ಸ್ಪೀಕರ್ ನಡೆಗೆ ಜಾಗೃತರ ಆಕ್ರೋಶ

ಬೆಂಗಳೂರು : ಹೊಸತಾಗಿ ಆಯ್ಕೆಯಾದ ಶಾಸಕರಿಗೆ ಸಂವಿಧಾನ ಆಶಯಗಳನ್ನು ತಿಳಿಸುವ ಬದಲು, ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳ ಭಾಷಣಗಳನ್ನು ಮಾಡಿಸುತ್ತಿರುವ ಸ್ಪೀಕರ್ ಖಾದರ್ ನಡೆಗೆ ಜಾಗೃತ ನಾಗರಿಕರು ಕರ್ನಾಟಕ ಆಕ್ರೋಶ ಹೊರಹಾಕಿದೆ.

ಈ ಕುರಿತು ಬಹಿರಂಗ ಪತ್ರ ಬರೆದಿರುವ ಸಾಹಿತಿ, ಚಿಂತಕರು, ಜನಪರ ಸಂಘಟನೆಗಳ ನಾಯಕರು ಸ್ಪಿಕರ್ ನಡೆಗೆ ಗರಂ ಆಗಿದ್ದಾರೆ. ಪತ್ರದ ಸಾರಾಂಶ ಈ ಕೆಳಗಿನಂತಿದೆ.

ಹೊಸತಾಗಿ ಆಯ್ಕೆಯಾಗಿರುವ ರಾಜ್ಯ ಸರಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ತಮಗೆ ಅಭಿನಂದನೆಗಳು.
ಹೊಸತಾಗಿ ಆಯ್ಕೆಯಾಗಿರುವ  70 ವಿಧಾನಸಭಾ ಸದಸ್ಯರಿಗೆ ತಾವು ಕರ್ನಾಟಕ ವಿಧಾನಸಭೆಯ ವತಿಯಿಂದ ದಿನಾಂಕ ಜೂನ್‌ 26-29ರವರೆಗೆ ವಿಶೇಷ ತರಬೇತಿ ಶಿಬಿರ ಏರ್ಪಡಿಸುವ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೋಡಿದೆವು. ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಸದಸ್ಯರ ಜವಾಬ್ದಾರಿ, ಸದನದಲ್ಲಿ ನಡವಳಿಕೆ, ಶಾಸಕರಾಗಿ ಜನತೆಗೆ ತೋರಿಸಬೇಕಾದ ಹೊಣೆಗಾರಿಕೆ ಇತ್ಯಾದಿಗಳ ಬಗ್ಗೆ ಸದನದ ಹಿರಿಯ ಸದಸ್ಯರ ಜೊತೆ ಸಂವಾದ ಏರ್ಪಡಿಸುವುದು ಸ್ವಾಗತಾರ್ಹ ಕ್ರಮವಾಗಿದೆ.

ಆದರೆ ಹೊಸ ಶಾಸಕರಿಗೆ ಪ್ರೇರಣಾ ಭಾಷಣ ಮಾಡಲು ಶ್ರೀ ರವಿಶಂಕರ್‌ ಗುರೂಜಿ, ಡಾ.ವೀರೇಂದ್ರ ಹೆಗ್ಗಡೆ,ಡಾ.ಗುರುರಾಜ ಕರ್ಜಗಿ, ಬ್ರಹ್ಮ ಕುಮಾರಿ ಆಶಾ ದೀದಿ ಹಾಗೂ ಶಾಂತಿ ಪ್ರಕಾಶನದ ಮಹಮ್ಮದ್‌ ಕುಂಞಿ ಇವರನ್ನು ಕರೆಸುವ ಔಚಿತ್ಯ ಅರ್ಥವಾಗಲಿಲ್ಲ. ಹೊಸ ಶಾಸಕರಿಗೆ ಸಂವಿಧಾನದ ಆಶಯಗಳಾದ ಜಾತ್ಯಾತೀತತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಮತ್ತು ಸಮಾಜವಾದದ ಜೊತೆಗೆ ಸರ್ವೋದಯ, ಜಾತಿ, ಲಿಂಗ, ವರ್ಗ, ಪಂಗಡ,ಭಾಷೆ, ಸಂಸ್ಕೃತಿಗಳ ತಾರತಮ್ಯವಿಲ್ಲದೇ, ಸರ್ವರ ಸಂಕ್ಷೇಮಕ್ಕಾಗಿ ಶ್ರಮಿಸಬೇಕಾದ ಕರ್ತವ್ಯಗಳ ಪ್ರೇರಣೆ ಒದಗಿಸುವ ಪ್ರೇರೇಪಕರು ಬೇಕೇ ಹೊರತೂ,  ಧಾರ್ಮಿಕ ಆಧ್ಯಾತ್ಮ ಪ್ರವಚನ ನೀಡುವವರಲ್ಲ. ಸರ್ವಧರ್ಮ ಸಮಭಾವ ಮತ್ತು ಮತ ನಿರಪೇಕ್ಷ ಆಡಳಿತ ಎಂದರೆ ಸರಕಾರದ ಎಲ್ಲ ಕಾರ್ಯಕ್ರಮಗಳಿಗೆ ವಿವಿಧ ಧರ್ಮದ ಪ್ರತಿನಿಧಿಗಳನ್ನು ಕರೆಸಿ ಪ್ರವಚನ ನೀಡುವುದು ಎಂದು ತಾವು ಭಾವಿಸಿದಂತಿದೆ. ಆದರೆ ಜಾತ್ಯಾತೀತತೆ ಮತ್ತು ಮತ ನಿರಪೇಕ್ಷತೆ ಎಂದರೆ ರಾಜಕೀಯದೊಡನೆ ಧರ್ಮವನ್ನು ಬೆರೆಸದೇ ದೂರ ಇಡುವುದು ಎಂಬುದನ್ನು ತಾವು ದಯವಿಟ್ಟು ಮನನ ಮಾಡಿಕೊಳ್ಳಬೇಕು.

ಶಾಸಕರಿಗೆ ಬೇಕಾದ  ಧಾರ್ಮಿಕ, ಆಧ್ಯಾತ್ಮಿಕ, ಮಾರ್ಗದರ್ಶನ ಒದಗಿಸುವುದು ಶಾಸನ ಸಭೆಯ ಸಭಾಧ್ಯಕ್ಷರಾದ ತಮ್ಮ ಜವಾಬ್ದಾರಿಯಲ್ಲ. ಯಾರಾದರೂ ಶಾಸಕರು ವೈಯಕ್ತಿಕವಾಗಿ ಯಾವುದಾದರೊಂದು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದು ಅವರ ವೈಯಕ್ತಿಕ ಆಯ್ಕೆ. ಆದರೆ ಶಾಸನ ಸಭೆಯನ್ನು ಪ್ರವೇಶಿಸುವ ಮೊದಲು ಅವರೆಲ್ಲ ಧಾರ್ಮಿಕ ಪ್ರೇರೇಪಣೆ ಪಡೆದು ಬರಬೇಕೆಂದು ತಾವು ಭಾವಿಸಿರುವುದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ ಭ್ರಷ್ಟಾಚಾರ,ಸ್ವಜನ ಪಕ್ಷಪಾತ,ತಾರತಮ್ಯರಹಿತ ಜನಸೇವೆ ಮಾಡುವ ಬಗ್ಗೆ ಹಿತವಚನ ನೀಡುವ ಅಗತ್ಯವಿದೆಯೇ ಹೊರತೂ ಧಾರ್ಮಿಕ ನೆಲೆಯ ಚಿಂತನೆಗಳಲ್ಲ.

ಕರ್ನಾಟಕದ ಜನ, ಕೇವಲ ಧಾರ್ಮಿಕ ವಿಷಯಗಳನ್ನು, ಕೋಮುವಾದದ ಚಿತಾವಣೆಗಳನ್ನು ಮಾಡಿಕೊಂಡು ಜನರ ಅಭಿವೃದ್ದಿಯನ್ನು ಕಡೆಗಣಿಸಿ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಿ.ಜೆ.ಪಿ.ಯನ್ನು ಸೋಲಿಸಿ ಕಾಂಗ್ರೆಸ್‌ ಪಕ್ಷವನ್ನು ಅತ್ಯಧಿಕ ಸ್ಥಾನಗಳ ಮೂಲಕ ಅಧಿಕಾರಕ್ಕೆ ತಂದಿದ್ದಾರೆ. ನೀವೂ ಸಹ ಧಾರ್ಮಿಕ ಗುರುಗಳ ಶಿಷ್ಯರಾಗಿ, ಅವರ ಮಾರ್ಗದರ್ಶನದಂತೆ ಗುಪ್ತ ಅಜೆಂಡಾಗಳನ್ನು ಜಾರಿಗೊಳಿಸುತ್ತ ಆಡಳಿತ ನಡೆಸಲಿ ಎಂದಲ್ಲ. ಉದ್ಯೋಗ, ಆರೋಗ್ಯ, ಸಾಮಾಜಿಕ ಭದ್ರತೆ, ದುರ್ಬಲರ ಸಂಕ್ಷೇಮ, ಸಾಂಸ್ಕೃತಿಕ ಬಹುಳತ್ವದ ಬಗ್ಗೆ, ವೈಜ್ಞಾನಿಕ ಮನೋಭಾವಗಳ ಬಗ್ಗೆ ಗೌರವ ಹೊಂದಿ ಕರ್ನಾಟಕದ ಸಮಗ್ರ ಅಭಿವೃದ್ದಿಯನ್ನು ಸಾಧಿಸಲಿ ಎಂದು ಜನರ ನಿರೀಕ್ಷೆ ಇದೆ. ಇದಕ್ಕೆ ಬೇಕಾದ ಪ್ರೇರಣೆ ಒದಗಿಸಲು ಸಂವಿಧಾನ ತಜ್ಞರು, ಅಭಿವೃದ್ದಿ ಚಿಂತಕರು,ರಾಜಕೀಯ ಆರ್ಥಿಕ ಸಾಮಾಜಿಕ ಶಾಸ್ತ್ರಜ್ಞರನ್ನು ಆಹ್ವಾನಿಸಿ ತರಬೇತಿ ಕೊಡಿಸಿರಿ.

ತಾವು ಆಹ್ವಾನಿಸಿರುವ ವ್ಯಕ್ತಿಗಳು ಈ ಮೇಲಿನ ಯಾವ ಅಗತ್ಯಗಳನ್ನೂ ಪೂರೈಸುವ ಪರಿಣಿತರಲ್ಲ. ಕೆಲವರಂತೂ ಕೋಮುವಾದಿ ನೀತಿಗಳ ಸಮರ್ಥಕರು, ಹಾಗೂ ಸ್ವಂತದ ವ್ಯವಹಾರಗಳಲ್ಲಿ ವಿವಾದಾಸ್ಪದರೂ ಆಗಿದ್ದಾರೆ. ಇಂತಹವರ ಭಾಷಣಗಳು ಹೊಸ ಶಾಸಕರಿಗೆ ಯಾವ ಬಗೆಯ ಮಾದರಿಗಳನ್ನು ಒದಗಿಸಬಲ್ಲುದು ಎಂಬ ಬಗ್ಗೆ ನಾವು ಆತಂಕಿತರಾಗಿದ್ದೇವೆ. ಇದು ಅದರ ಕುರಿತ ನಮ್ಮ ಪ್ರತಿಭಟನೆಯ ಪತ್ರವಾಗಿದೆ. ಈ ಧಾರ್ಮಿಕ ಪ್ರತಿನಿಧಿಗಳ ಉಪನ್ಯಾಸಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸುತ್ತೇವೆ. ನಿಮ್ಮ ಒಳ್ಳೆಯತನದ ಬಗ್ಗೆ ಗೌರವವಿದೆ. ಆದರೆ ತಮ್ಮ ಈ ತಪ್ಪು ನಡೆ ಜನತೆಗೆ ತಪ್ಪು ಸಂದೇಶ ಹೋಗಬಾರದೆಂಬ ಕಳಕಳಿ ಉಳ್ಳವರೂ ಆಗಿದ್ದೇವೆ.

ಶಾಸಕರ ತರಬೇತಿ ಶಿಬಿರದ ಕಲಾಪಗಳಿಂದ ಧಾರ್ಮಿಕ ಪ್ರತಿನಿಧಿಗಳ ಪ್ರವಚನವನ್ನು ಕೈ ಬಿಡಬೇಕೆಂದು ನಮ್ಮ ಒಕ್ಕೊರಲ ಆಗ್ರಹವಾಗಿದೆ ಎಂದು ಡಾ.ಕೆ.ಮರುಳಸಿದ್ದಪ್ಪ ಡಾ.ಜಿ.ರಾಮಕೃಷ್ಣ,
ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ರಾಜೇಂದ್ರ ಚೆನ್ನಿ, ಕೆ.ಎಸ್.ವಿಮಲಾ,
ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್
ಡಾ.ಬಂಜಗೆರೆ ಜಯಪ್ರಕಾಶ್, ಡಾ.ನಿರಂಜನಾರಾಧ್ಯ, ಡಾ.ಮೀನಾಕ್ಷಿ ಬಾಳಿ, ಡಾ.ಎನ್.ಗಾಯತ್ರಿ, ಡಾ.ವಸುಂಧರಾ ಭೂಪತಿ,
ರುದ್ರಪ್ಪ ಹುನಗವಾಡಿ ಬೆಂಬಲ ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *