ಕೋರ್ಟ್‌ ತಡೆಯಾಜ್ಞೆಯಿದ್ದರೂ ಮಸೀದಿ ನೆಲಸಮ: ಠಾಣಾಧಿಕಾರಿಗೆ ನ್ಯಾಯಾಂಗ ನಿಂದನೆ ನೋಟಿಸು?

ಲಕ್ನೋ: ಹೈಕೋರ್ಟ್‌ನ ತಡೆಯಾಜ್ಞೆ ಆದೇಶದ ಹೊರತಾಗಿಯೂ ಗರೀಬ್‌ ನವಾಜ್‌ ಮಸೀದಿಯನ್ನು ಕೆಡವಲು ಆದೇಶ ಹೊರಡಿಸಿದ ಬಾರಾಬಂಕಿ ಠಾಣಾಧಿಕಾರಿ (ಎಸ್‌ಎಚ್‌ಒ) ರಾಮ್‌ ಸನೇಹಿ ಘಾಟ್‌ ಗೆ ನ್ಯಾಯಾಲಯವು ನೋಟಿಸ್‌ ಹೊರಡಿಸಿದೆ ಎಂದು ವರದಿಯಾಗಿದೆ.

ರಾಮ್‌ ಸನೇಹಿ ಘಾಟ್‌ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬಾರದು ಎಂದು ವಿವರಣೆ ನೀಡುವಂತೆ ಅಲಾಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠವು‌ ಪ್ರಶ್ನೆ ಮಾಡಿದೆ. ಮೇ 17ರಂದು ಬಾರಾಬಂಕಿಯಲ್ಲಿದ್ದ ಗರೀಬ್‌ ನವಾಝ್‌ ಮಸೀದಿಯನ್ನು ʼಅಕ್ರಮ ಕಟ್ಟಡʼ ಎಂದು ಕಾರಣ ನೀಡಿ ಉತ್ತರಪ್ರದೇಶ ಜಿಲ್ಲಾಡಳಿತವು ಉರುಳಿಸಿತ್ತು. ಬಳಿಕ ಈ ಘಟನೆ ವಿವಾದ ಸೃಷ್ಟಿಸಿತ್ತು.

ಇದನ್ನು ಓದಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19ರಿಂದ ಆರಂಭ

ಆದರೆ, ಇದೇ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್‌ಡಿವಿಷನಲ್‌ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ)‌ ಅವರಿಗೆ ನೋಟಿಸ್‌ ಜಾರಿ ಮಾಡಲು ನ್ಯಾಯಪೀಠ ನಿರಾಕರಿಸಿತು. ಏಪ್ರಿಲ್‌‌ 3ರಂದು ಎಸ್‌ಡಿಎಂ ಆದೇಶವನ್ನು ಜಾರಿ ಮಾಡಿದ್ದರು, ಹೈಕೋರ್ಟ್ ಏಪ್ರಿಲ್‌ 24ರಂದು‌ ತಡೆಯಾಜ್ಞೆ ಜಾರಿಗೊಳಿಸಿತ್ತು.

ಠಾಣಾಧಿಕಾರಿಯು ಜಾರಿ ಮಾಡಿರುವ ಮಸೀದಿಯ ನೆಲಸಮ ಆದೇಶ ಏಪ್ರಿಲ್‌ 24ರ ಹೈಕೋರ್ಟ್‌ ತಡೆಯಾಜ್ಞೆ‌ಗೆ ವಿರುದ್ಧವಾಗಿದೆ. ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಕಟ್ಟಡ ನೆಲಸಮವನ್ನು ಕೈಗೊಳ್ಳಬಾರದು ಎಂದು ಆದೇಶದಲ್ಲಿ ನೀಡಲಾಗಿತ್ತು. ಈ ಕಾರಣದಿಂದಾಗಿ ನ್ಯಾಯಾಂಗ ನಿಂದನೆ ಮೊಕದ್ಧಮೆ ದಾಖಲಿಸಬಾರದು ಎಂದು ಕಾರಣ ನೀಡಬೇಕೆಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ವಾದ ಮಂಡಿಸಿದರು. ತಮ್ಮ ವಾದದಲ್ಲಿ  ಅವರು ಕೋರ್ಟ್‌ನ ನಿರ್ದೇಶನವು ಸಾಮಾನ್ಯ ಸ್ವರೂಪದ್ದಾಗಿದ್ದು ಅದರ ಉಲ್ಲಂಘನೆಯು ನೊಂದ ಪಕ್ಷಕಾರರು ನಿಂದನಾ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ. ಈ ಪ್ರಕರಣದಲ್ಲಿ ಪಕ್ಷಕಾರರು ಹಾಗೂ ಗರೀಬ್‌ ನವಾಜ್‌ ಮಸೀದಿಯ ಶ್ರದ್ಧಾಳುಗಳಲ್ಲಿ ನೋವುಂಟಾಗಿದೆ ಎಂದರು.

ಗರೀಬ್ ನವಾಝ್ ಮಸೀದಿಯನ್ನು ನೆಲಸಮಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯು ಮಸೀದಿಯು ಸಾರ್ವಜನಿಕ ಭೂಮಿಯಲ್ಲಿರುವುದರ ಕುರಿತು ಹಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ.

ಸಿಬಲ್‌ ಅವರ ವಾದವನ್ನು ಆಲಿಸಿದ ನ್ಯಾಯಾಲಯವು ಎಸ್‌ಡಿಎಂಗೆ ನೋಟಿಸ್‌ ನೀಡಲು ನಿರಾಕರಿಸಿತು. ಎಸ್‌ಎಚ್‌ಒಗೆ ಮಾತ್ರವೇ ನೋಟಿಸ್‌ ಜಾರಿಗೊಳಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತು.

Donate Janashakthi Media

Leave a Reply

Your email address will not be published. Required fields are marked *