9 -10ನೇ ತರಗತಿ ಆರಂಭಕ್ಕೆ ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 2021-22ನೆ ಶೈಕ್ಷಣಿಕ ವರ್ಷದ ಶಾಲೆಗಳನ್ನು 9 ಮತ್ತು 10ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಹಲವಾರು ನಿರ್ಬಂಧಗಳಿರುವ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಶಾಲೆಗೆ ಬರುವ ಮಕ್ಕಳು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಲೇಬೇಕೆಂದು ತಿಳಿಸಲಾಗಿದೆ.

ಇದೇ ಆಗಸ್ಟ್‌ 23ರಿಂದ ಕೋವಿಡ್-19ರ ಸೋಂಕಿನ ಪ್ರಮಾಣ ಶೇಕಡ 2ಕ್ಕಿಂತ ಕಡಿಮೆ ಇರುವ ರಾಜ್ಯದ ಜಿಲ್ಲೆಗಳಲ್ಲಿ ಶಾಲಾ ತರಗತಿಗಳನ್ನು ಆರಂಭಿಸಲು ಸೂಚಿಸಲಾಗಿದೆ.  ವಿದ್ಯಾರ್ಥಿಗಳಿಗೆ ಪ್ರತಿನಿತ್ಯ `ಅರ್ಧದಿನ’ ಪೂರ್ಣ ಪ್ರಮಾಣದಲ್ಲಿ ಬೊಧನಾ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಇದನ್ನು ಓದಿ: ನೂತನ ಶೈಕ್ಷಣಿಕ ಮಾರ್ಗಸೂಚಿ ಪ್ರಕಟ: 2021-2022ರ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ

1ರಿಂದ 8ನೆ ತರಗತಿ ಆರಂಭ ಸದ್ಯಕ್ಕೆ ಇಲ್ಲ. ಅಲ್ಲದೆ, ಸೋಂಕಿನ ಪ್ರಮಾಣ ಶೇ.2ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ 1 ರಿಂದ 10ನೆ ತರಗತಿಗಳಿಗೆ ಪರ್ಯಾಯ ವಿಧಾನದಲ್ಲಿ ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಗಳನ್ನು ಮುಂದುವರೆಸಲು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ಶಾಲೆ ಆರಂಭಕ್ಕೂ ಮುನ್ನ ಸ್ವಚ್ಚತೆ ಮಾಡಿರಬೇಕು. ಒಂದು ಕೊಠಡಿಯಲ್ಲಿ ಕೇವಲ 20 ಮಕ್ಕಳಿಗೆ ಮಾತ್ರ ಅವಕಾಶ. ಶಾಲಾ ಆವರಣದಲ್ಲಿ ಇತರ ವ್ಯಕ್ತಿಗಳಿಗೆ ನಿರ್ಬಂಧ. ಒಂದು ಬೆಂಚ್ ನಲ್ಲಿ ಒಂದೇ ಮಗುವಿಗೆ ಕೂರಲು ಅವಕಾಶವಿದೆ. ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಮತ್ತು ಮಾಸ್ಕ್ ಬಳಸುವಂತೆ ಸೂಚನೆ ನೀಡಿದ್ದು, ಕಡ್ಡಾಯವಾಗಿ ವಿದ್ಯಾರ್ಥಿಗಳು ಕೊರೊನಾ ನೆಗಟಿವ್ ರಿಪೋರ್ಟ್ ತರಲೇಬೇಕು.

ಬಿಸಿನೀರು , ಸ್ಯಾನಿಟೈಸ್ ಕಡ್ಡಾಯವಾಗಿದ್ದು, ಮಕ್ಕಲು ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ. ಹೊರಗಡೆಯಿಂದ ಬಂದವರು ಮಕ್ಕಳ ಜೊತೆ ಬೆರೆಯಬಾರದು. ಯಾರೇ ಆಗಲಿ ಶಾಲೆಯ ಆವರಣದ ಮುಂದೆ ಎಲ್ಲೆಂದರಲ್ಲಿ ಉಗುಳದಂತೆ ಸೂಚನೆ ನೀಡಲಾಗಿದೆ.

ಮಾರ್ಗಸೂಚಿ: 9 ಮತ್ತು 10ನೆ ತರಗತಿಯ ಮಕ್ಕಳು ಶಾಲೆಗೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ. ಅನುಮತಿ ಪತ್ರದಲ್ಲಿ ಮಗುವಿಗೆ ಕೋವಿಡ್-19 ಸೋಂಕಿನ ಯಾವುದೇ ಲಕ್ಷಣಗಳಿರುವುದಿಲ್ಲ ಎಂದು ದೃಢೀಕರಿಸಬೇಕು. 9 ಮತ್ತು 10ನೆ ತರಗತಿಯ ವಿದ್ಯಾರ್ಥಿಗಳು ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು, ಉಪಹಾರವನ್ನು ತರುವುದು. ಶಾಲೆಗಳಲ್ಲಿ ಅವಶ್ಯಕತೆ ಅನುಸಾರ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡುವುದು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆನ್‍ಲೈನ್ ಅಥವಾ ಪರ್ಯಾಯ ವಿಧಾನದಲ್ಲಿಯೂ ಹಾಜರಾಗಬಹುದು. ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳಿಗೆ ಈಗ ಅನುಸರಿಸುತ್ತಿರುವ ಆನ್‍ಲೈನ್ ಇತರೆ ಪರ್ಯಾಯ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಬೇಕು.

ಇದನ್ನು ಓದಿ: ಅಕ್ಟೋಬರ್ 1ರಿಂದ ಶೈಕ್ಷಣಿಕ ವರ್ಷಾರಂಭ: ಯುಜಿಸಿ

ಸಲಹಾತ್ಮಕ ವೇಳಾಪಟ್ಟಿ: 9 ಮತ್ತು 10ನೆ ತರಗತಿಯ ಮಕ್ಕಳಿಗೆ ಭೌತಿಕ ತರಗತಿಗಳನ್ನು ನಡೆಸಲು ಅವಶ್ಯಕ ದೈಹಿಕ ಅಂತರ ಕಾಪಾಡುವ ದೃಷ್ಟಿಯಿಂದ ಶಾಲಾ ಹಂತದಲ್ಲಿ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಯನ್ನು ಆಧರಿಸಿ 9 ಮತ್ತು 10ನೆ ತರಗತಿಗಳ ವಿದ್ಯಾರ್ಥಿಗಳನ್ನು 15 ರಿಂದ 20 ಸಂಖ್ಯೆಯ ವಿದ್ಯಾರ್ಥಿಗಳ ತಂಡಗಳನ್ನಾಗಿ ಮಾಡಿಕೊಂಡು, ಭೌತಿಕ ತರಗತಿಗಳನ್ನು ನಡೆಸುವುದು. ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರ ವರೆಗೆ ಹಾಗೂ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:50ರ ವರೆಗೆ ಮಾತ್ರ ನಡೆಸಬೇಕು ಎಂದು ಸೂಚಿಸಲಾಗಿದೆ.

ಸ್ಯಾನಿಟೈಜ್ ಕಡ್ಡಾಯ: ಭೌತಿಕ ತರಗತಿ ಆರಂಭಕ್ಕೆ ಮೊದಲು ಶಾಲೆಯ ಆವರಣ, ಕಾಂಪೌಂಡ್, ಮುಖ್ಯದ್ವಾರ ಸಹಿತ ಶಾಲಾ ಕೊಠಡಿ, ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿ ಧೂಳು ಒರೆಸಿ ಸೋಂಕು ನಿವಾರಣಾ ದ್ರಾವಣ ಸಿಂಪಡಿಸಬೇಕು. ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ನೀರು ತುಂಬಿಸಬೇಕು. ಶೌಚಾಲಯ, ಮೂತ್ರಾಲಯವನ್ನು ಹೈಪೋಕ್ಲೋರೈಟ್ ದ್ರಾವಣ ಬಳಸಿ ಸ್ವಚ್ಚಗೊಳಿಸತಕ್ಕದ್ದು. ಮಲೆಗಾಲವಾಗಿದ್ದರಿಂದ ಶಿಥಿಲ ಕೊಠಡಿ/ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸಬಾರದು.

ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು: ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕನಿಷ್ಟ 3ರಿಂದ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಮಕ್ಕಳ ದಟ್ಟಣೆ ತಪ್ಪಿಸಲು ಆಗಮನ ಮತ್ತು ನಿರ್ಗಮನ ಪ್ರತ್ಯೇಕ ಮಾರ್ಗ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳು ಶಾಲಾ ಆವರಣ ಪ್ರವೇಶಕ್ಕೆ ಮೊದಲು ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈಗಳನ್ನು ಸ್ವಚ್ಚಗೊಳಿಸಲು ಅವಕಾಶ ಕಲ್ಪಿಸತಕ್ಕದ್ದು. ಥರ್ಮಲ್ ಸ್ಕ್ಯಾನರ್‍ನಿಂದ ವಿದ್ಯಾರ್ಥಿಗಳ ದೇಹದ ಉಷ್ಣತೆ ಪರೀಕ್ಷಿಸತಕ್ಕದ್ದು. ಶಾಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ವೇಳೆ ದಟ್ಟಣೆ ಆಗದಂತೆ ನೋಡಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಗೆ ಕೆಮ್ಮು ಜ್ವರ, ನೆಗಡಿ, ಮೂಗು ಸೋರಿಕೆ ಕಂಡು ಬಂದರೆ, ಐಸೋಲೇಷನ್‍ನಲ್ಲಿ ತಾತ್ಕಾಲಿಕವಾಗಿ ಇರಿಸಿ, ಬಳಿಕ ಪೋಷಕರು ಸಂಪರ್ಕಿಸಿ ಮನೆಗೆ ಕಳುಹಿಸಬೇಕು. ವಿದ್ಯಾರ್ಥಿಗಳು ತಮ್ಮ ನಡುವೆ ವಸ್ತುಗಳನ್ನು ಪರಸ್ಪರ ವಿನಿಮಯ ಮಾಡದಂತೆ ನೋಡಿಕೊಳ್ಳಬೇಕು.

ಶಿಕ್ಷಕರಿಗೆ ಮುನ್ನಚ್ಚರಿಕೆ: ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ ಧರಿಸುವುದು ಒಳಿತು. ಶಾಲೆ ಮತ್ತು ತರಗತಿಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಎಲ್ಲ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಬೇಕು. ಲಸಿಕೆ ಪಡೆಯದಿದ್ದಲ್ಲಿ ಶೀಘ್ರವೇ ಒದಗಿಸಿಕೊಡಬೇಕು. ಸೋಂಕಿನ ಲಕ್ಷಣಗಳಿದ್ದರೆ ಶಾಲೆಗೆ ಹಾಜರಾಗಬಾರದು. ಪುನಃ ಶಾಲೆಗೆ ಹಾಜರಾಗುವ ಮೂರುದಿನ ಮೊದಲೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್ ಅನ್ನು ಸಲ್ಲಿಸಬೇಕು.

ಪ್ರತಿದಿನ ಶಾಲೆ ಪ್ರಾರಂಭ ಮತ್ತು ಶಾಲೆ ಮುಕ್ತಾಯ ಆಗುವವರೆಗೂ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಅನುಸರಿಸಬೇಕು. ಈ ಕುರಿತು ಮೇಲ್ವಿಚಾರಣೆಗೆ ಒಬ್ಬ ಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ವಿದ್ಯಾರ್ಥಿಗಳು ಒಂದು ಕಡೆ ಗುಂಪು ಸೇರುವ ಸಭೆ, ಸಮಾರಂಭ, ಹಬ್ಬಗಳು ಹಾಗೂ ಇತರೆ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಹಮ್ಮಿಕೊಳ್ಳಬಾರದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *