ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಪ್ರಚೋದನಾಕಾರಿ ಭಾಷಣ, ಅದರಿಂದ ಪ್ರೇರಿತರಾಗಿ ಮಾಡುತ್ತಿರುವ ಕೊಲೆ, ಹತ್ಯೆಗಳು ದಿನ ನಿತ್ಯದ ಸಂಗತಿಗಳಾಗಿವೆ ಆದರೆ ಇದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಖಂಡಿಸುತ್ತದೆ. ಜಿಲ್ಲೆಯಲ್ಲಿ ಹಬ್ಬಿಸುತ್ತಿರುವ ಕೋಮು ವಿಷಾನಿಲವನ್ನು ತಕ್ಷಣ ನಿಯಂತ್ರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನು ಓದಿ :-ಕನ್ನಡದಲ್ಲಿ ಬಹಳಷ್ಟು ಸತ್ವವಿದೆ: ಸಾಹಿತಿ ಬಾನು ಮುಷ್ತಾಕ್
ಜಿಲ್ಲೆಯಲ್ಲಿ ಅಮಾಯಕರ ಹತ್ಯೆಗಳು ನಡೆಯುತ್ತಿದ್ದು ಅದನ್ನು ನಿಗ್ರಹಿಸುವ ಇಚ್ಛಾಶಕ್ತಿಯನ್ನು ಸ್ಥಳೀಯ ಪೋಲೀಸರಾಗಲಿ, ಜಿಲ್ಲಾಡಳಿತವಾಗಲಿ ಪ್ರದರ್ಶಿಸುತ್ತಿಲ್ಲ ಎನ್ನುವುದು ಹಲವು ಅನುಮಾನಗಳನ್ನು ಮೂಡಿಸುತ್ತಿದೆ. ಬಿಜೆಪಿ ಶಾಸಕರುಗಳೇ ಕೋಮು ಪ್ರಚೋದನಕಾರಿ ಭಾಷಣ,ಹೇಳಿಕೆಗಳನ್ನು ಮಾಡುತ್ತ ಇಡೀ ಜಿಲ್ಲೆಯನ್ನು ತನ್ಮೂಲಕ ರಾಜ್ಯದಾದ್ಯಂತ ಕೋಮುವಿಷ ಹಬ್ಬಿಸುವ ಕೆಲಸವನ್ನು ಮಾಡುತ್ತಿರುವುದರ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದಿದ್ದಾರೆ.
ಇದನ್ನು ಓದಿ :-ವಿಶ್ವಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ಬಂಧನ
ಜಿಲ್ಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗಿದೆ. ದುಡಿಯುವ ಜನರು ಮನೆಯಿಂದ ಹೊರ ಬರದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಗೂಲಿ ಮಾಡುವವರ ಬದುಕು ದುರ್ಭರವಾಗುತ್ತಿದೆ. ಜಿಲ್ಲೆಯಾದ್ಯಂತ ಕೋಮುದಂಗೆಯ ದಳ್ಳುರಿಯು ದಾಂಗುಡಿ ಇಡುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆಗಳೇ ಕಾರಣೀಭೂತರಾಗಿದ್ದಾರೆ. ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರಕಾರ ಯಾವುದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ತತ್ಪರಿಣಾಮವಾಗಿ ಸಾಮಾನ್ಯ ಜನತೆ ಭಯದಲ್ಲಿ ಜೀವನ ಕಳೆಯುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮಹಿಳೆಯರು ಮತ್ತು ಮಕ್ಕಳು ಸಂಕಟಕ್ಕೆ ಸಿಲುಕುತ್ತಾರೆ. ಆದ್ದರಿಂದ ತಕ್ಷಣ ಸರಕಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ,ಹತ್ಯೆ ಗಳನ್ನು ನಿಯಂತ್ರಿಸಿ ಕೋಮುವಾದಿ ಕ್ರೂರಿಗಳನ್ನು ಮಟ್ಟ ಹಾಕಬೇಕೆಂದು ಒತ್ತಾಯಿಸಿದ್ದಾರೆ.