ಕೇರಳದ ʻಹಿರಿಯ ವಿದ್ಯಾರ್ಥಿʼ 107 ವರ್ಷದ ಭಾಗೀರಥಿ ಅಮ್ಮ ನಿಧನ

ಕೊಲ್ಲಂ: ‌105ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕೊಲ್ಲಂ ಜಿಲ್ಲೆಯ ಪ್ರಕುಲಂನ ಶತಾಯುಷಿ ಭಾಗೀರಥಿ ಅಮ್ಮ(107) ವಯೋಸಹಜ ಕಾರಣಗಳಿಂದ ನೆನ್ನೆ ರಾತ್ರಿ ನಿಧನರಾಗಿದ್ದಾರೆ.

ಭಾಗೀರಥಿ ಅಮ್ಮ 2019 ರಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಷನ್(ಕೆಎಸ್‌ಎಲ್‌ಎಂ)ನ ನಾಲ್ಕನೇ ತರಗತಿ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇತಿಹಾಸ ನಿರ್ಮಿಸಿದರು. ಕೊಲ್ಲಂನಲ್ಲಿ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ಪರೀಕ್ಷೆಗೆ ಹಾಜರಾಗಿದ್ದ ಇವರು, 275 ಅಂಕಗಳಿಗೆ 205 ಅಂಕಗಳನ್ನು ಪಡೆದಿದ್ದರು. ಗಣಿತದಲ್ಲಿ ಪೂರ್ಣ ಅಂಕ ಪಡೆದಿದ್ದರು. ವಯಸ್ಸಿನ ಕಾರಣದಿಂದಾಗಿ ಭಾಗೀರಥಿಯವರಿಗೆ ನಿಗದಿತ ಅವಧಿಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಅವರು ಪರಿಸರ, ಗಣಿತ ಮತ್ತು ಮಲಯಾಳಂ ವಿಷಯಗಳ ಪತ್ರಿಕೆಗಳಿಗೆ ಉತ್ತರಿಸಲು ಮೂರು ದಿನ ಸಮಯ ತೆಗೆದುಕೊಂಡರಂತೆ.

ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಭಾಗೀರಥಿಯವರು, ಕುಟುಂಬ ನಿರ್ವಹಣೆಗಾಗಿ, ಮೂರನೇ ವಯಸ್ಸಿಗೆ ಓದನ್ನು ಮೊಟಕುಗೊಳಿಸಿದ್ದರು. ಓದು, ಅಧ್ಯಯನಕ್ಕಾಗಿ ಹಂಬಲಿಸುತ್ತಿದ್ದ ಅವರಿಗೆ ಕೊನೆಗೂ ಶಿಕ್ಷಣ ಮುಂದುವರಿಸಲು ಅವಕಾಶವೇ ಸಿಗಲಿಲ್ಲ. ಭಾಗೀರಥಿ ಅಮ್ಮನಿಗೆ ಅಧ್ಯಯನದ ಬಗೆಗಿರುವ ಉತ್ಸಾಹವನ್ನು ಕಂಡ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ‘ಮನ್‌ ಕಿ ಬಾತ್‌‘ ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದರು.

ಭಾಗೀರಥಿ ಅಮ್ಮನ ಆಪ್ತ ಸ್ನೇಹಿತೆ ಮತ್ತು ನೆರೆಯ ಶಾರದಾ ಅವರ ಪುತ್ರಿ ಎಸ್.ಎನ್. ಶೆರ್ಲಿ ಅವರಿಗೆ ಕಲಿಸುತ್ತಿದ್ದರು. ಅವರ ಕಿರಿಯ ಮಗಳು ತಂಕಮಣಿ ಪಿಳ್ಳೈ ಕೂಡ ಜೊತೆಯಾಗಿ ನೆರವಾಗಿದ್ದರು,  ಇಡೀ ತ್ರಿಕ್ಕರು ಪಂಚಾಯತ್  ಇನ್ನಷ್ಟು ಕಲಿಯಲು ಅವರ ಪ್ರಯತ್ನವನ್ನು ಬೆಂಬಲಿಸಿತು ಮತ್ತು ಪ್ರೋತ್ಸಾಹಿಸಿತು.

‘ಭಾಗೀರಥಿಯವರಿಗೆ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯನ್ನು ಪಾಸು ಮಾಡಬೇಕೆಂಬ ಕನಸಿತ್ತು. ಆ ಕನಸು ಕೊನೆಗೂ ನನಸಾಗಲಿಲ್ಲ‘ ಎಂದು ಕುಟುಂಬದ ಸದಸ್ಯರು ನೆನಪಿಸಿಕೊಳ್ಳುತ್ತಾರೆ.

ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರಿದ್ದಕ್ಕಾಗಿ, ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಾಗಿ ಭಾಗೀರಥಿ ಅಮ್ಮನವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ನಾರಿಶಕ್ತಿ‘ ಪುರಸ್ಕಾರವೂ ಲಭಿಸಿದೆ. ತನ್ನ ಇಳಿವಯಸ್ಸಿನಲ್ಲಿ ಇನ್ನಷ್ಟು ಕಲಿಯಬೇಕೆಂಬ ಉತ್ಸಾಹದಿಂದ ಇದ್ದ ಭಗೀರಥಿ ಅಮ್ಮ ಗುರುವಾರ ರಾತ್ರಿ ನಿಧನರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *