ಕಾಡಾನೆ ದಾಳಿ ಕಾರ್ಮಿಕ ಬಲಿ – ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ

ಕೊಡಗು : ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿದ್ದ ಕಾಫಿಯ ರಾತ್ರಿ ಕಾವಲು ಕಾಯುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

 

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಬಿಬಿಟಿಸಿ ಎಸ್ಟೇಟ್ ನಲ್ಲಿ ದುರ್ಘಟನೆ ನಡೆದಿದೆ. ಆನಂದಪುರದ ನಿವಾಸಿ ಸಂದೀಪ್ (22) ಮೃತಪಟ್ಟ ಯುವಕ. ಎಂದಿನಂತೆ ರಾತ್ರಿಯೂ ಕಾಫಿ ಕಣದಲ್ಲಿ ಕಾವಲು ಕಾಯುತ್ತಿದ್ದ ಸಂದೀಪನ ಮೇಲೆ ತಡರಾತ್ರಿ ಕಾಡಾನೆ ದಾಳಿ ಮಾಡಿ ತಲೆ ಮೇಲೆ ಕಾಲಿಟ್ಟಿದೆ. ಸಂದೀಪನ ತಲೆ ಛಿದ್ರವಾಗಿದ್ದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಜೊತೆಯಲ್ಲಿದ್ದ ರಾಜು ಎಂಬ ಮತ್ತೊಬ್ಬ ಕಾರ್ಮಿಕ ಅದೃಷ್ಟವಷಾತ್ ಸ್ವಲ್ಪದರಲ್ಲಿಯೇ ಕಾಡಾನೆ ದಾಳಿಯಿಂದ ಬಚಾವ್ ಆಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಘಟನೆ ತಿಳಿಯುತ್ತಿದ್ದಂತೆ ಕಾರ್ಮಿಕ ಮುಖಂಡರು, ತೋಟದ ನೂರಾರು ಕಾರ್ಮಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಲ್ಲದೆ ಮೃತ ಸಂದೀಪನ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗುವವರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಿಐಟಿಯು ಕಾರ್ಮಿಕ ಸಂಘಟನೆ ಮುಖಂಡ ಮಹದೇವ ಸೇರಿದಂತೆ ಹಲವು ಕಾರ್ಮಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ಲಕ್ಷ ಪರಿಹಾರ ಕೊಡುವುದಾಗಿ ತೋಟದ ಸಂಸ್ಥೆಯ ಅಧಿಕಾರಿಗಳು ಒಪ್ಪಿದ್ದಾರೆ. ಆದರೆ ಕನಿಷ್ಠ ಹತ್ತು ಲಕ್ಷ ಪರಿಹಾರ ಸಿಗುವವರೆಗೆ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ. ಅರಣ್ಯ ಇಲಾಖೆ ಮತ್ತು ಬಿಬಿಟಿಸಿ ಸಂಸ್ಥೆ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಸಿಐಟಿಯು ಮುಖಂಡರು ತಿಳಿಸಿದರು. ಮಗನ ಸಾವಿನ ವಿಷಯ ತಿಳಿದು ಬಂದ ಸಂದೀಪ್ ಅವರ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *