-ನಾ ದಿವಾಕರ
ಖಿನ್ನ ಮನೋಕಂಪನದ
ಎದೆ ಭಾರಕೆ ಹೃದಯ ತಲ್ಲಣಿಸಿದಾಗ
ಸಹಿಸಲಸದಳ ನೋವಿಗೆ
ದಣಿದ ಜೀವ ಚಡಪಡಿಸುವಾಗ
ಒರಗಲೊಂದು
ಸಾಂತ್ವನದ ಹೆಗಲು ಬೇಕಿದೆ; ಒರತೆ
ಆದಿ-ಅಂತ್ಯವಿಲ್ಲದ ಯಾತನೆಯ
ತಂತುಗಳು
ಗತ ಗಳಿಗೆಗಳ ಕಣಜದಲಿ ಮಿಂದು
ಮಡಿಲ ಭಾವ ನೆನೆದು ಕಂಬನಿಸುವಾಗ
ಒರಗಲೊಂದು
ಸಾಂತ್ವನದ ಹೆಗಲು ಬೇಕಿದೆ ; ಒರತೆ
ತಣ್ಣನೆಯ ಹೊತ್ತಿನಲೂ
ಎದೆಯಾಗ್ನಿಯ ಕತ್ತಲಾವರಿಸಿದಾಗ
ನಿತ್ಯ ಹುಡುಕಾಟದ ಪಯಣದಲಿ
ಮಮತೆಯ ತಂಗಾಳಿ ಕಾಣದಾದಾಗ
ಒರಗಲೊಂದು
ಸಾಂತ್ವನದ ಹೆಗಲು ಬೇಕಿದೆ ;
ಇದನ್ನೂ ಓದಿ: ಸೂಟ್ ಕೇಸ್ನಲ್ಲಿ ಬಾಲಕಿ ಶವ ಪತ್ತೆಯಾದ ಪ್ರಕರಣ: 7 ಮಂದಿ ಬಂಧನ
ಹೆತ್ತೊಡಲ ಕನವರಿಕೆಯಲಿ
ಕಳೆದುಹೋದ ಮಧುರ ಗುರುತುಗಳೆಲ್ಲ
ಸ್ಮೃತಿಪಟಲದಲಿ ನರ್ತಿಸುತ್ತಿರುವಾಗ
ಭಾವಕೋಶದ ಅಣುಅಣುವಿಗೆ
ಒರಗಲೊಂದು
ಸಾಂತ್ವನದ ಹೆಗಲು ಬೇಕಿದೆ ;
ಬತ್ತಿದ ವಾತ್ಸಲ್ಯದ ಕಡಲು
ಕುಸಿದ ಜೀವೋತ್ಸಾಹದ ಏರಿಳಿತದಲಿ
ಚಿಂತೆಗಳ ಮರೆತು ವಿರಮಿಸಲು
ಬಯಸಿದಾಗ
ಅಂತರಂಗದ ಕುಲುಮೆಯ ನಂದಿಸಲು
ಸಾಂತ್ವನದ ಹೆಗಲು ಬೇಕಿದೆ ;
ಪ್ರೀತಿಸುವ ತಾಯ್ಮಡಿಲು ಬೇಕಿದೆ ;
ನಲ್ನುಡಿಗಳ ಹೆತ್ತೊಡಲು ಬೇಕಿದೆ !
ಇದನ್ನೂ ನೋಡಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ | ವಿಶ್ಲೇಷಣೆ – ಅಹಮದ್ ಹಗರೆ Janashakthi Media