ಗುಜರಾತ್: ದಲಿತರ ಮೇಲಿನ ದೌರ್ಜನ್ಯಗಳು ನಡೆತ್ತಿರುವುದು ಹೆಚ್ಚಾಗುತ್ತಲೇ ಇವೆ. ದೇಶದ ವಿವಿಧ ಭಾಗಗಳಲ್ಲಿ ದಲಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗುತ್ತಿದೆ. ಇದೀಗ ಉತ್ತರ ಭಾರತದ ಒಂದೆಡೆ ತನ್ನ ವಿವಾಹದ ದಿನ ಕುದುರೆ ಏರಿಕೊಂಡು ಪೇಟ ಧರಿಸಿಕೊಂಡು ಬಂದ ವರನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ಉತ್ತರ ಗುಜರಾತ್ನಲ್ಲಿರುವ ಬನಸ್ಕಾಂತ ಎಂಬಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿದ್ದು ಮೋಟಾ ಗ್ರಾಮದ 28 ಮಂದಿಯ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಮೇಲ್ಜಾತಿಯ ರಜಪೂತ್ ಸಮುದಾಯದ ಸರ್ಪಂಚ್ ಸೇರಿಕೊಂಡಂತೆ ದಲಿತ ವರನ ಮದುವೆ ದಿಬ್ಬಣದ ಮೇಲೆ ದಾಳಿ ಮಾಡಿದ್ದರಿಂದ ಅವರ ವಿರುದ್ಧ ಕೇಸು ದಾಖಲಿಸಲಾಗಿದೆ. ಸಂಪ್ರದಾಯಿಕವಾದ ತಲೆಗೆ ಧರಿಸುವ ಸಫಾ ಎಂಬ ಉಡುಗೆ ಧರಿಸಿದ್ದಕ್ಕೆ ಮೇಲ್ಜಾತಿಯವರು ಆಕ್ರಮಣ ಮಾಡಿದ್ದಾರೆ. ಕಲ್ಲು ತೂರಾಟದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.
ಈ ಹಿಂದೆ ವರ ಕುದುರೆ ಏರಿ ಬರಬಾರದು ಎಂದು ಬೆದರಿಕೆ ಹಾಕಿದ್ದಲ್ಲದೆ ಶಾಂತಿಯುತ ಮದುವೆಯಾಗಿ ಎಂಬ ಎಚ್ಚರಿಕೆ ಸಂದೇಶವನ್ನು ನೀಡಿದ್ದರು.
ಪಾಲನಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 506 (ಅಪರಾಧ ಬೆದರಿಕೆ) ಮತ್ತು ಪರಿಶಿಷ್ಟರ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಗಢ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಕುಶಾಲ್ ಓಜಾ ಅವರು ತಿಳಿಸಿದ್ದಾರೆ.
ಇನ್ನೂ ಯಾರನ್ನು ಬಂಧಿಸಿಲ್ಲ
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿಸಿದ ಕುಶಾಲ್ ಓಜಾ, ಮದುವೆ ಮೆರವಣಿಗೆ ಗ್ರಾಮದಲ್ಲಿ ಸಾಗುತ್ತಿದ್ದಾಗ ಅಪರಿಚಿತ ಜನರು ಎರಡರಿಂದ ಮೂರು ಕಲ್ಲುಗಳನ್ನು ಎಸೆದರು. ವರನ ಸಂಬಂಧಿಕರೊಬ್ಬರಿಗೆ ಗಾಯವಾಗಿದೆ, ನಾವು ಎಫ್ಐಆರ್ ದಾಖಲಿಸಿ ಎಸ್ಸಿ/ಎಸ್ಟಿ ವಿಭಾಗದ ಡಿವೈಎಸ್ಪಿಗೆ ತನಿಖೆಯನ್ನು ಹಸ್ತಾಂತರಿಸಿದ್ದೇವೆ ಎಂದಿದ್ದಾರೆ.
ಘಟನೆ ಹಿನ್ನೆಲೆ
ವಿರಾಭಾಯಿ ಸೆಖಾಲಿಯಾ ಎಂಬ ವ್ಯಕ್ತಿ ತಮ್ಮ ಕಿರಿಯ ಮಗ ಅತುಲ್ ಅವರ ವಿವಾಹವನ್ನು ಫೆಬ್ರವರಿ 7 ರಂದು ಹತ್ತಿರದ ಹಳ್ಳಿಯ ಹುಡುಗಿಯೊಂದಿಗೆ ನಿಶ್ಚಯಿಸಿದ್ದರು. ಗ್ರಾಮದ ಸರಪಂಚ್ ಭರತ್ಸಿನ್ಹ ರಜಪೂತ್ ಮತ್ತು ಮೋಟಾದ ಇತರ ಕೆಲವು ಪ್ರಮುಖ ನಿವಾಸಿಗಳು ಅತುಲ್ ಸೆಖಾಲಿಯಾ ತನ್ನ ಮದುವೆಯ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಾರೆ ಎಂದು ತಿಳಿದಾಗ, ಅವರು ಮದುಮಗನ ತಂದೆಗೆ ಕರೆ ಮಾಡಿ, ಈ ರೀತಿ ಮಾಡಿದರೆ ಮುಂದೆ ಆಗುವ ಪರಿಣಾಮ ಎದುರಿಸುವಂತೆ ಬೆದರಿಸಿದ್ದರು. ಕುಟುಂಬದವರು ಈ ನಿರ್ಧಾರಕ್ಕೆ ದೃಢವಾದ ಹಿನ್ನೆಲೆಯಲ್ಲಿ ಸರಪಂಚ್ ಗ್ರಾಮಸ್ಥರ ಸಭೆ ಕರೆದು ಬಹಿರಂಗ ಎಚ್ಚರಿಕೆ ಕೊಟ್ಟಿದ್ದರು.
ಸೆಖಾಲಿಯಾ ಕುಟುಂಬವು ಹಿಂಸೆ ತಪ್ಪಿಸಲು ಅತುಲ್ ಕುದುರೆ ಸವಾರಿ ಮಾಡುವ ಆಲೋಚನೆಯನ್ನು ಕೈಬಿಟ್ಟಿದ್ದರು. ಆದರೆ ಮದುವೆಯ ಮೆರವಣಿಗೆಯನ್ನು ನಡೆಸಲು ಪೊಲೀಸ್ ರಕ್ಷಣೆಯನ್ನು ಕೋರಿದರು. ಪೊಲೀಸ್ ರಕ್ಷಣೆಯಲ್ಲಿ ಮೆರವಣಿಗೆ ಪ್ರಾರಂಭವಾಗಿ ಹಾಲಿನ ಅಂಗಡಿಯೊಂದರ ಬಳಿ ತಲುಪಿದಾಗ, ಕೆಲವು ಆರೋಪಿಗಳು ಮೆರವಣಿಗೆಯ ಸದಸ್ಯರು ‘ಸಫಾ’ (ಪೇಟಗಳನ್ನು) ಧರಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರದಲ್ಲಿ ವಾಗ್ವಾದ ನಡೆದು ಕಲ್ಲು ತೂರಾಟ ಸಂಭವಿಸಿ ಹಲ್ಲೆ ನಡೆದಿದೆ.
