ಕುದುರೆ-ಹಸುಗೆ ಸಿಕ್ಕ ಮನ್ನಣೆ ಕಪ್ಪು ಬಣ್ಣದ ಕಂಬಳದ ಕೋಣನಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ: ಬಿ ಕೆ ಹರಿಪ್ರಸಾದ್

ಬೆಂಗಳೂರು: ವಿಧಾನ ಪರಿಷತ್ತಿನ ಅಧಿವೇಶನದಲ್ಲಿಂದು ಕಂಬಳ ಕ್ರೀಡೆಗೆ ನಿರ್ಲಕ್ಷ್ಯದ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕಂಬಳ ಬರೀ ಕ್ರೀಡೆಯ ವಿಚಾರವಲ್ಲ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ, ಸಂಸ್ಕಾರ, ವೈಶಿಷ್ಟ್ಯಗಳ ಸಂಕೇತ. ಕೇವಲ ಕಂಬಳವನ್ನು ಉಳಿಸುವುದಷ್ಟೇ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ, ಕೋಳಿ ಅಡ್ಕ ಹಾಗೂ ಪಾಡ್ದನಗಳನ್ನೂ ಉಳಿಸಬೇಕಿದೆ. ಈ ಪಾಡ್ದನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವೈಶಿಷ್ಟ್ಯಗಳನ್ನು ಅದ್ಭುತವಾಗಿ ಹಾಡಲಾಗುತ್ತೆ. ಆದರೆ, ಇವೆಲ್ಲ ಇಂದು ನಶೀಸಿ ಹೋಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ರಾಜ್ಯವಾರು ವಿಂಗಡನೆಯಾಗುವಾಗ ಐಡೆಂಟಿಟಿಗಳ(ಅಸ್ಮಿತೆಗಳ) ಮೇಲೆ ವಿಂಗಡನೆ ಮಾಡಲಾಗಿದೆ. ಕೊಡುಗು ಹಾಗೂ ಕರಾವಳಿ ಜಿಲ್ಲೆಗಳು ಸಾಕಷ್ಟು ಅಸ್ಮಿತೆಗಳನ್ನು ಹೊಂದಿರುವ ಪ್ರದೇಶಗಳು. ಸರ್ಕಾರದ ಮೊದಲ ಆದ್ಯತೆಯಾಗಿ ಭಾಷೆ ಹಾಗೂ ಕಲೆಗಳನ್ನು ಕಾಪಾಡಿ ಉಳಿಸುವಂತಾಗಬೇಕಿದೆ. ಕರಾವಳಿ ಪ್ರದೇಶಗಳಲ್ಲಿ ಕೇವಳ ಕಂಬಳ ಮಾತ್ರವಲ್ಲ, ಕರಾವಳಿಯ ಬಹುತೇಕ ವೈಶಿಷ್ಟ್ಯಗಳು ಇವತ್ತು ನಶಿಸಿ ಹೋಗುತ್ತಿದೆ.‌ ಸರ್ಕಾರ ಇಂತಹ ಕಲೆಗಳನ್ನ ಉಳಿಸಲು ನೆರವಿಗೆ ಧಾವಿಸಬೇಕಿದೆ ಎಂದರು.

ಕೆಲವು ವರ್ಷಗಳ ಹಿಂದೆ ಪ್ರಾಣಿ ದಯಾ ಸಂಘದವರು ಕಂಬಳವನ್ನ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ಬಗ್ಗೆ ನಾವು ಹಾಗೂ ದಿವಂಗತ ಆಸ್ಕರ್‌ ಫರ್ನಾಂಡೀಸ್ ಅವರು ಸಂಸತ್ತಿನಲ್ಲಿ ಚರ್ಚೆ ನಡೆಸಿ ಯಾವುದೇ ಕಾರಣಕ್ಕೂ ಕಂಬಳವನ್ನು ನಿಲ್ಲಿಸಬಾರದು ಎಂದು ವಾದ ಮಾಡಿದ್ದೇವೆ. ಚರ್ಚೆಯಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ಸಂಸತ್ತಿನಲ್ಲಿ ಕೋಣ ಹಾಗೂ ಕಂಬಳದ ಮೇಲೆ ಭಾಷಣದ ಜೊತೆಗೆ ಹಾಡನ್ನೂ ಹಾಡಿದ್ದರು ನೆನಪು ಮಾಡಿಕೊಂಡರು.

ಕಂಬಳ ಪ್ರತಿಷ್ಟೆ ಹಾಗೂ ಗೌರವದ ಸಂಕೇತ. ಎಲ್ಲರೂ ಪ್ರಾಣಿಗಳನ್ನ ಸಾಕುತ್ತಾರೆ. ಆದರೆ ಕುದುರೆ, ಹಸುಗಳಿಗೆ ಸಿಕ್ಕಂತಹ ಪ್ರಾಮುಖ್ಯತೆ ಕೋಣಕ್ಕೆ ಸಿಕ್ಕಿಲ್ಲ. ಅದಕ್ಕೆ ಕಾರಣ ಕೋಣದ ಬಣ್ಣ ಕಪ್ಪು ಎಂಬ ಕಾರಣಕ್ಕೆ. ಅಲ್ಲಿಯೂ ಕೂಡ ಭೇದ ಭಾವ ನಡೆದಿದೆ. ಅಲ್ಲೂ ವರ್ಣಭೇದ ಆಗಿದೆ. ಇಂತಹ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಂಬಳದ ಜೊತೆಗೆ ಸರ್ಕಾರ ಕರಾವಳಿಯ ವೈಶಿಷ್ಟ್ಯಗಳನ್ನ ಕಾಪಾಡಿಕೊಂಡು ಹೋಗಬೇಕಿದೆ ಹಾಗೂ ಮೀನುಗಾರರಿಗೂ ಕೂಡ ಸರಿಯಾಗಿ ಪ್ರೋತ್ಸಾಹ ನೀಡಬೇಕಿದೆ. ಸಮುದ್ರದಲ್ಲಿ ಈಜುವವರು ಕರಾವಳಿ ಭಾಗದಲ್ಲಿ ಸಿಗ್ತಾರೆ. ಅವರನ್ನ ಟೆಕ್ನಿಕಲ್ ಆಗಿ ಸ್ವಿಮ್ಮಿಂಗ್ ಫೂಲ್ ಗಳನ್ನು ಕಟ್ಟಿಸಿ ತರಬೇತಿ ನೀಡಬೇಕಿದೆ. ಕರಾವಳಿಯ ಯುವಕರನ್ನು ಬೇರೆ ಅನ್ಯದಾರಿಗೆ ಹೋಗುವುದನ್ನು ತಡೆಗಟ್ಟಿ ಇಡೀ ರಾಷ್ಟ್ರಕ್ಕೆ , ರಾಜ್ಯಕ್ಕೆ ಹೆಮ್ಮೆ ತರುವಲ್ಲಿ ಪಾತ್ರರಾಗುವಂತೆ ಉತ್ತೇಜನ ನೀಡಬೇಕಿದೆ ಎಂದು ಬಿ ಕೆ ಹರಿಪ್ರಸಾದ್‌ ಸರ್ಕಾರದ ಗಮನ ಸೆಳೆದರು.

Donate Janashakthi Media

Leave a Reply

Your email address will not be published. Required fields are marked *