ನವದೆಹಲಿ: ಜಲ್ ಬೋರ್ಡ್ನ ಗುತ್ತಿಗೆದಾರನನ್ನು ಜನಕಪುರಿಯಲ್ಲಿ ಮುಚ್ಚದೆ ಬಿಟ್ಟಿದ್ದ ಸುಮಾರು 15 ಅಡಿ ಆಳದ ಗುಂಡಿಯಲ್ಲಿ ಬೈಕ್ ಸವಾರ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಮಾರ್ಚ್ 10ರಂದು ಬಂಧಿಸಿದ್ದಾರೆ ಎಂದು newindianexpress ವರದಿ ಮಾಡಿದೆ.
ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ, ಮುಖ್ಯ ಗುತ್ತಿಗೆದಾರ ಹಿಮಾಂಶು ಗುಪ್ತರನ್ನು ಮಂಗಳವಾರ ಬೆಳಿಗ್ಗೆ ರಾಜಸ್ಥಾನದ ಉದಯಪುರದಲ್ಲಿ ಬಂಧಿಸಲಾಗಿದೆ.
ಫೆಬ್ರವರಿ 5 ಮತ್ತು 6ರ ಮಧ್ಯರಾತ್ರಿ ಈ ದುರ್ಘಟನೆ ಸಂಭವಿಸಿದೆ. ಕೈಲಾಶಪುರಿ ನಿವಾಸಿ 25 ವರ್ಷದ ಕಮಲ್ ಧ್ಯಾನಿ ರೋಹಿಣಿಯಲ್ಲಿರುವ ಖಾಸಗಿ ಬ್ಯಾಂಕಿನ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಮರಳುವಾಗ ಅವರ ಬೈಕ್ ಮುಚ್ಚದೆ ಬಿಟ್ಟಿದ್ದ ಗುಂಡಿಗೆ ಬಿದ್ದಿದೆ.
ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತ ಬಂಗಾಳ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ: ಮಮತಾ ಬ್ಯಾನರ್ಜಿ
ಕಣ್ಣಾರೆ ಕಂಡ ಸಾಕ್ಷಿದಾರ ವಿಪಿನ್ ಸಿಂಗ್ ಹೇಳುವಂತೆ, ಅವರು ರೋಹಿಣಿಯಲ್ಲಿ ಸಂಬಂಧಿಕರ ಮದುವೆಗೆ ಹೋಗಿ ತಮ್ಮ ಕಾರಿನಲ್ಲಿ ಸಾಗರ್ಪುರದ ಮನೆಗೆ ಮರಳುತ್ತಿದ್ದಾಗ ಒಂದು ಬೈಕ್ ಗುಂಡಿಗೆ ಬೀಳುವುದನ್ನು ಕಂಡರು. ತಕ್ಷಣ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಆ ಸಿಬ್ಬಂದಿ ಸ್ಥಳದಲ್ಲಿದ್ದ ಗುತ್ತಿಗೆದಾರನ ಕಾರ್ಮಿಕ ಯೋಗೇಶ್ಗೆ ತಿಳಿಸಿದರು.
ಯೋಗೇಶ್ ಗುಂಡಿಯೊಳಗೆ ನೋಡಿದಾಗ ಬೈಕ್ನ ಹೆಡ್ಲೈಟ್ ಬೆಳಗುತ್ತಿದ್ದು, ಸವಾರನು ಒಳಗೆ ಸಿಲುಕಿಕೊಂಡಿರುವುದು ಕಂಡುಬಂದಿತು.
ಮೊಬೈಲ್ ದಾಖಲೆಗಳ ಪ್ರಕಾರ, ರಾತ್ರಿ 12.22ಕ್ಕೆ ಯೋಗೇಶ್ ತನ್ನ ಮಾಲೀಕ ಪ್ರಜಾಪತಿಗೆ ಮಾಹಿತಿ ನೀಡಿದ್ದಾನೆ. ಸುಮಾರು 15–20 ನಿಮಿಷಗಳಲ್ಲಿ ಪ್ರಜಾಪತಿ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದಾನೆ.
ಬೈಕ್ ಸವಾರ ಗುಂಡಿಯಲ್ಲಿ ಸಿಲುಕಿರುವುದು ಗೊತ್ತಿದ್ದರೂ ಯೋಗೇಶ್ ಹಾಗೂ ಪ್ರಜಾಪತಿ ಯಾರಿಗೂ ಮಾಹಿತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಬೆಳಿಗ್ಗೆ 8 ಗಂಟೆಗೆ ಪಿಸಿಆರ್ ಕರೆ ಬಂದ ನಂತರವೇ ಈ ಘಟನೆ ಪೊಲೀಸರಿಗೆ ತಿಳಿದುಬಂದಿದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ -169 | ಸಿನೆಮಾ : ಕೈರೋ ಸ್ಟೇಷನ್ : ವಿಶ್ಲೇಷಣೆ : ಬಿ. ಶ್ರೀಪಾದ ಭಟ್ Janashakthi Media
