ನವದೆಹಲಿ: ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.
ಭೇಟಿ ವೇಳೆ ತಮ್ಮ ಎರಡೂ ಇಲಾಖೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿಪರ ಕಾರ್ಯಕ್ರಮಗಳ ಬಗ್ಗೆ ಸಚಿವರು ರಾಷ್ಟ್ರಪತಿಗಳಿಗೆ ವಿವರಣೆ ನೀಡಿದರು.
ಪ್ರಧಾನಿಗಳ ಆತ್ಮನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ವಿಕಸಿತ ಭಾರತ ಗುರಿಯನ್ನು ಮುಟ್ಟಲು ಕೈಗೊಳ್ಳಲಾಗಿರುವ ಸರ್ವ ಕ್ರಮಗಳ ಬಗ್ಗೆಯೂ ಸಚಿವರು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದರು.
ರಾಷ್ಟ್ರದಲ್ಲಿ 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, ಆ ಹಿನ್ನಲೆಯಲ್ಲಿ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಯ ಪುನಶ್ಚೇತನಕ್ಕೆ 11,400 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅಲ್ಲದೆ, ಬೋಕಾರೋ ಉಕ್ಕು ಸ್ಥಾವರದಲ್ಲಿ ಕೈಗೊಳ್ಳಲಾಗುತ್ತಿರುವ 20,000 ಕೋಟಿ ರೂ.ಗಳ ವಿಸ್ತರಣಾ ಯೋಜನೆಯ ಬಗ್ಗೆ ಕೂಡಾ ಸಚಿವರು ವಿವರಣೆ ನೀಡಿದರು.
ಬೃಹತ್ ಕೈಗಾರಿಕೆ ವಲಯದಲ್ಲಿ ತರಲಾಗಿರುವ ಸುಧಾರಣಾ ಕ್ರಮಗಳು ಹಾಗೂ ಪಿಎಂ ಇ ಡ್ರೈವ್ ಬಗ್ಗೆಯೂ ಹೆಚ್ಡಿಕೆ ರಾಷ್ಟ್ರಪತಿಗಳಿಗೆ ವಿವರಣೆ ಕೊಟ್ಟರು.