ಬೆಂಗಳೂರು | ಸ್ನಾತಕೋತ್ತರ ಕೋರ್ಸ್‌ ಅವಧಿಯಲ್ಲೇ ಉದ್ಯೋಗದ ತರಬೇತಿ: ಬೆಂಗಳೂರು ನಗರ ವಿವಿಯ ವಿನೂತನ ನಡೆ

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೋರ್ಸ್‌ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಜ್ಜುಗೊಳಿಸಲು ಮುಂದಾಗಿದೆ.

ಈ ಉದ್ದೇಶಕ್ಕಾಗಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಆರಂಭಿಸಿದ್ದು, ಈ ತಿಂಗಳಲ್ಲೇ ತರಬೇತಿ ಶುರುವಾಗಲಿದೆ.  ಖಾಸಗಿ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ಆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರೆಗೆ ಅವರಿಗೆ ಬೇಕಾದ ಎಲ್ಲ ಮಾಹಿತಿಯನ್ನು ತರಬೇತಿ ಕೇಂದ್ರದ ಮೂಲಕ ನೀಡಲಾಗುತ್ತದೆ.

ಇದನ್ನೂ ಓದಿ : ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ಆತ್ಮಸ್ತೈರ್ಯ; ಹೆಚ್ಚುತ್ತಿರುವ ಆತ್ಮಹತ್ಯೆ

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯವಿರುವ ಪುಸ್ತಕಗಳ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಗ್ರಂಥಾಲಯ ಆರಂಭಿ ಸಲಾಗುವುದು. ಅಲ್ಲದೆ ಪರೀಕ್ಷೆ ಬರೆಯಲು, ಸಂದರ್ಶನ ಎದುರಿಸಲು ಅಗತ್ಯ ತರಬೇತಿ ನೀಡಲಾಗುತ್ತದೆ. ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬೇಕಾದ ನೆರವು ನೀಡಲಾಗುತ್ತದೆ. ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್‌ ಅವರು ಮಾಧ್ಯಮ ಗಳಿಗೆ ತಿಳಿಸಿದರು.

‘ಬೆಂಗಳೂರು ನಗರ ವಿಶ್ವ ವಿದ್ಯಾಲಯದಲ್ಲಿ 21 ಸ್ನಾತಕೋತ್ತರ ವಿಭಾಗಗಳಿವೆ. ದಾಖಲಾತಿ ಪ್ರಕ್ರಿಯೆ ಮುಗಿಯುತ್ತಿದಂತೆಯೇ ‘ಅನಿಕೇತನ’ ಹೆಸರಿನಲ್ಲಿ ಓರಿಯೆಂಟೇಷನ್‌ ಮೂಲಕ ವಿಶ್ವವಿದ್ಯಾಲಯದಲ್ಲಿರುವ ಸೌಲಭ್ಯಗಳು, ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ ಕೊಡಲಾಗುತ್ತದೆ. ಯಾರಿಗೆ, ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನು ಗುರುತಿಸಿ, ಬಳಿಕ ಆಯಾ ಕ್ಷೇತ್ರದಲ್ಲಿನ ಉದ್ಯೋಗಾವಕಾಶಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡಲಾಗುತ್ತದೆ’ ಎಂದು ವಿವರಿಸಿದರು.

ಮೊದಲ ಸೆಮಿಸ್ಟರ್‌ನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಶುರುವಾಗಲಿದ್ದು, ಎರಡು ವರ್ಷ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತದೆ. ಬ್ಯಾಂಕಿಂಗ್‌, ರೈಲ್ವೆ,ರಕ್ಷಣಾ ಇಲಾಖೆ, ಸೇನೆ ಸೇರಿದಂತೆ ಕೇಂದ್ರದ ಸರ್ಕಾರದ ಉದ್ಯೋಗಗಳಿಗೆ ಕನ್ನಡಿಗರು ಹೋಗುವುದು ಕಡಿಮೆ. ಇದಕ್ಕೆ ಕಾರಣ ಅರಿವಿನ ಕೊರತೆ. ಇದನ್ನು ಮನಗಂಡು ವಿಶ್ವವಿದ್ಯಾಲಯವು ಅಗತ್ಯ ಮಾಹಿತಿ ಜೊತೆಗೆ, ತರಬೇತಿಯನ್ನೂ ನೀಡಲಿದೆ.

ಕರ್ನಾಟಕ ಲೋಕಸೇವಾ ಆಯೋಗ, ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಿಗೂ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಖಾಸಗಿ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು, ಅಲ್ಲಿರುವ ತಜ್ಞರ ಸೇವೆಯನ್ನೂ ಪಡೆಯಲಾಗುತ್ತದೆ.

ಸಂವಹನ ಕೌಶಲ, ಸಂದರ್ಶನ ಎದುರಿಸಲು ಬೇಕಾಗುವ ಕೌಶಲದ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ.

ಹೊಸ ಕೋರ್ಸ್‌: ಬಿ.ಇಡಿ, ಎಂ.ಇಡಿ, ಬಿ.ಪಿಇಡಿ, ಎಂ.ಪಿಇಡಿ ಕೋರ್ಸ್‌ಗಳನ್ನು ಮುಂದಿನ ವರ್ಷದಿಂದ ಆರಂಭಿಸಲಾಗುತ್ತದೆ. ಇದಲ್ಲದೆ, ಎಲ್‌ಎಲ್‌ಎಂ (ಸಂಜೆ ವೇಳೆ) ಕೋರ್ಸ್‌ ಆರಂಭಿಸಲು ಅನುಮತಿ ಕೇಳಲಾಗಿದೆ. ಒಪ್ಪಿಗೆ ದೊರೆತರೆ ಈ ವರ್ಷವೇ ಶುರು ಮಾಡಲಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ಸದ್ಯ ಕಾನೂನು ಕೋರ್ಸ್‌ಗಳು ಇಲ್ಲ. ಮೂರು ಹಾಗೂ ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ ಆರಂಭಿಸಲು ಅನುಮತಿ ನೀಡುವಂತೆ ಕೋರಿ ಬಾರ್ ಕೌನ್ಸಿಲ್‌ ಆಫ್‌ ಇಂಡಿಯಾಗೆ ಪತ್ರ ಬರೆಯಲಾಗುವುದು. ಒಪ್ಪಿಗೆ ದೊರೆತರೆ ಮುಂದಿನ ವರ್ಷ ಕೋರ್ಸ್‌ ಪ್ರಾರಂಭಿಸಲಾಗುವುದು ಎಂದು ರಮೇಶ್‌ ತಿಳಿಸಿದರು.

ಇದನ್ನೂ ನೋಡಿ : ಚುನಾವಣಾ ಆಯೋಗದ ‘ಸರ್’ಗೆ(sir) ಯಾಕೆ ‘ನೋ ಸರ್’ ಅಂತ ಹೇಳಬೇಕು?Janashakthi Media

 

Donate Janashakthi Media

Leave a Reply

Your email address will not be published. Required fields are marked *