ಜಾತ್ಯಾತೀತ ಶಕ್ತಿಗಳನ್ನು ದುರ್ಬಲಗೊಳಿಸುತ್ತಿರುವ ಕೋಮುವಾದಿ-ಮತೀಯವಾದಿಗಳು: ಸಿಪಿಐ(ಎಂ)

ಮಂಗಳೂರು: ಮುಂಬರುವ ಚುನಾವಣೆ ದೃಷ್ಟಿಯಿಂದ ಬಿಜೆಪಿ-ಆರ್‌ಎಸ್‌ಎಸ್‌ ಹಾಗೂ ಮುಸ್ಲಿಂ ಕೋಮುವಾದಿ ಶಕ್ತಿಗಳು ರಾಜ್ಯದಲ್ಲಿ ಜಾತ್ಯಾತೀತ ಶಕ್ತಿಗಳನ್ನು ದುರ್ಬಲಗೊಳಿಸುವ ಹುನ್ನಾರಕ್ಕೆ ಮುಂದಾಗುತ್ತಿದ್ದು, ಜನತೆ ಪ್ರಬುದ್ಧತೆಯಿಂದ ಸೋಲಿಸಬೇಕೆಂದು ಸಿಪಿಐ(ಎಂ) ಪಕ್ಷ ಕರೆ ನೀಡಿದೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ಮುಸ್ಲಿಂ ಸಮಾವೇಶದ ನಿರ್ಣಯಗಳು ಹಾಗೂ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ತಿಳಿಸುತ್ತಾ, ಹಿಂದುತ್ವವಾದಿ ಮತಾಂಧ ಶಕ್ತಿಗಳು ರಾಜ್ಯವನ್ನು ಲೂಟಿಗೀಡುವ ಲೂಟಿಕೋರರೊಂದಿಗೆ ಕೈ ಜೋಡಿಸಿ ಅವರ ಲೂಟಿಕೋರ ನೀತಿಗಳಿಗೆ ಸಹಕಾರ ನೀಡುತ್ತಿದ್ದಾರೆ. ಇದರಿಂದ ಜನತೆಯ ನಿಜವಾದ ಪ್ರಶ್ನೆಗಳು ನೇಪತ್ಯಕ್ಕೆ ಸರಿಯುವಂತೆ ಮಾಡುಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನು ಓದಿ: ಮುಸ್ಲಿಂ ಸಮಾವೇಶ : ಎರಡು ಮಹತ್ವದ ನಿರ್ಣಯ ಅಂಗೀಕಾರ

ರಾಜ್ಯ ಸರಕಾರವೂ ಕೂಡಾ ಭಾರತದ ಸಂವಿಧಾನ ವಿರೋಧಿ ನಡೆಗಳನ್ನು ಜನತೆಯ ಪ್ರಜಾಪ್ರಭುತ್ವ ಹಾಗೂ ಬದುಕುವ ಹಕ್ಕುಗಳ ಮೇಲೆ ಧಾಳಿಯನ್ನು ಮುನ್ನಡೆಸಿದೆ. ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಸುಗ್ರೀವಾಜ್ಞೆಗಳನ್ನು ಈ ದಿಶೆಯಲ್ಲಿ ಗಮನಿಸಬಹುದು ಎಂದು ತಿಳಿಸಿದರು.

ಮೂರು ರೈತ ವಿರೋಧಿ ಕಾಯ್ದೆಗಳು ಹಾಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು ಅಲ್ಲದೇ ಮಹಿಳೆಯರು, ದಲಿತರು ಹಾಗೂ ಎಲ್ಲ ಬಡವರ ವಿರೋಧಿಯಾದ ಲೂಟಿಕೋರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ-2020)ಯ ಸಂರಕ್ಷಣೆಗೆ ನಿಂತು ಜನತೆಯನ್ನು ವಿಭಜಿಸಿ ಆಳುವ ಕೆಲಸವನ್ನು ಬಲಪಡಿಸಿವೆ. ಇದಕ್ಕೆ ಮುಸ್ಲಿಂ ಕೋಮುವಾದಿ ಶಕ್ತಿಗಳು ಕೈ ಜೋಡಿಸಿ, ರಾಜ್ಯದಲ್ಲಿ ಕೋಮುವಾದ ಹರಡುವಿಕೆಯಲ್ಲಿ ತೊಡಗಿವೆ. ಆ ಮೂಲಕ ಜಾತ್ಯಾತೀತ ಶಕ್ತಿಗಳನ್ನು ದುರ್ಬಲಗೊಳಿಸುವ ಹುನ್ನಾರ ಹೆಣೆದಿವೆ.

ಈಗ ಪಠ್ಯ ಪುಸ್ತಕಗಳ ಮರು ಪರಿಷ್ಕರಣೆಯ ಹೆಸರಿನಲ್ಲಿ ಮುಗ್ಧ ಮಕ್ಕಳ ಮನಸ್ಸುಗಳ ಮೇಲೆ ಕೋಮುವಾದ ಹೇರುವ ತಂತ್ರಗಳನ್ನು ಹೆಣೆಯಲಾಗುತ್ತಿದೆ. ನಾಡಿನ ಗಣ್ಯ ಸಾಹಿತಿಗಳು ಈ ಪರಿಷ್ಕರಣೆಯನ್ನು ತೀವ್ರವಾಗಿ ಪ್ರತಿರೋಧಿಸುತ್ತಿದ್ದಾರೆ. ಕವಿತೆ, ಪಠ್ಯಗಳಿಗೆ ತಮ್ಮ ಲೇಖನಗಳನ್ನು ಒದಗಿಸಿದ್ದ ಲೇಖಕರು ತಮ್ಮ ಕೊಡುಗೆಗಳನ್ನು ವಾಪಾಸ್ಸು ಪಡೆದಿದ್ದಾರೆ.

ಇದನ್ನು ಓದಿ: ಧರ್ಮ ಎಂದಿಗೂ ಮನುಷ್ಯನ ಶೋಷಣೆಯ ಅಸ್ತ್ರವಾಗಬಾರದು – ಬಿಎಮ್ ಹನೀಫ್

ಇಷ್ಟಾದರೂ ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿ ಕೈಗೊಂಡ ತಪ್ಪುಗಳನ್ನು ವಾಪಾಸ್ಸು ಪಡೆಯದಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಮಾತ್ರವಲ್ಲಾ, ಶಾಂತಿಯುತವಾಗಿ ಪ್ರತಿಭಟನೆ ನಿರತರನ್ನು ಅವಾಚ್ಯವಾಗಿ ನಿಂದಿಸುವುದನ್ನು ಮತ್ತು ದಾರಿತಪ್ಪಿಸಿ ಹೊಸ ವಿಷಯಗಳ ಕಡೆ ಗಮನ ಸೆಳೆಯುವ ಕುತಂತ್ರವನ್ನು ಸಿಪಿಐ(ಎಂ) ಖಂಡಿಸುತ್ತದೆ.

ಕೂಡಲೇ ಪರಿಷ್ಕೃತ ಪಠ್ಯಕ್ರಮವನ್ನು ವಾಪಾಸ್ಸು ಪಡೆದು ಹಳೆಯ ಪಠ್ಯ ಕ್ರಮವನ್ನು ಮುಂದುವರೆಸಲು ಮತ್ತು ರಾಷ್ಟ್ರ ಕವಿ ಕುವೆಂಪು ಅವರನ್ನು ನಿಂದಿಸಿದವರ ನೇತೃತ್ವದಲ್ಲಿರುವ ಪಠ್ಯಪುಸ್ತಕ ಮರು ಪರಿಷ್ಕರಣ ಸಮಿತಿಯನ್ನು ರದ್ದುಪಡಿಸುವಂತೆ ಸಿಪಿಐ(ಎಂ) ಪಕ್ಷವು ಒತ್ತಾಯಿಸಿದೆ.

ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಪ್ರಚಾರಾಂದೋಲನ

ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಎರಡು ದಿನಗಳ ಕಾಲ ಜರುಗಿದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ವಿಷಯಗಳ ಬಗ್ಗೆ ಸುಧೀರ್ಘವಾದ ಸಮಾಲೋಚನೆ ನಡೆದಿದೆ. ಸಿಪಿಐ(ಎಂ) ರಾಜ್ಯ ಸಮಾವೇಶವು ರಾಜ್ಯದಾದ್ಯಂತ ಅಲ್ಪಸಂಖ್ಯಾತರ ಮತ್ತು ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ವ್ಯಾಪಕವಾಗಿ ಪ್ರಚಾರಾಂದೋಲವನ್ನು ಮತ್ತು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಯನ್ನು ಮುಂಬರುವ ಫೆಬ್ರವರಿಯಲ್ಲಿ ಸಂಘಟಿಸಲು ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕೆ.ಪ್ರಕಾಶ್. ಸಯ್ಯದ್ ಮುಜೀಬ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯಾದವ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *