ಕನಿಷ್ಠ ವೇತನ ರೂ.35,931 ನಿಗದಿಪಡಿಸಬೇಕೆಂದು ಆಗ್ರಹಿಸಿ ಸಿಐಟಿಯು ಪ್ರತಿಭಟನೆ

ತುಮಕೂರು: ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ, ಕನಿಷ್ಟ ವೇತನ ಪಟ್ಟಿಯಲ್ಲಿರುವ ದುಡಿವ ಎಲ್ಲಾ ಕಾರ್ಮಿಕರಿಗೆ ಸಮಾನ ಕನಿಷ್ಟ ಕೂಲಿಯನ್ನು ಮಾಸಿಕ ರೂ.35,931 ನಿಗಧಿಪಡಿಸಬೇಕು. ತುಟ್ಟಿ ಭತ್ಯೆ ಅಂಕ ಒಂದಕ್ಕೆ 6 ಪೈಸೆ ಮತ್ತು   3  ವರ್ಷಕ್ಕೆ ಒಮ್ಮೆ ಕನಿಷ್ಟ ಕೂಲಿ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ಇಂದು(ಜುಲೈ 14) ನೂರಾರು  ಕಾರ್ಮಿಕರು ತುಮಕೂರಿನ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಕನಿಷ್ಠ ಎರಡು ಕೋಟಿ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನದ ಕಾನೂನಾತ್ಮಕ ಹಕ್ಕು ಒದಗಿಸುತ್ತದೆ. ಸರ್ಕಾರ ಮಾಲೀಕರ/ಅಧಿಕಾರಿಗಳ  ಮಾತುಗಳನ್ನು ಕೇಳದೆ ಸುಪ್ರೀಂ ಕೋರ್ಟಿನ ರೆಪಟ್ಕೋಸ್ ಬ್ರೆಟ್ ಆದೇಶದಲ್ಲಿ ನೀಡಲಾಗಿರುವ ಸೂತ್ರಗಳ ಅನ್ವಯ ಚಿಲ್ಲರೆ ಮಾರುಕಟ್ಟೆಯ ಹಣದುಬ್ಬರದ ಪ್ರಮಾಣ, ವೈಜ್ಞಾನಿಕವಾದ, ತಾರ್ಕಿಕವಾದ ಮತ್ತು 15ನೇ ಭಾರತ ಕಾರ್ಮಿಕ ಸಮ್ಮೇಳನವು ನೀಡಿರುವ ಸ್ಥಾಪಿತ ಶಾಸನಬದ್ಧ ವಿಧಾನಗಳು ಅನ್ವಯ ನಿಗದಿ ಮಾಡುವಂತೆ ಒತ್ತಾಯಿಸಿದರು.

2016ರ ಕನಿಷ್ಠ ವೇತನ ಪರಿಷ್ಕರಣೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಬೇಕು, ಎಲ್ಲಾ ಪಾಳಿ ಆಧಾರಿತ ಉದ್ಯೋಗಗಳ ಕನಿಷ್ಠ ವೇತನಗಳ ಪರಿಷ್ಕರಣೆಯೂ ಮಾಡಬೇಕು, ಕನಿಷ್ಠ ವೇತನ ಸಲಹಾ ಮಂಡಳಿಯಲ್ಲಿ ಸಿಐಟಿಯು ಪಾತಿನಿಧಿತ್ವ ನೀಡಬೇಕು ಎಂದು ಪ್ರತಿಭಟನೆಯ ಮೂಲಕ ಆಗ್ರಹಿಸಲಾಯಿತು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ ಆಹಾರ, ಬಟ್ಟೆ, ವಸತಿ, ಇಂಧನ, ನೀರು ಮತ್ತು ಮಕ್ಕಳ ಶಿಕ್ಷಣ ಇವುಗಳನ್ನು ಲೆಕ್ಕಕ್ಕೆ ಪರಿಗಣಿಸದೆ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷತೆ ಬೆಚ್ಚಿಬೀಳುವ ರೀತಿಯಲ್ಲಿ ಈಗಿರುವ ಕನಿಷ್ಠ ವೇತನದಲ್ಲಿ ಕೇವಲ ಶೇ.10ರಷ್ಟು ಮಾತ್ರ ಪರಿಷ್ಕರಿಸುವುದ ಕಾರ್ಮಿಕರಿಗೆ ಮಾಡಿರುವ ಮೋಸವಾಗಿದೆ ಎಂದರು.

ಪೌರ ಕಾರ್ಮಿಕ ಸಂಘಟನೆ  ಸಿ.ವೆಂಕಟೇಶ್ ಮಾತನಾಡಿ ತಳಸ್ಪರ್ಶಿಯಾಗಿ ದುಡಿವವರ ಕೂಲಿಗೆ ಅತಿ ಕಡಿಮೆ ವೇತನ ನಿಗದಿ ಮಾಡುವುದು ಅನ್ಯಾಯ ಎಂದರು.

ಹೋರಾಟದ ಹಕ್ಕೊತ್ತಾಯದ ಭಾಗವಾಗಿ ಮುನಿಸಿಪಾಲ್ ಕಾರ್ಮಿಕರು, ಅಸ್ವತ್ರೆ ಕಾರ್ಮಿಕರು, ವಿಶ್ವವಿದ್ಯಾಲಯದಲ್ಲಿನ  ಸ್ವಚ್ಚತಾ ಕಾರ್ಮಿಕರಿಗೆ ಕನಿಷ್ಟ ಕೂಲಿ, ತುಟ್ಟಿ ಭತ್ಯೆ, ವಾರದ ರಜೆ, ಹಬ್ಬದ ರಜೆ, ಗಳಿಕೆ ರಜೆ, ಸಾಂದರ್ಭಿಕ ರಜೆಗಳನ್ನು ಸಂಬಳದ ಚೀಟಿ ನೀಡುತ್ತಿಲ್ಲ ವಂಚಿಸಲಾಗುತ್ತಿದೆ ಎಂದು ದೂರಿದರು. ಕಾರ್ಮಿಕ ಆಧಿಕಾರಿ ಈ ಬಗ್ಗೆ ಅಗತ್ಯ ಕಾನೂನು  ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕಸದ ಅಟೋ ಚಾಲಕರು ಸಂಘದ  ಶಿವರಾಜು, ಮಂಜುನಾಥ್, ಪೌರ ಕಾರ್ಮಿಕ ನಾಗರಾಜು ,  ಚಿಕ್ಕನಾಯಕನಹಳ್ಳಿಯ ರಘು, ತಿಪಟೂರು ರಮೇಶ್, ಗುಬ್ಬಿ ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೆಶ್, ತಾಲ್ಲೂಕು  ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ರಂಗಮ್ಮ ಅವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಮುನಿಸಿಪಲ್ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ಅಸ್ವತ್ರೆ, ವಿಶ್ವವಿದ್ಯಾಲಯ  ಕಾರ್ಮಿಕರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

ಮನವಿಯನ್ನು ಸ್ವೀಕರಿಸಿದ ಜಿಲ್ಲಾ ಕಾರ್ಮಿಕ ಆಧಿಕಾರಿ ರಮೇಶ್ ಅವರು ಸ್ವೀಕರಿಸಿ ಕನಿಷ್ಟ ಕೂಲಿ ಬಗ್ಗೆ ಕಾರ್ಮಿಕ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ತಲುಪಿಸುವುದಾಗಿ ಹೇಳಿದರು.

ಮುನಿಸಿಪಲ್ ಕಾರ್ಮಿಕರಿಗೆ 15 ದಿನಗಳಿಂದ ತಿಂಡಿ ನೀಡುತ್ತಿಲ್ಲ, ವಿಪರೀತ ಮಳೆ ಬಂದರೂ ರೈನ್ ಕೋಟ್‌,  ಸಮವಸ್ತ್ರ, ಸುರಕ್ಷತಾ ಸಲಕರಣೆ ನೀಡುತ್ತಿಲ್ಲ ಎಂದು  ಪ್ರತಿಭಟನಾಕರಾರು ತೀರ್ವ ಅಸಮಾಧಾನ ಹೊರಹಾಕಿದರು. ಇದಕ್ಕೆ ಪ್ರತಿಕ್ರಿಯೆ  ನೀಡಿದ ಜಿಲ್ಲಾ ಯೋಜನಾ ನಿರ್ದೇಶಕರು ಅಂಜಿನಪ್ಪ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಭೆ ಕರೆಯುವುದಾಗಿ ಭರವಸೆ ನೀಡದರು.

Donate Janashakthi Media

Leave a Reply

Your email address will not be published. Required fields are marked *