ಕಲುಷಿತ ನೀರು ಕುಡಿದು ಸಾವು: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

ರಾಯಚೂರು: ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿದ ಬಳಿಕ ನಗರಸಭೆ ಈಗ ಎಚ್ಚೆತ್ತುಕೊಂಡಿದ್ದು, ನಗರದ ಟ್ಯಾಂಕ್‍ಗಳ ಶುದ್ಧೀಕರಣ ಮಾಡಿಸಲು ಮುಂದಾಗಿದೆ. ನಗರಸಭೆಯಿಂದ ಸರಬರಾಜಾದ ಕಲುಷಿತ ನೀರನ್ನು ಕುಡಿದು ಮೂರು ಜನ ಪ್ರಾಣ ಬಿಟ್ಟಿದ್ದರ ಹಿಂದೆ 25 ವರ್ಷಗಳ ನಿರ್ಲಕ್ಷ್ಯವಿದೆ. ನೀರು ಕುಡಿದ ನೂರಾರು ಜನ ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿರುವುದರ ಹಿಂದೆ ಭ್ರಷ್ಟಾಚಾರ, ಬೇಜವಾಬ್ದಾರಿ ಎದ್ದು ಕಾಣುತ್ತಿದೆ.

ರಾಯಚೂರು ನಗರಸಭೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಕೊನೆಯೇ ಇಲ್ಲ ಎನ್ನುವುದಕ್ಕೆ ಇಂದು ನಡೆದ ಸಭೆ ಸಾಕ್ಷಿಯಾಗಿತ್ತು. ನಗರಸಭೆ ಸದಸ್ಯರ ತುರ್ತು ಸಭೆಯಲ್ಲಿ ಸಾವನ್ನಪ್ಪಿದ ಮೂವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 20 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚ ಭರಿಸುವ ಬಗ್ಗೆ ತೀರ್ಮಾನ ಕೈಗೊಂಡಿದೆ.

ಇದನ್ನು ಓದಿ: ಕಲುಷಿತ ನೀರು ಸೇವಿಸಿ ಮೂವರು ಸಾವು: ತನಿಖೆಗೆ ಆದೇಶ-ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಆಡಳಿತ ಮಂಡಳಿ ವೈಫಲ್ಯದ ಬಗ್ಗೆ ಕಿಡಿಕಾರಿದರು. ಶುದ್ಧೀಕರಣ ಘಟಕ ನಿರ್ವಹಣೆಯಲ್ಲಿನ ಲೋಪದ ಬಗ್ಗೆ ಗಮನ ಸೆಳೆದ ಅವರು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿದರು. ನಗರದಲ್ಲಿನ 35 ಕ್ಕೂ ಹೆಚ್ಚು ನೀರಿನ ಟ್ಯಾಂಕ್‍ಗಳನ್ನು 25 ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸದಸ್ಯರು ಒತ್ತಾಯಿಸಿದರು.

ಕಳೆದ ಕೆಲವು ತಿಂಗಳುಗಳ ಹಿಂದೆ, 4.75 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನೀರು ಶುದ್ಧೀಕರಣ ಘಟಕ ಆರಂಭಿಸಲಾಗಿತ್ತು. ನೀರು ಸರಬರಾಜು ಮಂಡಳಿ ಮೂರು ತಿಂಗಳು ನೀರು ಪೂರೈಕೆ ಕೂಡ ಮಾಡಿತ್ತು. ನಂತರ ಹಸ್ತಾಂತರಕ್ಕೆ ಮುಂದಾದರೆ ನಗರಸಭೆ ನಿರ್ಲಕ್ಷ್ಯ ಮಾಡಿತು. ಈಗ ಘಟಕ ಉಪಯೋಗವಿಲ್ಲದಂತಾಗಿ 58 ಲಕ್ಷ ರೂಪಾಯಿ ವೆಚ್ಚದಲ್ಲಿ ಮತ್ತೆ ದುರಸ್ತಿ ಮಾಡಬೇಕಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *