-ನಾ ದಿವಾಕರ
ಸಾಮಾಜಿಕ ಕ್ಷೋಭೆ , ಸಾಂಸ್ಕೃತಿಕ ಪಲ್ಲಟಗಳು ಮತ್ತು ರಾಜಕೀಯ ವ್ಯತ್ಯಯಗಳ ನಡುವೆ ಸಿಲುಕಿರುವ ಭಾರತೀಯ ಸಮಾಜಕ್ಕೆ ಒಂದು ಹೊಸ ಆಯಾಮ ಬೇಕಿದೆ. ಈಗ ತಾನೇ ಜಗತ್ತಿಗೆ ಕಣ್ತೆರೆಯುತ್ತಿರುವ ಒಂದು ಬೃಹತ್ ಜನಸಮೂಹಕ್ಕೆ ಭಾರತ ನೆಲೆಯಾಗಿದೆ. ಮಿಲೆನಿಯಂ ಮಕ್ಕಳು ಎಂದು ಕರೆಯಲಾಗುವ ಈ ಸಮೂಹಕ್ಕೆ ತನ್ನೆದುರು ಇರುವ ಜಗತ್ತು ಭ್ರಮಾತ್ಮಕ ಮಾತ್ರ ಎಂಬ ಅರಿವು ಮೂಡುತ್ತಿಲ್ಲ. ಏಕೆಂದರೆ ಡಿಜಿಟಲ್ ಯುಗದ ಸಂವಹನ ಮಾಧ್ಯಮಗಳು ಈ ಮಕ್ಕಳ ಅರಿವಿನ ಹಾದಿಗಳಲ್ಲಿ ತಮ್ಮದೇ ಆದ ಮಿಥ್ಯೆಗಳನ್ನು ಸೃಷ್ಟಿಸುವ ಮೂಲಕ, ಲೌಕಿಕ ವಾಸ್ತವಗಳನ್ನು ಮರೆಮಾಚುತ್ತಿವೆ. ಈ ಪ್ರಕ್ರಿಯೆಯ ಹಿಂದೆ ಒಂದು ಸಾಮಾಜಿಕ ವ್ಯವಸ್ಥೆ, ಸಾಂಸ್ಕೃತಿಕ ಭೂಮಿಕೆ ಮತ್ತು ರಾಜಕೀಯ ಶಕ್ತಿ ಇರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಸತ್ಯೋತ್ತರ ಯುಗದಲ್ಲಿ ಸುಳ್ಳುಗಳನ್ನು ವೈಭವೀಕರಿಸಿ ರಂಜನೀಯವಾಗಿ ಪ್ರಸರಣ ಮಾಡುವ ಕಲೆಯನ್ನು ಇಡೀ ಸಮಾಜವೇ ಕರಗತ ಮಾಡಿಕೊಂಡಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ಭಾರತ ವಿಕಾಸದತ್ತ ನಡೆದಿದೆ. ಈ ವಿಕಾಸದ ಪರಿಕಲ್ಪನೆಯಲ್ಲಿ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುಸಂಖ್ಯಾತ ಜನತೆಗೆ ಅಸ್ತಿತ್ವವೇ ಇರುವುದಿಲ್ಲ. ನವ ಉದಾರವಾದ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ಬಲಪಂಥೀಯ ರಾಜಕಾರಣವು ಕಟ್ಟುತ್ತಿರುವ ಆಳ್ವಿಕೆಯ ಚೌಕಟ್ಟುಗಳಲ್ಲಿ ತಳಸಮಾಜದ ಪ್ರಾತಿನಿಧ್ಯವನ್ನೇ ನಿರಾಕರಿಸುವ ಒಂದು ಪ್ರಕ್ರಿಯೆಗೆ ನವ ಭಾರತ ಸಾಕ್ಷಿಯಾಗುತ್ತಿದೆ. ಈ ಬೆಳವಣಿಗೆಯ ನಡುವೆ ಮೂಲ ನೆಲ ಸಂಸ್ಕೃತಿಯ ಔನ್ನತ್ಯ ಮತ್ತು ಔದಾತ್ಯಗಳನ್ನು ನಿರಾಕರಿಸುವ ಸಾಂಪ್ರದಾಯಿಕ ನಿರೂಪಣೆಗಳು ಮತ್ತು ಧಾರ್ಮಿಕ ವ್ಯಾಖ್ಯಾನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಆವರಿಸಿಕೊಂಡು, ಇಡೀ ಸಮಾಜದ ಅಂತರ್ ದೃಷ್ಟಿಯನ್ನು ಭ್ರಷ್ಟಗೊಳಿಸುತ್ತಿವೆ. ಹಾಗಾಗಿಯೇ ಅಂಡ್ರಾಯ್ಡ್ ಜಗತ್ತಿನಲ್ಲಿ ಮುಳುಗಿಹೋಗಿರುವ ಮಿಲೆನಿಯಂ ಸಮಾಜ, ನೆನ್ನೆಗಳನ್ನು ಅರಿಯದೆ, ವರ್ತಮಾನವನ್ನು ಗ್ರಹಿಸದೆ, ಭವಿಷ್ಯತ್ತಿನ ಕತ್ತಲಿನೆಡೆಗೆ ಧಾವಿಸುತ್ತಿದೆ. ಸಾಮಾಜಿಕ
ಈ ಕತ್ತಲ ಹಾದಿಯಲ್ಲಿ ದೀವಿಗೆ ಹಿಡಿಯುವವರು ಯಾರು ? ಹಾದಿಯ ಕಲ್ಲುಮುಲ್ಲುಗಳನ್ನು ತೆರೆಯುವವರು ಯಾರು ? ಡಿಜಿಟಲ್ ಭ್ರಮೆಯ ನಡುವೆ ಮಿಲೆನಿಯಂ ಮಕ್ಕಳಿಗೆ ಸರಿದಾರಿ ತೋರುವವರು ಯಾರು ? ಈ ಪ್ರಶ್ನೆಗಳು ಜಟಿಲವೂ ಸಂಕೀರ್ಣವೂ ಆಗಿದೆ. ಏಕೆಂದರೆ ಈ ಕೈಂಕರ್ಯಗಳಿಗೆ ಮುಂದಾಗಬೇಕಾದ ರಾಜಕೀಯ ವ್ಯವಸ್ಥೆ ಸಂಪೂರ್ಣ ಭ್ರಷ್ಟವಾಗಿ ತನ್ನ ನೈತಿಕ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯು ಪೋಷಿಸುವ ಪಿತೃಪ್ರಧಾನ-ಊಳಿಗಮಾನ್ಯ ಧೋರಣೆಗಳು ದೇಶದ ಮಹಿಳೆಯನ್ನು, ತಳಸಮುದಾಯಗಳನ್ನು, ನಿಕೃಷ್ಟ ಬದುಕು ಸವೆಸುತ್ತಿರುವ ಶ್ರಮಿಕರನ್ನು ಹಾಗೂ ಅವಕಾಶವಂಚಿತರನ್ನು ಮತ್ತಷ್ಟು ಅಂಚಿಗೆ ದೂಡುವ ಅಸ್ತ್ರಗಳಾಗಿ ಪರಿಣಮಿಸುತ್ತಿವೆ. ಈ ಪಲ್ಲಟಗಳನ್ನು ಎದುರಿಸಿ ಸಂವೇದನಾಶೀಲ ಸಮಾಜದ ನಿರ್ಮಾಣದ ಆಲೋಚನೆಗಳನ್ನು ಜನಮಾನಸದ ನಡುವೆ ಕೊಂಡೊಯ್ಯುವುದು ಸಾಂಸ್ಕೃತಿಕ ಜಗತ್ತಿನ ಮೇಲಿದೆ. ಸಾಮಾಜಿಕ
ಇದನ್ನೂ ಓದಿ: ಕುರಿ ಹಿಂಡಿನ ಮೇಲೆ ಹರಿದ ಖಾಸಗಿ ಬಸ್ಸು: 150 ಕ್ಕೂ ಹೆಚ್ಚು ಕುರಿಗಳು ಸಾವು
ಸಾಂಸ್ಕೃತಿಕ ಜವಾಬ್ದಾರಿಯ ನೊಗಹೊತ್ತು
ಸಾಹಿತ್ಯ, ಕಲೆ, ಚಿತ್ರರಂಗ ಮತ್ತು ರಂಗಭೂಮಿಯನ್ನೊಳಗೊಂಡ ಸಾಂಸ್ಕೃತಿಕ ಪ್ರಪಂಚವೊಂದು ಕ್ರಿಯಾಶೀಲವಾಗಿಯೂ, ಸಂವೇದನಾಶೀಲವಾಗಿಯೂ ಸಕ್ರಿಯವಾಗಿದ್ದರೆ ಸಮಾಜದಲ್ಲಿ ಉಂಟಾಗುವ ಪಲ್ಲಟಗಳಿಗೆ ಪ್ರತಿಸ್ಪಂದಿಸುವ ಅವಕಾಶಗಳು ವಿಪುಲವಾಗಿರುತ್ತವೆ. ಈ ಸ್ಪಂದನೆಯ ದನಿಗಳಿಗೂ ಒಂದು ಸ್ಪಷ್ಟ ಆಯಾಮ ದೊರೆಯುತ್ತದೆ. ಆದರೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಚಿತ್ರರಂಗ ಮತ್ತು ಸಾಹಿತ್ಯ ಎರಡೂ ವಲಯಗಳು ವರ್ತಮಾನದ ತಲ್ಲಣಗಳಿಗೆ ಸಮರ್ಪಕವಾಗಿ ಸ್ಪಂದಿಸಲು ವಿಫಲವಾಗಿವೆ. ಹೊಸ ತಲೆಮಾರಿನ ಚಿಂತನೆಗಳು ಈ ಎರಡೂ ಬೌದ್ಧಿಕ ವಲಯಗಳಲ್ಲಿ ಕ್ರಿಯಾಶೀಲವಾಗಿದ್ದರೂ, ಒಟ್ಟಾರೆಯಾಗಿ ನೋಡಿದಾಗ ತಳಸಮಾಜದ ತಲ್ಲಣಗಳಿಗೆ, ತುಡಿತಗಳಿಗೆ ಸ್ಪಂದಿಸುವಂತಹ ಸೃಜನಶೀಲತೆ ಕಾಣುತ್ತಿಲ್ಲ. ಇತ್ತೀಚೆಗೆ ಮುಗಿದ ಸಾಹಿತ್ಯ ಸಮ್ಮೇಳನದಲ್ಲೂ ಇದೇ ಅಭಿಪ್ರಾಯ ಧ್ವನಿಸಿದೆ. ಇದಕ್ಕೆ ಕಾರಣಗಳನ್ನು ಶೋಧಿಸಬೇಕಿದೆ. ಸಾಮಾಜಿಕ
ಆದರೆ ಕನ್ನಡದ ರಂಗಭೂಮಿ ಈ ನಿಟ್ಟಿನಲ್ಲಿ ಹೆಚ್ಚು ಚಲನಶೀಲತೆಯಿಂದ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಹಲವು ಕೊರತೆಗಳ ಹೊರತಾಗಿಯೂ ಕರ್ನಾಟಕದ ರಂಗಭೂಮಿಯನ್ನು ಪ್ರತಿನಿಧಿಸುವ ರಂಗತಂಡಗಳು ಸಾಮಾನ್ಯ ಪ್ರೇಕ್ಷಕರನ್ನು ತಲುಪಲು ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದೆ. ವಿಶೇಷವಾಗಿ ಮೈಸೂರಿನ ರಂಗಭೂಮಿಯ ಬಳಗ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಚರಿತ್ರೆ , ವರ್ತಮಾನ, ಪುರಾಣ ಮತ್ತು ಸಮಕಾಲೀನ ಸಮಾಜದ ತುಡಿತಗಳನ್ನು ಪ್ರೇಕ್ಷಕರ ಮುಂದಿಡುವ ಮೂಲಕ ಮೈಸೂರಿನ ರಂಗತಂಡಗಳು ರಂಗಪ್ರಯೋಗದ ಹೊಸ ಆಯಾಮಗಳನ್ನೂ ಕಂಡುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಆಗಬೇಕಾದ್ದು ಇನ್ನೂ ಸಾಕಷ್ಟಿದೆ ಆದರೆ ಸಮಕಾಲೀನ ಪ್ರಯೋಗಗಳಿಗೆ ಸದಾ ತೆರೆದ ಬಾಗಿಲಾಗಿರುವ ರಂಗಭೂಮಿ ನಿಂತ ನೀರಾಗದೆ ಚಲನಶೀಲತೆಯೊಂದಿಗೆ ಸಾಗುತ್ತಿರುವುದು ಮೈಸೂರಿನ ರಂಗ ಗೆಳೆಯರ ಸಾಧನೆ ಎನ್ನಬಹುದು. ಸಾಮಾಜಿಕ
ನಿರಂತರ ಪಯಣದ ಹಾದಿಯಲ್ಲಿ
ಈ ಹಾದಿಯಲ್ಲಿ ಗುರುತಿಸಬಹುದಾದ ಒಂದು ರಂಗತಂಡ ಎಂದರೆ ಕಳೆದ 25 ವರ್ಷಗಳಿಂದಲೂ ಸಾಂಸ್ಕೃತಿಕ ನೊಗವನ್ನು ಹೊತ್ತು ಇಂದಿಗೂ ಕ್ರಿಯಾಶೀಲವಾಗಿ ಸಾಗುತ್ತಿರುವ ನಿರಂತರ ಫೌಂಡೇಷನ್. ಇಡೀ ಸಮಾಜವನ್ನು ಆವರಿಸಿರುವ ಸಾಂಸ್ಕೃತಿಕ-ಬೌದ್ಧಿಕ ಜಡತ್ವವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಿರಂತರ ಫೌಂಡೇಷನ್ ಹಲವು ಆಯಾಮಗಳ ರಂಗಪ್ರಯೋಗಗಳನ್ನು ಮಾಡುತ್ತಲೇ ಬಂದಿರುವುದಷ್ಟೇ ಅಲ್ಲದೆ, ಪ್ರತಿ ವರ್ಷ ʼನಿರಂತರ ರಂಗೋತ್ಸವʼ ಏರ್ಪಡಿಸುವ ಮೂಲಕ ರಂಗಾಸಕ್ತರಿಗೆ ಹೊಸ ಪ್ರಯೋಗಗಳನ್ನು ತೆರೆದಿಡುತ್ತಿದೆ. ರಂಗಭೂಮಿಯನ್ನು ಕೇವಲ ಥಿಯೇಟರ್ ಒಳಗೆ ಕಟ್ಟಿಹಾಕದೆ, ಸಾಮಾಜಿಕ ಕಾಳಜಿ ಮತ್ತು ಕಳಕಳಿಯನ್ನು ಬಿಂಬಿಸುವ ಮೂಲಕ, ಸುತ್ತಲಿನ ಸಮಾಜದ ವ್ಯತ್ಯಯಗಳಿಗೆ ಸ್ಪಂದಿಸುತ್ತಾ ಬಂದಿರುವ ನಿರಂತರ ಫೌಂಡೇಷನ್ ಸಮಕಾಲೀನ ಆಧುನಿಕತೆಯನ್ನು ಪರಂಪರೆಯೊಂದಿಗೆ ಮುಖಾಮುಖಿಯಾಗಿಸುವ ಮೂಲಕ ತನ್ನ ರಂಗಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದು ಕಾಲದ ಅನಿವಾರ್ಯತೆಯೂ ಹೌದು.
ಈ ವರ್ಷ ನಿರಂತರ ಫೌಂಡೇಷನ್ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಆರು ದಿನಗಳ ರಂಗ ಉತ್ಸವವನ್ನು ಏರ್ಪಡಿಸಿರುವುದು, ಮೈಸೂರಿನ ರಂಗಾಸಕ್ತರಿಗಷ್ಟೇ ಅಲ್ಲದೆ ಸಂಗೀತ-ಕಲಾ ರಸಿಕರಿಗೂ ಆಕರ್ಷಣೀಯವಾಗಿದೆ. ರಂಗಭೂಮಿಯ ಸೌಂದರ್ಯ ಇರುವುದೇ ವೈವಿಧ್ಯತೆ ಮತ್ತು ಪ್ರಯೋಗಶೀಲತೆಯಲ್ಲಿ. ಅಭಿನಯ-ರಂಗಸಜ್ಜಿಕೆ-ರಂಗರೂಪಗಳಿಂದಾಚೆಗೂ ರಂಗಭೂಮಿಗೆ ಇರುವ ಸಾಂಸ್ಕೃತಿಕ ಜವಾಬ್ದಾರಿಯನ್ನು ವರ್ಷಕ್ಕೊಮ್ಮೆ ಆಯೋಜಿಸಬಹುದಾದ ಇಂತಹ ಉತ್ಸವಗಳ ಮೂಲಕ ಪೂರೈಸಲು ಸಾಧ್ಯ. ನಿರಂತರ ಫೌಂಡೇಷನ್ ಈ ವೈವಿಧ್ಯತೆಯನ್ನು ಸಾಕಾರಗೊಳಿಸುವ ರೀತಿಯಲ್ಲಿ ಈ ಬಾರಿಯ ರಂಗ ಉತ್ಸವವನ್ನು ಆಯೋಜಿಸಿರುವುದು ಪ್ರಶಂಸಾರ್ಹ. ವಿಶೇಷ ಎಂದರೆ ಈ ಬಾರಿಯ ಉತ್ಸವದಲ್ಲಿ ಜನಪದ ಕಲಾಭಿವ್ಯಕ್ತಿಗೂ, ಶಾಸ್ತ್ರೀಯ ಸಂಗೀತಕ್ಕೂ ಅವಕಾಶ ಕಲ್ಪಿಸಿರುವುದು ಸ್ತುತ್ಯಾರ್ಹ. ಸಾಮಾಜಿಕ
ರಂಗ ಉತ್ಸವದ ಸೂಕ್ಷ್ಮ ಒಳನೋಟ
ಡಿಸೆಂಬರ್ 25ರಂದು ಮೈಸೂರಿನ ಸಮತೆಂತೋ ಪ್ರಸ್ತುತ ಪಡಿಸುವ ಏಕವ್ಯಕ್ತಿ ರಂಗಪ್ರಯೋಗ “ನೀರ್ಮಾದಳ ಹೂವಿನೊಂದಿಗೆ ” ಪ್ರದರ್ಶನಗೊಳ್ಳಲಿದೆ. ಹಿರಿಯ ಕಲಾವಿದೆ ಇಂದಿರಾ ನಾಯರ್ ಅಭಿನಯದ ಈ ಪ್ರಯೋಗದಲ್ಲಿ, ಶ್ರೀಪಾದಭಟ್ ನಿರ್ದೇಶನದಲ್ಲಿ, ತಮ್ಮ ಜೀವನದುದ್ದಕ್ಕೂ ವಿಪ್ಲವಗಳನ್ನೇ ಎದುರಿಸುತ್ತಾ ಸಾಂಪ್ರದಾಯಿಕ ಸಮಾಜಕ್ಕೆ ಸೆಟೆದು ನಿಲ್ಲುವ ಮೂಲಕ ತಮ್ಮ ಸಾಹಿತ್ಯಕ ಅಭಿವ್ಯಕ್ತಿಯನ್ನು ದಾಖಲಿಸಿರುವ ಕಮಲಾದಾಸ್ ಅವರ ಜೀವನ ಮತ್ತು ವ್ಯಕ್ತಿತ್ವವನ್ನು ಬಿಂಬಿಸುವ ಪ್ರಯತ್ನವಿದೆ. ಸಮಕಾಲೀನ ಸಂದರ್ಭದಲ್ಲಿ ಕಮಲಾದಾಸ್ ಅವರನ್ನು ಹೇಗೆ ನೋಡುವುದು ಎಂಬ ಪರಿಕಲ್ಪನೆಯಲ್ಲಿ ತಯಾರಾಗಿರುವ ಏಕವ್ಯಕ್ತಿ ಪ್ರಯೋಗ, ಆ ಧೀಮಂತ ಸಾಹಿತಿಯ ತಲ್ಲಣಗಳನ್ನೂ, ಆಕೆ ಸಮಾಜಕ್ಕೆ ನೀಡಿದ ಸಂದೇಶವನ್ನೂ ಬಿಂಬಿಸುವ ಪ್ರಯತ್ನವಾಗಿದೆ.
ಡಿಸೆಂಬರ್ 26ರಂದು ವೀರಗಾಸೆ ಜನಪದ ನೃತ್ಯದೊಂದಿಗೆ ಉದ್ಘಾಟನೆಯಾಗಲಿರುವ ನಿರಂತರ ರಂಗ ಉತ್ಸವ ಸಂಜೆ ಏಳು ಗಂಟೆಗೆ ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ವಿರಚಿತ ನಾಟಕವೊಂದರ ಕನ್ನಡ ರೂಪಾಂತರವನ್ನು “ ತಿಂಡಿಗೆ ಬಂದ ತುಂಡೇರಾಯ ” ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಗುತ್ತಿದೆ. ಶಕೀಲ್ ಅಹಮದ್ ನಿರ್ದೇಶನದಲ್ಲಿ ನಿರ್ದಿಗಂತ ತಂಡವು ಪ್ರಸ್ತುತಪಡಿಸುತ್ತಿರುವ ಈ ನಾಟಕವು ಜಗತ್ತನ್ನೇ ಆಂಧಕಾರದತ್ತ ನೂಕಿದ್ದ ಜರ್ಮನಿಯ ನಾಝಿ ಪಕ್ಷದ ಬೆಳವಣಿಗೆ ಮತ್ತು ಹಿಟ್ಲರನ ಕ್ರೂರ ಆಳ್ವಿಕೆಯ ಸುತ್ತ ಘಟನೆಗಳನ್ನು ಪ್ರಸ್ತುತಪಡಿಸುತ್ತದೆ. ಸರ್ವಾಧಿಕಾರಿಯೊಬ್ಬ ಹೇಗೆ ತನ್ನ ಸುತ್ತಲ ಸಮಾಜವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ತನ್ನ ಕ್ರೂರ ಆಧಿಪತ್ಯವನ್ನು ಪಡೆದುಕೊಳ್ಳುತ್ತಾನೆ ಎನ್ನುವ ಚಾರಿತ್ರಿಕ ವಾಸ್ತವವನ್ನು ಈ ನಾಟಕ ತೆರೆದಿಡುತ್ತದೆ.
ಡಿಸೆಂಬರ್ 27ರಂದು ಡಾ. ಹಂಪನಾ ವಿರಚಿತ ದೇಸೀ ಮಹಾಕಾವ್ಯ “ ಚಾರು ವಸಂತ ” ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆಯ ಆಶ್ರಯದಲ್ಲಿ ಜೀವನ್ ರಾಮ್ ಸುಳ್ಯ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಅಮರ ಪ್ರೇಮ ಕಥನವನ್ನು ಸಾಮಾನ್ಯರಿಗೂ ನಿಲುಕುವ ಮಾದರಿಯಲ್ಲಿ ಕಾವ್ಯಾತ್ಮಕವಾಗಿ ಬಿಂಬಿಸುವ ಈ ನಾಟಕವು ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದ್ದು ಸಮಾಜಮುಖಿ ಮತ್ತು ಮಾನವೀಯ ಮೌಲ್ಯಗಳ ನೆಲೆಯಲ್ಲಿ ಸಮನ್ವಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮನುಷ್ಯನ ಸಹಜ ಸ್ವಭಾವವು ಹೇಗೆ ವ್ಯತ್ಯಯಗಳನ್ನು ಗೆಲ್ಲುತ್ತಾ ಒಂದು ವ್ಯಕ್ತಿತ್ವವನ್ನು ನಿರ್ಮಿಸುವ ಹಾದಿಯಲ್ಲಿ ಎದುರಾಗುವ ಅಂಕುಡೊಂಕುಗಳನ್ನು ನಿವಾರಿಸಿಕೊಂಡು ಔನ್ನತ್ಯಕ್ಕೇರಲು ಸಹಾಯ ಮಾಡುತ್ತದೆ ಎನ್ನುವುದನ್ನು ಹಂಪನಾ ಅವರ ಚಾರುವಸಂತ ಕಾವ್ಯಾತ್ಮಕವಾಗಿ ತೆರೆದಿಡುತ್ತದೆ. ಇದೊಂದು ವಿಶಿಷ್ಟ ರಂಗಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಮಾಜಿಕ
ನಾಲ್ಕನೇ ದಿನ ಡಿಸೆಂಬರ್ 28ರಂದು ಸಂಜೆ ಏಳು ಗಂಟೆಗೆ ರಂಗಾಸಕ್ತರನ್ನೂ ಸೆಳೆಯುವ, ಇತ್ತ ಸಂಗೀತ ರಸಿಕರನ್ನೂ ಸೂರೆಗೊಳ್ಳುವ ಶಾಸ್ತ್ರೀಯ ಹಿಂದುಸ್ತಾನಿ ಗಾಯನವನ್ನು ನಮ್ಮ ನಡುವಿನ ಮೇರು ಪ್ರತಿಭೆ “ ಉಸ್ತಾದ್ ಫಯಾಜ್ ಖಾನ್ ” ಪ್ರಸ್ತುತಪಡಿಸಲಿದ್ದಾರೆ. ಖ್ಯಾಲ್ ಸಂಗೀತ ಮತ್ತು ತಬಲಾ ಹಾಗೂ ಸಾರಂಗಿ ವಾದನದಲ್ಲಿ ಪ್ರಾವೀಣ್ಯತೆಯನ್ನೂ, ವಿಶ್ವಖ್ಯಾತಿಯನ್ನೂ ಗಳಿಸಿರುವ ಕಿರಾನಾ ಘರಾನದ ಫಯಾಜ್ ಖಾನ್ ಅವರ ಗಾಯನ ಸಂಗೀತಾಸಕ್ತರಿಗೆ ರಸದೌತಣ ನೀಡುವುದು ನಿಶ್ಚಿತ. ಏಕೆಂದರೆ ಅವರ ಗಾಯನದಲ್ಲಿ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುವ ಒಂದು ಮಾಂತ್ರಿಕ ಶಕ್ತಿ ಅಡಗಿದೆ. ರಂಗ ಉತ್ಸವದಲ್ಲಿ ಶಾಸ್ತ್ರೀಯ ಗಾಯನಕ್ಕೆ ಅವಕಾಶ ಕೊಡುವ ಪ್ರಯತ್ನವೇ ರಂಗಭೂಮಿಯ ವೈವಿಧ್ಯತೆಯನ್ನು ಕಾಪಾಡುವ ಒಂದು ಸಪ್ರಯತ್ನ. ನಿರಂತರ ಫೌಂಡೇಷನ್ ಈ ನಿಟ್ಟಿನಲ್ಲಿ ಕ್ರಿಯಾಶೀಲ ಹೆಜ್ಜೆ ಇಟ್ಟಿದೆ. ಸಂಗೀತ ಮತ್ತು ರಂಗಭೂಮಿಯ ಅವಿನಾಭಾವ ಸಂಬಂಧಕ್ಕೆ ಇದು ಸಾಕ್ಷಿಯಾಗಿ ಕಾಣುತ್ತದೆ. ಸಾಮಾಜಿಕ
ಐದನೇ ದಿನ ಡಿಸೆಂಬರ್ 29ರಂದು ಸಂಜೆ ಏಳುಗಂಟೆಗೆ ರಾಯಚೂರು ಸಮುದಾಯ ಅಭಿನಯಿಸುವ “ರಕ್ತವಿಲಾಪ” ಪ್ರವೀಣ್ ರೆಡ್ಡಿ ಗುಂಜಹಳ್ಳಿ ಅವರ ನಿರ್ದೇಶನದಲ್ಲಿ ಪ್ರದರ್ಶನವಾಗಲಿದೆ. ವಿಕ್ರಂ ವಿಸಾಜಿ ರಚನೆಯ ಈ ನಾಟಕವು ಸತ್ಯ ಮತ್ತು ಸುಳ್ಳಿನ ನಡುವಿನ ತಾತ್ವಿಕ ಸಂಘರ್ಷವನ್ನು ವಿಭಿನ್ನ ಶೈಲಿಯಲ್ಲಿ ಬಿಂಬಿಸುತ್ತದೆ. ದೇಶದಲ್ಲಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಸುಳ್ಳುಗಳೇ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಜಟಿಲ ಸನ್ನಿವೇಶದಲ್ಲಿ ಸತ್ಯಶೋಧನೆ ಎನ್ನುವುದು ಹಿಮಾಲಯ ಚಾರಣದಷ್ಟೇ ಕಠಿಣವೂ, ಸಂಕೀರ್ಣವೂ ಆಗಿದೆ. ರಕ್ತವಿಲಾಪ ನಾಟಕದಲ್ಲಿ ಈ ಹಾದಿಯಲ್ಲಿನ ತುಮುಲಗಳನ್ನು, ಸವಾಲುಗಳನ್ನು ಎದುರಿಸುವ ಸತ್ಯಶೋಧನೆಯ ವಿವಿಧ ಆಯಾಮಗಳನ್ನು ಬಿಂಬಿಸಲಾಗಿದೆ. ವರ್ತಮಾನದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ಎನಿಸಬಹುದಾದ ಪ್ರಯೋಗ ಇದು. ಸಾಮಾಜಿಕ
ಕೊನೆಯ ದಿನ ಡಿಸೆಂಬರ್ 30ರಂದು, ಸಮಾರೋಪ ಸಮಾರಂಭದಲ್ಲಿ ನಗಾರಿ ಮಂಜು ಮೈಸೂರು ಮತ್ತು ತಂಡದವರಿಂದ ನಗಾರಿ ಮತ್ತು ತಮಟೆ ವಾದ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಾನಪದ ಮತ್ತು ರಂಗಭೂಮಿಯ ಸಾಂಸ್ಕೃತಿಕ ನಂಟನ್ನು ಬಿಂಬಿಸುವ ಒಂದು ಪ್ರಯೋಗಶೀಲ ಪ್ರಯತ್ನ ಇದಾಗಿದೆ. ಇದೇ ಸಂಜೆ ಏಳು ಗಂಟೆಗೆ ಭಳರೇ ವಿಚಿತ್ರಂ ಹೆಗ್ಗೋಡು ತಂಡದ ಅಭಿನಯದಲ್ಲಿ ಮಂಜು ಕೊಡಗು ನಿರ್ದೇಶಿಸಿರುವ “ದಶಾನನ ಸ್ವಪ್ನಸಿದ್ಧಿ” ನಾಟಕ ಪ್ರದರ್ಶನಗೊಳ್ಳಲಿದೆ. ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ಕೃತಿಯ ಆಯ್ದ ಭಾಗವನ್ನು ಈ ಪ್ರಯೋಗದಲ್ಲಿ ಪ್ರಸ್ತುಪಡಿಸಲಾಗುತ್ತದೆ. ದೇಸೀ ಶೈಲಿಯಿಂದ ಮಾರ್ಗೀ ಶೈಲಿಯವರೆಗೆ ವಿಸ್ತರಿಸುವ ನಾಟ್ಯಶೈಲಿಯ ಈ ನಾಟಕ ಅಪರೂಪ ಎನಿಸಿಕೊಳ್ಳುವಂತಹ ವಿನ್ಯಾಸ ಮತ್ತು ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಳ್ಳಲಿದೆ.
ಸಮಾಜ ಮತ್ತು ಸಂಸ್ಕೃತಿಯ ಬೆಸುಗೆ
ಕನ್ನಡ ರಂಗಭೂಮಿ ಸಾಂಸ್ಕೃತಿಕ ನೊಗ ಹೊರುವ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವ ಈ ಹೊತ್ತಿನಲ್ಲಿ, ಸಮಕಾಲೀನ ಸಮಾಜವು ಎದುರಿಸುತ್ತಿರುವ ಸಾಂಸ್ಕೃತಿಕ-ಧಾರ್ಮಿಕ-ರಾಜಕೀಯ ಹಾಗೂ ಆರ್ಥಿಕ ಪಲ್ಲಟಗಳನ್ನು ಶೋಧಿಸಿ, ಭೇದಿಸುವಂತಹ ನಾಟಕಗಳು ಹೆಚ್ಚು ಹೆಚ್ಚಾಗಿ ಬರಬೇಕಿದೆ. ನವ ಉದಾರವಾದಿ ಮಾರುಕಟ್ಟೆ ಮತ್ತು ಸಾಂಸ್ಕೃತಿಕ ರಾಜಕಾರಣದ ಜಂಟಿ ದಾಳಿಗೆ ಮುಖಾಮುಖಿಯಾಗುವ ಹಾದಿಯಲ್ಲಿ, ಕೋವಿದ್ ಸಂದರ್ಭದ ವಲಸೆ ಕಾರ್ಮಿಕರನ್ನೂ ಒಳಗೊಂಡಂತೆ ರೈತರು, ಮಹಿಳೆಯರು, ಅಸ್ಪೃಶ್ಯ ಸಮುದಾಯಗಳು, ಆದಿವಾಸಿಗಳು ಎದುರಿಸುತ್ತಿರುವ ಜಟಿಲ ಸಿಕ್ಕುಗಳನ್ನು ಸಮಾಜದ ಮುಂದಿಡುವ ಜವಾಬ್ದಾರಿಯನ್ನೂ ರಂಗಭೂಮಿ ಹೊರಬೇಕಿದೆ. ಈ ನಿಟ್ಟಿನಲ್ಲಿ ಕನ್ನಡದ ರಂಗಭೂಮಿ ಇನ್ನೂ ಕ್ರಮಿಸಬೇಕಾದ ದಾರಿ ಉಳಿದಿದೆ.
ಈ ಸೂಕ್ಷ್ಮ ಕೊರತೆಯನ್ನು ಮನಗಾಣುತ್ತಲೇ, ನಿರಂತರ ಫೌಂಡೇಷನ್ ಏರ್ಪಡಿಸಿರುವ “ ನಿರಂತರ ರಂಗ ಉತ್ಸವ ” ತನ್ನ ವೈವಿಧ್ಯತೆ ಮತ್ತು ಪ್ರಯೋಗಶೀಲತೆಗಾಗಿ ತನ್ನ ಸಾಂಸ್ಕೃತಿಕ ಜವಾಬ್ದಾರಿಯನ್ನು ನಿಭಾಯಿಸುವ, ಸಮಾಜ ಮತ್ತು ಸಂಸ್ಕೃತಿಯನ್ನು ಬೆಸೆಯುವ ಒಂದು ಸಕಾಲಿಕ ಪ್ರಯತ್ನವಾಗಿ ಕಾಣುತ್ತದೆ. ನಿರಂತರ ಫೌಂಡೇಷನ್ ಸಂಸ್ಥೆಯ ಸಮಸ್ತರಿಗೂ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೇ, ರಂಗೋತ್ಸವಕ್ಕೆ ಶುಭಕೋರುತ್ತಾ, ರಂಗ ಉತ್ಸವದ ಭಾಗಿಗಳಾಗಿ ರಂಗಾಸಕ್ತರು ಈ ಪ್ರಯತ್ನವನ್ನು ಸಾರ್ಥಕಗೊಳಿಸಬೇಕಿದೆ.
ಇದನ್ನೂ ನೋಡಿ: “ಕರ್ನಾಟಕದ ಕೃಷಿ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ” ಸಮಾವೇಶ