ಅಗ್ನಿ ದುರಂತಗಳ ಬಗ್ಗೆ ಅಗ್ನಿಶಾಮಕ ದಳ ಮುಂಜಾಗ್ರತಾ ಕ್ರಮ ವಹಿಸಬೇಕು| ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಅಗ್ನಿ ದುರಂತಗಳಿಂದ ಪ್ರಾಣಾಪಾಯಗಳು ಹೆಚ್ಚುತ್ತಿದೆ. ಜನಸಾಮಾನ್ಯರಲ್ಲೂ ಆತಂಕ ಮನೆಮಾಡಿದೆ. ಹೀಗಾಗಿ ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು, ಅಗ್ನಿ ಶಾಮಕದಳವನ್ನು ಉನ್ನತೀಕರಣಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಅಕ್ಟೋಬರ್-30 ವಿಕಾಸಸೌಧದಲ್ಲಿ ಅಗ್ನಿ ಶಾಮಕದಳ ಪೊಲೀಸ್ ಮಹಾ ನಿರ್ದೇಶಕರಾದ ಕಮಲ್ ಪಂತ್ ಅವರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕಳೆದ 20 ದಿನಗಳ ಅವಧಿಯಲ್ಲಿ ಬೆಂಗಳೂರಿನಲ್ಲೇ ಮೂರು ಕಡೆಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸಿವೆ. ಅಗ್ನಿ ದುರಂತಗಳಿಂದ ಜನರೂ ಭಯಭೀತರಾಗಿದ್ದಾರೆ. ಹೀಗಾಗಿ ನಗರ ಭಾಗಗಳೂ ಸೇರಿದಂತೆ ರಾಜ್ಯಾದ್ಯಂತ ಅಗ್ನಿ ದುರಂತಗಳು ಸಂಭವಿಸಿದಂತೆ ಅಗ್ನಿಶಾಮಕ ದಳ ತಡೆಯುವಂತಾಗಬೇಕು” ಎಂದು ಸಲಹೆ ನೀಡಿದರು.

ಇದನ್ನೂ ಓದಿ:ರಾಜ್ಯದಲ್ಲಿ ಬರದಿಂದ 42 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ: ಸಚಿವ ಕೃಷ್ಣ ಬೈರೇಗೌಡ

ಅತ್ತಿಬೆಲೆ ಪಠಾಕಿ ಗೋದಾಮಿನ ದುರಂತದಲ್ಲಿ ತಮಿಳುನಾಡು ಮೂಲದ ರಾಜೇಶ್, ದಿನೇಶ್, ಸಂತೋಷ್ ಕುಮಾರ್, ನಿತೀಶ್, ವೇದಪ್ಪನ್, ಆದಿಕೇಶವನ್, ವಿಜಯರಾಘವನ್, ಆಕಾಶ್ ರಾಜ್, ಗಿರಿ, ಇಂಬರ್ತಿ, ಮುನಿವೇಲ್, ಪ್ರಕಾಶರಾಜ್, ಆಂಥೋನಿ ಪೌಲಾರಾಜ್ ಸೇರಿ 13 ಕಾರ್ಮಿಕರು ಮೃತಪಟ್ಟಿದ್ದರು.

ಅಕ್ಟೋಬರ್ 19 ರಂದು ಕೋರಮಂಗಲದ ಮಡ್‌ಪೈಪ್ ಅನ್ನೋ ರೆಸ್ಟೋಕೆಫೆ ಅಗ್ನಿ ದುರಂತಕ್ಕೆ ಈಡಾಗಿತ್ತು. ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಹಲವರು ಗಾಯಾಳುಗಳಾಗಿದ್ದರು. ಇದರ ಬೆನ್ನಿಗೆ ಕಳೆದ ಶನಿವಾರ ಹಜ್ ಭವನವೂ ಬೆಂಕಿಗೆ ಆಹುತಿಯಾಗಿದ್ದು ಕನಿಷ್ಟ 3 ಕೋಟಿ ನಷ್ಟವಾಗಿದೆ. ಎಂದು ಆತಂಕ ಹೊರಹಾಕಿದ ಸಚಿವರು, ಇಂತಹ ದುರಂತಗಳಿಗೆ ಕಾರಣವೇನು? ಇದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳೇನು? ಎಂಬ ಕುರಿತು ಅಗ್ನಿಶಾಮಕ ದಳ ಚಿಂತನೆ ನಡೆಸಬೇಕಿದೆ” ಎಂದರು.

ಅಲ್ಲದೆ, ಅಗ್ನಿಶಾಮಕ ದಳದ ಉನ್ನತೀಕರಣಗಳ ಬಗ್ಗೆಯೂ ಗಮನವಹಿಸಬೇಕಿದೆ. ಇದರ ಜೊತೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗಲೇ ಅಗ್ನಿದುರಂತ ತಡೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ಪರಿಶೀಲಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ:ಕೇಂದ್ರದ ಮಾನದಂಡ ಆಧರಿಸಿ ಬರ ಪೀಡಿತ ಪ್ರದೇಶ ಘೋಷಣೆ:ಕಂದಾಯ ಸಚಿವ ಕೃಷ್ಣ ಬೈರೇಗೌಡ

ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಉನ್ನತೀಕರಣ ಹಾಗೂ ಹೊಸ ಅಗ್ನಿಶಾಮಕ ದಳಗಳನ್ನು ಸ್ಥಾಪಿಸುವ ಕುರಿತ ಕ್ರಿಯಾ ಯೋಜನೆ ಮಂಡಿಸಿದ ಅಗ್ನಿಶಾಮಕ ದಳ ಪೊಲೀಸ್ ಮಹಾ ನಿರ್ದೇಶಕರಾದ ಕಮಲ್ ಪಂತ್, “ಉಡುಪಿ ಜಿಲ್ಲೆಯ ಮಣಿಪಾಲ್, ದಾವಣಗೆರೆಯ- ನ್ಯಾಮತಿ, ವಿಜಯಪುರ ಜಿಲ್ಲೆಯ ನಿಡಗುಂದಿ-ಬಬಲೇಶ್ವರ್, ರಾಯಚೂರಿನ ಮಸ್ಕಿ, ಬೆಳಗಾವಿಯ ಮುದಲಗಿ, ಬಳ್ಳಾರಿಯ ಕಂಪ್ಲಿ ಹಾಗೂ ಕಲಬುರಗಿ ಷಹಾಬಾದ್ ಭಾಗದಲ್ಲಿ ನೂತನ ಅಗ್ನಿಶಾಮಕ ದಳ ಸ್ಥಾಪಿಸುವ ಸಂಬಂಧ ಯೋಜನೆ ಮಂಡಿಸಿದರು.

ಅಲ್ಲದೆ, ಬೆಂಗಳೂರು ಸೇರಿದಂತೆ ನಗರ ಭಾಗದಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳ ತಡೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು? ಎಂಬ ಕುರಿತು ಶೀಘ್ರದಲ್ಲೇ ಇಲಾಖೆಗೆ ವರದಿ ನೀಡುವುದಾಗಿಯೂ ತಿಳಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಸೇರಿದಂತೆ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಡಿಯೋ ನೋಡಿ:ಪರ್ಯಾಯ ಕೃಷಿ ಧೋರಣೆಗಳು: ಬಿಜೆಪಿ ರೈತ ಪರ ಅಲ್ಲ – ಡಾ. ಪ್ರಕಾಶ್‌ ಕಮ್ಮರಡಿ Janashakthi Media

Donate Janashakthi Media

Leave a Reply

Your email address will not be published. Required fields are marked *