ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ – ಬಿಜೆಪಿ – ಕಾಂಗ್ರೆಸ್ ಮುನ್ನಡೆ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಿರುವುದು ಕಂಡು ಬಂದಿದೆ.  ರಾಜ್ಯದ 25 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳ ಫಲಿತಾಂಶ ಬಹುತೇಕ ಹೊರ ಬಿದ್ದಿದೆ.

ರಾಜ್ಯದ 25 ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಬಿಜೆಪಿ 9 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗಳು 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಜೆಡಿಎಸ್ 1 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿರುವುದು ಗೊತ್ತಾಗಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ 1 ಲಕ್ಷಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಶಾಸಕರು ಹಾಗೂ ಸಂಸದರು ಮತ ಚಲಾಯಿಸಿದ್ದಾರೆ. ಜನಪ್ರತಿನಿಧಿಗಳೇ ವೋಟ್​ ಹಾಕಿದ್ದರಿಂದ ಶೇ.99ರಷ್ಟು ಪ್ರಮಾಣದಲ್ಲಿ ಮತದಾನ ನಡೆದಿತ್ತು.

ಬೆಂಗಳೂರು ನಗರ ಪರಿಷತ್ ಕ್ಷೇತ್ರ: ಬೆಂಗಳೂರು ನಗರ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಗೆಲುವು ದಾಖಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಪ್  ಅಲಿಯಾಸ್‌ ಕೆಜಿಎಫ್ ಬಾಬು ಸೋಲು ಕಂಡಿದ್ದಾರೆ.

ಬೀದರ್ ಪರಿಷತ್ ಕ್ಷೇತ್ರ:
ಬೀದರ್ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆಲುವಿನ ನಗೆ ಬೀರಿದ್ದಾರೆ.

ಮಂಡ್ಯ ಪರಿಷತ್ ಚುನಾವಣೆ :  167 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.  ಒಟ್ಟು 2044 ಮತಗಳನ್ನ ಪಡೆದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ 2044 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ 1877 ಮತ ಪಡೆದು ಸೋಲು ಅನುಭವಿಸಿದ್ದಾರೆ.

ದಾವಣಗೆರೆ ಪರಿಷತ್ ಚುನಾವಣೆ ಫಲಿತಾಂಶ:
ದಾವಣಗೆರೆ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್‌ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ 354 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ 2617 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 2263 ಮತಗಳನ್ನು ಪಡೆದಿದ್ದಾರೆ.

ಶಿವಮೊಗ್ಗ ಪರಿಷತ್ ಚುನಾವಣೆ: ಶಿವಮೊಗ್ಗ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಗೆಲುವು ಸಾಧಿಸಿದ್ದಾರೆ. ಹಾಲಿ ಕಾಂಗ್ರೆಸ್ ಸದಸ್ಯ ಪ್ರಸನ್ನಕುಮಾರ್ ಸೋಲು ಕಂಡಿದ್ದಾರೆ.

ಕೊಡಗು ಫರಿಷತ್ ಫಲಿತಾಂಶ: ಬಿಜೆಪಿಯ ಸುಜಾ ಕುಶಾಲಪ್ಪರಿಗೆ 705 ಮತಗಳು ಮತಗಳು ಬಂದಿದ್ದು, ಮತ ಎಣಿಕೆ ಆರಂಭವಾದ ಎರಡೇ ತಾಸುಗಳಲ್ಲಿ ಫಲಿತಾಂಶ ಹೊರಬಂದಿದೆ. ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ 105 ಮತಗಳ ಅಂತರದಿಂದ ಗೆಲುವು ಭರ್ಜರಿ ಜಯ ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಆಗಿದ್ದ ಕಾಂಗ್ರೆಸ್‌ನ‌ ಮಂಥರ್ ಗೌಡಗೆ 603 ಮತಗಳು ಬಂದಿದ್ದು, ಸೋಲು ಕಂಡಿದ್ದಾರೆ. ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಪಿ. ಸುಬ್ರಮಣಿ ಅವರ ಸಹೋದರ ಸುಜಾ ಕುಶಾಲಪ್ಪ ಆಗಿದ್ದಾರೆ. ಸುಬ್ರಮಣಿ ಅವರ ಬದಲಿಗೆ ಈ ಬಾರಿ ಸುಜಾ ಕುಶಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದ್ದು, ಇವರ ಮತ್ತೊಬ್ಬ ಸಹೋದರ ಅಪ್ಪಚ್ಚು ರಂಜನ್ ಮಡಿಕೇರಿ ಕ್ಷೇತ್ರದ ಶಾಸಕರಾಗಿದ್ದಾರೆ.

ಬಳ್ಳಾರಿ ಫರಿಷತ್ ಚುನಾವಣೆ ಫಲಿತಾಂಶ: ಬಳ್ಳಾರಿ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ವೈ ಎಂ ಸತೀಶ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ ಸಿ ಕೊಂಡಯ್ಯ ಸೋಲು ಕಂಡಿದ್ದಾರೆ.

ಉತ್ತರ ಕನ್ನಡ ಪರಿಷತ್ ಚುನಾವಣೆ ಫಲಿತಾಂಶ: ಉತ್ತರ ಕನ್ನಡ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ್ದಾರೆ.

ಕೊಪ್ಪಳ – ರಾಯಚೂರು : ಕೊಪ್ಪಳ–ರಾಯಚೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಬಯ್ಯಾಪುರ 400 ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರು ಸೋಲು ಅನುಭವಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಚುನಾವಣೆಯಲ್ಲಿ ಸೋಲು–ಗೆಲುವು ಸಾಮಾನ್ಯ. ಕ್ಷೇತ್ರದ ಮತದಾರರು ನನಗೆ 2,945 ಮತಗಳನ್ನು ನೀಡಿರುವುದಕ್ಕೆ ಚಿರಋಣಿ. ಈ ಸೋಲಿಗೆ ಯಾರೂ ಕಾರಣರಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ’ ಎಂದರು.

ಸಿಹಿ ಹಂಚಿ ಸಂಭ್ರಮ: ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಅವರಿಗೆ ಶಾಸಕರಾದ ಬಸನಗೌಡ ದದ್ದಲ ಹಾಗೂ ಡಿ.ಎಸ್‌.ಹುಲಗೇರಿ ಅವರು ಸಿಹಿ ತಿನ್ನಿಸಿದರು.

ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ ಜಯ : ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ ಜಯ. ಅಧಿಕೃತ ಘೋಷಣೆ ಬಾಕಿ. ಚನ್ನರಾಜ ಅವರು ಶಾಸಕಿ‌ ಲಕ್ಷ್ಮಿ ಹೆಬ್ಬಾಳಕರ ಅವರ ಕಿರಿಯ ಸಹೋದರ. ಇನ್ನು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ಗೆ ತಲಾ ಒಂದು ಸ್ಥಾನ :  ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ಗೆ ತಲಾ ಒಂದು ಸ್ಥಾನ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಗೆಲುವು ಸಾಧಿಸಿದ್ದಾರೆ.

ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹಮದ್​ಗೆ ಜಯ : ಧಾರವಾಡದ ಎರಡು ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನ ಪಡೆದಿವೆ. ಕಾಂಗ್ರೆಸ್  ಅಭ್ಯರ್ಥಿ ಸಲೀಂ ಅಹಮದ್ ಮತ್ತು  ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ.

ವಿಜಯಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಗೆಲುವು : ವಿಜಯಪುರದ ಎರಡು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್‌ಗೌಡಪಾಟೀಲ್, ಬಿಜೆಪಿ ಅಭ್ಯರ್ಥಿ ಪಿ.ಹೆಚ್‌.ಪೂಜಾರ್ ಜಯ ಸಾಧಿಸಿದ್ದಾರೆ.

ಕೋಲಾರ ಮತ್ತು ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಯಬೇರಿ : ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಜಯ ಗಳಿಸಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಗೆಲುವು ಸಾಧಿಸಿದ್ದಾರೆ.

ಬಳ್ಳಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎಮ್ ಸತೀಶ್ ಗೆಲುವು : ಬಳ್ಳಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎಮ್ ಸತೀಶ್ 757 ಮತಗಳ ಅಂತದಿಂದ  ಗೆಲುವು ಸಾಧಿಸಿದ್ದಾರೆ.

ಕಲಬುರ್ಗಿ ಯಾದಗಿರಿ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಗೆಲುವು : ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *