ಕೆಲಸ ಖಾಯಂಗೊಳಿಸುವುದಾಗಿ ನಂಬಿಸಿ ಅತಿಥಿ ಉಪನ್ಯಾಸಕರಿಂದ ಹಣ ಪಡೆದು ವಂಚನೆ: ದೂರು ದಾಖಲು

ಶಿವಮೊಗ್ಗ : ಕೆಲಸ ಖಾಯಂಗೊಳಿಸಿ ಕೊಡುವುದಾಗಿ ಅತಿಥಿ ಉಪನ್ಯಾಸಕರಿಗೆ  ನಂಬಿಸಿ ಹಣ ಪಡೆದು ವಂಚನೆ ಮಾಡಿರುವುದಾಗಿ ಆರೋಪಿಸಿ ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಹನುಮಂತ ಗೌಡ ಕಲ್ಮನಿ, ಕಾರ್ಯದರ್ಶಿ ಪೀಟರ್ ವಿನೋದ್ ಚಂದ್, ಶಾಲಿನಿ ನಾಯ್ಕ, ಧಾರವಾಡದ ಆಳ್ನಾವರ ಶಾಖೆಯ ಸೆಂಟ್ ಮೆಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ. ಕೆಲಸ 

ಕೆಲಸ ಖಾಯಂಗೊಳಿಸುವುದಾಗಿ ನಂಬಿಸಿ ಮೂರು ಲಕ್ಷದ ಐವತ್ತು ಸಾವಿರ ರೂಗಳನ್ನು ಕೆನೆರಾ ಬ್ಯಾಂಕಿನ ಸೆಂಟ್ ಮೆಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮ್ಯಾನೇಜರ್ ಅವರ ಕರೆಂಟ್ ಅಕೌಂಟಿಗೆ 2023 ನೇ ಇಸವಿಯಲ್ಲಿ ಹಣವನ್ನು ಜಮಾಮಾಡಿಸಿಕೊಂಡು ಮೋಸ ಮಾಡಿರುವುದಾಗಿ ಆರೋಪಿಸಿ ಅತಿಥಿ ಉಪನ್ಯಾಸಕ ಗಣಪತಿ ಎಸ್.ಎಂ ಅವರು ಆಗಸ್ಟ್ 25 ರಂದು ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತಿರುವವರ ಅತಂತ್ರ ಬದುಕನ್ನು ಅಸ್ತ್ರವಾಗಿ ಬಳಸಿಕೊಂಡ ಅತಿಥಿ ಉಪನ್ಯಾಸಕ ಸಂಘದ ರಾಜ್ಯಾಧ್ಯಕ್ಷನಾದ ಹನುಮಂತಗೌಡ ಕಲ್ಮನಿ ಹಾಗೂ ಆತನ ಸಂಗಡಿಗರು ತಮ್ಮ ನೌಕರಿಯನ್ನು ಖಾಯಂಗೊಳಿಸುವುದಾಗಿ ನಂಬಿಸಿ ನೂರಾರು ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ, ವಂಚಿಸಿರುವ ಘಟನೆ ಎಫ್.ಐ.ಆರ್ ಮೂಲಕ ಬೆಳಕಿಗೆ ಬಂದಿರುತ್ತದೆ. ಕೆಲಸ 

ಸಾಗರ ನಿವಾಸಿಯಾಗಿರುವ ಗಣಪತಿ ಎಸ್.ಎಂ ಎಂಬ ಅತಿಥಿ ಉಪನ್ಯಾಸಕರು ಸುಮಾರು 12 ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ತಮ್ಮ ಬದುಕಿನಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದರಿಂದ ಖಾಯಂ ನೌಕರಿಯ ಮೋಸದ ಜಾಲಕ್ಕೆ ಸಿಲುಕಿ 3.50.000 ರೂಪಾಯಿಗಳನ್ನು ಕಳೆದುಕೊಂಡು ದಿಕ್ಕು ತೋಚದೆ ಇರುವಾಗ ಪೊಲೀಸ್ ಸಾಗರ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಇವರೊಂದಿಗೆ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಅನುಷಾ ಎಲ್.ವಿ, ಅಶೋಕ ಎಚ್, ಭವ್ಯ ವಿ, ಕೌಶಿಕ್ ಕೆ ಎಂಬುವವರು ಸೇರಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಹನುಮಂತಗೌಡ ಕಲ್ಮನಿ, ಪೀಟರ್ ವಿನೋದ್‌ಚಂದ್ ಕೆ, ಶ್ರೀಮತಿ ಶಾಲಿನಿ ನಾಯಕ ಹಾಗೂ ಮ್ಯಾನೇಜರ್ ಸೆಂಟ್ ಮಿಲಾಗ್ರಿಸ್ ಕೋ ಅಪರೇಟಿವ್ ಸೊಸೈಟಿ, ಆಳ್ನಾವರ ಇವರ ವಿರುದ್ಧ ಭಾರತೀಯ ದಂಡ ಸಂಹಿತೆ 1860 ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆಲಸ 

ಇದನ್ನು ಓದಿ : ಅತ್ಯಾಚಾರ ಪ್ರಕರಣ; ಬಿಜೆಪಿ ಶಾಸಕ ಮುನಿರತ್ನ 14 ದಿನಗಳ ನ್ಯಾಯಾಂಗ ವಶಕ್ಕೆ

ಅತಿಥಿ ಉಪನ್ಯಾಸಕರ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಸಂಘದ ಅಧ್ಯಕ್ಷರಾದ ಡಾ.ಹನುಮಂತಗೌಡ ಕಲ್ಮನಿ ಮತ್ತು ಆತನ ಸಹಚರರು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಚರ್ಚಿಸಲು ಕಡೂರು, ಶಿರಸಿ, ಹುಬ್ಬಳಿ ಮುಂತಾದ ಕಡೆಗಳಲ್ಲಿ ಹಲವಾರು ಸಭೆಗಳನ್ನು ಆಯೋಜಿಸಿ, ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಹಣ ನೀಡದ ಹೊರತು ಖಾಯಂ ಸಾಧ್ಯವಿಲ್ಲ ಎಂಬುದಾಗಿ ನಂಬಿಸಿ, ಪ್ರತಿಯೊಬ್ಬ ಅತಿಥಿ ಉಪನ್ಯಾಸಕರು ಇದಕ್ಕೆ ಸಹಕಾರ ನೀಡಬೇಕು ಎಂಬುದಾಗಿ ಉತ್ತೇಜಿಸಿರುತ್ತಾರೆ. ಇದಕ್ಕೆ ಕೆಲವರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂಬ ಭರವಸೆ ನೀಡಿ ಸೆಂಟ್ ಮಿಲಾಗ್ರಿಸ್ ಕೋ ಅಪರೇಟಿವ್ ಸೊಸೈಟಿ, ಆಳ್ನಾವರ ಇವರ ಚಾಲಿ ಖಾತೆಗೆ ಹಣವನ್ನು ಅಭ್ಯರ್ಥಿಗಳಿಂದ ನೇರವಾಗಿ ವರ್ಗಾಯಿಸಿಕೊಂಡಿರುತ್ತಾರೆ.

ಕೋ ಅಪರೇಟಿವ್ ಸೊಸೈಟಿಯ ಮೇಲೆ ಭರವಸೆ ಇಟ್ಟ ನೂರಾರು ಅತಿಥಿ ಉಪನ್ಯಾಸಕರು ತಲಾ ಮೂರು ಲಕ್ಷಕ್ಕೂ ಅಧಿಕ ಮೊತ್ತವನ್ನು ಹನುಮಂತಗೌಡ ಕಲ್ಮನಿ ಮತ್ತು ಸಂಗಡಿಗರು ಸೂಚಿಸಿದ ಖಾತೆಗೆ ಹಣವನ್ನು ವರ್ಗಾಹಿಸಿ ಖಾಯಂ ನೌಕರಿಯ ಕನಸೊತ್ತು ತೇಲಾಡುತ್ತಿರುತ್ತಾರೆ. ಆದರೆ ವರ್ಷಗಳೇ ಕಳೆಯುತ್ತ ಬಂದರೂ ಖಾಯಂ ನೌಕರಿಯ ಪ್ರಸ್ತಾಪ ಬರದೆ ಹೋದಾಗ ಅಧ್ಯಕ್ಷರ ಮೇಲೆ ಒತ್ತಡಗಳು ಬಂದಾಗ ಅಂದಿನ ಬಿಜೆಪಿ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥನಾರಾಯಣ ಹಾಗೂ ಆಯುಕ್ತರು ಸಂಪೂರ್ಣ ಭರವಸೆ ನೀಡಿದ್ದಾರೆ. ನೀತಿ ಸಂಹಿತೆ ಮುಕ್ತಾಯವಾದ ನಂತರ ಆದೇಶ ಪ್ರತಿ ನೀಡುವುದಾಗಿ ನಂಬಿಸಿರುತ್ತಾರೆ. ನಂತರ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯ ಕಾಂಗ್ರೇಸ್ ಪಕ್ಷದ ಮುಖಂಡರ ಜೊತೆ ಪೋಟೊ ಕ್ಲಿಕ್ಕಿಸಿಕೊಂಡು ಖಾಯಮಾತಿ ವಿಚಾರ ಪ್ರಸ್ತಾಪ ಮಾಡಿರುವುದಾಗಿ, ಕಾಂಗೇಸ್ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಶ್ರೀ ಸುಧಾಕರ್ ಹಾಗೂ ಆಯುಕ್ತರಾದ ಜಗದೀಶ್ ಅವರಿಗೆ ಹಣವನ್ನು ತಲುಪಿಸಿದ್ದೇವೆ. ಶೀಘ್ರವೇ ಖಾಯಂ ಮಾಡುವುದಾಗಿ ಭರವಸೆ ನೀಡುವುದಾಗಿ ತಿಳಿಸುತ್ತಲೇ ನೂರಾರು ಆಕಾಂಕ್ಷಿಗಳನ್ನು ವಂಚಿಸಿಕೊಂಡು ಬಂದಿರುತ್ತಾರೆ.

ಅಧ್ಯಕ್ಷ ಮತ್ತು ಅವರ ಸಂಗಡಿಗರ ಮಾತಿನ ಮೇಲಿನ ವಿಶ್ವಾಸವನ್ನು ಕಳೆದುಕೊಂಡ ನೊಂದ ಅತಿಥಿ ಉಪನ್ಯಾಸಕರಾದ ಗಣೇಶ್ ಕೆ.ಎಸ್, ಗಣಪತಿ ಎಸ್.ಎಂ ಅವರುಗಳನ್ನೊಳಗೊಂಡ 18 ಜನ ಅತಿಥಿ ಉಪನ್ಯಾಸಕರು ವಕೀಲರ ಮೂಲಕ ದಿನಾಂಕ: 03ಮೇ 2024 ರಂದು ಹನುಮಂತಗೌಡ ಕಲ್ಮನಿ ಹಾಗೂ ಇತರರ ವಿರುದ್ಧ 58 ಲಕ್ಷದ 50ಸಾವಿರ ರೂಪಾಯಿಗಳ ವಂಚನೆಗೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ಜಾರಿಗೊಳಿಸಿರುತ್ತಾರೆ. ನೋಟಿಸ್ ಜಾರಿಗೊಳಿಸಿದ ಅತಿಥಿ ಉಪನ್ಯಾಸಕರಿಗೆ ಕಲ್ಮನಿ ಹಾಗೂ ಆತನ ಇತರ ಸಹಚರರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ದಿನಾಂಕ ಇದೇ ಆಗಸ್ಟ್ 25 ರಂದು ಗಣಪತಿ ಎಸ್.ಎಂ ಹಾಗೂ ಇತರರು ಪೊಲೀಸ್ ಸಾಗರ ಠಾಣೆಯ ಮೆಟ್ಟಿಲೇರಿ ಹನುಮಂತಗೌಡ ಕಲ್ಮನಿ ಹಾಗೂ ಇತರರ ವಿರುದ್ಧ ದೂರು ದಾಖಲಿಸಿರುತ್ತಾರೆ.

ಅತಿಥಿ ಉಪನ್ಯಾಸಕರಿಗೆ ನ್ಯಾಯ ಕೊಡಿಸುವುದಾಗಿ ಅವರ ಬೆಂಬಲ ಪಡೆದು, ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿರುವ ಅಧ್ಯಕ್ಷ ಹಾಗೂ ಆತನ ಸಹಚರರು ನೂರಾರು ಅತಿಥಿ ಉಪನ್ಯಾಸಕರಿಗೆ ವಂಚಿಸಿ, ಅವರನ್ನು ಬೀದಿಗೆ ತಂದು ನಿಲ್ಲಿಸಿರುತ್ತಾರೆ. ಇವರ ಈ ವಂಚನೆಗೆ ಇನ್ನೆಷ್ಟು ಜನ ಅತಿಥಿಗಳು ಬಲಿಯಾಗಿದ್ದಾರೋ ವಿಚಾರಣೆಯ ನಂತರ ಬಯಲಿಗೆ ಬರಲಿದೆ. ಕೆಲಸ 

ಇದನ್ನು ನೋಡಿ : ಮುನಿರತ್ನ ಭ್ರಷ್ಟಾಚಾರಿ, ಮನೆಯಲ್ಲಿಯೇ ಬಿಬಿಎಂಪಿ ಬಿಲ್ ಬರೆಯುತ್ತಾರೆ – ಸಚಿವ ಕೃಷ್ಣ ಬೈರೇಗೌಡ ಆರೋಪ

Donate Janashakthi Media

Leave a Reply

Your email address will not be published. Required fields are marked *