ಆದಿವಾಸಿ ಪ್ರದೇಶಗಳ ಮಿಲಿಟರೀಕರಣದ ಮತ್ತು  ಸಂಹಾರದ ನಿಲುವನ್ನು ಬಿಡಿ, ಸಂವಾದದ ಮನವಿಗೆ ಸ್ಪಂದಿಸಿ-ಪ್ರಧಾನಿಗಳಿಗೆ ಎಡಪಕ್ಷಗಳ ಮುಂದಾಳುಗಳ ಮನವಿ

ಛತ್ತಿಸ್‍ಗಡದ ಆದಿವಾಸಿ ಪ್ರದೇಶಗಳ ಮಿಲಿಟರೀಕರಣ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸಂವಾದಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವ ಕೇಳಿಕೆಗೆಳಿಗೆ ಸ್ಪಂದಿಸಬೇಕು ಎಂದು ಕಾಳಜಿಯಿರುವ ನಾಗರಿಕರು ಮತ್ತು ರಾಜಕೀಯ ಪಕ್ಷಗಳು ಮನವಿ ಮಾಡಿಕೊಂಡರೂ ಸಂಹಾರದ ಮಾರ್ಗವನ್ನೇ ಕೇಂದ್ರದ ಮತ್ತು ರಾಜ್ಯದ ಸರಕಾರಗಳು ಆಯ್ದುಕೊಂಡಿವೆ. ಮಾವೋವಾದಿಗಳ ಏಕಪಕ್ಷೀಯ ಕದನ ವಿರಾಮ ಘೋಷಣೆಗೆ ಸ್ಪಂದಿಸಬೇಕು ಮತ್ತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಂವಾದವನ್ನು ಪ್ರಾರಂಭಿಸಬೇಕು ಎಂಬ ಮನವಿಯನ್ನು ಪುನರುಚ್ಚರಿಸುತ್ತ ದೇಶದ ಐದು ಪ್ರಮುಖ ಎಡಪಕ್ಷಗಳ ಮುಂದಾಳುಗಳು, ನ್ಯಾಯಾಂಗೇತರ ಹತ್ಯೆಗಳು ಮತ್ತು ಹಿಂಸಾಚಾರವನ್ನು ತಕ್ಷಣ ಜಾರಿಗೆ ಬರುವಂತೆ ನಿಲ್ಲಿಸಬೇಕು ಹಾಗೂ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಪ್ರಧಾನ ಮಂತ್ರಿಗಳನ್ನು ಒಂದು ಜಂಟಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ. ಎ. ಬೇಬಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ,(ಸಿಪಿಐ(ಎಂಎಲ್)-ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಆರ್‌ಎಸ್‌ಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಭಟ್ಟಾಚಾರ್ಯ ಮತ್ತು ಎಐಎಫ್‌ಬಿ ಪ್ರಧಾನ ಕಾರ್ಯದರ್ಶಿ ಜಿ. ದೇವರಾಜನ್ ಮೇ 9ರಂದು  ಜಂಟಿಯಾಗಿ ಪ್ರಧಾನ ಮಂತ್ರಿ  ನರೇಂದ್ರ ಮೋದಿಯವರಿಗೆ  ಅವರಿಗೆ ಬರೆದಿರುವ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ

ಶ್ರೀ ನರೇಂದ್ರ ಮೋದಿ ಜಿ

ಗೌರವಾನ್ವಿತ ಪ್ರಧಾನ ಮಂತ್ರಿಗಳು

ಭಾರತ ಸರ್ಕಾರ

ಆತ್ಮೀಯ ಪ್ರಧಾನ ಮಂತ್ರಿಗಳೇ,

ದೇಶದ ಐದು ಎಡ ಪಕ್ಷಗಳಾದ ಭಾರತ ಕಮ್ಯುನಿಸ್ಟ್ ಪಕ್ಷ  (ಸಿಪಿಐ), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) (ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ ಲೆನಿನ್‍ವಾದಿ)-ಲಿಬರೇಶನ್, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ(ಆರ್‌ಎಸ್‌ಪಿ) ಮತ್ತು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ಎಐಎಫ್‌ಬಿ) ಗಳ ಪರವಾಗಿ, ಛತ್ತೀಸ್‌ಗಢ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಆಪರೇಷನ್ ಕಗಾರ್’ ಹೆಸರಿನಲ್ಲಿ ನಡೆಯುತ್ತಿರುವ ನ್ಯಾಯಾಂಗೇತರ ಹತ್ಯೆಗಳನ್ನು ತಕ್ಷಣ ನಿಲ್ಲಿಸುವಂತೆ ಕೋರಿ ನಾವು ನಿಮಗೆ ಬರೆಯುತ್ತಿದ್ದೇವೆ. ಹಲವಾರು ಹಿರಿಯ ಮಾವೋವಾದಿ ನಾಯಕರು ಪ್ರಸ್ತುತ ಭದ್ರತಾ ಪಡೆಗಳ ವಶದಲ್ಲಿದ್ದಾರೆ ಎಂಬ ವರದಿಗಳಿವೆ. ಅವರೆಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಮತ್ತು ಕಾನೂನಿನ ನಿಯಮದ ಪ್ರಕಾರ ವ್ಯವಹರಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ.

ಈ ಪ್ರದೇಶದ ಆದಿವಾಸಿಗಳು ಬಹಳ ಹಿಂದಿನಿಂದಲೂ ಸಾಮಾನ್ಯ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿರುವ ಪ್ರದೇಶದ ಮಿಲಿಟರೀಕರಣದ ಬಗ್ಗೆ ದೂರು ನೀಡುತ್ತಿದ್ದಾರೆ. ಸಂವಿಧಾನದ ಐದನೇ ಶೆಡ್ಯೂಲ್‌ನಲ್ಲಿ ಪ್ರತಿಷ್ಠಾಪಿಸಲಾದ ಆದಿವಾಸಿ ಹಕ್ಕುಗಳನ್ನು ವ್ಯವಸ್ಥಿತವಾಗಿ ಉಲ್ಲಂಘಿಸಲಾಗುತ್ತಿದೆ ಮತ್ತು ಛತ್ತೀಸ್‌ಗಢದ ಅರಣ್ಯಗಳು ಮತ್ತು ಖನಿಜಗಳನ್ನು ವಿವೇಚನಾಹೀನ ಕಾರ್ಪೊರೇಟ್ ಶೋಷಣೆಗೆ ಒಳಪಡಿಸಲಾಗುತ್ತಿದೆ ಮತ್ತು ಇದು ಪರಿಸರ ಸ್ಥಿರತೆ ಮತ್ತು ಸ್ಥಳೀಯ ಜನರ ಜೀವನೋಪಾಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತಿದೆ. ಆದಿವಾಸಿಗಳನ್ನು ಕಠಿಣ ಹಗೆತನದಿಂದ ನಡೆಸಿಕೊಳ್ಳುವ ಈ ಮಿಲಿಟರಿ ತೆರನ ನಿಲುವನ್ನು ನಿಲ್ಲಿಸಬೇಕೆಂದು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ.

ಈ ಹಗೆತನ ಸಾವಿನ ನಂತರವೂ ಕಾಣುತ್ತಿದೆ, ಸರ್ಕಾರವು ಮೃತ ದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲು ನಿರಾಕರಿಸುತ್ತಿದೆ, ತಮ್ಮ ಕುಟುಂಬಗಳ ಸದಸ್ಯರಿಗೆ ಗೌರವಯುತ ವಿದಾಯ ಹೇಳುವ ಅವರ ಹಕ್ಕನ್ನು ನಿರಾಕರಿಸುತ್ತಿದೆ.

ಮಾವೋವಾದಿಗಳು ಸಂವಾದಕ್ಕೆ ತಮ್ಮ ಮನವಿಯನ್ನು ಪರಿಗಣಿಸುವಂತೆ ಸರ್ಕಾರವನ್ನು ಪದೇ ಪದೇ ಆಗ್ರಹಿಸಿದ್ದಾರೆ. ದುರದೃಷ್ಟವಶಾತ್, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಛತ್ತೀಸ್‌ಗಢ ರಾಜ್ಯ ಸರ್ಕಾರವು ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳದಿರುವ ಹಾದಿಯನ್ನು ಆಯ್ಕೆ ಮಾಡಿಕೊಂಡಿವೆ. ಬದಲಾಗಿ, ಅವರು ಹತ್ಯೆಗಳು ಮತ್ತು ಸಂಹಾರದ ಒಂದು ಅಮಾನವೀಯ ನೀತಿಯನ್ನು ಅನುಸರಿಸುತ್ತಿದ್ದಾರೆ.

ಗಡುವನ್ನು ಪುನರುಚ್ಚರಿಸುತ್ತಾ ಕೇಂದ್ರ ಗೃಹ ಸಚಿವರು ನೀಡಿರುವ ಹೇಳಿಕೆಗಳು ಮತ್ತು ಮಾತುಕತೆಯ ಅಗತ್ಯವಿಲ್ಲ ಎಂಬ ಛತ್ತೀಸ್‌ಗಢ ಮುಖ್ಯಮಂತ್ರಿಯ ಹೇಳಿಕೆಯು ಸಂವಾದದ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಇಷ್ಟವಿಲ್ಲ  ಎಂಬ ಮನಸ್ಥಿತಿಯನ್ನು ಬಿಂಬಿಸುತ್ತದೆ. ಸರ್ಕಾರವು ಹಟಮಾರಿಯಾಗಿರಬಾರದು ಮತ್ತು ನಾಡಿನ ಕಾನೂನಿನ ಭಾವ ಮತ್ತು ಪ್ರಜಾಪ್ರಭುತ್ವ ಆಡಳಿತದ ತತ್ವಗಳ ವಿರುದ್ಧ ಮಾನವ ಜೀವಗಳನ್ನು ಬಲಿ ತೆಗೆದುಕೊಳ್ಳುವುದನ್ನು ಸಂಭ್ರಮಿಸಬಾರದು.

ಅನೇಕ ಕಾಳಜಿಯುಳ್ಳ ನಾಗರಿಕರು ಮತ್ತು ರಾಜಕೀಯ ಪಕ್ಷಗಳು, ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರೂ, ಮಾವೋವಾದಿಗಳ ಏಕಪಕ್ಷೀಯ ಕದನ ವಿರಾಮ ಘೋಷಣೆಗೆ ಸ್ಪಂದಿಸಬೇಕು ಮತ್ತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಂವಾದವನ್ನು ಪ್ರಾರಂಭಿಸಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಾವು ಈ ಮನವಿಯನ್ನು ಪುನರುಚ್ಚರಿಸುತ್ತೇವೆ ಮತ್ತು ನ್ಯಾಯಾಂಗೇತರ ಹತ್ಯೆಗಳು ಮತ್ತು ಹಿಂಸಾಚಾರವನ್ನು ತಕ್ಷಣ ಜಾರಿಗೆ ಬರುವಂತೆ ನಿಲ್ಲಿಸಬೇಕು ಹಾಗೂ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು  ಆಗ್ರಹಿಸುತ್ತೇವೆ.

Donate Janashakthi Media

Leave a Reply

Your email address will not be published. Required fields are marked *