ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ನಿರಾಕರಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ನಾಳೆಯಿಂದ ಜನವರಿ 31 ರವರೆಗೆ ನಡೆಯಲಿರುವ ವಿಧಾನಮಂಡಲದ ಜಂಟಿ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣ ನಡೆಯುವುದು ಸಂವಿಧಾನಾತ್ಮಕ ಸಂಪ್ರದಾಯ. ಆದರೆ ಈ ಬಾರಿ ರಾಜ್ಯಪಾಲರ ನಿರಾಕರಣೆ ಸರ್ಕಾರ ಮತ್ತು ಲೋಕಭವನದ ನಡುವಿನ ಸಂಬಂಧದಲ್ಲಿ ಬಿರುಕು ಮೂಡುತ್ತಿರುವ ಸೂಚನೆ ನೀಡುತ್ತಿದೆ.
ನಿನ್ನೆ ತಮಿಳುನಾಡಿನಲ್ಲಿ ರಾಜ್ಯಪಾಲರು ವಿಧಾನಸಭೆಯಲ್ಲಿ ಭಾಷಣ ಮಾಡಲು ನಿರಾಕರಿಸಿದ್ದ ಘಟನೆ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅದೇ ಹಾದಿಯಲ್ಲಿ ಇದೀಗ ಕರ್ನಾಟಕದಲ್ಲೂ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದರಿಂದಾಗಿ ‘ಸರ್ಕಾರ Vs ರಾಜ್ಯಪಾಲ’ ಸಂಘರ್ಷ ರಾಜ್ಯದಲ್ಲೂ ಆರಂಭವಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ..
ರಾಜ್ಯಪಾಲರ ನಿರಾಕರಣೆಯ ಬೆನ್ನಲ್ಲೇ ಸರ್ಕಾರ ರಾಜ್ಯಪಾಲರನ್ನು ಮನವೊಲಿಸಲು ಮುಂದಾಗಿದೆ. ಕಾನೂನು ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಚಿವರ ನಿಯೋಗ ಇಂದು ಸಂಜೆ 5:45ಕ್ಕೆ ರಾಜಭವನಕ್ಕೆ ಭೇಟಿ ನೀಡಲಿದೆ. ರಾಜ್ಯಪಾಲರನ್ನು ಭೇಟಿ ಮಾಡಿ ಜಂಟಿ ಅಧಿವೇಶನದ ಭಾಷಣ ಕುರಿತಂತೆ ಚರ್ಚೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ನಿಯೋಗದಲ್ಲಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ರಾಜ್ಯಪಾಲರು ಕೆಲವು ವಿಚಾರಗಳ ಕುರಿತು ಅಸಮಾಧಾನ ಹೊಂದಿರುವ ಸಾಧ್ಯತೆ ಇದೆ. ವಿಶೇಷವಾಗಿ ನರೇಗಾ ಯೋಜನೆಗೆ ಸಂಬಂಧಿಸಿದ ವಿಷಯಗಳು ಹಾಗೂ ಕೆಲವು ಕಾಯಿದೆಗಳ ಕುರಿತು ರಾಜ್ಯಪಾಲರು ಭಾಷಣದಲ್ಲಿ ಉಲ್ಲೇಖಿಸಲು ನಿರಾಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಅವರು ಜಂಟಿ ಅಧಿವೇಶನದ ಭಾಷಣವನ್ನು ಕೈಬಿಟ್ಟಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಈ ಅಧಿವೇಶನದ ಆರಂಭದಲ್ಲೇ ರಾಜ್ಯಪಾಲರ ಭಾಷಣ ನಡೆಯುವುದು ಸಂವಿಧಾನಾತ್ಮಕ ಆಚರಣೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರ ನಿರಾಕರಣೆ ರಾಜಕೀಯವಾಗಿ ಮಾತ್ರವಲ್ಲ, ಸಂವಿಧಾನಾತ್ಮಕವಾಗಿಯೂ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ.
ತಮಿಳುನಾಡು ಮತ್ತು ಕೇರಳದಲ್ಲಿ ಈಗಾಗಲೇ ಸರ್ಕಾರ-ರಾಜಪಾಲರ ನಡುವೆ ಸಂಘರ್ಷಗಳು ನಡೆದಿರುವ ಉದಾಹರಣೆಗಳಿವೆ. ಇದೀಗ ಕರ್ನಾಟಕದಲ್ಲೂ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೇ ಎಂಬ ಆತಂಕ ಜನರಲ್ಲಿ ಮೂಡಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ, ರಾಜ್ಯಪಾಲರು ತಮ್ಮ ನಿರ್ಧಾರವನ್ನು ಬದಲಾಯಿಸುವರೇ ಅಥವಾ ಸರ್ಕಾರ ಕಾನೂನು ಮಾರ್ಗವನ್ನು ಅನುಸರಿಸುವುದೇ ಎಂಬುದು ಕಾದು ನೋಡಬೇಕಿದೆ.
