ಬೆಂಗಳೂರು : RCB ಕ್ರಿಕೆಟ್ ತಂಡದ ಗೆಲುವಿನ ಸಂಭ್ರಮಾಚರಣೆಯ ಹೊತ್ತಿನಲ್ಲಿ ಆಯೋಜಕರ ಅವೈಜ್ಞಾನಿಕ, ಅವ್ಯವಸ್ಥಿತ ಆಯೋಜನೆಯಿಂದಾಗಿ ಕಾಲ್ತುಳಿತಕ್ಕೆ ಸಿಲುಕಿ ಹಲವರ ಜೀವಬಲಿ ಪಡೆದಿದೆ. ಇದೊಂದು ಅತ್ಯಂತ ದುರಂತದ ಘಟನೆ ಯಾಗಿದ್ದು ಇದರ ಹೊಣೆಗಾರಿಕೆಯನ್ನು ಕರ್ನಾಟಕ ಸರಕಾರ ಹೊರಬೇಕು. ಸಿ.ಪಿ.ಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಆಗ್ರಹಿಸಿದ್ದಾರೆ.
ನಿಧನರಾದ ಜೀವಗಳಿಗೆ ಸಂತಾಪಗಳನ್ನು ಸೂಚಿಸಿ, ಕುಟುಂಬದವರಿಗೆ ಸಾಂತ್ವನಗಳನ್ನು ಹೇಳಿರುವ ಅವರು, ಐ.ಪಿ.ಎಲ್.ಒಂದು ಖಾಸಗೀ ಸಂಸ್ಥೆ ಆಯೋಜಿಸಿದ ಕ್ರೀಡಾಕೂಟವಾಗಿದ್ದು ಅದರ ಗೆಲುವು ನಲಿವುಗಳನ್ನು ಕ್ರೀಡಾ ಪ್ರೇಮಿಗಳು ಅವರಿಗೆ ಬೇಕಾದ ಹಾಗೆ ನಿನ್ನೆ ಇಡಿಯಾಗಿ ಸಂಭ್ರಮಿಸಿದ್ದಾರೆ. ಆದರೆ ಸರಕಾರವೊಂದು ಕ್ರೀಡೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿ ಹತ್ತಾರು ಜೀವ ಬಲಿ ಗೆ ಕಾರಣವಾಗಿರುವುದನ್ನು ಖಂಡಿಸಿದ್ದಾರೆ.
ಕ್ರಿಕೆಟ್ ಕ್ರೀಡೆಯನ್ನು ವ್ಯಾಪಾರೀಕರಣ ಮತ್ತು ಖಾಸಗೀಕರಣಕ್ಕೆ ಒಳಪಡಿಸಿದ ಪರಿಣಾಮವಾಗಿ ಉಂಟಾಗಿರುವ ಕ್ರಿಕೆಟ್ ಸರಕೀಕರಣದ ಲಾಭವನ್ನು ರಾಜಕೀಯವಾಗಿ ಪಡೆಯಲು ರಾಜ್ಯ ಸರ್ಕಾರ ಮುಂದಾಗಿ ಈ ಸಂಭ್ರಮಾಚರಣೆಯನ್ನು ಆಯೋಜಿಸಿದೆ ಎಂಬುದು ನಿಸ್ಸಂದೇಹವಾಗಿದೆ. ಹಾಗೆ ಮಾಡುವಾಗ ಸರಿಯಾದ ಪೂರ್ವ ಸಿದ್ಧತೆಗಳನ್ನು ಬಂದೋಬಸ್ತ್ ಮಾಡಿಕೊಳ್ಳದೇ ಅವಸರದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಸರಕಾರದ ಕ್ರಮವನ್ನು ಖಂಡಿನೀಯ, ಈ ದುರಂತದ ನಿಜವಾದ ಕಾರಣವನ್ನು ಸಮಗ್ರ ತನಿಖೆಯ ಮೂಲಕ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಗಾಯಾಳುಗಳಾದ ಹಲವರಿಗೆ ಸೂಕ್ತ ಚಿಕಿತ್ಸೆಯನ್ನು ಸರಕಾರದ ಖರ್ಚು ವೆಚ್ಚ ದಲ್ಲಿ ನೀಡಬೇಕು. ನಿಧನರಾದ ಕುಟುಂಬಕ್ಕೆ ಸೂಕ್ತ ಪರಿಹಾರಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.