2022ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದ 777 ಕೋಟಿ ರೂ. ವೆಚ್ಚದ ಸುರಂಗ ದುರಸ್ತಿ ಸಾಧ್ಯವಿಲ್ಲ ಎಂದ ಪಿಡಬ್ಲ್ಯೂಡಿ!

ನವದೆಹಲಿ: ಸುಮಾರು 777 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ರಾಷ್ಟ್ರರಾಜಧಾನಿಯ ಪ್ರಗತಿ ಮೈದಾನದ ಸುರಂಗ ಮಾರ್ಗ ಸಂಪೂರ್ಣ ಕೂಲಂಕುಷ ಪರಿಶೀಲನೆ ಅಗತ್ಯವಿದೆ ರಾಜ್ಯದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಹೇಳಿದ್ದು, ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. 2022ರ ಜೂನ್‌ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪಿಡಬ್ಲ್ಯೂಡಿಯ ಹಿರಿಯ ಅಧಿಕಾರಿಯೊಬ್ಬರು, ಪ್ರಗತಿ ಮೈದಾನದ ಸುರಂಗದ ಪೂರ್ಣಗೊಳಿಸುವಿಕೆ ವಿಳಂಬ ಮತ್ತು ಅದರ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದ ಕಾರಣಕ್ಕೆ ಕಾಮಗಾರಿಯಲ್ಲಿ ದೊಡ್ಡ ಬಿರುಕುಗಳು ಉಂಟಾಗಿದೆ. ಹಾಗಾಗಿ ಸಂಪೂರ್ಣ ಸುರಂಗ ಮಾರ್ಗದ ಕೂಲಂಕುಷ ಪರೀಕ್ಷೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಮೀಸಲಾತಿಗೆ ವಿರುದ್ಧ ಇದ್ದರು’ | ನೆಹರೂ ವಿರುದ್ಧ ಮತ್ತೆ ದಾಳಿ ಮಾಡಿದ ಪ್ರಧಾನಿ ಮೋದಿ

ಸುರಂಗವು ಪ್ರಸ್ತುತ ಪ್ರಯಾಣಿಕರಿಗೆ ಸುರಕ್ಷಿತವಾಗಿಲ್ಲ ಎಂದು ಅಧಿಕಾರಿ ಹೇಳಿದ್ದು, ”ಬೃಹತ್ ದೊಡ್ಡ ನವೀಕರಣ ಕಾರ್ಯ ನಡೆಯದೆ ಅದನ್ನು ದುರಸ್ತಿ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ನಗರದ ಪೂರ್ವ ಭಾಗಗಳು, ನೋಯ್ಡಾ ಮತ್ತು ಗಾಜಿಯಾಬಾದ್‌ನ ಉಪ ಪಟ್ಟಣಗಳೊಂದಿಗೆ ಮಧ್ಯ ದೆಹಲಿಯ ನಡುವಿನ ಸಂಪರ್ಕವನ್ನು ಸುಲಭಗೊಳಿಸುವ ಗುರಿಯನ್ನು ಈ ಸುರಂಗ ಹೊಂದಿತ್ತು. ಸುರಂಗವು 1.3 ಕಿಮೀ ಉದ್ದವಾಗಿದ್ದು, ಐದು ಅಂಡರ್‌ಪಾಸ್‌ಗಳನ್ನು ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಗೆ ಸಂಪರ್ಕಿಸುತ್ತದೆ. 2023 ರಲ್ಲಿ ಸುರಂಗದಲ್ಲಿ ನೀರು ತುಂಬಿರುವ ಕಾರಣಕ್ಕೆ ಅನೇಕ ಬಾರಿ ಮುಚ್ಚಲಾಗಿತ್ತು.

ನಗರದಲ್ಲಿ ಸಾಧಾರಣ ಅಥವಾ ಹೆಚ್ಚು ಮಳೆಯಾದಾಗಲೆಲ್ಲಾ ಸುರಂಗವು ಜಲಾವೃತವಾಗುತ್ತದೆ ಎಂದು ಇನ್ನೊಬ್ಬ ಪಿಡಬ್ಲೂಡಿ ಅಧಿಕಾರಿ ಹೇಳಿದ್ದಾರೆ ಎಂದು ಮಿಂಟ್ ಲೈವ್ ಸುದ್ದಿ ಸಂಸ್ಥೆ ವರದಿ ಹೇಳಿದೆ. “ಎಲ್ಲಾ ಭೂಗತ ಸುರಂಗಗಳಲ್ಲಿ ಸಣ್ಣ ಸೋರಿಕೆಗಳು ಆಗುತ್ತಿದ್ದರೂ, ಕಳೆದ ಎರಡು ತಿಂಗಳುಗಳಲ್ಲಿ ಕಂಪನಿಗೆ ಹಲವಾರು ಬಾರಿ ಈ ಬಗ್ಗೆ ಹೇಳಿದ್ದರ ಹೊರತಾಗಿಯೂ ನಿರ್ವಹಣಾ ಪ್ರಾಧಿಕಾರವಾದ ಲಾರ್ಸೆನ್ ಆಂಡ್ ಟೂಬ್ರೊ(ಎಲ್ & ಟಿ)ಗೆ ಈ ನಿರ್ದಿಷ್ಟ ಸುರಂಗವನ್ನು ದುರಸ್ತಿ ಮಾಡಲಿಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ದಿ ಹಿಂದೂ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಉತ್ತರಾಖಂಡ | ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರ

ಸುರಂಗದ ಪರಿಸ್ಥಿತಿಯ ಬಗ್ಗೆ ಪಿಡಬ್ಲೂಡಿ ನಿರ್ಮಾಣ ಕಂಪೆನಿ ಲಾರ್ಸೆನ್ ಆಂಡ್ ಟೂಬ್ರೊಗೆ ಫೆಬ್ರವರಿ 3 ರಂದು ಶೋಕಾಸ್ ನೋಟಿಸ್ ನೀಡಿ, “ಕನಿಷ್ಠ 500 ಕೋಟಿ ರೂ. ಮೊತ್ತದ ಟೋಕನ್ ಮೊತ್ತವನ್ನು ಠೇವಣಿ ಮಾಡಬೇಕು” ಎಂದು ಕೇಳಿತ್ತು. ಅಲ್ಲದೆ, ಸುರಂಗದ ದೋಷಯುಕ್ತ ವಿನ್ಯಾಸವನ್ನು ಸರಿಪಡಿಸುವುದರ ಜೊತೆಗೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಲು ಪಿಡಬ್ಯೂಡಿ L&Tಗೆ ಹೇಳಿತ್ತು.

ಪಿಡಬ್ಲೂಡಿ, ತನ್ನ ನೋಟಿಸ್‌ನಲ್ಲಿ ಸುರಂಗದ ನಿರ್ಮಾಣವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಂಸ್ಥೆಯು ವಿಫಲವಾಗಿದೆ ಎಂದು ಹೇಳಿದೆ. ಯೋಜನೆಯ ಟೆಂಡರ್ ಅನ್ನು 2017 ರಲ್ಲಿ ನೀಡಲಾಗಿದ್ದು, 2019 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಅದಾಗ್ಯೂ, ಸುರಂಗವನ್ನು 2022 ರಲ್ಲಿ ಉದ್ಘಾಟಿಸಲಾಗಿತ್ತು. “ನಿರ್ಮಾಣ ಕಾರ್ಯದ ಗುಣಮಟ್ಟದಲ್ಲಿ ರಾಜಿ ಮಾಡುವುದು ಬೇಡ ಎಂಬ ತಿಳುವಳಿಕೆಗೆ ಒಳಪಟ್ಟು ಕಂಪನಿಗೆ ಹೆಚ್ಚು ಸಮಯಾವಕಾಶಗಳ ಈ ರಿಯಾಯಿತಿಗಳನ್ನು ಒದಗಿಸಲಾಗಿದೆ” ಎಂದು ಪಿಡಬ್ಲ್ಯೂಡಿ ಹೇಳಿದೆ.

ವಿಡಿಯೊ ನೋಡಿ: ನಮ್ಮ ಜನರ ಬೆವರಿನ ಹಣ ನಮ್ಗೆ ಕೊಡಿ : ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರದ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *