ಕಾಮಗಾರಿ ಅನುಷ್ಟಾನದಲ್ಲಿ ವಿಫಲವಾಗಿರುವ ಸರ್ಕಾರ ಪ್ರಿಯಾಂಕ್ ಖರ್ಗೆ

ಕಲಬುರಗಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಈ ಪ್ರದೇಶದಲ್ಲಿ ಅನುಷ್ಠಾನಗೊಳಿಸಲು ವಿಫಲವಾಗಿರುವ ಕಾಮಗಾರಿಗಳ ದೊಡ್ಡಪಟ್ಟಿಯನ್ನು ನೀಡಬಹುದು. ಎಲ್ಲದರಲ್ಲೂ ವಿಫಲವಾಗಿದೆ ಎಂದು ಕಾಂಗ್ರೆಸ್‌ ನಾಯಕ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎನ್ನಲಾದ ಯಾವ ಸಾಧನೆಗಳು ಇಲ್ಲ. ಇಲ್ಲಿ ಯಾವುದೂ ಇಲ್ಲ. ಕಲಬುರಗಿಯಲ್ಲಿ ರೈಲ್ವೇ ವಿಭಾಗಕ್ಕೆ ಮಂಜೂರಾತಿ ಹಾಗೂ ಜವಳಿ ಪಾರ್ಕ್‌ ಕಲ್ಪಿಸಲು ಏಕೆ ವಿಫಲವಾಗಿದೆ ಎಂಬುದಕ್ಕೆ ಸರಕಾರ ಉತ್ತರಿಸಲಿ. ಕೆಲವು ತಿಂಗಳುಗಳ ಹಿಂದೆ ಮಂಜೂರಾತಿ ಪಡೆಯುವ ನಿರೀಕ್ಷೆಯಿದ್ದ ಎನ್‌ಐಎಂಜೆಡ್ ಮತ್ತು ನಗರದಲ್ಲಿನ ಫ್ಲೈಓವರ್ ಯೋಜನೆಯ ಸ್ಥಿತಿಯ ಬಗ್ಗೆ ಪ್ರಶ್ನಿಸಿದರು.

‘ಬಿಜೆಪಿ ಸರ್ಕಾರದಲ್ಲಿ ಪ್ರತಿ ಕೆಲಸಕ್ಕೂ ಶೇ.40 ಕಮಿಷನ್ ಕೇಳುವುದು, ಕೋಮು ಸೌಹಾರ್ದತೆ ಕದಡುವುದು, ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವಾರು ಪ್ರಮಾದ ಎಸಗಿರುವ ಬಿಜೆಪಿ ಪರವಾಗಿ ಜನರು ಹೇಗೆ ಮತ ಹಾಕುತ್ತಾರೆ? ಬಿಜೆಪಿ ನಾಯಕರಿಗೆ ಸಾರ್ವಜನಿಕರ ಮುಂದೆ ಹೋಗಲು ಮುಖವಿಲ್ಲ. ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ಕೇಂದ್ರ ನಾಯಕರಿಗೆ ಪದೇಪದೇ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ, ಏನೂ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.

ಫೆಬ್ರವರಿ 24-26ರವರೆಗೆ ಕಲಬುರಗಿ ಕಲ್ಯಾಣ ಕರ್ನಾಟಕ ಉತ್ಸವ ಆಯೋಜಿಸುವ ನಿರ್ಧಾರ ಕುರಿತ ಪ್ರಶ್ನೆಗೆ ಉತ್ತರಿಸಿದ, ಕಲ್ಯಾಣ ಕರ್ನಾಟಕ ಉತ್ಸವ ಆಯೋಜನೆಗೆ ನನ್ನ ವಿರೋಧವಿಲ್ಲ. ಆದರೆ, ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಗತ್ಯ ಅನುದಾನ ಪಡೆಯಬೇಕು. ಮೇಲಾಗಿ, ರಾಜ್ಯ ಸರಕಾರದಿಂದ ಪ್ರತ್ಯೇಕ ಅನುದಾನಕ್ಕೆ ಯತ್ನಿಸಬೇಕು. ಅದನ್ನು ಬಿಟ್ಟು ಕೆ.ಕೆ.ಆರ್.ಡಿ.ಬಿ ಅನುದಾನ ಬಳಸಿಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದರು. ಬರುವ ದಿನಗಳಲ್ಲಿ ಬೀದರ್ ಉತ್ಸವ, ವಿಶ್ವ ಖ್ಯಾತಿಯ ಹಂಪಿ ಉತ್ಸವಕ್ಕೂ ಹಣ ಕೊಡಿ ಎಂಬ ಬೇಡಿಕೆ ಬರುತ್ತದೆ. ಹೀಗಾದರೆ ಇಡೀ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರತ್ಯೇಕ ಉತ್ಸವಗಳಿಗೆ ಸುಮಾರು 100 ಕೋಟಿ ರೂ. ನೀಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡರೂ ಅಚ್ಚರಿಪಡಬೇಕಾಗಿಲ್ಲ ಎಂದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *