ಭೂಸಂತ್ರಸ್ತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕೆಪಿಆರ್‌ಎಸ್ ಎಚ್ಚರಿಕೆ ನೀಡಿದೆ

ಬಳ್ಳಾರಿ : ಕುಡುತಿನಿ ಸುತ್ತಮುತ್ತ 12,000 ಎಕರೆಗೂ ಅಧಿಕ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆದಿರುವ ಸರ್ಕಾರ ಬೆಲೆ ನಿಗದಿಯಲ್ಲಿ ಮೋಸ ಮಾಡಿದೆ. 2010ರಿಂದ ಈ ವರೆಗೆ ಕೈಗಾರಿಕೆ ಸ್ಥಾಪನೆಯಾಗದೇ, ಉದ್ಯೋಗ ನಷ್ಟವಾಗಿದೆ. ಇನ್ನು ಮುಂದೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಕುಡುತಿನಿ ಭೂಸಂತ್ರಸ್ತ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ  ‘ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯು. ಬಸವರಾಜ, ಬಿಜೆಪಿಯ ಯಡಿಯೂರಪ್ಪ ಅವರ ಸರ್ಕಾರ ಮೋಸದಿಂದ ಭೂಮಿ ಕಸಿಯಿತು. ಸಿದ್ದರಾಮಯ್ಯ ಅವರು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ನಮ್ಮ ಹೋರಾಟದ ಟೆಂಟ್‌ಗೆ ಬಂದು ವಾಗ್ದಾನ ನೀಡಿದರು. ಆದರೆ, ಪರಿಹಾರ ಸಿಕ್ಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೂರು ನ್ಯಾಯಾಲಯಗಳಲ್ಲಿಯೂ ರೈತರ ಪರವಾಗಿಯೇ ತೀರ್ಪುಗಳು ಬಂದಿವೆ. ಕನಿಷ್ಠ ₹1.20-1.50 ಕೋಟಿ ಪರಿಹಾರ ನೀಡಬೇಕು ಎಂದು ಹೇಳಿವೆ. ಆದರೂ ಪರಿಹಾರ ಸಿಕ್ಕಿಲ್ಲ. 12ಸಾವಿರ ಎಕರೆಗೆ ಲೆಕ್ಕ ಹಾಕಿದರೆ, ಕನಿಷ್ಠ ₹22 ಸಾವಿರ ಕೋಟಿ ರೈತರಿಗೆ ನಷ್ಟವಾಗಿದೆ’ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ‘ಕೆಂಪು ವಂದನೆ ಸಂಗಾತಿ’ ಭಾವೋದ್ವೇಕದ ಘೋಷಣೆಯೊಂದಿಗೆ ವಿ.ಎಸ್. ಅವರಿಗೆ ಅಂತಿಮ ವಿದಾಯ

‘ಮೂರು ಕಬ್ಬಿಣ ಕಾರ್ಖಾನೆಗಳಿಗೆಂದು 12 ಸಾವಿರ ಎರಕೆಗೂ ಅಧಿಕ ಭೂಮಿ ವಶಕ್ಕೆ ಪಡೆಯಲಾಗಿದೆ. ವಾಸ್ತವದಲ್ಲಿ 5-6 ಸಾವಿರ ಎಕರೆ ಭೂಮಿ ಸಾಕು. ಈಗ 12 ಸಾವಿರ ಎಕರೆಗೆ ಪರಿಹಾರ ನೀಡುವುದು ಸರ್ಕಾರಕ್ಕೂ ಕಷ್ಟವಾಗಬಹುದು. ಆದ್ದರಿಂದ ವಶ ಪಡಿಸಿಕೊಂಡ ಒಟ್ಟು ಭೂಮಿಯಲ್ಲಿ ಶೇ. 50ರಷ್ಟು ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರವಾಗಿ ನೀಡಿ’ ಎಂದು ಅವರು ಆಗ್ರಹಿಸಿದರು.

‘ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮೂರು ಹಂತದ ಹೋರಾಟ ರೂಪಿಸಿದ್ದೇವೆ. ಶಾಸಕರ ಮನೆಗಳ ಎದುರು ಮೊದಲಿಗೆ ಪ್ರತಿಭಟನೆ ಮಾಡುತ್ತೇವೆ. ಬಳಿಕ ಬಳ್ಳಾರಿ ಬಂದ್‌ ಮಾಡುತ್ತೇವೆ. ಆ ಬಳಿಕ 3000 ರೈತರು ಬೆಂಗಳೂರಿಗೆ ಪಾದಯಾತ್ರೆ ಹೊರಟು, ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಯು. ಬಸವರಾಜು ತಿಳಿಸಿದರು.

‘ಇದು ಕಾರ್ಪೊರೇಟ್ ಕಂಪನಿಗಳು ಮತ್ತು ರೈತರ ನಡುವಿನ ಸಂಘರ್ಷ’ ಎಂದು ಅವರು ಹೇಳಿದರು.

‘ಕುಡುತಿನಿಯಲ್ಲಿ ಎನ್‌ಎಂಡಿಸಿ ತನ್ನ ವಶದಲ್ಲಿಟ್ಟುಕೊಂಡಿರುವ 2,800 ಎಕರೆಗೂ ಅಧಿಕ ಭೂಮಿಯಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಬೇಕು. ಅದಕ್ಕಾಗಿ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ಬಳಿಗೆ ನಿಯೋಗ ಕರೆದೊಯ್ಯಲಾಗುವುದು’ ಎಂದು ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯಬಾಬು ತಿಳಿಸಿದರು.

ಕುಡುತಿನಿ ಸುತ್ತಮುತ್ತಲ 7 ಹಳ್ಳಿಗಳ ರೈತರು, ಹೋರಾಟಗಾರರು ಮತ್ತು ಕಾರ್ಮಿಕ ಸಂಘಟನೆಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಇದನ್ನೂ ನೋಡಿ: ಮೋಸ ಮಾಡಿದ ಸರ್ಕಾರ | ಆಗಸ್ಟ್ 5ರಿಂದ ಸಾರಿಗೆ ನೌಕರರ ಮುಷ್ಕರ Janashakthi Media

Donate Janashakthi Media

Leave a Reply

Your email address will not be published. Required fields are marked *