ಯುರೋಪಿಯನ್ ವಿವಿ ಪ್ರತಿಷ್ಟಿತ ಪ್ರಶಸ್ತಿ ಪಡೆದ ಶೈಲಜಾ ಟೀಚರ್

ತಿರುವನಂತಪುರಂ : ಕೇರಳದ ಮಾಜಿ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಪ್ರತಿಷ್ಠಿತ ಕೇಂದ್ರ ಯುರೋಪಿಯನ್ ವಿಶ್ವವಿದ್ಯಾಲಯ ನೀಡುವ ಓಪನ್ ಸೊಸೈಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾರ್ವಜನಿಕ ಆರೋಗ್ಯ ವಲಯದಲ್ಲಿನ ಸೇವಾ ಬದ್ಧತೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರತಿವರ್ಷ ಭಿನ್ನ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಓಪನ್ ಸೊಸೈಟಿ ಪ್ರಶಸ್ತಿ ನೀಡಲಾಗುತ್ತದೆ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ನಡೆದ 30ನೇ ಪದವಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಯಿತು. ಕೇಂದ್ರ ಯುರೋಪಿಯನ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಮೈಕಲ್ ಇಗ್ನಾಟೀಫ್ ಈ ಪ್ರಶಸ್ತಿಯನ್ನು ಘೋಷಿಸಿದರು.

“ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ “ಅಸಾಧಾರಣ ಸಾರ್ವಜನಿಕ ಸೇವೆ”ಯನ್ನು ಪರಿಗಣಿಸಿ ಈ ವರ್ಷ “ಶೈಲಾಜಾ ಟೀಚರ್”ರಿಗೆ ಪ್ರಶಸ್ತಿ ನೀಡಲಾಗುತ್ತದೆ,” ಎಂದು ಹೇಳಿದರು.

“ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕೇರಳದ ಸಾರ್ವಜನಿಕ ಆರೋಗ್ಯ ಸಚಿವರಾಗಿ ಕೆ.ಕೆ.ಶೈಲಜಾ ಟೀಚರ್ ನಾಯಕತ್ವ ಮತ್ತು ಸಾರ್ವಜನಿಕ ಆರೋಗ್ಯ ಸೇವಾ ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನ ಹಾಗೂ ಬದ್ಧತೆಯನ್ನು ಇಡೀ ಜಗತ್ತು ನೋಡಿದೆ. ಸಾಮುದಾಯಿಕ ಮಟ್ಟದಲ್ಲಿ ಆರೋಗ್ಯ ಹಾಗೂ ಪರಿಣಾಮಕಾರಿ ಸಂವಹನದಿಂದ ಅದೆಷ್ಟೋ ಜೀವಗಳನ್ನು ರಕ್ಷಿಸಲಾಗಿದೆ,” ಎಂದು ಇಗ್ನಟೀಫ್ ಹೇಳಿದ್ದಾರೆ.

“ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಳ್ಳುವುದಕ್ಕೆ ಹಾತೊರೆಯುವ ಯವತಿಯರಿಗೆ ಕೆ ಕೆ ಶೈಲಜಾ ಟೀಚರ್ ಸ್ಪೂರ್ತಿ ಆಗಿದ್ದಾರೆ. ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿದ ದೇಶ ಮತ್ತು ಜಗತ್ತಿಗೆ ಉತ್ಸಾಹ ತುಂಬುವ ನಿಟ್ಟಿನಲ್ಲಿ ಕೇರಳ ಹೊಸ ದಾಖಲೆಯನ್ನೇ ಬರೆದಿದೆ,” ಎಂದಿದ್ದಾರೆ.

“ಕೇಂದ್ರ ಯುರೋಪಿಯನ್ ವಿಶ್ವವಿದ್ಯಾಲಯ’ವು ಅತ್ಯುನ್ನತ ಓಪನ್ ಸೊಸೈಟಿ ಪ್ರಶಸ್ತಿಯನ್ನು ಶೈಲಾಜಾ ಟೀಚರ್ ರಿಗೆ ನೀಡುವ ಮೂಲಕ, ಸಾರ್ವಜನಿಕ ಸೇವೆ ಮತ್ತು ಮಹಿಳಾ ನಾಯಕರನ್ನು ಆರೋಗ್ಯ ಸೇವೆಗಳಲ್ಲಿ ತೋರಿದ ಬದ್ಧತೆಗಾಗಿ ಗೌರವಿಸುತ್ತದೆ” ಎಂದು ಹೇಳಿದ್ದಾರೆ.

ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಶೈಲಜಾ ಟೀಚರ್ ‘ನಾವು ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನೀವು ಕಲಿತ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಿ. ಸಮಾನ ಸಮಾಜ ನಿರ್ಮಾಣ ಮಾಡುವಲ್ಲಿ ಒಬ್ಬ ನಾಯಕನಾಗಿ ಬೆಳೆಯಿರಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

1994ರಲ್ಲಿ ಮೊದಲ ಬಾರಿಗೆ ತತ್ವಜ್ಞಾನಿ ಸರ್ ಕಾರ್ಲ್ ಪಾಪ್ಪರ್ ರಿಗೆ ಓಪನ್ ಸೊಸೈಟಿ ಪ್ರಶಸ್ತಿ ನೀಡಲಾಯಿತು. ಅವರ ‘ದಿ ಓಪನ್ ಸೊಸೈಟಿ ಅಂಡ್ ಇಟ್ಸ್ ಎನಿಮೀಸ್(1945)’ ಪುಸ್ತಕದಲ್ಲಿ ಸಹಿಷ್ಣುತೆ, ಮುಕ್ತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ತತ್ವಶಾಸ್ತ್ರವನ್ನು ಪ್ರಸ್ತುತಪಡಿಸಲಾಗಿತ್ತು.

ಈ ಹಿಂದೆ ಅಮೇರಿಕನ್ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಜೋಸೆಫ್ ಸ್ಟಿಗ್ಲಿಟ್ಜ್, ಬೆಲರೂಸಿಯನ್ ಪತ್ರಕರ್ತ ಮತ್ತು ನೊಬೆಲ್ ಪ್ರಶಸ್ತಿ ವಿಜೇತ, ಸ್ವೆಟ್ಲಾನಾ ಅಲೆಕ್ಸಿವಿಚ್, ಅಂತರರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜೀವಾ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನನ್ ಪ್ರಶಸ್ತಿ ಪಡೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *