ಹಟ್ಟಿ ಪಟ್ಟಣ| ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ ಜಂಟಿ ಸಂಘಟನೆಗಳ ಬೃಹತ್‌ ಪ್ರತಿಭಟನೆ

ಹಟ್ಟಿ: ಹಟ್ಟಿ ಪಟ್ಟಣಕ್ಕೆ ಮೂಲಭೂತ ಸೌಕರ್ಯಕ್ಕಾಗಿ  ಸಿಐಟಿಯು, ಎಸ್ಎಫ್ಐ, ಡಿವೈಎಫ್ಐ, ಕೆಪಿಆರ್ ಎಸ್, ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್  ಯೂನಿಯನ್ ಜಂಟಿ ಸಂಘಟನೆಗಳಿಂದ ಬುಧವಾರದಂದು ಕೋಠಾ ಕ್ರಾಸ್‌ನಿಂದ ಪಟ್ಟಣ ಪಂಚಾಯಿತಿಯವರೆಗೆ  ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹಟ್ಟಿ ಪಟ್ಟಣದ ಕಾಮ್ರೇಡ್ ಅಮರಗುಂಡಪ್ಪ ಬಸ್ ನಿಲ್ದಾಣದ ಜಾಗ ಒತ್ತುವರಿಯಾಗಿ  ಬಸ್‌ಗಳು ನಿಲ್ಲಿಸಲು ಮತ್ತು ಸಾರ್ವಜನಿಕರು ನಿಲ್ಲಲು ಜಾಗವಿಲ್ಲದಂತಾಗಿದೆ. ಕೋರ್ಟ್ ಒತ್ತುವರಿ ಜಾಗ ತೆರವುಗೊಳಿಸಲು 1980 ರಲ್ಲಿ ಆದೇಶ ನೀಡಿದರೂ ತೆರವುಗೊಳಿಸಿಲ್ಲ ಎಂದು ಹಟ್ಟಿ ಪಟ್ಟಣದ ಜಂಟಿ ಸಂಘಟನೆಗಳಿಂದ  ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಮಾತನಾಡಿ, ಪಟ್ಟಣದಲ್ಲಿ ಕುಡಿಯಲು ನೀರಲ್ಲದೆ ಹಟ್ಟಿಯನ್ನು ತ್ಯಜಿಸಿ ಪಕ್ಕದ ಹಳ್ಳಿಗೆ ಗುಳೆ ಹೊರಟಿದ್ದಾರೆ. ಮತ್ತು ಇಲ್ಲಿ ವಾಸಿಸುವ ಕುಟುಂಬಗಳು ದಿನನಿತ್ಯ ನೀರಿಗಾಗಿ ಸೈಕಲ್, ಬೈಕ್, ಟ್ಯಾಂಕರ್, ಆಟೋಗಳನ್ನು ಅವಲಂಬಿಸಿ, ಕಿಲೋಮೀಟರ್ ಗಟ್ಟಲೆ ಅಲೆದು ನೀರು ತರುವಂತಾಗಿದೆ. ಇದರಿಂದ ಜನರ ಜೀವನ ತೀವ್ರ ಅಸ್ತ ವ್ಯಸ್ತಗೊಂಡಿದೆ. ಹಟ್ಟಿ ಪಟ್ಟಣ ಪಂಚಾಯಿತಿಗೆ ನೂರಾರು ಕೋಟಿ ಅನುದಾನ ಬಂದರೂ ನೀರು ಕೊಡಲು ಸ್ಥಳೀಯ ಆಡಳಿತ ಹಾಗೂ ಶಾಸಕರು ವಿಫಲವಾಗಿದೆ ಎಂದು ತೀವ್ರವಾಗಿ ಖಂಡಿಸಿದರು.

ಮಂಡಲ್ ಪಂಚಾಯತಿಯ ಮಾಜಿ ಅಧ್ಯಕ್ಷ ನರಸಿಂಹ ಬಾನ್ ಠಾಕೂರ್ ಮಾತನಾಡಿ, ಹಟ್ಟಿ ಪಟ್ಟಣದ ಜತ್ತಿ ಕಾಲೋನಿ ಕಡೆ ಹೋಗುವ ರಸ್ತೆ ತುಂಬಾ ಗುಂಡಿ ಬಿದ್ದಿವೆ. ಪ್ರಸ್ತುತ ಕಾಕಾ ನಗರದಲ್ಲಿ ನಡೆದ ಬ್ರಿಡ್ಜ್ ಕಾಮಗಾರಿ ಎಸ್ಟಿಮೇಟ್ ನಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಇದ್ದರೂ ಸಹ ರಸ್ತೆ ನಿರ್ಮಾಣವಾಗಿಲ್ಲ. ಈ ಕೂಡಲೇ ರಸ್ತೆಯನ್ನು ಸಹ ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಹಾಗೂ ಹಟ್ಟಿ ಪಟ್ಟಣ ಮತ್ತು ರಸ್ತೆಗಳು ಕೋಳಿ ಪುಚ್ಚ , ಪ್ಲಾಸ್ಟಿಕ್, ಇತರೆ ವಸ್ತುಗಳಿಂದ ಮಲೀನವಾಗಿದ್ದು, ಕೂಡಲೇ ಈ ಕಸ ವಿಲೇವಾರಿ ಘಟಕ ನಿರ್ಮಿಸಿ ಸರಿಯಾದ ಸಮಯಕ್ಕೇ ಕಸ ವಿಲೇವಾರಿ ನೈರ್ಮಲ್ಯ ಕಾಪಾಡಿ ಜನರ ಆರೋಗ್ಯ ಕಾಪಾಡಬೇಕು.

ದೇಶಕ್ಕೆ ಸ್ವಾತಂತ್ರ್ಯ ಬಂದು 76  ವರ್ಷಗಳು ಕಳೆದರೂ ಹಟ್ಟಿಯಲ್ಲಿ ಸತ್ತ ಹೆಣಗಳನ್ನು ಹೂಳಲು ರುದ್ರ ಭೂಮಿಯು ಇಲ್ಲದಂತಾಗಿದೆ. ಕೂಡಲೇ ಭೂಮಿಯನ್ನು ಖರೀದಿಸಿ ರುದ್ರ ಭೂಮಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಬರ ಪರಿಹಾರ ವಿತರಣೆಯಲ್ಲಿ ಕೇಂದ್ರದ ತಾರತಮ್ಯ – ಎಂ.ಬಿ ಪಾಟೀಲ್ ಆರೋಪ

ಹಟ್ಟಿ ಪಟ್ಟಣದಲ್ಲಿ ಮಟಕಾ, ಗಾಂಜಾ, ಇಸ್ಪೀಟ್, ಕ್ರಿಕೆಟ್  ಬೆಟ್ಟಿಂಗ್ ದಂಧೆ ಹೆಚ್ಚಾಗಿದ್ದು, ವಿದ್ಯಾರ್ಥಿ ಯುವಜನ ರೈತರು ಕಾರ್ಮಿಕರು ಸಂಪೂರ್ಣವಾಗಿ ಇದಕ್ಕೆ ಬಲಿಯಾಗಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಇದಕ್ಕೆ ಕಡಿವಾಣ ಆಗಬೇಕು.  ಮತ್ತು ವಿದ್ಯಾರ್ಥಿ ಯುವಜನರ ಭವಿಷ್ಯ ರೂಪಿಸಲು ಉತ್ತಮ ವ್ಯವಸ್ಥೆ ಇರುವ ವ್ಯವಸ್ಥಿತವಾದ ಗ್ರಂಥಾಲಯವನ್ನು ನಿರ್ಮಿಸಬೇಕು. ಹಟ್ಟಿ ಪಟ್ಟಣದಲ್ಲಿ ಎಲ್ಲಾ ಸಿಎ ಸೈಟುಗಳನ್ನು ಒತ್ತುವರಿ ಮಾಡಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿ ನಾಗರಿಕ ಸೌಲಭ್ಯಕ್ಕೆ ಅನುಕೂಲವಾಗುವ ಗ್ರಂಥಾಲಯ ಪಾರ್ಕ್ ಭವನಗಳನ್ನು ನಿರ್ಮಿಸಬೇಕು ಹಾಗೂ ಹಟ್ಟಿಯ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದು  ಜಂಟಿ ಸಂಘಟನೆಗಳು ಸರ್ಕಾರವನ್ನು  ಒತ್ತಾಯಿಸಿದ್ದಾವೆ.

15 ದಿನಗಳ ಒಳಗಾಗಿ ಎಲ್ಲಾ ಬೇಡಿಕೆಗಳ ಕುರಿತಂತೆ ಲಿಖಿತವಾಗಿ ಉತ್ತರ ನೀಡಬೇಕು.  ನಿರ್ಲಕ್ಷ್ಯ ತೋರಿದರೆ ಹಟ್ಟಿ ಪಟ್ಟಣದ ಹಳೆ ಬಸ್ ಸ್ಟಾಂಡ್ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದೆ.

ಈ  ಸಂದರ್ಭದಲ್ಲಿ ನರಸಿಂಹ ಬಾನ್ ಠಾಕೂರ್. ರಮೇಶ ವೀರಾಪೂರು, ಎಸ್ಎಫ್ಐ ಜಿಲ್ಲಾಧ್ಯಕ್ಷ   ಸಿಐಟಿಯು ಹಟ್ಟಿ ಘಟಕ ಗೌರವಾಧ್ಯಕ್ಷರು  ಕೆಪಿಆರ್ ಎಸ್ ಮುಖಂಡರು ಹಾಗೂ ಸಿಐಟಿಯು ಮುಖಂಡರಾದ  ಅಮರೇಶ  ಗುರಿಕಾರ, ಮಹ್ಮದ್ ಹನೀಫ್, ಹಸನತ ಅಲಿ, ಬಾಬು ಸಾಗರ್, ಅಲ್ಲಾಭಕ್ಷ, ಅಂಜು ಕುಮಾರ್, ವೆಂಕಟೇಶ ಮೇದಿನಾಪೂರು, ಆಟೋ ಚಾಲಕರ ಸಂಘದ ಅಧ್ಯಕ್ಷ ಮಹಿಬೂಬ್ ಖುರೇಶಿ, ಕಾರ್ಯದರ್ಶಿ ಬಸವಲಿಂಗ, ಶೇಕ್ ಮಹಮ್ಮದ,  ಕೆಪಿಆರ್ ಎಸ್  ಮುಖಂಡರಾದ ನಿಂಗಪ್ಪ ಎಂ., ವೆಂಕೋಬ ಕಲ್ಲು, ಶೌಕತ್ ಅಲಿ, ಜಗದೀಶ್ ಆನ್ವರಿ, ಡಿವೈಎಫ್ಐ ನ ಕಾಶಿಪತಿ ತವಗ, ಆಟೋ ಚಾಲಕ ಸಂಘದ ಇಸ್ಮಾಯಿಲ್, ಮಹಿಬು ಲಾಲ್ ಗಡಿ, ಚಂದ್ರು, ಸಲೀಂ ಅಜ್ಮೀರ್, ಬಸವರಾಜ, ಅಮರೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಡಿಯೋ ನೋಡಿ: ಗೂಗಲ್ ಮತ್ತು ಯುಟ್ಯೂಬ್ ಹ್ಯಾಕ್ ಆಗದಂತೆ ಎಚ್ಚರಿಕೆ ವಹಿಸೋದು ಹೇಗೆ? – ಡಾ. ಎನ್. ಬಿ. ಶ್ರೀಧರ್ Janashakthi Media

Donate Janashakthi Media

Leave a Reply

Your email address will not be published. Required fields are marked *