ಮೋದಿಯ ದ್ವೇಷ ಭಾಷಣಗಳನ್ನು ಚುನಾವಣಾ ಆಯೋಗಕ್ಕೆ ಸಮರ್ಥಿಸಿಕೊಂಡ ಜೆ.ಪಿ.ನಡ್ಡಾ

ನವದೆಹಲಿ; ಬಿಜೆಪಿಯ ರಾಷ್ಟ್ರೀಯ ಅ‍ಧ್ಯಕ್ಷ ಜೆ.ಪಿ ನಡ್ಡಾ ಚುನಾವಣಾ ಆಯೋಗದ ನೊಟೀಸ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿಯ ದ್ವೇಷದ ಭಾಷಣಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಸೋಮವಾರ ಮೇ 13 ರ ಚುನಾವಣಾ ಆಯೋಗಕ್ಕೆ ಕಳುಹಿಸಿದ ಉತ್ತರದಲ್ಲಿ ನಡ್ಡಾ, ದೂರುದಾರರನ್ನು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆರ್ಥಿಕ ಅಸಹಕಾರ ಮತ್ತು ಭಾಷಾ ವ್ಯತ್ಯಾಸಗಳ ಮೂಲಕ ದೇಶದ ಉತ್ತರ ಮತ್ತು ದಕ್ಷಿಣದ ನಡುವೆ ವಿಭಜನೆಯನ್ನು ತರುವ ಮುಸ್ಲಿಂ ಲೀಗ್‌ನ ತಂತ್ರವನ್ನು ಕಾಂಗ್ರೆಸ್ ಅಳವಡಿಸಿಕೊಂಡಿದೆ ಎಂದು ನಡ್ಡಾ ಆರೋಪಿಸಿದ್ದಾರೆ.

ಮೂಲತಃ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಛಾಪು ಇದೆ ಎಂದು ಹೇಳಿದ ಮೋದಿಯವರ ಹೇಳಿಕೆಯನ್ನು ನಡ್ಡಾ ಉಲ್ಲೇಖಿಸುತ್ತಿದ್ದರು. ಬಿಜೆಪಿಯ ಸ್ಟಾರ್ ಪ್ರಚಾರಕ ಮೋದಿ ಅವರು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥರಿಗೆ ನೀಡಲಾದ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ನಡ್ಡಾ, ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮೋದಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಹಿಂದೂ ಧರ್ಮವನ್ನು ಭಾರತದ ‘ಮೂಲ ಧರ್ಮ’ ಎಂದು ಕರೆದ ನಡ್ಡಾ, ಕಾಂಗ್ರೆಸ್ ತನ್ನ ಮಿತ್ರಪಕ್ಷಗಳೊಂದಿಗೆ ಪ್ರಧಾನಿಯನ್ನು ವಿರೋಧಿಸುವ ಮೂಲಕ ಭಾರತದ ‘ಪ್ರಾಚೀನ ಸಂಸ್ಕೃತಿ’ಯನ್ನು ವಿರೋಧಿಸುತ್ತಿದೆ.ಮೋದಿಯವರ ಭಾಷಣಗಳು ಸತ್ಯಗಳನ್ನು ಆಧರಿಸಿವೆ ಎಂದು ಹೇಳಿದ ನಡ್ಡಾ, ಪ್ರಜಾಪ್ರಭುತ್ವದಲ್ಲಿ ಮತದಾರರು ವಿರೋಧ ಪಕ್ಷದ ಪರವಾಗಿ ಕೇಳುವುದು ಮಾತ್ರವಲ್ಲದೆ ಅದರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ ಎಂದು ನಡ್ಡಾ ಹೇಳಿದ್ದಾರೆ.

ಇದನ್ನು ಓದಿ : ಕಳಪೆ ಆಹಾರ | ಕೆಎಸ್‌ಸಿಎ ಮ್ಯಾನೇಜ್ಮೆಂಟ್ ವಿರುದ್ಧ ದೂರು ದಾಖಲು

ನಡ್ಡಾ ಅವರು ಎರಡು ಬಾರಿ ಚುನಾವಣಾ ಆಯೋಗದ ಮುಂದೆ ತಮ್ಮ ಉತ್ತರವನ್ನು ಸಲ್ಲಿಸಲು ಗಡುವನ್ನು ಪ್ರತಿ ಒಂದು ವಾರದವರೆಗೆ ವಿಸ್ತರಿಸುವಂತೆ ಕೋರಿದ್ದರು. ಬಿಜೆಪಿ ಮುಖ್ಯಸ್ಥರು ಹಾಗೂ ಮೋದಿಯವರು ಕಾಂಗ್ರೆಸ್‌ನ ನಿಜವಾದ ಉದ್ದೇಶಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ಭಾರೀ ತೆರಿಗೆಗಳನ್ನು ವಿಧಿಸಿ ತನ್ನ ವೋಟ್ ಬ್ಯಾಂಕ್ ರಾಜಕೀಯಕ್ಕೆ ತಕ್ಕಂತೆ ಮರುಹಂಚಿಕೆ ಮಾಡುತ್ತದೆ ಎಂದು ಹೇಳಿದ್ದಾರೆ.

ಬನ್ಸ್ವಾರಾದಲ್ಲಿ ಮಾಡಿದ ಭಾಷಣದಲ್ಲಿ, ಮುಸ್ಲಿಮರ ಬಗ್ಗೆ ಮಾತನಾಡುವಾಗ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಬಹುದು ಎಂದು ಮೋದಿ ಹೇಳಿದ್ದರು.

ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿ ಭಾಷಣ, ಚುನಾವಣಾ ಜಾಥಾಗಳಲ್ಲಿ ಪದೇಪದೇ ರಾಮಮಂದಿರದ ಬಗ್ಗೆ ಪ್ರಸ್ತಾಪಿಸುವುದು ಮತ್ತು ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಎಂದು ಉಲ್ಲೇಖಿಸುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್, ಸಿಪಿಐ ಮತ್ತು ಸಿಪಿಐಎಂಎಲ್ ಪಕ್ಷಗಳು ದೂರಿನಲ್ಲಿ ಆರೋಪಿಸಿದ್ದವು.

ಪ್ರಧಾನಿ ಭಾಷಣದ ಸಂಪೂರ್ಣ ಟೋನ್ ಮತ್ತು ಟೆನರ್ ಬಗ್ಗೆ ನಮಗೆ ಆಕ್ಷೇಪವಿದೆ. ಈ ದೂರಿನಲ್ಲಿ ನಾವು ಅವರ ದುರುದ್ದೇಶಪೂರಿತ ಆರೋಪಗಳನ್ನು ಹೈಲೈಟ್ ಮಾಡಲು ಬಯಸುತ್ತೇವೆ… ಇದು ವರ್ಗಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.ಭಾರತದ ಇತಿಹಾಸದಲ್ಲಿ ಯಾವುದೇ ಹಾಲಿ ಪ್ರಧಾನಿ ಈ ಮಟ್ಟದ ಹೇಳಿಕೆ ನೀಡಿಲ್ಲ ಎಂದು ದೂರು ನೀಡಿದ್ದ ಪಕ್ಷಗಳು ಉಲ್ಲೇಖಿಸಿದ್ದವು.

ದೂರಿನ ಬಳಿಕ ಮೋದಿ ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡುವ ಬದಲು ಚುನಾವಣಾ ಆಯೋಗ ನಡ್ಡಾಗೆ ನೊಟೀಸ್ ಕಳುಹಿಸಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದರೆ ಸಂಬಂಧಪಟ್ಟವರಿಗೆ ನೇರವಾಗಿ ನೊಟೀಸ್ ನೀಡುವುದು ಸಾಮಾನ್ಯ ಪದ್ಧತಿಯಾಗಿದೆ.

ಇದನ್ನು ನೋಡಿ : ಚಪಾತಿ ನಂಗೆ ಅಲರ್ಜಿ ಅಂತಾ ಗೊತ್ತಾಗಿದ್ದೆ ಡಾಕ್ಟರ್ ಹತ್ರ ಹೋದಮೇಲೆ! – ರವೀಂದ್ರ ಭಟ್ಟ ಮಾತುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *