದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ’ ಎಂದು ತಮ್ಮ ಅಭಿಪ್ರಾಯ ತಿಳಿಸಲಾಗಿತ್ತು. ನಿಯಮಾನುಸಾರ ಕಾರ್ಯಕ್ರಮ ನಡೆಸಲು ಸಮಯಾವಕಾಶದ ಅಗತ್ಯವಿದೆ. ಆದರೂ ಸರಕಾರ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳುವುದಾಗಿ ಡಿಸಿಪಿ ಕರಿಬಸನಗೌಡ ಅವರು ಡಿಪಿಎಆರ್ ಇಲಾಖೆ ಕಾರ್ಯದರ್ಶಿಗೆ ತಮ್ಮ ಅಭಿಪ್ರಾಯ ವರದಿಯಲ್ಲಿ ತಿಳಿಸಿದ್ದಾರೆ. ಈ ಪತ್ರ ಈಗ ವೈರಲ್ ಆಗಿದೆ.
ಕೆಲವು ಐಎಎಸ್ ಅಧಿಕಾರಿಗಳ ಮೇಲೆ ತೂಗುಗತ್ತಿ!
ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಪರಿಣಾಮ ಐಪಿಎಸ್ ಅಧಿಕಾರಿಗಳ ಮೇಲೆ ಕ್ರಮ ಆಗಿದ್ದು ಇದರ ಬೆನ್ನಲ್ಲೇ ಕೆಲವು ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳ ಮೇಲೂ ತೂಗುಗತ್ತಿ ನೇತಾಡುತ್ತಿದೆ.
ವಿಧಾನಸೌಧ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಭದ್ರತೆ ಕೊಡಲು ಸಿಬಂದಿ ಇಲ್ಲ ಎಂದು ಪೊಲೀಸರು ತಿಳಿಸಿದ್ದರು. ಆದರೂ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಶಿಷ್ಟಾಚಾರ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಕೆಲವು ಐಎಎಸ್, ಕೆಎಎಸ್ ಅಧಿಕಾರಿಗಳಲ್ಲಿ ಕ್ರಮದ ಭೀತಿ ಆವರಿಸಿದೆ.
ಪತ್ರ ವೈರಲ್ ಆದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಭೆ ನಡೆಸಿದ್ದು ತುಮಕೂರಿನಲ್ಲಿದ್ದ ಪರಮೇಶ್ವರ್ ತರಾತುರಿಯಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಕನಕಪುರದಲ್ಲಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಬೆಂಗಳೂರಿಗೆ ದೌಡಾಯಿಸಿದರು. ಬೆಳಗ್ಗೆಯಿಂದ ಬೆಂಗಳೂರಿನಲ್ಲೇ ಇದ್ದ ಸಿಎಂ ಸಂಜೆ ಮೈಸೂರಿಗೆ ತೆರಳುವ ಕೆಲವೇ ತಾಸುಗಳ ಮೊದಲು ಇಬ್ಬರಿಗೂ ಬುಲಾವ್ ನೀಡಿದ್ದು, ಸರಕಾರದ ಉನ್ನತ ಅಧಿಕಾರಿಗಳನ್ನು ಕರೆಯಿಸಿಕೊಂಡು ಸಭೆ ನಡೆಸಿದ ವಿಷಯ ಇನ್ನಷ್ಟು ಕೌತುಕಕ್ಕೆ ಕಾರಣವಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದ ಹೈಕೋರ್ಟ್ ಈ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಮಂಗಳವಾರ ಅರ್ಜಿ ವಿಚಾರಣೆಗೆ ಬರಲಿದ್ದು, ಅಷ್ಟರೊಳಗಾಗಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ ಸಹಿತ ಹಲವರ ಅಮಾನತು ಮತ್ತಿತರ ಅಂಶಗಳನ್ನು ಸೇರಿಸಿ ಪ್ರಮಾಣಪತ್ರ ಸಿದ್ಧಪಡಿಸುವ ಸಂಬಂಧ ಚರ್ಚೆ ಆಗಿದೆ ಎನ್ನಲಾಗಿದೆ.
ಆರ್ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿದ್ದು ಕೆಸಿಎ. ಸ್ಟೇಡಿಯಂ ಕಾರ್ಯಕ್ರಮಕ್ಕೆ ನನ್ನನ್ನು ಯಾರೂ ಕರೆದಿಲ್ಲ. ಇದರಲ್ಲಿ ಸರಕಾರದ ತಪ್ಪಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕೊಟ್ಟಿಲ್ಲ ಎಂದ ಮೇಲೆ ನಿಷೇಧಾಜ್ಞೆ ಏಕೆ ಜಾರಿಗೊಳಿಸಲಿಲ್ಲ? ಆರ್ಸಿಬಿ ಎಂದರೆ ರಿಯಲ್ ಕಲಿøಟ್ ಆಫ್ ಬೆಂಗಳೂರು; ಅದು ಸಿಎಂ ಮತ್ತು ಡಿಸಿಎಂ. ಈ ವಿಷಯದಲ್ಲಿ ನಾವು ಪೊಲೀಸರ ಜತೆಗಿದ್ದೇವೆ. ಪ್ರಕರಣದ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಎಲ್ಲಕ್ಕೂ ಉತ್ತರ ಕೊಡುವ ಸಲುವಾಗಿ ವಿಶೇಷ ಅಧಿವೇಶನ ಕರೆಯಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಇದನ್ನೂ ನೋಡಿ: ಹೊಟ್ಟೆಗೆ ಹಿಟ್ಟಿಲ್ಲದ ಭಾರತವೂ, ಆರ್ಥಿಕವಾಗಿ 4ನೆ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವೂ.. Janashakthi Media