ಬೆಂಗಳೂರು: ಇನ್ಮುಂದೆ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ (ಐಪಿಡಿ) ಚಿಕಿತ್ಸೆ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಿಳಿಸಿದರು. ಚಿಕಿತ್ಸೆ
ಶಾಸಕ ಶಿವಲಿಂಗೇಗೌಡ ಅವರು ಸರ್ಕಾರಿ ವೈದ್ಯರಿಂದ ಖಾಸಗಿ ಪ್ರಾಕ್ಟೀಸ್ ಮಾಡ್ತಿರುವ ಆರೋಪ ವಿಚಾರವಾಗಿ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ಸರ್ಕಾರಿ ವೈದ್ಯರ ಖಾಸಗಿ ಸೇವೆ ಕುರಿತು ಸರ್ಕಾರದ ಹೊಸ ಆದೇಶದ ಬಗ್ಗೆ ಓದುತ್ತಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಕೆಲಸ ಮಾಡುವ ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್ ಬಗ್ಗೆ ಆದೇಶ ಹೊರಡಿಸಲಾಗಿದೆ. ಚಿಕಿತ್ಸೆ
ಪ್ರಸ್ತುತ ಸರ್ಕಾರಿ ಆದೇಶಗಳ ಪ್ರಕಾರ, ಸರ್ಕಾರಿ ವೈದ್ಯರು ತಮ್ಮ ಕೆಲಸದ ಅವಧಿ ನಂತರ (ಸರ್ಕಾರಿ ಕರ್ತವ್ಯಗಳಿಗೆ ಅಡ್ಡಿಯಾಗದಂತೆ) ಖಾಸಗಿಯಾಗಿಯೂ ಸೇವೆ ನೀಡಲು ಅನುಮತಿ ಇದೆ. ಈಗ, ಸರ್ಕಾರಿ ವೈದ್ಯರು ಖಾಸಗಿ ಸೇವೆಯನ್ನು ಹೊರರೋಗಿಗಳಿಗೆ (ಒಪಿಡಿ) ಮಾತ್ರ ನೀಡಬಹುದು ಎಂದು ಆದೇಶ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತಡೆ ನೀಡಲಾಗದು: ಹೈಕೋರ್ಟ್
ಇನ್ನು ಮುಂದೆ ಖಾಸಗಿ ಸೇವೆಯಲ್ಲಿ ಒಳರೋಗಿಗಳಿಗೆ (ಐಪಿಡಿ)ಸೇವೆ ನೀಡುವಂತಿಲ್ಲ. ಹೊರರೋಗಿ ವಿಭಾಗದಲ್ಲಿ (ಒಪಿಡಿ) ತಮ್ಮ ಕರ್ತವ್ಯದ ಅವಧಿಯ ನಂತರ ಮತ್ತು ನಿಗದಿತ ಕರ್ತವ್ಯಗಳಿಗೆ ಅಡ್ಡಿಯಾಗದಂತೆ ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬಹುದಾಗಿದೆ. ಅದರ ವಿವರಗಳನ್ನು ಸರ್ಕಾರಕ್ಕೆ ತಿಳಿಸಬೇಕು. ಷರತ್ತುಗಳನ್ನು ಉಲ್ಲಂಘನೆ ಮಾಡಿದರೆ ಕಾನೂನಿನಡಿಯಲ್ಲಿ ಅನುಮತಿಸಲಾದ ಕ್ರಮ ಕೈಗೊಳ್ಳಲಾಗುವುದು ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಒಳಪಡುತ್ತದೆ ಎಂದು ತಿಳಿಸಿದರು.
ಒಳರೋಗಿಗಳಿಗೆ ನಿರಂತರ ಆರೈಕೆ ಮತ್ತು ನಿಯಮಿತ ಪರೀಕ್ಷೆಯ ಅವಶ್ಯಕತೆ ಇರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಚಿಕಿತ್ಸೆಗೆ ಸರ್ಕಾರಿ ವೈದ್ಯರು ಸೇವೆ ಸಲ್ಲಿಸುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅವರ ಸೇವೆಯಲ್ಲಿ ವ್ಯತ್ಯಯ ಉಂಟಾಗಿ, ರೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆ ನಿರ್ಲಕ್ಷ್ಯದಿಂದ ಹಲವು ಸಮಸ್ಯೆಗಳು ಉಂಟಾದ ನಿದರ್ಶನಗಳಿವೆ. ಕೆಲವು ಸಂದರ್ಭಗಳಲ್ಲಿ ಸಾವಿಗೂ ಕಾರಣವಾಗಿವೆ ಎಂಬುದು ಮಾನ್ಯ ಲೋಕಾಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ತನ್ನ ವರದಿಯಲ್ಲಿ ಸಾರ್ವಜನಿಕ ಸೇವೆಗೆ ಆದ್ಯತೆ ನೀಡಬೇಕಾದರೆ, ಸರ್ಕಾರಿ ವೈದ್ಯರ ಖಾಸಗಿ ಸೇವೆಯನ್ನು ನಿಯಂತ್ರಿಸಲು ಶಿಫಾರಸು ಮಾಡಿದೆ ಎಂದು ವಿವರಿಸಿದರು.
ಇದಕ್ಕೂ ಮುಂಚೆ ವಿಷಯ ಪ್ರಸ್ತಾಪಿಸಿದ ಅವರು, ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರ್ತಾರೆ. ಆದ್ರೆ ವೈದ್ಯರು ಕ್ಲಿನಿಕ್ಗಳಿಗೆ ಹೋಗ್ತಾರೆ. ಇಲ್ಲೂ ಕೆಲಸ ಮಾಡ್ತಾರೆ. ಅಲ್ಲಿಯೂ ಕ್ಲಿನಿಕ್ ನಡೆಸ್ತಾರೆ. ಬೇರೆ ಖಾಸಗಿ ಆಸ್ಪತ್ರೆಗೂ ಹೋಗ್ತಾರೆ. ಇದರಿಂದ ರೋಗಿಗಳಿಗೆ ತೊಂದರೆಯಾಗ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಸಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ನೋಡಿ: ಒಂದು ದೇಹ, ಒಂದು ಸಾಕ್ಷಿ | ಸಾಮ್ರಾಜ್ಯಶಾಹಿಯ ವಿರುದ್ಧ ಸುಮಿತೇರು ತಾನಿಗುಚಿJanashakthi Media
