ಜನವರಿ 16 ರಿಂದ 27ರ ವರೆಗೆ ಲಾಲ್‌ಬಾಗ್‌ನಲ್ಲಿ ಪುಷ್ಪ ಪ್ರದರ್ಶನ: ಡಿ.ಎಸ್. ರಮೇಶ್

ಬೆಂಗಳೂರು: ‘ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಜನವರಿ 16 ರಿಂದ 27ರ ವರೆಗೆ ನಡೆಯಲಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಿ.ಎಸ್. ರಮೇಶ್, ತಿಳಿಸಿದ್ದಾರೆ. ಜನವರಿ

‘ಈ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಮಹರ್ಷಿ ವಾಲ್ಮೀಕಿ ಅವರಿಗೆ ಪುಷ್ಪ ಗೌರವ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ವಾಲ್ಮೀಕಿ ಅವರ ಜೀವನ, ಸಾಧನೆ, ರಾಮಾಯಣದ ಚರಿತ್ರೆಯನ್ನು ಹೂವುಗಳಲ್ಲಿ ಅನಾವರಣ ಮಾಡಲಾಗುತ್ತದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ’ ಎಂದರು.

‘ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 217ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜು ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಜನವರಿ 16 ಬೆಳಿಗ್ಗೆ 10ಕ್ಕೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರು| ಪೊಲೀಸ್ ನೇಮಕಾತಿ ಅಕ್ರಮಕ್ಕೆ ಕಡಿವಾಣ ಹಾಕಲು ಮಂಡಳಿ ರಚನೆ

‘ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್‌ ಹುತ್ತದ ಮಾದರಿಯೊಳಗೆ ಮಹರ್ಷಿ ವಾಲ್ಮೀಕಿ ಅವರು ತಪಸ್ಸು ಮಾಡುವ ಭಂಗಿಯ ಪ್ರತಿಕೃತಿಯನ್ನು ಪ್ರದರ್ಶಿಸಲಾಗುತ್ತದೆ. ಇದು 10 ಅಡಿ ಎತ್ತರ ಹಾಗೂ 38 ಅಡಿ ಸುತ್ತಳತೆಯನ್ನು ಹೊಂದಿದೆ. ಒಂದು ಬಾರಿಗೆ 1.5 ಲಕ್ಷ ಡಚ್‌ ಗುಲಾಬಿ, 400 ಕೆ.ಜಿ. ಪಿಂಚ್ಡ್‌ ಗುಲಾಬಿ ಹಾಗೂ 300 ಕೆ.ಜಿ. ಹೈದರಾಬಾದ್‌ ಸೇವಂತಿಗೆ ಹೂವುಗಳನ್ನು ಬಳಸಿಕೊಂಡು ಈ ಪರಿಕಲ್ಪನೆಯನ್ನು ಸಿದ್ಧಪಡಿಸಲಾಗಿದೆ. ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ಬರೆಯುತ್ತಿರುವ ಭಂಗಿಯ ಪ್ರತಿಮೆ, ರಾಮಾಯಾಣದ ಪಂಚವಟಿ ಬಿಂಬಿಸುವ 3ಡಿ ಕಲಾಕೃತಿಗಳು, ವಾಲ್ಮೀಕಿ ಆಶ್ರಮ, ಹನುಮ, ಜಟಾಯು, ಜಾಂಬವಂತ, ಅಳಿಲಿನ ಕಲಾಕೃತಿಗಳು ಹಾಗೂ ಹಲವಾರು ಕವಿಗಳ ಪುತ್ಥಳಿಗಳು ಇರಲಿವೆ’ ಎಂದರು.

ಜನವರಿ 18ರಂದು ನಡೆಯುವ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್‌ ಆರ್ಟ್‌, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಯ ಪ್ರದರ್ಶನವನ್ನು ಚಲನಚಿತ್ರ ನಟಿ ಪ್ರೇಮಾ ಉದ್ಘಾಟಿಸಲಿದ್ದಾರೆ. ಇಕೆಬಾನ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಜ. 24ರಂದು ಬಹುಮಾನಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್, ಉಪ ನಿರ್ದೇಶಕ ಬಾಲಕೃಷ್ಣ ಟಿ.ಎಚ್., ಸುದ್ದಿಗೋಷ್ಠಿಯಲ್ಲಿದ್ದರು.

ಪ್ರವೇಶ ಶುಲ್ಕ ಹೀಗಿದೆ…

ಲಾಲ್‌ಬಾಗ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್‌ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ. https:/hasiru.karnataka.gov.in/flowershow/login.aspx ಕೊಂಡಿ ಬಳಸಿ ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದು.

ವಯಸ್ಕರಿಗೆ ₹ 80, ರಜೆ ದಿನಗಳಲ್ಲಿ ₹ 100

ಮಕ್ಕಳಿಗೆ ₹ 30

ಸಮವಸ್ತ್ರ ಧರಿಸಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ

ಪ್ರದರ್ಶನದ ಸಮಯ: ಬೆಳಿಗ್ಗೆ 6ರಿಂದ ಸಂಜೆ 6.30ರವರೆಗೆ

ವಾಹನ ನಿಲುಗಡೆ ಎಲ್ಲಿ?

  • ಹಾಪ್‌ಕಾಮ್ಸ್‌ ಆವರಣ ಮತ್ತು ಜೆ.ಸಿ. ರಸ್ತೆಯಲ್ಲಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣ
  • ಶಾಂತಿನಗರ ಬಸ್‌ ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ
  • ಅಲ್‌ ಅಮೀನ್‌ ಕಾಲೇಜು ಮೈದಾನ

ಇದನ್ನೂ ನೋಡಿ: ಹೆಚ್ಚು ಗಂಟೆ ದುಡಿಮೆ : ಬಂಡವಾಳಿಗರ ಲಾಭಕ್ಕಾಗಿ ಕಾರ್ಮಿಕರ ಶೋಷಣೆ : ಸುಹಾಸ್‌ ಅಡಿಗ ಮತ್ತು ಗುರುರಾಜ ದೇಸಾಯಿ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *