ಬೆಂಗಳೂರು: ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾಂತಾರ’ ಸಿನಿಮಾದ ದೈವ ದೃಶ್ಯವನ್ನು ಅನುಕರಿಸಿ ವಿವಾದಕ್ಕೆ ಕಾರಣವಾಗಿದೆ.
ರಣ್ವೀರ್ ಸಿಂಗ್ ಅವರು ಲಕ್ಷಾಂತರ ಹಿಂದೂಗಳು ಹಾಗೂ ಕರ್ನಾಟಕದ ತುಳು ಭಾಷಿಕ ಸಮುದಾಯದ ಭಾವನೆಗಳನ್ನು ತೀವ್ರವಾಗಿ ನೋಯಿಸಿರುವುದರಿಂದ ಕಾನೂನು ಕ್ರಮ ಜರುಗಿಸುವಂತೆ ವಕೀಲ ಪ್ರಶಾಂತ್ ಮೆಥಲ್ ಎಂಬುವರು ಹೈಗ್ರೌಂಡ್ಸ್ ಠಾಣೆಗೆ ಡಿಸೆಂಬರ್ 3ರಂದು ದೂರು ನೀಡಿದ್ದರು. ಎಫ್ಐಆರ್ ದಾಖಲಿಸುವಂತೆ ನಗರದ 1ನೇ ಎಸಿಜೆಎಂ ನ್ಯಾಯಾಲಯ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭ ನಟ ರಣ್ವೀರ್ ಸಿಂಗ್ ಅವರು ನೀಡಿದ ಒಂದು ಕಾಮೆಂಟ್ ಅಥವಾ ಹೇಳಿಕೆಗೆ ಸಂಬಂಧಿಸಿದಂತೆ ಈ ದೂರು ದಾಖಲಾಗಿದೆ. ನಟನ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಕೇ ಮಾಹಿತಿ ನೀಡಿದ್ದು, ”ದೂರುದಾರರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ನ್ಯಾಯಾಲಯದ ಆದೇಶದಂತೆ ನಿನ್ನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಕೇ ತಿಳಿಸಿದರು.
ಇದನ್ನೂ ಓದಿ : ಬೆಂಗಳೂರು |ಜವಳಿ ಕ್ಷೇತ್ರಕ್ಕೆ ಉತ್ತೇಜನ: ಹೊಸ ನೀತಿಯಲ್ಲಿ ಕೈಮಗ್ಗ ಮತ್ತು ಮಹಿಳಾ ಕಾರ್ಮಿಕರಿಗೆ ವಿಶೇಷ ನೆರವು
ನವೆಂಬರ್ 28ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ರಣ್ವೀರ್ ಸಿಂಗ್, ಕಾಂತಾರ ಚಿತ್ರದಲ್ಲಿ ಚಿತ್ರಿಸಲಾದ ಪವಿತ್ರ “ದೈವ” (ಭೂತ ಕೋಲ) ಸಂಪ್ರದಾಯವನ್ನು ಬಹಿರಂಗವಾಗಿ ಅಪಹಾಸ್ಯ ಮಾಡಿದ್ದಾರೆ. ವೇದಿಕೆಯಲ್ಲಿದ್ದ ರಣ್ವೀರ್ ಸಿಂಗ್ ಅವರು ಪಂಜುರ್ಲಿ/ಗುಳಿಗ ದೈವದ (ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಪೂಜಿಸಲ್ಪಡುವ ಪವಿತ್ರ ಶಕ್ತಿ) ದೈವಿಕ ಅಭಿವ್ಯಕ್ತಿಗಳನ್ನು ಅಸಭ್ಯ, ಅವಹೇಳನಕಾರಿ ಮತ್ತು ಹಾಸ್ಯಮಯ ರೀತಿಯಲ್ಲಿ ಅನುಕರಿಸಿದ್ದಾರೆ. ಪವಿತ್ರ ದೈವವನ್ನು “ಭೂತ” (“ಸ್ತ್ರೀ ಭೂತ”) ಎಂದು ಮೌಖಿಕವಾಗಿ ಉಲ್ಲೇಖಿಸಿದ್ದಾರೆ.
ಇನ್ನು, ಡಿಸೆಂಬರ್ 5ರಂದು ರಣ್ವೀರ್ ಸಿಂಗ್ ಮುಖ್ಯಭೂಮಿಕೆಯ ಧುರಂಧರ್ ಸಿನಿಮಾ ತೆರೆಕಂಡಿತು. ಅದಕ್ಕೂ ಕೆಲ ದಿನಗಳ ಮುನ್ನ ಈ ವಿವಾದ ಶುರುವಾಯಿತು. ರಣ್ವೀರ್ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಡಿಸೆಂಬರ್ 2ರಂದು ಇನ್ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ ಮೂಲಕ ಖ್ಯಾತ ನಟ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ”ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಆ ನಿರ್ದಿಷ್ಟ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸುವುದು ಎಷ್ಟು ಸವಾಲಿನದ್ದು ಎಂಬುದು ನನಗೆ ತಿಳಿದಿದೆ. ಆ ನಟನೆಗೆ ನನ್ನ ಮೆಚ್ಚುಗೆ ಇದೆ. ನಮ್ಮ ದೇಶದ ಪ್ರತೀ ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಸದಾ ಗೌರವಿಸುತ್ತೇನೆ. ನಾನು ಯಾರದ್ದೇ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಬರೆದುಕೊಂಡಿದ್ದರು. ಧುರಂಧರ್ ಸಿನಿಮಾದ ಅದ್ಭುತ ಯಶಸ್ಸಿನಲೆಯಲ್ಲಿ ತೇಲುತ್ತಿರುವ ನಟನ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿ, ಸಂಕಷ್ಟ ಎದುರಾಗಿದೆ.
ಇದನ್ನೂ ನೋಡಿ : ಒಂದು ದೇಹ, ಒಂದು ಸಾಕ್ಷಿ | ಸಾಮ್ರಾಜ್ಯಶಾಹಿಯ ವಿರುದ್ಧ ಸುಮಿತೇರು ತಾನಿಗುಚಿJanashakthi Media
