ಗ್ಯಾನ್‌ವಾಪಿ ಮಸೀದಿ ಕುರಿತು ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಅಗತ್ಯವಿರಲ್ಲ: ಬೃಂದಾ ಕಾರಟ್

ಕಲಬುರಗಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಗ್ಯಾನ್‌ವಾಪಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ನಿಲುವು ಅಕ್ಷಮ್ಯ ಹಾಗೂ ದೇಶಕ್ಕೆ ತಪ್ಪು ಸಂದೇಶ ನೀಡುವಂತಿದೆ. ಗ್ಯಾನ್‌ವಾಪಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಅಗತ್ಯ ಇರಲಿಲ್ಲ. ದೇಶದ ಶಾಂತಿ, ಸುವ್ಯವಸ್ಥೆ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಬೇಕಾದವರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸಿರುವುದು ಆತಂಕ ಮೂಡಿಸುವಂತಿದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯೂರೋ ಸದಸ್ಯೆ ಬೃಂದಾ ಕಾರಟ್‌ ಹೇಳಿದ್ದಾರೆ.

ಕಲಬುರಗಿಯ ಪತ್ರಿಕಾ ಭವನದಲ್ಲಿ ಇಂದು(ಮೇ 22) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಸುಪ್ರೀಂ ಕೋರ್ಟ್‌ನಿಂದ ಅಪಾರವಾದ ನಿರೀಕ್ಷೆಗಳಿದ್ದವು. ಐತಿಹಾಸಿಕ ತಪ್ಪುಗಳಿಗೆ ಆದ್ಯತೆ ನೀಡುವುದರಿಂದ ದೇಶದ ಆಂತರಿಕ ಭದ್ರತೆ ಮತ್ತು ಭಾವೈಕ್ಯತೆ ಹದಗೆಡಬಹುದು ಎಂಬ ಮುಂದಾಲೋಚನೆಯಿಂದ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆ – 1991 ಜಾರಿಗೆ ತರಲಾಗಿದೆ. ಆದರೆ, ಗ್ಯಾನ್‌ವಾಪಿ ಪ್ರಕರಣದಲ್ಲಿ ಈ ಕಾಯಿದೆಯನ್ನು ಉಲ್ಲೇಖಿಸದೆ ಸುಪ್ರೀಂ ಕೋರ್ಟ್ ನಿರಾಶೆ ಮೂಡಿಸಿದೆ ಎಂದು ಹೇಳಿದರು.

ಇದನ್ನು ಓದಿ: ಗ್ಯಾನ್‌ವಾಪಿ ಮಸೀದಿಯ ಆವರಣದೊಳಗೆ ವೀಡಿಯೋ ಚಿತ್ರಣಕ್ಕೆ ಅವಕಾಶ: ಸಿಪಿಐ(ಎಂ) ಕಳವಳ

ಅಯೋಧ್ಯೆ ಪ್ರಕರಣದಲ್ಲಿ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆ – 1991 ರ ಅನ್ವಯ ದೇಶದ ಹಿತ ಕಾಪಾಡುವ ಕುರಿತು ಸುಪ್ರೀಂ ಕೋರ್ಟ್ ಮಾತನಾಡಿತ್ತು. ಆದರೆ, ಗ್ಯಾನ್‌ವಾಪಿ ಪ್ರಕರಣದಲ್ಲಿ ಆ ಕಾಯಿದೆಯನ್ನು ಉಲ್ಲೇಖಿಸದೆ, ಅದರ ಸಮರ್ಪಕ ಬಳಕೆಗೆ ಮುಂದಾಗದೆ ತಪ್ಪು ಸಂದೇಶ ರವಾನಿಸಿದೆ ಎಂದು ಹೇಳಿದರು.

ಐತಿಹಾಸಿಕ ತಪ್ಪುಗಳಿಗೆ ಆದ್ಯತೆ ನೀಡುವುದರಿಂದ ದೇಶದ ಆಂತರಿಕ ಭದ್ರತೆ ಮತ್ತು ಭಾವೈಕ್ಯತೆ ಹದಗೆಡಬಹುದು. ಈ ಕಾರಣಕ್ಕಾಗಿಯೇ ಮುಂದಾಲೋಚನೆಯಿಂದ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆ – 1991 ಜಾರಿಗೆ ತರಲಾಗಿದೆ ಎಂದರು.

ಗ್ಯಾನ್‌ವಾಪಿ ಮಸೀದಿ ವಿವಾದದ ಬೆನ್ನಲ್ಲೇ ಮಥುರಾ ಶ್ರೀ ಕೃಷ್ಣ ದೇಗುಲದ ಪ್ರಕರಣವೂ ಮುನ್ನೆಲೆಗೆ ಬರುತ್ತಿವೆ. ಆ ಮೂಲಕ ಸ್ವಾರ್ಥ ರಾಜಕಾರಣಕ್ಕಾಗಿ ದೇಶಾದ್ಯಂತ ಶಾಂತಿಭಂಗಗೊಳಿಸುವ ಕೆಲಸವನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿಯಿಂದ ನಡೆಯುತ್ತಿವೆ ಎಂದು ಬೃಂದಾ ಕಾರಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *