ಮಂಡ್ಯ: ಕೆ.ಆರ್.ಪೇಟೆ, ವಕೀಲನ ಪತ್ನಿಗೆ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಮೈಮೇಲೆ ಪೆಟ್ರೋಲ್ ಸುರಿದು ಜೀವಂತ ದಹನ ಮಾಡಲು ಯತ್ನಿಸಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಾಂಬಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಂಬಹಳ್ಳಿ ಗ್ರಾಮದ ವಕೀಲ ದಿ.ಕುಚೇಲೇಗೌಡ ಅವರ ಪತ್ನಿ ಸುಲೋಚನ(41) ಗಂಭೀರವಾಗಿ ಗಾಯಗೊಂಡು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅದೇ ಗ್ರಾಮದ ಪರಶಿವ, ಪವಿತ್ರ, ಯತೀಶ, ಯಶೋಧ, ಕುಮಾರಿ ಅವರುಗಳು ಮಾರಣಾಂತಿಕ ಮಾಡಿ ಜೀವಂತ ದಹಿಸಲು ಯತ್ನಿಸಿದ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಭವಿಷ್ಯದ ಅನಿಶ್ಚಿತತೆಯೂ ಯುವಜಗತ್ತಿನ ಆತಂಕವೂ
ಘಟನೆಯ ವಿವರ
ಇಬ್ಬರು ಹೆಣ್ಣು ಮಕ್ಕಳನ್ನು ಓದಿಸಿಕೊಂಡು ಮಾಂಬಹಳ್ಳಿ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ವಾಸವಿದ್ದ ದಿವಂಗತ ವಕೀಲ ಕುಚೇಲೇಗೌಡ ಅವರ ಪತ್ನಿ ಸುಲೋಚನ ಎಂಬುವವರ ಮನೆಗೆ ಏಕಾಏಕಿ ನುಗ್ಗಿರುವ ಆರೋಪಿಗಳು ಕಬ್ಬಿಣದ ರಾಡಿನಿಂದ ತಲೆಯ ಭಾಗಕ್ಕೆ, ಮಮಾಂಗಕ್ಕೆ, ಕೈ, ಕಾಲು, ಬೆನ್ನು ಸೇರಿದಂತೆ ಇತರೆ ಭಾಗಗಳಿಗೆ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪೆಟ್ರೋಲ್ ಅನ್ನು ಸುಲೋಚನ ಅವರ ಮೈಮೇಲೆ ಸುರಿದು ಜೀವಂತವಾಗಿ ದಹಿಸುವ ಪ್ರಯತ್ನ ಮಾಡಿದ್ದಾರೆ.
ಹಲ್ಲೆಯಿಂದ ಸುಮಾರು ಅರ್ಧ ಲೀಟರ್ಗೂ ಹೆಚ್ಚು ರಕ್ತ ಸ್ರಾವ ಉಂಟಾಗಿದ್ದು, ತೀವ್ರ ಗಾಯಗೊಂಡು ಅಸ್ವಸ್ಥಗೊಂಡಿದ್ದರು. ಆಗ ಸುಲೋಚನ ಅವರ ಮಗಳು ಹರ್ಷವರ್ಧಿನಿಗೌಡ ಎಂಬಾಕೆ ಜೋರಾಗಿ ಕೂಗುಕೊಂಡಾಗ ಗ್ರಾಮಸ್ಥರು ಬಂದು ಆರೋಪಿಗಳಿಂದ ಸುಲೋಚನಾ ಅವರನ್ನು ಬಿಡಿಸಿ, ತಕ್ಷಣ 108ಆಂಬುಲೆನ್ಸ್ ಮೂಲಕ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.
ಇದನ್ನೂ ನೋಡಿ: ಚುನಾವಣಾ ಆಯೋಗದ ‘ಸರ್’ಗೆ(sir) ಯಾಕೆ ‘ನೋ ಸರ್’ ಅಂತ ಹೇಳಬೇಕು?Janashakthi Media
ತಲೆಯ ನೆತ್ತಿನ ಭಾಗದಲ್ಲಿ ಸುಮಾರು 9ಇಂಚು ಮಾರಣಾಂತಿಕ ಗಾಯಗಳಾಗಿದ್ದು, ತಲೆಯು ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಗಾಯಗಳು ಉಂಟಾಗಿರುವ ಕಾರಣ ಕೆ.ಆರ್.ಪೇಟೆಯ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಆದರೂ ಸಹ ಆರೋಪಿಗಳನ್ನು ಬಂಧಿಸಿಲ್ಲ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗಾಯಾಳು ಸುಲೋಚನಾ ಅವರ ಪುತ್ರಿ ಯಶಸ್ವಿನಿಗೌಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವು ತೋಡಿಕೊಂಡಿರುತ್ತಾರೆ.
ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು, ತಮ್ಮ ಸೇವೆಯ ಅವಧಿಯಲ್ಲಿ ಬಡವರಿಗೆ, ನೊಂದವರಿಗೆ ಉಚಿತ ಕಾನೂನು ನೆರವು ನೀಡುತ್ತಿದ್ದ ಮೃತ ವಕೀಲನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಮಾರಣಾಂತಿಕ ಹಲ್ಲೆ ನಡೆಸಿ ಜೀವಂತ ದಹನಕ್ಕೆ ಯತ್ನಿಸಿರುವ ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ತಾಲ್ಲೂಕಿನ ವಿವಿಧ ಜನಪರ ಸಂಘಟನೆಗಳ ಉನ್ನತ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿವೆ.
ವರದಿ : ಎಸ್ ರವಿ, ಮಂಡ್ಯ
