ಬೆಂಗಳೂರು: ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಾಯದೊಂದಿಗೆ ವೈಟ್ಫೀಲ್ಡ್ನಲ್ಲಿ ಹೊಸ ಉಚಿತ ಕನ್ನಡ ಕಲಿಕಾ ಕೇಂದ್ರ ಪ್ರಾರಂಭಿಸಿಲಾಯಿತು . 3 ತಿಂಗಳ ಕೋರ್ಸ್ ಒಟ್ಟು 36 ಗಂಟೆಗಳ ಅವಧಿಯ ಕಲಿಕಾ ತರಗತಿಗಳಾಗಿರುತ್ತವೆ. ಭಾಗವಹಿಸುವವರು ಕನ್ನಡದಲ್ಲಿ ಮಾತನಾಡುವ, ಓದುವ ಮತ್ತು ಬರೆಯುವುದನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಉಚಿತ
ಕಲಿಯುವವರ ಅನುಕೂಲಕ್ಕೆ ಅನುಗುಣವಾಗಿ ತರಗತಿ ಸಮಯವನ್ನು ನಿಗದಿಪಡಿಸಲಾಗಿದೆ. ವಾರಕ್ಕೆ ಮೂರು ಗಂಟೆಗಳ ಕಾಲ ತರಗತಿ ನಿಗದಿಪಡಿಸಲಾಗಿದೆ. ಅಗತ್ಯವಿದ್ದರೆ ಅವಧಿಯನ್ನು ವಿಸ್ತರಿಸಬಹುದು. ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಕರ್ನಾಟಕ ಸರ್ಕಾರದ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಮಾಣಪತ್ರ ದೊರೆಯುತ್ತದೆ. ಒಂದು ತರಗತಿಯಲ್ಲಿ 30 ಜನರನ್ನು ಮಾತ್ರ ನಿಗದಿಪಡಿಸಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಹೊಸ ತರಗತಿಯು ಪ್ರಾರಂಭವಾಗುತ್ತವೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರೊ. ನಿರಂಜನರಾಧ್ಯ.ವಿ.ಪಿ. ಕನ್ನಡ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಅವರು, ನಮ್ಮ ಮಾತೃಭಾಷೆಯ ಮೂಲಕವೇ ಎರಡನೇ ಭಾಷೆಯನ್ನು ಕಲಿಯಬೇಕು, ಭಾಷೆಯ ಬಗ್ಗೆ ಅಭಿಮಾನವಿರಲಿ ಆದರೆ ದುರಭಿಮಾನ ಬೇಡ. ಭಾಷೆಯನ್ನು ಸಹಕಾರ ಸಾಮರಸ್ಯದ ಮೂಲಕ ಕಲಿಯಬೇಕೇ ಹೊರತು ಸಂಘರ್ಷ ಅಥವಾ ಭಯದಿಂದಲ್ಲ. ಕನ್ನಡದ ನೆಲೆದಲ್ಲಿ ಎಲ್ಲವನ್ನು ಪಡೆವ ಕನ್ನಡೇತರರು, ಕನ್ನಡ ಕಲಿತು ಕನ್ನಡಿಗರ ಜೊತೆ ಶಾಂತಿಯುತ ಸಹಬಾಳ್ವೆ ನಡೆಸಲು ಹಿಂದೇಟು ಹಾಕಬಾರದು . ಕನ್ನಡಿಗರ ಶಾಂತಿ ಸಂಯಮವನ್ನು ಅರಿತು ನಡೆಯಬೇಕು ಎಂದರು.
ಇದನ್ನೂ ಓದಿ: ಸುಂದರ ಮಲೆಕುಡಿಯ ಕೈ ಕಡಿದ ಪ್ರಕರಣ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಲಯಾಳಂ ಮಿಷನ್ ಕರ್ನಾಟಕದ ಅಧ್ಯಕ್ಷ ಶ್ರೀ. ಕೆ. ದಾಮೋದರನ್, ಟಾಮಿ ಜೆ.ಅಲುಂಕಲ್ , ನ್ಯಾಯವಾದಿ ಬುಶ್ರ ವಲಪ್ಪಿಲ್ ,ಆರ್ಟ್ ಆಫ್ ಲಿವಿಂಗ್ನ ಶ್ರೀ ಆರ್. ಶ್ರೀನಿವಾಸ್, ಪ್ರವಾಸಿ ಮಲಯಾಳಿ ಅಸೋಸಿಯೇಷನ್ ವೈಟ್ಫೀಲ್ಡ್, ಅಧ್ಯಕ್ಷ ರಮೇಶ್ ಕುಮಾರ್.ವಿ., ಕಾರ್ಯದರ್ಶಿ ರಾಗೇಶ್.ಪಿ, ಸಂತೋಷ್ ಕುಮಾರ್,ಕೇರಳ ಸಮಾಜ ವೈಟ್ಫೀಲ್ಡ್ ಜೋನ್, ಸಂಚಾಲಕ ಸುರೇಶ್ ಕುಮಾರ್ ಭಾಗವಹಿಸಿದ್ದರು .
ಉತ್ತಮ ಸಂವಹನ ಮತ್ತು ಸಾಂಸ್ಕೃತಿಕ ಏಕೀಕರಣಕ್ಕಾಗಿ ಭಾಷೆಯನ್ನು ಕಲಿಯಲು ಆಸಕ್ತಿ ಹೊಂದಿರುವ ಪ್ರೀತಿಯ ಮಲಯಾಳಿ ವೃತ್ತಿಪರರು, ಮತ್ತು ಖಾಯಂ ನಿವಾಸಿಗಳು, ಅನ್ಯಭಾಷಿಕರಾದ ವೈದ್ಯರುಗಳು, ಪಾರ್ಸಿಗಳು, ಬ್ಯಾಂಕ್ ನೌಕರರು, ಪತ್ರಿಕೋದ್ಯಮಿಗಳು, ಶಿಕ್ಷಕರು ಮುಂತಾದವರು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಡಾ. ಸುಷ್ಮಾ ಶಂಕರ್ ವಿನಂತಿಸಿದರು.
ಕಳೆದ ೧೭ ವರ್ಷಗಳಿಂದ, ಉಚಿತ ಬೇಸಿಗೆ ಕನ್ನಡ ಕಲಿಕಾ ಶಿಬಿರವನ್ನು ನಡೆಸುತ್ತಿದ್ದ ಈ ಕೇಂದ್ರವನ್ನು ಕರ್ನಾಟಕ ಸರ್ಕಾರ ಶಾಶ್ವತ ಕನ್ನಡ ಕಲಿಕಾ ಕೇಂದ್ರವೆಂದು ಗುರುತಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರದಿಂದ ವಿಶೇಷ ತರಬೇತಿ ಪಡೆದಿರುವ ಡಾ. ಸುಷ್ಮಾ ಶಂಕರ್ ತರಗತಿಗಳನ್ನು ಮುನ್ನಡೆಸಲಿದ್ದಾರೆ. ತರಬೇತಿ ಪಡೆದ ಪ್ರೊ. ರಾಕೇಶ್ ವಿ.ಎಸ್ ಮತ್ತು ರೆಬಿನ್ ರವೀಂದ್ರನ್ ತರಗತಿಗಳನ್ನು ನಡೆಸಲಿದ್ದಾರೆ.
ಇದನ್ನೂ ನೋಡಿ: ಉಕ್ಕಿನ ಕಾರ್ಖಾನೆ ಸ್ಥಾಪನೆ ಬೇಡ : ಕೊಪ್ಪಳದ ಜನರ ಆಕ್ರೋಶ Janashakthi Media