GST: ಇದಿನ್ನೂ ಆರಂಭ ಮಾತ್ರ…. ನೋಡ್ತಾ ಇರಿ

GST ತೆರಿಗೆ ಪದ್ಧತಿ, UPI ಪಾವತಿ ಪದ್ಧತಿ, Aadhar ತಳಪಾಯ ಇವೆಲ್ಲ ಆರ್ಥಿಕತೆಯಲ್ಲಿ ಒಳಗೊಳ್ಳುವ, ನಗದಿನ ಮೇಲೆ ಅವಲಂಬನೆ ತಗ್ಗಿಸುವ, ಪಾರದರ್ಶಕತೆ ಹೆಚ್ಚಿಸುವ, ಅಸಂಘಟಿತ (ಅಂದರೆ ಸಣ್ಣಪುಟ್ಟ) ವಾಣಿಜ್ಯ ವಲಯವನ್ನು ಫಾರ್ಮಲೈಸ್ ಮಾಡುವ ಮತ್ತು ಈ ಎಲ್ಲ ಕ್ರಮಗಳ ಮೂಲಕ ಆರ್ಥಿಕತೆಯನ್ನು ಬೆಳೆಸುವ ಕ್ರಮ ಎಂದು ಸರ್ಕಾರ ಹೇಳಿದಾಗ “ಉಘೇ ಉಘೇ” ಎಂದವರೆಲ್ಲ ಈಗ ಬೆಚ್ಚಿಬೀಳತೊಡಗಿದ್ದಾರೆ. ಆ ಮಾತುಗಳ ಅರ್ಥ ಈಗ ಹೊಳೆಯಲಾರಂಭಿಸಿದೆ. ಇದೀಗ ಆರಂಭ ಮಾತ್ರ.

-ರಾಜಾರಾಂ ತಲ್ಲೂರು

ನಿಜಕ್ಕೆಂದರೆ ಇದು ಯಾವತ್ತೋ ಆಗಬೇಕಿತ್ತು. ಭಾರತದ ಜನಸಾಮಾನ್ಯರ ಆರ್ಥಿಕತೆ ಅಸಂಘಟಿತ ವಲಯದಲ್ಲೇ ಕೇಂದ್ರೀಕೃತವಾದದ್ದು. ವಾರ್ಷಿಕ ಕೋಟಿಯ ಮೇಲೆ ವಹಿವಾಟು ಇದ್ದರೂ, ಒಂದಾಣೆ ತೆರಿಗೆ ಕಟ್ಟದೇ, ಲೆಕ್ಕಾಚಾರವೂ ಇಲ್ಲದೇ ಬದುಕುತ್ತಿರುವ ವಲಯ ಅದು. ಹಾಗಂತ ಅಲ್ಲೂ ಬೇರೆಲ್ಲ ಕಡೆಗಳಂತೆ ಲಾಭದವರು, ನಷ್ಟದವರು ಎಲ್ಲರೂ ಇದ್ದಾರೆ. ನಷ್ಟದವರೇ ಜಾಸ್ತಿ ಇರಬಹುದು. ಫಾರ್ಮಲ್ ವಲಯಕ್ಕೆ ಬಂದವರು ತಮ್ಮ ವ್ಯವಹಾರದ ನಿವ್ವಳ ಲಾಭದಲ್ಲಿ, ಅಂದರೆ ನಾವು ಗಳಿಸಿದ ಪ್ರತೀ ರೂಪಾಯಿಯಲ್ಲಿ ಅಂದಾಜು 40-50 ಪೈಸೆ ಸರ್ಕಾರದ ಪಾಲು ಎಂದೇ ಲೆಕ್ಕಾಚಾರ ಹಾಕಿಕೊಂಡು ದುಡಿಯಬೇಕಾಗುತ್ತದೆ. ಅದೇ ಸಣ್ಣಪುಟ್ಟ ಗೂಡಂಗಡಿ ಇಟ್ಟು, ಯಾವುದೇ ಶಾಸನಾತ್ಮಕ ಒತ್ತಡಗಳಿಲ್ಲದೇ ಲಾಭದ ರೂಪಾಯಿಯಲ್ಲಿ ಇಡೀ ರೂಪಾಯಿ ತನ್ನದಾಗಿಸಿಕೊಂಡವರು, ಈಗ ಸರ್ಕಾರದ ಕಣ್ಣಿಗೆ ಸಾಕ್ಷ್ಯ ಸಮೇತ ಸಿಕ್ಕಿದ್ದಾರೆ. ಆರಂಭ

ವರ್ಷದ ಗಳಿಕೆ, ಐದು ವರ್ಷದ ಗಳಿಕೆಗಳಲ್ಲಿ ತೆರಿಗೆ ಪಾಲು (ಲಕ್ಷಗಳಲ್ಲಿ) ಕೊಡಿ ಎಂದು ಸರ್ಕಾರ ನೋಟೀಸು ಮಾಡಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಈ ನೋಟೀಸು ಮಾಡಿದ್ದು ರಾಜ್ಯ ಸರ್ಕಾರ. ಇದು ರಾಜ್ಯಸರ್ಕಾರದ್ದು, ಕೇಂದ್ರಸರ್ಕಾರದ್ದು ಎಂದು ಚರ್ಚೆ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಇಬ್ಬರದೂ ಪಾಲು (CGST, SGST) ಅದರಲ್ಲಿ ಇದೆ. ಮತ್ತು ಅದು ಈಗ ನಾಡಿನ ನಿಯಮ. ಹಾಗಾಗಿ ನೋಟೀಸು ಬಂದಿದೆ.

ಸರ್ಕಾರಗಳು ಪ್ರಕರಣವಾರು ಸ್ವಲ್ಪ ಸಹಾನುಭೂತಿಯಿಂದ ಪರಿಶೀಲಿಸಿದರೆ, ಈ ಟೀದಿಂಗ್ ಸಮಸ್ಯೆಗಳೆಲ್ಲ ಅಲ್ಲಿಂದಲ್ಲಿಗೆ ಸರಿಹೋಗಲಿದೆ. ಇಲ್ಲಿ ಕಾಂಗ್ರೆಸ್-ಬಿಜೆಪಿ ರಾಜಕೀಯ ಅನಗತ್ಯ. ಚರ್ಚೆ ಆಗಬೇಕಾಗಿರುವುದು ಏನಾದರೂ ಇದ್ದರೆ, ಅದು ದೊಡ್ಡ ಕಾರ್ಪೊರೇಟ್‌ಗಳಿಗೆ ಸಾವಿರಾರು ಕೋಟಿ ರೂ. ಸಬ್ಸಿಡಿ (PLI, ELI ಇತ್ಯಾದಿ ಹೆಸರಲ್ಲಿ) ನೀಡಲಾಗುತ್ತಿದೆ, ಸಾಲ ಮನ್ನಾ-ಬ್ಯಾಂಕರ್‌ಗಳ ಹೇರ್‌ಕಟ್ ನಡೆಯುತ್ತಿದೆ. ಆ ಬಗ್ಗೆ ಚರ್ಚೆ ಆಗಲಿ. ಅಲ್ಲಿ ಆಗುತ್ತಿರುವ ಸೋರಿಕೆ ಅಸಾಧಾರಣ ಸ್ವರೂಪದ್ದು, ಅಸಹಜವಾದದ್ದು.

ಇದನ್ನೂ ಓದಿ: ನೆಹರೂ- ಮಹಾಲನೋಬಿಸ್ ಕಾರ್ಯತಂತ್ರವನ್ನು ದೂಷಿಸುತ್ತಿರುವುದೇಕೆ?

ಈ ನೋಟೀಸು ಯುಗ… ಇದಿನ್ನೂ ಆರಂಭ ಮಾತ್ರ. ಶೀಘ್ರವೇ ಇನ್ನೊಂದು “ಭುಗಿಲು” ಏಳುವುದಿದೆ. GSTಯಲ್ಲಿ ಇನ್‌ಪುಟ್ ತೆರಿಗೆ ಔಟ್‌ಪುಟ್ ತೆರಿಗೆ ಟ್ರೇಲ್ ಎರಡೂ ದಾಖಲಾಗಿ, ಸರ್ಕಾರದ ಕೈ ಸೇರಿರುತ್ತದೆ. ನಮ್ಮ ಸಾಂಪ್ರದಾಯಿಕ ವ್ಯಾಪಾರಿಗಳೆಲ್ಲ 10 ಐಟಮ್ ಖರೀದಿಸಿ ತಂದು, ಲೆಕ್ಕಕ್ಕೆ ಅದನ್ನು 5 ಐಟಂ ಎಂದು ತೋರಿಸಿ, ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಉಳಿಸಿ ಲಾಭ ಗಳಿಸಿದವರೇ.

ಈ ವ್ಯಾಪಾರದ ದಾಖಲೆಗಳು ಈಗ ಮೂಲದಿಂದಲೇ ಪರಿಪೂರ್ಣ ರೂಪದಲ್ಲಿ (ಅಂದರೆ ಉತ್ಪಾದನೆಯ ಮೂಲದಿಂದ ಅಂತಿಮ ಬಳಕೆದಾರರ ತನಕ) ಸರ್ಕಾರದ ಕೈಗೆ ಬರುವುದರಿಂದ ಒಂದು ಬಟನ್ ಕ್ಲಿಕ್‌‌ನಲ್ಲಿ ಇಂತಹ ವಂಚನೆ ವ್ಯಾಪಾರಗಳನ್ನೆಲ್ಲ ಸುಲಭವಾಗಿ ಗುರುತಿಸಿ ಬೆನ್ನು ಹತ್ತುವುದು ತೆರಿಗೆ ಅಧಿಕಾರಿಗಳಿಗೆ ಈಗ ಸಾಧ್ಯವಿದೆ. ಈ ಪ್ರತಿಯೊಬ್ಬರೂ ಮುಂದಿನ ದಿನಗಳಲ್ಲಿ, ಯಾವುದಾದರೊಂದು ಹಂತದಲ್ಲಿ ಸಿಕ್ಕಿಹಾಕಿಕೊಳ್ಳಲಿದ್ದಾರೆ. ಮೇಲು ಮಟ್ಟದಲ್ಲಿ ಈ ಪ್ರಕ್ರಿಯೆ ಆರಂಭ ಆಗಿದೆ. ನಿಧಾನಕ್ಕೆ ಅದು ತಳಕ್ಕಿಳಿದು ಬರುವ ಮುನ್ನ, ಈಗ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟೀಸು ಬಂದಿರುವುದು ಈ ಪರೋಕ್ಷ ತೆರಿಗೆ ಬಲೆ ವಿಸ್ತರಿಸುವ ಕೆಲಸ. GST, UPI ಉದ್ದೇಶವೇ ಅದು!

ಇಲ್ಲಿ ತಾರತಮ್ಯ (ಸಂಘಟಿತ-ಅಸಂಘಟಿತ) ಇಲ್ಲದೇ ಎಲ್ಲರೂ ತೆರಿಗೆ ಕಟ್ಟುವಾಗ, ತೆರಿಗೆ ದರ ಇಳಿಸಲು ಸರ್ಕಾರದ ಮೇಲೆ ಒತ್ತಾಯ ಹೇರುವುದು ಸಾಧ್ಯ. ಅದು ಬಿಟ್ಟು ಅಯ್ಯೋ ನಮಗೆ ಲಕ್ಷಗಟ್ಟಲೆ ತೆರಿಗೆ ನೋಟೀಸು ಬಂದಿದೆ ಎಂದರೆ, ವ್ಯಾಪಾರ ಆಗಿರುವುದಕ್ಕೆ ಸರ್ಕಾರದ ಬಳಿ ಖಚಿತ ಸಾಕ್ಷ್ಯಾಧಾರ ಇದೆ. ಆ ಹಣ ಎಲ್ಲಿಗೆ ಹೋಯಿತೆಂದು, GST ಅಧಿಕಾರಿಗಳ ಜೊತೆಗೆ ಆದಾಯ ತೆರಿಗೆ ಅಧಿಕಾರಿಗಳಿಗೂ ಲೆಕ್ಕ ಕೊಡಬೇಕಾಗಬಹುದು.

ಮತ್ತೆ ದೇಶ ಅದೆಷ್ಟೋ ಟ್ರಿಲಿಯನ್ ಡಾಲರ್ ಎಕಾನಮಿ ಆಗುವುದು ಬೇಡವೆ?!!

ಇದನ್ನೂ ನೋಡಿ: ವಿಶ್ವ ಹಾವುಗಳ ದಿನ | ಆತಂಕ ಬಿಡಿ ಜೀವವೈವಿಧ್ಯತೆ ಕಾಪಾಡಿ Janashakthi Media #WorldSnakeDay

Donate Janashakthi Media

Leave a Reply

Your email address will not be published. Required fields are marked *