ಕಾಡಾನೆಗಳ ಉಪಟಳ ತಪ್ಪಿಸಲು ಸಾಕಾನೆಗಳ ಕಾವಲು!

  • ಕಾಡಾನೆಗಳು, ಹುಲಿಗಳ ಕಾಟಕ್ಕೆ ರೋಸಿ ಹೋಗಿರುವ ಕೊಡಗಿನ ಆದಿವಾಸಿಗಳು 
  • ಸಾಕಾನೆಳ ಮೇಲೆಯೇ ದಾಳಿ ನಡೆಸುವ ಕಾಡಾನೆಗಳು 

ಕೊಡಗು: ಕಾಡಾನೆಗಳ ಕಾಟವನ್ನು ತಪ್ಪಿಸಲು ಅರಣ್ಯ ಇಲಾಖೆ ಹೊಸ ಪ್ಲಾನ್ ರೂಪಿಸಿದ್ದು, ಕಾಡಾನೆಗಳ ಉಪಟಳ ಮಿತಿಮೀರಿರುವ ಪ್ರದೇಶಗಳಲ್ಲಿ ಸಾಕಾನೆಗಳನ್ನು ಕಾವಲಿಗೆ ನಿಯೋಜಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ, ಉಪಟಳ ಹಿಂದೆಂದಿಗಿಂತಲೂ ಇತ್ತೀಚೆಗೆ ಮಿತಿಮೀರಿದೆ. ವಿರಾಜಪೇಟೆ ತಾಲ್ಲೂಕಿನ ತಿತಿಮತಿ ಅರಣ್ಯ ಅಂಚಿನಲ್ಲಿರುವ ಚನ್ನಂಗಿ ಬಸವನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ತಿತಿಮತಿ ಅರಣ್ಯ ಪ್ರದೇಶದಿಂದ ರಾತ್ರಿ ಗ್ರಾಮಕ್ಕೆ ನುಗ್ಗುವ ಕಾಡಾನೆಗಳು ನೇರವಾಗಿ ಆದಿವಾಸಿ ಬುಡಕಟ್ಟು ಜನಾಂಗದ ಮನೆಗಳಿಗೆ ನುಗ್ಗುತ್ತಿವೆ. ಹೀಗಾಗಿ ಜನರು ಬದುಕುವುದೇ ದುಸ್ಥರವಾಗಿ ಹೋಗಿದ್ದು, ಕಾಡಾನೆಗಳ ಕಾಟಕ್ಕೆ ಜನರು ರೋಸಿಹೋಗಿದ್ದಾರೆ.

ಕಾಡಾನೆಗಳ ದಾಳಿ ತಪ್ಪಿಸಲು ಕೆಲವು ತಿಂಗಳು ಕಾಲ ಅರಣ್ಯ ಇಲಾಖೆ ಗ್ರಾಮಕ್ಕೆ ಅರಣ್ಯ ರಕ್ಷಕರನ್ನು ನೇಮಿಸಿತ್ತು. ಕಾಡಾನೆಗಳು ಬಂದಾಗ ಅವರು ಪಟಾಕಿ ಸಿಡಿಸಿ ಆನೆಗಳ ಓಡಿಸಲು ಪ್ರಯತ್ನಿಸುತ್ತಿದ್ದರು. ಅದಕ್ಕೂ ಕೇರ್ ಮಾಡದ ಕಾಡಾನೆಗಳು ಮನೆಗಳಿಗೆ ನುಗ್ಗುವುದನ್ನು ಮುಂದುವರೆಸಿದ್ದವು. ಮನೆಗಳಿಗೆ ನುಗ್ಗಿ ಮನೆಯಲ್ಲಿರುವ ಅಕ್ಕಿ, ಬೆಲ್ಲ, ಉಪ್ಪು ಸೇರಿದಂತೆ ಆಹಾರ ಧಾನ್ಯಗಳನ್ನು ತಿನ್ನುತ್ತಿದ್ದವು. ಜೊತೆಗೆ ಮನೆಯೊಳಗಿರುವ ಎಲ್ಲಾ ವಸ್ತುಗಳನ್ನು ತುಳಿದು ದಾಂಧಲೆ ಮಾಡಿ ನಾಶಮಾಡುತ್ತಿದ್ದವು. ಆನೆಗಳು ನುಗ್ಗುವ ಮನೆಗಳು ಚಿಕ್ಕದಾಗಿದ್ದು ಅವುಗಳಿಗೆ ಒಂದೇ ಬಾಗಿಲು ಇರುತ್ತದೆ. ಆದೇ ಬಾಗಿಲನ್ನು ಮುರಿದುಕೊಂಡು ಆನೆಗಳು ಮನೆಯೊಳಕ್ಕೆ ನುಗ್ಗಿದರೆ, ಅಲ್ಲಿಂದ ತಪ್ಪಿಸಿಕೊಳ್ಳಲು ಜನರಿಗೆ ಜಾಗವಿರುವುದಿಲ್ಲ. ಆನೆಗಳು ಮನೆಗಳಿಗೆ ನುಗ್ಗಿದರೆ ಒಂದು ಮೂಲೆಯಲ್ಲಿ ಕುಳಿತುಕೊಂಡು ಆನೆಗಳಿಗೆ ಸಿಕ್ಕಿ ಸಾಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನೋದು ಸ್ಥಳೀಯರಾದ ಗಣೇಶ್ ಎಂಬುವರ ಅಳಲು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

32 ಕುಟುಂಬಗಳಿರುವ ಗ್ರಾಮದಲ್ಲಿ ಕಾಡಾನೆಗಳು ಹತ್ತಕ್ಕೂ ಹೆಚ್ಚು ಮನೆಗಳಿಗೆ ಈಗಾಗಲೇ ನುಗ್ಗಿ ದಾಂಧಲೆ ನಡೆಸಿವೆ. ವಾಚರ್ ಗಳನ್ನು ನೇಮಿಸಿ ಕಾಡಾನೆಗಳ ಉಪಟಳ ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಅರಣ್ಯ ಇಲಾಖೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಾಡಾನೆಗಳ ಉಪಟಳ ತಪಿಸುವುದಕ್ಕೆ ಸಾಕಾನೆಗಳನ್ನು ನಿಯೋಜಿಸಿದೆ. ಕಾಡಾನೆಗಳನ್ನು ಹಿಡಿಯುವುದರಲ್ಲಿ ಪಳಗಿರುವ ಆನೆಗಳಾದ ಮತ್ತಿಗೋಡು ಸಾಕಾನೆ ಶಿಬಿರದ ಶ್ರೀಕಂಠ ಮತ್ತು ಭೀಮಾ ಆನೆಗಳನ್ನು ಬಸವನಹಳ್ಳಿಗೆ ನಿಯೋಜಿಸಲಾಗಿದೆ. ಮುವತ್ತೆರಡು ಮನೆಗಳಿರುವ ಗ್ರಾಮ ಮತ್ತು ತಿತಿಮತಿ ಅಂಚಿನಲ್ಲಿ ಪ್ರತೀ ರಾತ್ರಿ ಎರಡು ಆನೆಗಳು ಕಾವಲು ಕಾಯುತ್ತಿವೆ. ಸಾಕಾನೆಗಳನ್ನು ಏರುವ ಮಾವುತರು ರಾತ್ರಿ ಇಡೀ ಕಾವಲಿದ್ದು, ಕಾಡಾನೆಗಳು ಬಂದಲ್ಲಿ ಅವುಗಳನ್ನು ಸಾಕಾನೆಗಳಿಂದ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಾಡಾನೆಗಳ ಓಡಿಸುವುದಕ್ಕೆ ಸಾಕಾನೆಗಳನ್ನು ಕಾವಲಿಗೆ ನಿಯೋಜನೆ ಮಾಡಿರುವುದು ಸ್ಥಳೀಯರನ್ನು ಮತ್ತಷ್ಟು ಸಿಟ್ಟಿಗೇಳಿಸಿದೆ.

ಇದನ್ನೂ ಓದಿ : ಕಾಡಾನೆ ದಾಳಿ ಕಾರ್ಮಿಕ ಬಲಿ – ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ

ರಾತ್ರಿ ಬರುತ್ತಿರುವ ಕಾಡಾನೆಗಳ ಕಾವಲಿಗೆ ಹಾಕಿರುವ ಸಾಕಾನೆಗಳ ಮೇಲೆ ದಾಳಿ ಮಾಡಲು ಮುಂದಾಗುತ್ತಿವೆ. ಜೊತೆಗೆ ಎಷ್ಟು ದಿನ ಎಂದು ಈ ರೀತಿ ಸಾಕಾನೆಗಳಿಂದ ಕಾವಲು ನೀಡಲು ಸಾಧ್ಯ. ಇದಕ್ಕೆ ಬದಲಾಗಿ ಗ್ರಾಮದ ಸುತ್ತ ಸೋಲಾರ್ ಬೇಲಿ ನಿರ್ಮಿಸಿ ಶಾಶ್ವತ ರಕ್ಷಣೆ ಒದಗಿಸಬೇಕು ಎನ್ನೋದು ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಬಸವನಹಳ್ಳಿ ವಾರ್ಡಿನ ಸದಸ್ಯ ಅರುಣ್ ಅವರ ಆಗ್ರಹವಾಗಿದೆ.

Donate Janashakthi Media

Leave a Reply

Your email address will not be published. Required fields are marked *