ಮಹಾಲಿಂಗಪುರ: ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಸಮೀಪದ ಸಮೀರವಾಡಿಯ ಗೋದಾವರಿ ಬಯೋರಿಫೈನರಿ ಕಾರ್ಖಾನೆ ಕೇನ್ಯಾರ್ಡ್ಗೆ ನವೆಂಬರ್ 14ರಂದು ಸಚಿವರಾದ ಆರ್.ಬಿ.ತಿಮ್ಮಾಪುರ ಹಾಗೂ ಶಿವಾನಂದ ಪಾಟೀಲ ಭೇಟಿ ನೀಡಿ, ಕಬ್ಬಿನ ಸಮೇತ ಬೆಂಕಿಗೆ ಆಹುತಿಯಾದ ಟ್ರ್ಯಾಕ್ಟರ್ಗಳ ಪರಿಶೀಲನೆ ನಡೆಸಿದರು.
ಮುಧೋಳದಲ್ಲಿ ನಡೆದ ರೈತರ ಪ್ರತಿಭಟನೆ ನವೆಂಬರ್ 13ರಂದು ಹಿಂಸಾಚಾರಕ್ಕೆ ತಿರುಗಿ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ, ಕಿಡಿಗೇಡಿಗಳಿಂದ ಕಲ್ಲು ತೂರಾಟ, ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿರುವ ಪ್ರಕರಣದ ಮಾಹಿತಿ ಪಡೆದ ಸಚಿವರು, ಟ್ರ್ಯಾಕ್ಟರ್ಗಳ ಮಾಲೀಕರು ಹಾಗೂ ರೈತರ ಅಹವಾಲು ಆಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಬ್ಬು ಸುಟ್ಟಿರುವ ಅಹಿತಕರ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಇಂತಹ ಘಟನೆ ನಡೆಯಬಾರದಿತ್ತು. ಜಿಲ್ಲೆಯಲ್ಲಿರುವ ಎಲ್ಲ ಕಾರ್ಖಾನೆಗಳಿಗೆ ಭದ್ರತೆ ಒದಗಿಸಲಾಗುವುದು. ಬೆಂಕಿ ಹೆಚ್ಚಿರುವ, ಕಲ್ಲು ತೂರಿರುವ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಲಾಗುವುದು’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಇದನ್ನೂ ಓದಿ: ಪಟ್ನಾ | ಪ್ರಶಾಂತ ಕಿಶೋರ್ ಸೋತಿದ್ದು ನಡೆ, ನುಡಿಗಳೇ ಪ್ರಮುಖ ಕಾರಣ
‘ಟ್ರ್ಯಾಕ್ಟರ್ ಹಾಗೂ ಕಬ್ಬಿಗೆ ರೈತರು ಬೆಂಕಿ ಹಚ್ಚಿದ್ದಾರೆಂದು ಭಾವಿಸುವುದಿಲ್ಲ. ರೈತರ ಹೆಸರಿನಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಹಾನಿ ಆಗಿರುವ ರೈತರಿಗೆ ಸರ್ಕಾರ ಇಲ್ಲವೇ ಬೆಳಗಾವಿಯ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಪರಿಹಾರ ಒದಗಿಸಲಾಗುವುದು. ಹಾನಿ ಎಷ್ಟಾಗಿದೆ ಎಂದು ವರದಿ ಕೊಡುವಂತೆ ತಿಳಿಸಿದ್ದೇನೆ’ ಎಂದರು.
‘ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಕಬ್ಬು ಅರಿಯುವಿಕೆ ವಿಳಂಬವಾದರೆ ಇಳುವರಿ ಕಡಿಮೆಯಾಗುತ್ತದೆ. ಜೊತೆಗೆ ಮುಂದಿನ ಹಂಗಾಮಿನ ಸಿದ್ಧತೆಯೂ ವಿಳಂಬವಾಗುತ್ತದೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ‘ಕಬ್ಬಿಗೆ ಬೆಂಕಿ ಹಚ್ಚಿದ್ದು ಒಳ್ಳೆಯದಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ರೈತರಿಗೆ ಹಾನಿ ಮಾಡುವುದು ಸರಿಯಲ್ಲ’ ಎಂದರು.
ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ್ ಗಿರೀಶ ಸ್ವಾದಿ, ಮುಖಂಡರಾದ ಸಿದ್ದು ಕೊಣ್ಣೂರ, ಯಲ್ಲನಗೌಡ ಪಾಟೀಲ, ರಾಮನಗೌಡ ಪಾಟೀಲ, ರಂಗನಗೌಡ ಪಾಟೀಲ, ಮಲ್ಲಪ್ಪ ಕೌಜಲಗಿ, ಮಹಾಲಿಂಗಪ್ಪ ಸನದಿ, ಶೇಖರ ಮುತ್ತಪ್ಪಗೋಳ, ಸದಾಶಿವ ಕಂಬಳಿ, ನಾಗಪ್ಪ ಕೇತಗೌಡ, ಬಸು ಶಿರೋಳ, ಮಾನಿಂಗ ಶಿರೋಳ, ಬಸನಗೌಡ ಪಾಟೀಲ ಇದ್ದರು.
ಶಾಸಕ ಸಿದ್ದು ಸವದಿ ಶುಕ್ರವಾರ ಕೇನ್ಯಾರ್ಡ್ನಲ್ಲಿ ಟ್ರ್ಯಾಕ್ಟರ್ಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಂಕಿ ಹಚ್ಚಿರುವ ಘಟನೆ ವೈಫಲ್ಯಕ್ಕೆ ಸರ್ಕಾರವೇ ಹೊಣೆ. ಈ ಕುರಿತು ತನಿಖೆ ಆಗಬೇಕು. ಹಾನಿಯಾಗಿರುವ ರೈತರಿಗೆ ನ್ಯಾಯ ಒದಗಿಸುವ ಕೆಲಸವಾಗಬೇಕು. ರೈತರ ಕೋಟ್ಯಂತರ ರೂಪಾಯಿಯ ವಸ್ತುಗಳು ಹಾನಿಯಾಗಿದ್ದು, ಕೂಡಲೇ ಸರ್ಕಾರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಇದನ್ನೂ ನೋಡಿ: CITU ರಾಜ್ಯ ಸಮ್ಮೇಳನ | ಕೇಂದ್ರದ ಶ್ರಮಿಕ ನೀತಿಯಲ್ಲಿ ಮನುಸ್ಮೃತಿ – ಐಕ್ಯ ಹೋರಾಟದ ಮೂಲಕ ಹಿಮ್ಮೆಟ್ಟಿಸಿ
