ಹಿಮಾಚಲ ಪ್ರದೇಶ | ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ 6 ಕಾಂಗ್ರೆಸ್ ಶಾಸಕರು ಅನರ್ಹ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಕಾಂಗ್ರೆಸ್ ಶಾಸಕರನ್ನು ರಾಜ್ಯದ ಸ್ಪೀಕರ್ ಕುಲದೀಪ್ ಪಠಾನಿಯಾ ಅವರು ಗುರುವಾರ ಅನರ್ಹಗೊಳಿಸಿದ್ದಾರೆ. “ಈ ಆದೇಶವು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ. ಇದು ನ್ಯಾಯಾಂಗ ಪರಿಶೀಲನೆಯ ನಂತರ ಅಂತಿಮತೆಯನ್ನು ಪಡೆಯುತ್ತದೆ” ಎಂದು ಪಠಾನಿಯಾ ಹೇಳಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಉಂಟಾದ ಮುಜುಗರದ ಸೋಲಿನ ನಂತರ ಬಿಕ್ಕಟ್ಟನ್ನು ತಪ್ಪಿಸಲು ಕಾಂಗ್ರೆಸ್‌ನ ಕೇಂದ್ರ ನಾಯಕತ್ವವು ಹರಸಾಹಸ ಮಾಡುತ್ತಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಅವರು ಇಂದು ಬೆಳಿಗ್ಗೆ ಶಿಮ್ಲಾದಲ್ಲಿ ಪಕ್ಷದ ಎಲ್ಲಾ ಶಾಸಕರನ್ನು ಉಪಹಾರ ಸಭೆಗೆ ಕರೆದಿದ್ದಾರೆ. ತಮ್ಮ ರಾಜೀನಾಮೆಯ ಬಗ್ಗೆ ಹರಿದಾಡುತ್ತಿದ್ದ ವರದಿಗಳನ್ನು ಮುಖ್ಯಮಂತ್ರಿ ನಿರಾಕರಿಸಿದ್ದಾರೆ. “ನಾನೊಬ್ಬ ಯೋಧ, ಹೋರಾಡುತ್ತಲೇ ಇರುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಈ ಹಿಂದೆ ಗುಹೆಗೆ, ಈಗ ನೀರಿಗೆ, ಮುಂದಿನ ಬಾರಿ ಚಂದ್ರನಲ್ಲಿಗೆ – ಪ್ರಕಾಶ ರೈ

ಯುವ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಬುಧವಾರ ಬೆಳಿಗ್ಗೆ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಪಕ್ಷದ ಕೇಂದ್ರ ನಾಯಕತ್ವವು ಅವರನ್ನು ಸಂಜೆಯ ವೇಳೆಗೆ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಐಸಿಸಿ ವೀಕ್ಷಕರಾದ ಡಿ.ಕೆ. ಶಿವಕುಮಾರ್, ಭೂಪೇಶ್ ಬಘೇಲ್ ಮತ್ತು ಭೂಪಿಂದರ್ ಸಿಂಗ್ ಹೂಡಾ ಅವರೊಂದಿಗೆ ಸಂಜೆ ನಡೆದ ಸಭೆಯ ನಂತರ, ವಿಕ್ರಮಾದಿತ್ಯ ಸಿಂಗ್ ಅವರು ತಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಆರು ಶಾಸಕರು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ ನಂತರ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರವು ಪತನಗೊಳ್ಳುವ ಅಪಾಯವನ್ನು ಎದುರಿಸುತ್ತಿದೆ. ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿದ ಪರಿಣಾಮವಾಗಿ, ರಾಜ್ಯದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಸೋತಿದ್ದು, ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಗೆಲುವು ಸಾಧಿಸಿದ್ದಾರೆ.

ಅನರ್ಹಗೊಂಡ 6 ಶಾಸಕರು

1) ರಾಜಿಂದರ್ ರಾಣಾ, 57 – ಸುಜಾನ್‌ಪುರ ಶಾಸಕ
2) ಸುಧೀರ್ ಶರ್ಮಾ, 51 – ಧರ್ಮಶಾಲಾ ಶಾಸಕ
3) ಇಂದ್ರದತ್ ಲಖನ್ಪಾಲ್, 61 – ಬಾರ್ಸರ್ ಶಾಸಕ
4) ರವಿ ಠಾಕೂರ್, 61 – ಲಾಹೌಲ್ ಮತ್ತು ಸ್ಪಿತಿ ಶಾಸಕ
5) ಚೈತನ್ಯ ಶರ್ಮಾ, 29 – ಗ್ಯಾಗ್ರೆಟ್ ಶಾಸಕ
6) ದೇವಿಂದರ್ ಭುಟ್ಟೊ, 50 – ಕುಟ್ಲೆಹಾರ್ ಶಾಸಕ

ಇದನ್ನೂ ಓದಿ: ಸುಳ್ಳು ಹೇಳಿದ ಬಿಜೆಪಿ ನಾಯಕರು; ಅದನ್ನು ಹರಡಿದ ಪ್ರಜಾವಾಣಿ ಸಹಿತ ಕನ್ನಡದ ಮಾಧ್ಯಮಗಳು!

ಇಂದು ಪಕ್ಷದ ವೀಕ್ಷಕರಾದ ಡಿ.ಕೆ. ಶಿವಕುಮಾರ್, ಭೂಪೇಶ್ ಬಘೇಲ್ ಮತ್ತು ಭೂಪಿಂದರ್ ಸಿಂಗ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಅವರು ನಿನ್ನೆ ಶಿಮ್ಲಾದಲ್ಲಿ ಪಕ್ಷದ ಶಾಸಕರೊಂದಿಗೆ ಮಾತನಾಡಿದ್ದಾರೆ. ವೀಕ್ಷಕರು ಸಲ್ಲಿಸುವ ವರದಿಯಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಅವರ ಸರ್ಕಾರದ ಭವಿಷ್ಯವಿದೆ.

ಈ ನಡುವೆ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರೊಂದಿಗೆ 20 ಶಾಸಕರು ಅಧಿಕೃತ ನಿವಾಸಕ್ಕೆ ಆಗಮಿಸಿದ್ದಾರೆ. ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ವೀಕ್ಷಕರು ಇಂದು ಪಕ್ಷದ ಶಾಸಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಸೂಚಿಸಿವೆ.

ಓಕ್ ಓವರ್‌ಗೆ ಪ್ರವೇಶಿಸುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕರು, ತಮ್ಮ ಸರ್ಕಾರ ಸ್ಥಿರವಾಗಿದೆ ಮತ್ತು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರನ್ನು ಬದಲಾಯಿಸುವ ಬಗ್ಗೆ ಯಾವುದೇ ಚರ್ಚೆಯಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ಮಧ್ಯೆ, ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಪರವಾಗಿ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಅಡ್ಡ ಮತದಾನದ ಮಾಡುದ್ದ ಆರು ಬಂಡಾಯ ಶಾಸಕರಿಗೆ ಆಹ್ವಾನ ನೀಡಲಾಗಿಲ್ಲ ಎಂದು ವರದಿಯಾಗಿದೆ.

ವಿಡಿಯೊ ನೋಡಿ: ನಾವು ಸಂಸತ್ತಿನಲ್ಲಿ ಇಲ್ಲದೇ ಇರಬಹುದು, ಆದ್ರೆ ಜನರ ಮನಸ್ಸಿನಲ್ಲಿದ್ದೇವೆ: ಮುನೀರ್ ಕಾಟಿಪಳ್ಳ Janashakthi Media

Donate Janashakthi Media

Leave a Reply

Your email address will not be published. Required fields are marked *